ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ದೇಶದಲ್ಲಿ ಮೊತ್ತಮೊದಲಿಗೆ ಕರ್ನಾಟಕವು ಸಂಶೋಧನೆ ಮತ್ತು ಅಭಿವೃದ್ಧಿಗೆ ಶಕ್ತಿ ತುಂಬುವ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ (ER&D Policy) ಯನ್ನು ಪ್ರಕಟಿಸಿದ್ದು, ಇದರಿಂದ ಅಮೆರಿಕ ಕಂಪನಿಗಳ ಹೂಡಿಕೆಗೆ ಹೆಚ್ಚು ಅನುಕೂಲವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಕೇರಳದಲ್ಲಿನ ಚುನಾವಣಾ ಪ್ರಚಾರದ ನಡುವೆಯೇ ಭಾರತ-ಅಮೆರಿಕ ಕಾರ್ಯತಂತ್ರದ ಸಹಭಾಗಿತ್ವ ವೇದಿಕೆ ಹಮ್ಮಿಕೊಂಡಿದ್ದ ವರ್ಚುವಲ್ ಸಭೆಯಲ್ಲಿ ತಿರುವನಂತಪುರದಿಂದಲೇ ಪಾಲ್ಗೊಂಡು ಮಾತನಾಡಿದ ಅವರು; “ಈ ನೀತಿಯು ಕೈಗಾರಿಕಾಭಿವೃದ್ಧಿಗೆ ಹೆಚ್ಚು ಪೂರಕವಾಗಲಿದೆ ಹಾಗೂ ಅತ್ಯುತ್ತಮ ಮಾನವ ಸಂಪನ್ಮೂಲ ಸೃಷ್ಟಿಗೂ ಇದು ಸಹಾಯಕವಾಗುತ್ತದೆ” ಎಂದರು.
ಉತ್ಕೃಷ್ಟ ಮಾನವ ಸಂಪನ್ಮೂಲ
ಕೈಗಾರಿಕೆ ಮತ್ತು ಹೂಡಿಕೆಗೆ ಪೂರಕವಾದ ರಾಜ್ಯ ಕರ್ನಾಟಕ. ಹೊಸ ಉದ್ಯಮಗಳನ್ನು ಸ್ಥಾಪಿಸಲು ಸೂಕ್ತವಾದ ತಾಣ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ ಎಂದ ಅವರು; ರಾಜ್ಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ IISc), ಭಾರತೀಯ ತಾಂತ್ರಿಕ ಸಂಸ್ಥೆ (IIT) ಹಾಗೂ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT) ಯಂಥ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿವೆ. ಹೀಗಾಗಿ ಉತ್ಕೃಷ್ಟ ಮಾನವ ಸಂಪನ್ಮೂಲಕ್ಕೂ ರಾಜ್ಯದಲ್ಲಿ ಕೊರತೆ ಇಲ್ಲ ಎಂದು ಡಿಸಿಎಂ ನುಡಿದರು.
ಇನ್ನು ಆವಿಷ್ಕಾರದಲ್ಲೂ ಕರ್ನಾಟಕ ನಂಬರ್ 1ಸ್ಥಾನದಲ್ಲೇ ಇದೆ. ನೀತಿ ಆಯೋಗದ ಆವಿಷ್ಕಾರ ಸೂಚ್ಯಂಕದಲ್ಲಿ ರಾಜ್ಯವು 2019, 2020 ಕ್ರಮವಾಗಿ ಮೊದಲ ಸ್ಥಾನದಲ್ಲೇ ಇದೆ. ಅದೇ ರೀತಿ ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ನಿರ್ವಹಣೆ (ESDM), ಅನಿಮೇಷನ್, ವಿಷ್ಯುಯೆಲ್ ಎಫೆಕ್ಟ್ಸ್, ಗೇಮ್ಸ್ ಮತ್ತು ಕಾಮಿಕ್ಸ್ (AVGC) ಕ್ಷೇತ್ರದಲ್ಲೂ ರಾಜ್ಯ ದಾಪುಗಾಲಿಡುತ್ತಿದೆ ಎಂಬ ಅಂಶವನ್ನು ಡಿಸಿಎಂ ಒತ್ತಿ ಹೇಳಿದರು.
ಕರ್ನಾಟಕ ಹೂಡಿಕೆಗೆ ಸೂಕ್ತ ತಾಣ
ಕೋವಿಡ್ ನಂತರದ ದಿನಗಳಲ್ಲಿ ಕೈಗಾರಿಕೆ, ಹೂಡಿಕೆ, ಆವಿಷ್ಕಾರ ಮುಂತಾದ ಕ್ಷೇತ್ರಗಳಲ್ಲಿ ಪುಟಿದೆದ್ದಿರುವ ಭಾರತವು, ಇಡೀ ಜಗತ್ತಿನಲ್ಲಿಯೇ ಸಹಜಸ್ಥಿತಿಗೆ ಮರಳಿದ ಮೊದಲ ದೇಶವಾಗಿದೆ. ಹಾಗೆಯೇ ಕರ್ನಾಟಕವು ಹೂಡಿಕೆಗೆ ಅತ್ಯಂತ ಸೂಕ್ತ ತಾಣ. ಕೋವಿಡ್ಡೋತ್ತರ ಕಾಲದಲ್ಲಿ ಭಾರತ ಮತ್ತು ಅಮೆರಿಕಕ್ಕೆ ವಿಪುಲ ಅವಕಾಶಗಳಿದ್ದು, ಅವೆಲ್ಲವನ್ನೂ ಸದುಪಯೋಗ ಮಾಡಿಕೊಳ್ಳೋಣ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಅನೇಕ ಕ್ಷೇತ್ರಗಳಲ್ಲಿ ಭಾರತ-ಅಮೆರಿಕ ದೇಶಗಳು ಜಾಗತಿಕ ಶಕ್ತಿಗಳಾಗಿ ಹೊರಹೊಮ್ಮಿವೆ. ರಕ್ಷಣೆ, ವಿಜ್ಞಾನ-ತಂತ್ರಜ್ಞಾನ, ವೈದ್ಯಕೀಯ, ಮಾನವ ಸಂಪನ್ಮೂಲ, ಬಾಹ್ಯಾಕಾಶ ಮುಂತಾದ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಬಹಳ ನಿಕಟವಾಗಿ ಕೆಲಸ ಮಾಡುತ್ತಿವೆ. ಈ ಕಾರಣಕ್ಕೆ 2019ನೇ ಸಾಲಿನಲ್ಲಿ ಎರಡೂ ದೇಶಗಳ ನಡುವೆ ಸರಕು ಮತ್ತು ಸೇವೆಗಳಲ್ಲಿ ಒಟ್ಟಾರೆ ದ್ವಿಪಕ್ಷೀಯ ವ್ಯಾಪಾರವು 149 ಬಿಲಿಯನ್ ಮೀರಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಇದಕ್ಕೆ ಪೂರಕವಾಗಿ ಹೇಳುವುದಾದರೆ, ಭಾರತ-ಅಮೆರಿಕ ಪಾಲುದಾರಿಕೆಯಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ. ತಂತ್ರಜ್ಞಾನ ಮತ್ತು ಡಿಜಿಟಲ್ ವ್ಯವಸ್ಥೆಯ ಬೆಳವಣಿಗೆಗೆ ರಾಜ್ಯವು ಅನನ್ಯ ಕೊಡುಗೆ ನೀಡಿದೆ. 220 ಬಿಲಿಯನ್ನಷ್ಟು ಒಟ್ಟು ದೇಶಯ ಉತ್ಪನ್ನ (ಜಿಎಸ್ಡಿಪಿ) ಹೊಂದಿರುವ ಕರ್ನಾಟಕವು ದೇಶದ ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ಒಂದು. ಮಾಹಿತಿ-ಜೈವಿಕ ತಂತ್ರಜ್ಞಾನ, ಆರೋಗ್ಯ, ಆವಿಷ್ಕಾರ, ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣ, ಏರೋಸ್ಪೇಸ್ ಮುಂತಾದ ಕ್ಷೇತ್ರಗಳಲ್ಲಿಯೂ ರಾಜ್ಯವು ಮುಂಚೂಣಿಯಲ್ಲಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಈ ವರ್ಚುಯಲ್ ಸಭೆಯಲ್ಲಿ ಭಾರತದಲ್ಲಿರುವ ಸ್ಯಾನ್ಪ್ರಾನ್ಸಿಸ್ಕೋ ರಾಜ್ಯದ ಕಾನ್ಸುಲ್ ಜನರಲ್ ಡಾ.ಟಿ.ವಿ.ನಾಗೇಂದ್ರ ಪ್ರಸಾದ್, ಉಪ ಕಾನ್ಸುಲ್ ಜನರಲ್ ರಾಜೇಶ್ ನಾಯಕ್, ಅಮೆರಿಕ-ಭಾರತ ಕಾರ್ಯತಂತ್ರ ವೇದಿಕೆಯ ಅಧ್ಯಕ್ಷ ಜಾನ್ ಚಾಂಬರ್ಸ್, ಇದೇ ವೇದಿಕೆಯ ವೆಸ್ಟ್ ಕೋಸ್ಟ್ ವಿಭಾಗದ ಮುಖ್ಯಸ್ಥರಾದ ದೀಪ್ತಿ ದೇಸಾಯಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಪಾಲ್ಗೊಂಡಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post