ಕಲ್ಪ ಮೀಡಿಯಾ ಹೌಸ್
ಬೆಂಗಳೂರಿನ ಜಯನಗರ 4ನೇ ಬ್ಲಾಕ್ನ ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆಗೆ ಈಗ 22ನೇ ವಸಂತ. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಮತ್ತು ಮೃದಂಗ ವಾದನ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಪ್ರತಿಷ್ಠಿತ ಸಂಸ್ಥೆಯಾಗಿರುವ ಸುಸ್ವರಲಯದ 22ನೇ ವಾರ್ಷಿಕೊತ್ಸವ ಸಮಾರಂಭ ಡಿ. 24ರಿಂದ 26ರವರೆಗೆ ಆಯೋಜನೆಗೊಂಡಿದೆ.
ಬೆಂಗಳೂರಿನ ಬನಶಂಕರಿ 2ನೇ ಹಂತ, 9ನೇ ಮುಖ್ಯರಸ್ತೆಯಲ್ಲಿರುವ ಶ್ರೀ ರಾಮ ಲಲಿತ ಕಲಾ ಮಂದಿರದ ವೇದಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ವಿಜೃಂಭಿಸಲಿದ್ದು, 24ರ ಸಂಜೆ 4.15ಕ್ಕೆ ನಾಡಿನ ಖ್ಯಾತ ಮೃದಂಗ ವಿದ್ವಾಂಸರಾದ ಎಂ. ವಾಸುದೇವರಾವ್ ವಾರ್ಷಿಕೋತ್ಸವಕ್ಕೆ ವಿಧ್ಯಕ್ತ ಚಾಲನೆ ನೀಡಲಿದ್ದಾರೆ.
ಈ ಶುಭ ಸಂದರ್ಭದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯಕರಾದ ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಅವರಿಗೆ ನಾಗರತ್ನಮ್ಮ ಸ್ಮಾರಕ ‘ಸ್ವರಲಯ ರತ್ನ’ ಮತ್ತು ವಿದ್ವಾನ್ ತಿರುಮಲೆ ಶ್ರೀನಿವಾಸ ಅವರಿಗೆ ಸ್ವರಲಯ ಶೃಂಗ ಬಿರುದನ್ನು ಪ್ರದಾನ ಮಾಡಲಾಗುತ್ತದೆ. ಹಿರಿಯ ವಿದುಷಿ ಡಾ. ಟಿ. ಎಸ್. ಸತ್ಯವತಿ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಮೃದಂಗ ವಿದ್ವಾನ್ ಶ್ರೀಮುಷ್ಣಂ ರಾಜಾರಾವ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸುಸ್ವರಲಯ ಪೌ ಢ ಸಂಗೀತ ಕಲಾಶಾಲೆ ಪ್ರಾಚಾರ್ಯ ವಿದ್ವಾನ್ ಎಚ್.ಎಸ್. ಸುಧೀಂದ್ರ, ಹಿರಿಯ ಉದ್ಯಮಿ ಮತ್ತು ಕಲಾ ಪೋಷಕರಾದ ಪತ್ತಿ ಶ್ರೀಧರ ಅವರು ಉಪಸ್ಥಿತರಿರಲಿದ್ದಾರೆ.
ಪ್ರೌಢ ಸಂಗೀತ ಕಛೇರಿ:
ಬಿರುದು ಪ್ರದಾನದ ನಂತರ ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಅವರಿಂದ ಸಂಗೀತ ಕಛೇರಿ ಸಂಪನ್ನಗೊಳ್ಳಲಿದೆ.
ವಿದ್ಯಾರ್ಥಿಗಳಿಂದ ತಾಳವಾದ್ಯ:
25ರ ಬೆಳಗ್ಗೆ ಸುಸ್ವರಲಯ ಶಾಲೆ ವಿದ್ಯಾರ್ಥಿಗಳಿಂದ ತಾಳವಾದ್ಯ, 10.15ಕ್ಕೆ ಆರ್.ಎಸ್. ಚಿನ್ಮಯಮ್ಮ ಅವರಿಂದ ‘ಸಂಗೀತ ಕಛೇರಿಗಳಲ್ಲಿ ಮೃದಂಗದ ಪಾತ್ರ’ ಕುರಿತ ಪ್ರಾತ್ಯಕ್ಷಿಕೆ ಆಯೋಜನೆಗೊಂಡಿದೆ. ನಂತರ ವಿದ್ವಾನ್ ಎಚ್.ಕೆ. ವೆಂಕಟರಾಮ್ ಅವರಿಂದ ‘ಪಿಟೀಲು-ಮುಖ್ಯವಾದ್ಯ ಮತ್ತು ಪಕ್ಕವಾದ್ಯವಾಗಿ ಬಳಕೆ’ ಕುರಿತು ಪ್ರಾತ್ಯಕ್ಷಿಕೆ ನಡೆಯಲಿದೆ.
ಸಂಜೆ 4.30ಕ್ಕೆ ಯುವ ಕಲಾವಿದರಾದ ವರಲಕ್ಷ್ಮೀ (ಪಿಟೀಲು) ಮತ್ತು ಜ್ಯೋತ್ಸ್ನಾ ಹೆಬ್ಬಾರ್ (ವೀಣೆ) ಕಛೇರಿ, ಶ್ರೀನಿವಾಸ, ಶ್ರೀರಾಮ ಮತ್ತು ರವಿಶಂಕರ್ (ಮೃದಂಗತ್ರಯ) ಕಛೇರಿ ಹಮ್ಮಿಕೊಳ್ಳಲಾಗಿದೆ. ಸಂಜೆ ೬ಕ್ಕೆ ವಿದ್ವಾನ್ ಎ.ಎಸ್. ಮುರಳಿ ಅವರಿಂದ ಶಾಸ್ತ್ರೀಯ ಗಾಯನವಿದೆ.
26ರಂದು ಮೇಳಕರ್ತ ತಾಳ ಮಾಲಿಕೆ- ರತ್ನಾಂಗಿ ತಾಳದ ಪ್ರಾತ್ಯಕ್ಷಿಕೆ ಇದೆ. ಕೃತಿಕ್ ಕೌಶಿಕ್( ಪಿಟೀಲು) ಮತ್ತು ವಿದ್ವಾಂಸರಾದ ಫಣೀಂದ್ರ ಭಾಸ್ಕರ, ರಕ್ಷಿತ್ ಶರ್ಮಾ (ಯುಗಳ ಮೃದಂಗ) ಪ್ರಸ್ತುತಿ ಶೋಭೆ ನೀಡಲಿದೆ.
ನಂತರ ವಿದುಷಿ ಅಶ್ವಿನಿ ಸತೀಶ್ ‘ಹೆಚ್ಚು ಪ್ರಚಾರಕ್ಕೆ ಬಾರದ ಹರಿದಾಸರ ಕೀರ್ತನೆಗಳು’ ಎಂಬ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. 11.15ಕ್ಕೆ ಖ್ಯಾತ ವಿದುಷಿ ಶುಭಾ ಸಂತೋಷ್ ‘ವೀಣಾ ವಾದಕರು ರಚಿಸಿರುವ ಕೃತಿಗಳು’ ಬಗ್ಗೆ ಪ್ರಾತ್ಯಕ್ಷಿಕೆ ಪ್ರಸ್ತುತಿ ಇದೆ.
ಮಕ್ಕಳಿಂದ ವಿಶೇಷ ಜುಗಲ್ ಬಂದಿ:
ಸುಸ್ವರಲಯದ 22ನೇ ವಾರ್ಷಿಕೊತ್ಸವದ ವಿಶೇಷ ಆಕರ್ಷಣೆಯಾಗಿ ಮಕ್ಕಳಿಂದ ವಿಶೇಷ ಜುಗಲ್ ಬಂದಿ ಸಂಪನ್ನಗೊಳ್ಳಲಿದೆ. ಸಂಜೆ 4.15ರ ಈ ಕಛೇರಿಯಲ್ಲಿ ಕುಮಾರಿ ಮಹತಿ (ಪಿಟೀಲು), ರಕ್ಷಾ (ಹಾರ್ಮೋನಿಯಂ), ಸುಧನ್ವ (ಮೃದಂಗ) ಮತ್ತು ಪ್ರದ್ಯುಮ್ನ (ತಬಲಾ) ಕಲಾವಂತಿಕೆ ಪ್ರದರ್ಶಿಸಲಿದ್ದಾರೆ. ಸಂಜೆ 6ಕ್ಕೆ ವಿದ್ವಾನ್ ತಿರುಮಲೆ ಶ್ರೀನಿವಾಸರ ಶಾಸ್ತ್ರೀಯ ಗಾಯನವಿದೆ ಎಂದು ಪ್ರಾಂಶುಪಾಲ ವಿದ್ವಾನ್ ಎಚ್.ಎಸ್. ಸುಧೀಂದ್ರ ತಿಳಿಸಿದ್ದಾರೆ.
ಸುಸ್ವರಲಯ ಬೆಳೆದುಬಂದ ಹಾದಿ:
ರಾಜಧಾನಿ ಬೆಂಗಳೂರಿನಲ್ಲಿ 1999ರಲ್ಲಿ ವಿದ್ವಾನ್ ಎಚ್.ಎಸ್. ಸುಧೀಂದ್ರ ಹಾಗೂ ವಿದ್ವಾನ್ ಬಾಲು ರಘುರಾಮನ್ ಅವರಿಂದ ಸ್ಥಾಪನೆಗೊಂಡ ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆ ಒಂದು ಅಂಗೀಕೃತ ಧರ್ಮ ಸಂಸ್ಥೆಯಾಗಿ ಭಾರತೀಯ ಪರಂಪರೆಯ ಪ್ರದರ್ಶಿತ ಕಲೆಗಳನ್ನು ಪೋಷಿಸಿ ಬೆಳೆಸುವ ಘನ ಉದ್ದೇಶ ಹೊಂದಿದೆ.
ಕಲಾಶಾಲೆಯು ಪರಿಣತ ವಿದ್ವಾಂಸರ ತಂಡವನ್ನು ಹೊಂದಿದ್ದು, ಯುವ ಮತ್ತು ಉದಯೋನ್ಮುಖ ವಿದ್ಯಾರ್ಥಿಗಳಿಗೆ ಸಮರ್ಥ ಮಾರ್ಗದರ್ಶನ ನೀಡುವುದರೊಂದಿಗೆ ಬೋಧ ಪ್ರದವಾದ, ಆಸಕ್ತಿಯಿಂದ ಕೂಡಿದ ಸಂಗೀತ ಕಛೇರಿಗಳನ್ನೂ ಆಗಾಗ್ಗೆ ಆಯೋಜಿಸುತ್ತದೆ. ಕಳೆದ 22 ವರ್ಷಗಳಿಂದ ವಾದನ, ಹಾಗೂ ತಾಳವಾದ್ಯ ಕ್ಷೇತ್ರಗಳಲ್ಲಿ ಶಿಕ್ಷಣ ನೀಡುತ್ತಾ, ಒಂದು ವಿದ್ವತ್ ಪೂರ್ಣ ಕಛೇರಿಗೆ ಬೇಕಾಗುವ ಸಮಗ್ರ ತರಬೇತಿ ನೀಡಿ, ಸಾಹಿತ್ಯ ಮತ್ತು ಲಯದ ತಿಳಿವಳಿಕೆಗೆ ವಿಶೇಷ ಆದ್ಯತೆ ನೀಡುವ ಮಹತ್ತರವಾದ ಸೇವೆ ಮಾಡುತ್ತಿದೆ. ಈ ಶಾಲೆಯ ಆಶ್ರಯದಲ್ಲಿ ಬೆಳೆದ ನೂರಾರು ಕಲಾವಿದರು
ಆಕಾಶವಾಣಿ ಮತ್ತು ದೂರದರ್ಶನದ ಕಲಾವಿದರಾಗಿ, ದೇಶ- ವಿದೇಶಗಳಲ್ಲಿ ಶುದ್ಧ ಭಾರತೀಯ ಶಾಸ್ತ್ರೀಯ ಸಂಗೀತದ ವಿದ್ವಾಂಸರಾಗಿ ಖ್ಯಾತರಾಗಿರುವುದು ಹೆಮ್ಮೆಯ ಸಂಗತಿ. ಕಲೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡ ವಿದ್ವಾನ್ ಎಚ್.ಎಸ್. ಸುಧೀಂದ್ರ ಈ ಪ್ರೌಢ ಸಂಗೀತ ಕಲಾಶಾಲೆಯ ಸಾಧನೆಗಳ ಹಿಂದಿನ ರೂವಾರಿ. ಶಾಲೆಯ ಪ್ರಾಂಶುಪಾಲರಾಗಿ ಇವರು ಅಹರ್ನಿಷಿ ಸೇವೆ ಸಲ್ಲಿಸುತ್ತಿರುವುದು ಕಲಾರಂಗದ ಸುಕೃತವೇ ಆಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post