ಕಲ್ಪ ಮೀಡಿಯಾ ಹೌಸ್ | ಬೆಂಗಳೂರು | ವರದಿ: ಡಿ.ಎಲ್. ಹರೀಶ್
ಬಸವಣ್ಣನವರು #Basavanna ದಯವೇ ಧರ್ಮದ ಮೂಲವಯ್ಯ ಅಂತ ಒಂದೇ ಪದದಲ್ಲಿ ಹೇಳಿದ್ದಾರೆ. ಆದರೆ, ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವ ಶಕ್ತಿಗಳು ಹುಟ್ಟಿಕೊಂಡಿವೆ. ಬಸವಣ್ಣನ ತತ್ವ ಪಾಲಿಸಿದರೆ ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ #Basavanna Bommai ಹೇಳಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಬಸವ ವೇದಿಕೆ ಬೆಂಗಳೂರು ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಸವಣ್ಣ ಒಬ್ಬ ವಿಸ್ಮಯ ವ್ಯಕ್ತಿ. ಯಾರಾದರು ಬಸವಣ್ಣನನ್ನು ಪರಿಪೂರ್ಣ ವಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದರೆ ಆ ವ್ಯಕ್ತಿಗೆ ಇನ್ನೂ ಪರಿಪೂರ್ಣತೆ ಬಂದಿಲ್ಲ ಎಂದರ್ಥ. ಬಸವಣ್ಣ ಅಂದಿಗೂ ಪ್ರಸ್ತುತ ಇಂದಿಗೂ ಪ್ರಸ್ತುತ. ಒಂದು ಆಯಾಮದಲ್ಲಿ ಅವನು ಆಗಿನ ವಾಸ್ತವದ ಬಗ್ಗೆ ಮಾತನಾಡಿದ್ದರು. ಇನ್ನೊಂದು ಆಯಾಮದಲ್ಲಿ ಬಸವಣ್ಣ ಅಸಮಾನತೆ, ತಾರತಮ್ಯದ ವಿರುದ್ದ ಮಾತನಾಡಿದ್ದರು. ಅವು ಇಂದಿಗೂ ಜೀವಂತವಾಗಿವೆ ಎಂದರೆ ಸಂತೋಷ ಪಡುವ ವಿಷಯವಲ್ಲ. ಇವತ್ತು ನಮ್ಮ ಸಮಾಜದಲ್ಲಿ ನಡೆಯುತ್ತಿರುವದನ್ನು ನೋಡಿದಾಗ ಬಸವಣ್ಣನವರ ಚಿಂತನೆಗೆ ನಾವು ಎಷ್ಟು ಗೌರವ ಕೊಟ್ಟಿದ್ದೇವೆ ಎನ್ನುವುದು ಅರಿವಿಗೆ ಬರುತ್ತದೆ ಎಂದರು.
ಸಮಾಜದಲ್ಲಿ ಮೂರು ಥರದ ವ್ಯಕ್ತಿಗಳು ಇರುತ್ತಾರೆ. ಕೆಲವರು ಭೂತಕಾಲದ ಬಗ್ಗೆ ಮಾತನಾಡುತ್ತಾರೆ. ಅವರು ವಾಸ್ತವದ ಬಗ್ಗೆ ಮಾತನಾಡುವುದೇ ಇಲ್ಲ. ಎರಡನೇಯವರು ಕ್ರಾಂತಿಕಾರಿಗಳಾಗಿರುತ್ತಾರೆ. ಶರಣರ ಕ್ರಾಂತಿ, ಸ್ವಾತಂತ್ರ್ಯ ಹೋರಾಟ, ರಷ್ಯನ್ಕ್ರಾಂತಿ ಯಾಕೆ ಬಹಳ ದಿನ ಉಳಿಯಲಿಲ್ಲ. ಆ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗಲು ನಾವು ವಿಫಲರಾಗಿದ್ದೇವೆ. ಬಸವಣ್ಣ ಕ್ರಾಂತಿ ಕಾರಿ ಅಂತ ಹೇಳುತ್ತೇವೆ. ಆದರೆ, ಆತ ಮಾಡಿದ ಕ್ರಾಂತಿ ಏನಾಯಿತು ಎಂದು ನೋಡಬೇಕು ಎಂದರು.
ಇನ್ನೊಬ್ಬರು ರಿಫಾರ್ಮರ್ಸ್ ಇದರಲ್ಲಿ ಬುದ್ದ, ಬಸವ, ಮಹಾವೀರ ಅವರು ಕಾಲ ಮೀರಿ ಬದುಕುತ್ತಾರೆ. ಅಂತಹ ಶ್ರೇಷ್ಠ ವ್ಯಕ್ತತ್ವ ಹೊಂದಿರುವ ಇತಿಹಾಸಕ್ಕೆ ನಾವು ಸೇರಿದ್ದೇವೆ. ಅದರ ಅರಿವಿಲ್ಲದೆ ನಾವು ತಾತ್ಕಾಲಿಕ ಲೋಕದಲ್ಲಿದ್ದರೆ ನಮಗೆ ಮೂಲ ಆಳದ ಬಗ್ಗೆ ಅರಿವು ಇರುವುದಿಲ್ಲ ಎಂದರು.
ಒಂದು ಬಾವಿ ಪಕ್ಕದಲ್ಲಿ ಹಳ್ಳ ಇತ್ತು. ಅದು ಬಾವಿಗೆ ನೀನು ನಿಂತಲ್ಲೆ ನಿಂತಿದ್ದೀಯಾ, ನಾನು ಹರಿದು ಎಲ್ಲರಿಗೂ ನೀರು ಕೊಡುತ್ತೇನೆ ನಾನೇ ಶ್ರೇಷ್ಠ ಎಂದು ಹೆಳುತ್ತದೆ. ಅದಕ್ಕೆ ಬಾವಿ ನಾನು ಆಳವಾಗಿ ಒಂದೇ ಕಡೆ ಇದ್ದು ಜನರ ಸಂಕಷ್ಟಕ್ಕೆ ಆಗುತ್ತೇನೆ ಎಂದು ಹೇಳುತ್ತದೆ. ಅದೆ ರೀತಿ ವಚನ ಸಾಹಿತ್ಯ, ಯಾವುದೇ ವೇದ ಪುರಾಣಕ್ಕೂ ಕಡಿಮೆ ಇಲ್ಲದ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಇದೆ ಎಂದರು.
ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಅಂತ ಒಂದೆ ಪದದಲ್ಲಿ ಹೇಳಿದ್ದಾರೆ. ಆದರೆ, ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವ ಶಕ್ತಿಗಳು ಹುಟ್ಟಿಕೊಂಡಿವೆ. ಇಷ್ಟೆಲ್ಲ ನಮ್ಮ ಸುತ್ತಲೂ ನಡೆಯುತ್ತಿದ್ದರೂ ನಾವು ಏನೂ ಮಾಡಲು ಆಗುತ್ತಿಲ್ಲ ಎಂದು ಅಸಹಾಯಕತೆ ಮೂಡುತ್ತಿದೆ. ಅದು ಮೂಡಬಾರದು. ಬಸವ ಸಾಹಿತ್ಯ ಓದಬೇಕು, ಅದನ್ನು ಪ್ರಚಾರ ಮಾಡುವ ಮೂಲಕ ಶಾಂತಿ ಸ್ಥಾಪಿಸಬೇಕು. ರೇಣುಕಾಚಾರ್ಯ ಮಾನವ ದರ್ಮಕ್ಕೆ ಜಯವಾಗಲಿ ಎಂದರು. ನಾವು ಮೂಲ ಮರೆತಿದ್ದೇವೆ. ಬಸವಣ್ಣನನ್ನು ಹಿಡಿದುಕೊಂಡರೆ ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.
ಯಾವಾಗ ಬಸವ ಜಯಂತಿ ನಾಡಿನ ಪ್ರತಿಯೊಂದು ಹರಿಜನಕೇರಿಯಲ್ಲಿ ಆಗುತ್ತದೊ ಆಗ ರಾಜ್ಯ ಉದ್ದಾರವಾಗುತ್ತದೆ. ಈ ಜಗತ್ತಿನ ಮೂಲಭೂತ ಬದಲಾವಣೆ ಮಾಡಿರುವುದು ಸರ್ಕಾರಗಳು, ದೊಡ್ಡ ಶಕ್ತಿಗಳಲ್ಲಾ, ವ್ಯಕ್ರಿಗಳು, ಐನ್ ಸ್ಟಿನ್, ಬುದ್ದ, ಮಹಮದ್ ಪೈಗಂಬರ್, ಬಸವಣ್ಣ. ಎಲ್ಲರೂ ದೊಡ್ಡ ವ್ಯಕ್ತಿಗಳು. ಬದುಕಿನಲ್ಲಿ ಕೇವಲ ತ್ಯಾಗಮಾಡಿದರೆ ಸಾಲದು ನಿಮ್ಮ ಮನದಾಳದ ಮಾತು ಹಂಚಿಕೊಂಡಾಗ ಮಾತ್ರ ಸಾಕ್ಷಾತ್ಕಾರ ಬರುತ್ತದೆ. ಸ್ವಾಮಿ ವಿವೇಕಾನಂದರು ತಮಗೆ ಜ್ಞಾನೋದಯ ಆಗಿದೆ ಎಂದು ಹೇಳಿದಾಗ ಅವರಿಗೆ ರಾಮಕೃಷ್ಣ ಪರಮಹಂಸರು ನಿನ್ನ ಜ್ಞಾನ ಜಗತ್ತಿಗೆ ತಿಳಿದಾಗ ನಿನಗೆ ಜ್ಞಾನೋದಯ ಆಗುತ್ತದೆ ಎಂದು ಹೇಳಿದ್ದರು. ಅವರ ಮಾತಿನಂತೆ ವಿವೇಕಾನಂದರು ನಡೆದುಕೊಂಡು ಜ್ಞಾನ ಹಂಚಿದರು ಎಂದು ಹೇಳಿದರು.
ನಾಡೋಜ ಗೋ.ರು.ಚನ್ನಬಸಪ್ಪ ಅವರ ಸಾಹಿತ್ಯ ದೊಡ್ಡ ಆಸ್ತಿ, ಅವರ ಜ್ಞಾನ, ಶಕ್ತಿಯನ್ನು ಬಳಸಿಕೊಳ್ಳಬೇಕು ಎಂದರು.
ಉಜ್ವಲ ಭವಿಷ್ಯ
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರಿಗೆ ಉಜ್ವಲ ಭವಿಷ್ಯ ಇದೆ. ಅವರ ಭವಿಷ್ಯದೊಂದಿಗೆ ರಾಜ್ಯದ ಉಜ್ವಲ ಭವಿಷ್ಯ ಸೇರಬೇಕು. ನೀವು ಫ.ಗು.ಹಳಕಟ್ಟಿ ಅವರ ಸೇವೆ ಮಾಡುತ್ತಿದ್ದೀರಾ. ಒಬ್ಬ ರಾಜಕಾರಣಿ ಮುಂದಿನ ಚುನಾವಣೆಯ ಬಗ್ಗೆ ಯೋಚನೆ ಮಾಡುತ್ತಾನೆ, ಆದರೆ, ಒಬ್ಬ ಮುತ್ಸದ್ದಿ ಮುಂದಿನ ಜನಾಂಗದ ಬಗ್ಗೆ ಯೋಚನೆ ಮಾಡುತ್ತಾನೆ. ನೀವು ಮುತ್ಸದ್ದಿಗಳಾಗಿ ಮುಂದಿನ ಜನಾಂಗಕ್ಕೆ ಅನುಕೂಲ ಮಾಡುತ್ತಿದ್ದೀರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಬಸವ ವೇದಿಕೆ ಅಧ್ಯಕ್ಷ ಡಾ. ಸಿ. ಸೋಮಶೇಖರ, ಉಪಾಧ್ಯಕ್ಷ ಷಡಕ್ಷರಿ ಹಾಜರಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಗೋ.ರು. ಚನ್ನಬಸಪ್ಪ ಅವರಿಗೆ ಬಸವಶ್ರೀ ಪ್ರಶಸ್ತಿ, ಎಂ.ಡಿ. ಪಲ್ಲವಿ ಹಾಗೂ ಬಿಎಲ್ ಡಿಇ ಸಂಸ್ಥೆಯ ವಚನ ಪಿತಾಮಹ ಫ.ಗು ಹಳಕಟ್ಟಿ ಸಂಶೋಧನಾ ಸಂಸ್ಥೆಗೆ ವಚನ ಸಾಹಿತ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post