ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಉದ್ಯಾನ ನಗರಿ ಬೆಂಗಳೂರಿನಲ್ಲಿ ಇಂದು ನಿಗೂಢವಾದ ಭಾರಿ ಶಬ್ದ ಕೇಳಿಬಂದಿದ್ದು, ಭೂಮಿ ಕಂಪಿಸಿದ ಅನುಭವವಾಗಿದ್ದು, ಹಲವರು ಬೆಚ್ಚಿಬಿದ್ದ ಘಟನೆ ನಡೆದಿದೆ.
ಬೆಂಗಳೂರಿನ ಕೆಂಗೇರಿ, ಕಗ್ಗಲೀಪುರ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದ್ದು, ಮಾತ್ರವಲ್ಲದೇ ಭಾರಿ ಶಬ್ಧಕೂಡ ಕೇಳಿಬಂದಿದೆ ಎನ್ನಲಾಗಿದೆ.
ನಗರದ ಪಶ್ಚಿಮ ಭಾಗದಲ್ಲಿ ಅನೇಕರಿಗೆ ಕಂಪನದ ಅನುಭವಾಗಿದ್ದು, ಸ್ಥಳೀಯರು ದೊಡ್ಡ ಸ್ಫೋಟದ ಶಬ್ದವನ್ನು ಕೇಳಿದ್ದಾರೆ. ಭೂಮಿ ಕಂಪಿಸಿದಂತಹ ಅನುಭವದಿಂದಾಗಿ ಬೆಂಗಳೂರಿನ ಜನರು ಬೆಚ್ಚಿ ಬಿದ್ದಿದ್ದಾರೆ. ಕೆಲವೆಡೆ ಜನರು ಮನೆಯಿಂದ ಹೊರ ಬಂದು, ಸಾರ್ವಜನಿಕರಲ್ಲಿ ಕೆಲ ಕಾಲ ಆತಂಕ ಮನೆ ಮಾಡಿತು.
ಭೂಕಂಪನ ಮಾಪನ ಇಲಾಖೆ ಪ್ರತಿಕ್ರಿಯೆ:
ಇನ್ನು ಭೂಕಂಪನ ವಿಚಾರ ಭಾರಿ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಈ ಸಂಬಂಧ ರಾಜ್ಯ ಭೂಕಂಪನ ಮಾಪನ ಇಲಾಖೆ ಕೂಡ ಪ್ರತಿಕ್ರಿಯೆ ನೀಡಿದ್ದು, ನಗರದಲ್ಲಿ ಯಾವುದೇ ರೀತಿಯ ಭೂಕಂಪನ ದಾಖಲಾಗಿಲ್ಲ. ಯಾವುದೇ ಭೂಕಂಪ ಅಥವಾ ಅಂತಹ ಚಟುವಟಿಕೆ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ, ಯಾವುದೇ ಭೂಕಂಪ ಅಥವಾ ಅಂತಹ ಚಟುವಟಿಕೆ ವರದಿಯಾಗಿಲ್ಲ. ಆದರೆ ಸ್ಥಳೀಯ ನಿವಾಸಿಗಳಿಂದ ಸೌಮ್ಯವಾದ ಕಂಪನಗಳಿಗೆ ಸಂಬಂಧಿಸಿದ ಧ್ವನಿಯ ವರದಿಗಳನ್ನು ಸ್ವೀಕರಿಸಲಾಗಿದೆ.
ಬೆಂಗಳೂರಿನ ಹೆಮ್ಮಿಗೆಪುರ, ಕೆಂಗೇರಿ, ಜ್ಞಾನಭಾರತಿ, ರಾಜರಾಜೇಶ್ವರಿ ನಗರ ಮತ್ತು ಕಗ್ಗಲಿಪುರದಿಂದ ಬೆಳಿಗ್ಗೆ 11.50ರಿಂದ ಮಧ್ಯಾಹ್ನ 12.15ರವರೆಗೆ ವರದಿಯಾಗಿದೆ. ಹೇಳಲಾದ ಅವಧಿಯಲ್ಲಿ ಯಾವುದೇ ಭೂಕಂಪನ ಅಥವಾ ಸಂಭವನೀಯ ಭೂಕಂಪದ ಸಂಕೇತಗಳು ಮಾಪನದಲ್ಲಿ ದಾಖಲಾಗಿಲ್ಲ. ಆದರೂ ನಮ್ಮ ಭೂಕಂಪನ ವೀಕ್ಷಣಾಲಯಗಳಿಂದ ಡೇಟಾವನ್ನು ವಿಶ್ಲೇಷಿಸಲಾಗಿದೆ. ಆದರೆ ಕಂಪನದ ಸೀಸ್ಮೋಗ್ರಾಫ್ಗಳು ಇಲ್ಲ ಎಂದು ಮಾಹಿತಿ ನೀಡಿದೆ.
ಗಣಿ ಸ್ಫೋಟವೇ?:
ಈ ಮಧ್ಯೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಈ ಪ್ರದೇಶದಲ್ಲಿ ಯಾವುದೇ ದೊಡ್ಡ ಪ್ರಮಾಣದ ಬ್ಲಾಸ್ಟಿಂಗ್ (ಸ್ಫೋಟ)ಮಾಡಿದ್ದರೆ ಅದು ಜನರಿಗೆ ಅಂತಹ ಅನುಭವವನ್ನು ಉಂಟುಮಾಡುತ್ತದೆಯೇ ಎಂದು ಪರಿಶೀಲಿಸುತ್ತಿದ್ದಾರೆ.
ಆದರೆ ಈ ಪ್ರದೇಶದಲ್ಲಿ ಇಂತಹ ಸ್ಫೋಟಗಳಿಗೆ ಯಾವುದೇ ಅನುಮತಿ ನೀಡಲಾಗಿಲ್ಲ. ಅದಾಗ್ಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಕೂಡ ಎಚ್ಚರಿಕೆ ವಹಿಸಿದ್ದು, ಕಾರಣ ಏನಿರಬಹುದು ಎಂದು ಪರಿಶೀಲಿಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post