ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗೋಸಂರಕ್ಷಣೆ ಹಾಗೂ ಲೋಕಕಲ್ಯಾಣದ ಮಹಾಸಂಕಲ್ಪದೊಂದಿಗೆ ದೀಪಾವಳಿಯ #Deepawali ಪುಣ್ಯಪರ್ವದಲ್ಲಿ ವಿಶ್ವಜನನಿಯ ವಿಶಿಷ್ಟ ಪೂಜಾ ಕಾರ್ಯಕ್ರಮ ‘ಗೋದೀಪ – ದೀಪಾವಳೀ ವಿಶೇಷ ಗೋಪೂಜೆ’ಯು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಾದ ಶ್ರೀರಾಮಾಶ್ರಮದಲ್ಲಿ ನ.22ರ ಬುಧವಾರ ಸಂಜೆ 5 ಗಂಟೆಯಿಂದ ನಡೆಯಲಿದೆ.
ಶ್ರೀರಾಮಚಂದ್ರಾಪುರ ಮಠದ #Shri Ramachandrapura Mutt ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ #Raghaveshwara Shri ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ದೀಪಾವಳಿ ಗೋಪೂಜೆಯ ಗೋಸಂದೇಶವನ್ನು ಶ್ರೀಗಳು ಅನುಗ್ರಹಿಸಲಿದ್ದಾರೆ.
ಆಹ್ವಾನಿತ ಗಣ್ಯ-ಮಾನ್ಯ ದಂಪತಿಗಳಿಂದ ಏಕಕಾಲಕ್ಕೆ ವಿಶೇಷರೀತಿಯಲ್ಲಿ ಸಾಲಂಕೃತ ಗೋವುಗಳಿಗೆ ಪೂಜೆ ನಡೆಯಲಿದ್ದು, ಗೋಮಾತೆಯ ಅನುಗ್ರಹ ಪ್ರಾಪ್ತಿಗಾಗಿ ಗೋಸೂಕ್ತ ಪಾರಾಯಣ, ಗೋಸೂಕ್ತ ಹವನ ನಡೆಯಲಿದೆ. ಶಿವಶ್ರೀ ಸ್ಕಂದಪ್ರಸಾದ್ ಹಾಗೂ ತಂಡದವರಿಂದ ‘ಗೋ ಗಾನಾಮೃತ’ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ನೂರಾರು ಮಾತೆಯರಿಂದ ಗೋಮಯ ಹಣತೆಯಲ್ಲಿ ಗೋ ಆರತಿ ನಡೆಯಲಿದ್ದು, ಬೆಳಗಿನಿಂದಲೇ ಸಾರ್ವಜನಿಕರಿಗೆ ಸಾಮೂಹಿಕ ಗೋಪೂಜೆಯನ್ನು ನಡೆಸಲು ಅವಕಾಶವನ್ನು ಕಲ್ಪಿಸಲಾಗಿದ್ದು, ಪಾರಂಪರಿಕ ರೀತಿಯಲ್ಲಿ ಗೋಪೂಜೆ ನಡೆಯಲಿದೆ.
ಶ್ರೀರಾಮಚಂದ್ರಾಪುರ ಮಠವು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ರಾಷ್ಟ್ರಮಟ್ಟದಲ್ಲಿ ಹತ್ತಾರು ಗೋಜಾಗರಣದ ಕಾರ್ಯಕ್ರಮಗಳನ್ನು ನಡೆಸಿದ್ದು, ದೇಶಾದ್ಯಂತ ಲಕ್ಷಾಂತರ ಗೋಪ್ರೇಮಿಗಳಿಗೆ ಪ್ರೇರಣೆಯನ್ನೂ, ಮಾರ್ಗದರ್ಶನವನ್ನೂ ಮಾಡಿದೆ. ಶ್ರೀಮಠದಿಂದ ನಡೆದ ‘ವಿಶ್ವ ಗೋಸಮ್ಮೇಳನ’ವು ಗೋಜಾಗರಣಕ್ಕೆ ವೇದಿಕೆಯನ್ನು ಕಲ್ಪಿಸಿದರೆ, ‘ವಿಶ್ವ ಮಂಗಲ ಗೋಗ್ರಾಮ ಯಾತ್ರೆ’ಯು ದೇಶಾದ್ಯಂತ 9 ಕೋಟಿ ಸಹಿಗಳನ್ನು ಸಂಗ್ರಹಿಸಿ, ರಾಷ್ಟ್ರಪತಿಗಳಿಗೆ ಸಲ್ಲಿಸಿತ್ತು. ‘ಮಂಗಲ ಗೋಯಾತ್ರೆ’ಯು ನಾಡಿನಾದ್ಯಂತ ಸಂಚರಿಸಿ ಕೋಟಿಗೂ ಅಧಿಕ ಗೋಸಂರಕ್ಷಣೆಯ ಹಕ್ಕೊತ್ತಾಯ ಪತ್ರಗಳನ್ನು ಸಂಗ್ರಹಿಸಿತ್ತು. ಇದಲ್ಲದೇ ಶ್ರೀಮಠದಿಂದ ನಡೆದ ಹತ್ತಾರು ಕಾರ್ಯಕ್ರಮಗಳು, ಗೋಸಂರಕ್ಷಣೆಗೆ ನಿರಂತರವಾಗಿ ನಡೆಯುತ್ತಿರುವ ಹತ್ತಾರು ಯೋಜನೆಗಳು, ಗವ್ಯೋತ್ಪನ್ನಗಳ ಮೂಲಕ ರೈತರಿಗೆ ಆರ್ಥಿಕ ಬಲ ತುಂಬುವ ಕಾರ್ಯಗಳು, ಗೋಸಂರಕ್ಷಣೆಯಲ್ಲಿ ನಿರತವಾಗಿರುವ ಶ್ರೀಮಠದ ಹತ್ತಾರು ಗೋಶಾಲೆಗಳು, ವಿಶ್ವದ ಪ್ರಥಮ ಗೋಬ್ಯಾಂಕ್, ವಿಶಿಷ್ಟ ಗೋಸ್ವರ್ಗ, ೩೦ಕ್ಕೂ ಅಧಿಕ ವಿಶಿಷ್ಟ ಭಾರತೀಯ ಗೋತಳಿಗಳ ಸಂರಕ್ಷಣಾ ವ್ಯವಸ್ಥೆ ಮುಂತಾದವುಗಳು ಶ್ರೀರಾಮಚಂದ್ರಾಪುರ ಮಠದ ವಿಶೇಷತೆಗಳಾಗಿದ್ದು, ಇದೀಗ ದೀಪಾವಳಿಯಂದು ವಿಶೇಷವಾಗಿ ಗೋಪೂಜೆಯ ಮೂಲಕ ಗೋಸಂರಕ್ಷಣೆಯ ಸಂದೇಶವನ್ನು ಸಾರಲು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಗೋದೀಪ – ದೀಪಾವಳೀ ವಿಶೇಷ ಗೋಪೂಜೆಯ ಆಮಂತ್ರಣ ಪತ್ರಿಕೆಯನ್ನು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಲೋಕಾರ್ಪಣೆ ಮಾಡಿ, ಗೋಸಂರಕ್ಷಣೆಯ ಪುಣ್ಯಕಾರ್ಯದಲ್ಲಿ ಎಲ್ಲಾ ಗೋಪ್ರೇಮಿಗಳು ವಿಶೇಷವಾಗಿ ಭಾಗಿಗಳಾಗುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ಅರುಣ್ ಶ್ಯಾಮ್, ಶ್ರೀಮಠದ ವಿತ್ತಾಧ್ಯಕ್ಷ ಗಣೇಶ್ ಜಿ.ಎಲ್, ಯೋಜನಾ ಖಂಡದ ಶ್ರೀಸಂಯೋಜಕ ವಿದ್ವಾನ್ ಜಗದೀಶ ಶರ್ಮಾ ಸಂಪ, ಲೋಕಸಂಪರ್ಕ ಖಂಡದ ಶ್ರೀಸಂಯೋಜಕ ರಾಮಚಂದ್ರ ಭಟ್ಟ ಕೆಕ್ಕಾರು ಮುಂತಾದವರು ಉಪಸ್ಥಿತರಿದ್ದರು. ಗೋದೀಪ ಕಾರ್ಯಕ್ರಮದ ಸಂಚಾಲಕ ವಾದಿರಾಜ ಸಾಮಗ ಮಾತನಾಡಿ, ವಿವಿಧ ಕ್ಷೇತ್ರಗಳ 10 ಗಣ್ಯ ದಂಪತಿಗಳಿಂದ ಗೋಪೂಜೆ ನಡೆಯಲಿದ್ದು, 10 ವಿವಿಧ ಭಾರತೀಯ ಗೋತಳಿಗಳಿಗೆ ಪೂಜೆ ಸಲ್ಲಲಿದೆ. ಆನಂತರ ನೂರಾರು ಮಾತೆಯರಿಂದ ಗೋ ಆರತಿ ನಡೆಯಲಿದ್ದು, ಶಿವಶ್ರೀ ಸ್ಕಂದಪ್ರಸಾದ್ ಹಾಗೂ ತಂಡದವರಿಂದ ‘ಗೋ ಗಾನಾಮೃತ’ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post