ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಎಸ್. ಎನ್. ಪಂಜಾಜೆ ಎಂದೇ ಪ್ರಸಿದ್ಧರಾಗಿದ್ದ ಯಕ್ಷಗಾನ ಸಂಘಟಕ ಪಂಜಾಜೆ ಸೂರ್ಯನಾರಾಯಣ ಭಟ್ (71) ನಿನ್ನೆ ವಿಧಿವಶರಾಗಿದ್ದಾರೆ.
ಬೆಂಗಳೂರಿನಲ್ಲಿ ಯಕ್ಷಗಾನದ ಕಲಿಕೆ, ಪ್ರಸಾರ, ಪ್ರದರ್ಶನ ಮತ್ತು ಚಿಂತನೆಗೆ ಸಂಬಂಧಿಸಿ ಅವರು ಮಾಡಿದ ಕೆಲಸ ದಾಖಲಾರ್ಹವಾದುದು. ಕರ್ನಾಟಕದ ಯಕ್ಷಗಾನ ಪ್ರದೇಶಗಳಲ್ಲದೆ, ಬೇರೆ ಬೇರೆ ಜಿಲ್ಲೆಗಳಲ್ಲಿ, ಮುಂಬೈಯಲ್ಲಿ ಸಮ್ಮೇಳನವನ್ನು ವಿಶಿಷ್ಟವಾಗಿ ನಡೆಸಿದ ಖ್ಯಾತಿಗೆ ಅವರು ಭಾಜನರಾಗಿದ್ದರು.
ತಾವೇ ಸ್ಥಾಪಿಸಿದ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ (ರಿ.) ಬೆಂಗಳೂರು ಮೂಲಕ 15 ಯಕ್ಷಗಾನ ಸಾಹಿತ್ಯ ಸಮ್ಮೇಳನ ನಡೆಸುವುದರರ ಜೊತೆಗೆ ಪ್ರತೀ ಸಮ್ಮೇಳನದಲ್ಲೂ ಯಕ್ಷಗಾನ ಹಿರಿಯ ಸಾಧಕರಿಗೆ ಸಮ್ಮೇಳನಾಧ್ಯಕ್ಷ ಪಟ್ಟ ನೀಡಿ, ಹಲವರನ್ನು ಗೌರವಿಸುತ್ತಾ ಸಂತೋಷ ಪಟ್ಟಿದ್ದರು. ಉಡುಪಿಯಲ್ಲಿ ಜರಗಿದ ಪ್ರಥಮ ಕರ್ನಾಟಕ ಯಕ್ಷಗಾನ ಸಮ್ಮೇಳನದಲ್ಲಿ ಪಂಜಾಜೆ ಅವರನ್ನು ಸಮ್ಮೇಳನದ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು.
ಎಸ್. ಎನ್. ಪಂಜಾಜೆ ಅವರು ಪತ್ನಿ, ಪುತ್ರ ಮತ್ತು ಅಸಂಖ್ಯಾತ ಯಕ್ಷಗಾನ ಪ್ರೇಮಿಗಳನ್ನು ಅಗಲಿದ್ದು, ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post