ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ ಎಲ್ಲೆಡೆ ಸತತವಾಗಿ ನಡೆಯುತ್ತಿರುವ ನವರಾತ್ರಿಯ #Navarathri ಆಚರಣೆ ಕಣ್ಮನಗಳಿಗೆ ಹಬ್ಬವಾಗಿದೆ. ನವರಾತ್ರಿಯು, ಆಧ್ಯಾತ್ಮಿಕ ಬೆಳವಣೆಗೆ, ಸಾಂಸ್ಕೃತಿಕ ಐಕ್ಯತೆಯನ್ನು ಜನಮನಗಳಲ್ಲಿ ಮೂಡಿಸುವ ವಿಶೇಷ ಆಚರಣೆ. ಯಾವುದೇ ಹೊಸ ವಿದ್ಯೆಯನ್ನು ಕಲಿಯಲು ತೊಡಗುವುದಕ್ಕೆ ಈ ಒಂಬತ್ತೂ ದಿನಗಳೂ ಬಹಳ ಪ್ರಶಸ್ತ ಎಂದು ಹಿಂದಿನಿಂದಲೂ ಇರುವ ಕ್ರಮ ಹಾಗೂ ನಂಬಿಕೆ.
ನವಶಕ್ತಿಯರ ಪೂಜೆ, ಒಂಭತ್ತು ದಿನಗಳೂ ಪಟ್ಟದ ಬೊಂಬೆಗಳಾದ ರಾಜ-ರಾಣಿ ಬೊಂಬೆಗಳನ್ನು ಅಲಂಕರಿಸಿ ಇಟ್ಟು, ಹಲವು ರೀತಿಯ ಬೊಂಬೆಗಳನ್ನು ಮೆಟ್ಟಲುಗಳಲ್ಲಿ ಜೋಡಿಸುವ ಸಂಪ್ರದಾಯ, ರಾಮನು ರಾವಣನ ಮೇಲೆ ವಿಜಯ ಸಾಧಿಸಿದ ದಿನ ವಿಜಯದಶಮಿಯಂಬ ನಂಬಿಕೆ, ಹೀಗೆ ಹಲವು ವಿಶೇಷತೆಗಳನ್ನೊಳಗೊಂಡ ಈ ಉತ್ಸವದಲ್ಲಿ ನಾನಾ ರೀತಿಯಲ್ಲಿ ಜನ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ನಮ್ಮ ಸಂಸ್ಕೃತಿಯ ಬುನಾದಿಯೇ ಲಲಿತಕಲೆಗಳು. ಇದರಲ್ಲಿಯೂ ಮುಖ್ಯವಾಗಿ ಸಂಗೀತ, ನೃತ್ಯ ಮುಂತಾದ ಪ್ರದರ್ಶನ ಕಲೆಗಳು. ಇವುಗಳನ್ನು ಪೋಷಿಸಿ ಬಳೆಸುವುದು ನಮ್ಮ ಸಮಾಜದ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅನೇಕ ಸಂಸ್ಥೆಗಳು ಹಲವು ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿರುವುದು ಸಮಾಜ ದೃಷ್ಟಿಯಿಂದ ಹಿತಕರವಾದ ಬೆಳವಣಿಗೆ.
ಬೆಂಗಳೂರಿನ ನಟನತರಂಗಿಣಿ ಸಂಸ್ಥೆ ಅನೇಕ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ, ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹ ನೀಡಲು ವೇದಿಕೆಯನ್ನು ಕಲ್ಪಿಸ ತೊಡಗಿದೆ. ನವರಾತ್ರಿಯ ಒಂಬತ್ತು ದಿನಗಳೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನವರಾತ್ರಿಯ ಮೊದಲ ಮೂರು ದಿನಗಳೂ ಉತ್ತಮ ಸಂಗೀತ ಪ್ರದರ್ಶನಗಳು ನಡೆದವು.
ನಾಲ್ಕನೆಯ ದಿನದಂದು ಅಂಜನಾಪುರದ ಶ್ರೀಪ್ರಸನ್ನ ವೆಂಕಟೇಶ್ವರ ಸ್ವಾಮಿಯ ದೇವಾಲಯಲ್ಲಿ ಭರತನಾಟ್ಯ ಪ್ರದರ್ಶನ ಜರುಗಿತು. ಶ್ರೀ ವೆಂಕಟೇಶ್ವರ ಸ್ವಾಮಿಯು ವರಾಹಾವತಾರಿಯಾಗಿ ಕಂಗೊಳಿಸುತ್ತಿರಲು ನಟನತರಂಗಿಣಿಯ ವಿದ್ಯಾರ್ಥಿನಿ ಕು.ಜಿ.ವಿ.ಶ್ರೀಲಾಸ್ಯ, ತನ್ನ ಲಾಸ್ಯ-ತಾಂಡವಯುತ ಭರತನಾಟ್ಯ ಪ್ರದರ್ಶನವನ್ನು ನೀಡಿ ನೆರೆದಿದ್ದ ಜನಮನವನ್ನು ಸೆಳೆದರು. ವೈ.ಜಿ.ಶ್ರೀಲತ ನಿಕ್ಷಿತ್ ಅವರ ಶಿಷ್ಯಳಾದ ಕು.ಶ್ರೀಲಾಸ್ಯ ಭರತನಾಟ್ಯ ವಿದ್ವತ್ ಪೂರ್ವವನ್ನು ಮುಗಿಸಿ ಅಂತಿಮ ಹಂತದ ತಯಾರಿಯಲ್ಲಿ ಇರುವರು. ಎರಡನೇ ವರ್ಷದ ನ್ಯೂರೋಸೈನ್ಸ್ ಡಿಗ್ರಿ ವ್ಯಾಸಂಗ ಮಾಡುತ್ತ ನೃತ್ಯ ಕಲಿಕೆಯನ್ನೂ ಸತತವಾಗಿ ಮುಂದುವರಿಸುತ್ತಿದ್ದಾರೆ.
ಯಾವುದೇ ಭರತನಾಟ್ಯ ಪ್ರದರ್ಶನದ ಮೊದಲ ವಿನಿಕೆ ಪುಷ್ಪಗಳನ್ನು ಅರ್ಪಿಸಿ ವೇದಿಕೆಗೆ, ಸಭೆಗೆ ಸಲ್ಲಿಸುವ ನಮನ, ಪುಷ್ಪಾಂಜಲಿ, ಹೀಗೆ ನರ್ತನವನ್ನು ಪ್ರಾರಂಭಿಸಿದ ಶ್ರೀಲಾಸ್ಯ, ಊತ್ತುಕ್ಕಾಡು ವೆಂಕಟಸುಬ್ಬಯ್ಯ ಅವರ ಶ್ರೀವಿಘ್ನರಾಜಂ ಭಜೇ ಕೃತಿಯ ಮೂಲಕ ತಮ್ಮ ನೃತ್ತದ ಕುಶಲತೆಯನ್ನು ವ್ಯಕ್ತಪಡಿಸಿದರು.
ದೇವಿಯನ್ನು ಕುರಿತ, ವಿದ್ವಾನ್ ಜಿ.ಗುರುಮೂರ್ತಿ ಅವರ “ಓಂಕಾರ ಬಿಂದು” , ದೇವಿಯ ಓಂಕಾರ ರೂಪವನ್ನು ತೋರಿದರೆ, ಶ್ರೀಪುರಂದರದಾಸರ “ಹನುಮಂತದೇವ ನಮೋ”, ಹನುಮಂತನ ರಾಮ ಭಕ್ತಿ , ಕಾರ್ಯಪರತೆಯ ಹಾಸ್ಯ ಬೆರೆತ ನಿರೂಪಣೆ. ಜಗತ್ತಿಗೇ ಒಡೆಯನಾದ ಶ್ರೀ ಕೃಷ್ಣನನ್ನು ಬಾಲನೆಂದು ವಾತ್ಸಲ್ಯದಿಂದ ಕೊಂಡಾಡುವ ಯಶೋದೆಯ ನಿರ್ಮಲ ಭಕ್ತಿಯನ್ನು ಸಾರುವ ಪ್ರಸಿದ್ಧ ದೇವರನಾಮ , ಶ್ರೀ ಪುರಂದರದಾಸರ “ಜಗದೋದ್ಧಾರನ”, ಈಶ್ವರನ ತಾಂಡವ ಹಾಗೂ ನವರಸಗಳ ಸೊಗಸಾದ ನೃತ್ಯ “ಆನಂದ ತಾಂಡವೇಶ್ವರನ “(ಶ್ರೀಮತಿ ದ್ವಾರಕಿ ಕೃಷ್ಣಸ್ವಾಮಿ ವಿರಚಿತ). ಶ್ರೀ ತ್ಯಾಗರಾಜರ “ಸೀತಾಕಲ್ಯಾಣ” ದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಉತ್ತಮ ಸಂಗೀತದ ಮುದ್ರಿಕೆಗಳು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದವು.
ಐದನೆಯ ದಿನದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟವರು ಕು.ಚೈತನ್ಯ. ಒಳ್ಳೆಯ ಕಂಠಸಿರಿ. ಶ್ರೀರಾಗದ ವರ್ಣದಿಂದ ಪ್ರಾರಂಭಿಸಿ, ಅಪರೂಪದ ಛಾಯಾತರಂಗಿಣೆ, ಮುಖ್ಯ ಪ್ರಸ್ತುತಿಯಾಗಿ ಪಂತುವರಾಳಿ ಉತ್ತಮವಾಗಿ ಹಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಭಜನೆ, ನಾಮಸಂಕೀರ್ತನ, ಪ್ರಸ್ತುತಿಗಳು ಕಛೇರಿಯನ್ನು ಮೆರಗುಗೊಳಿಸಿದವು. ಡಾ.ಬಾಲಮುರಳೀಕೃಷ್ಣ ಅವರ ಕದನಕುತೂಹಲ ರಾಗದ ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















