ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬಡವನ ಆರೋಗ್ಯವೇ ರಾಷ್ಟ್ರದ ನಿಜವಾದ ಸಂಪತ್ತು. ಆದರೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕನಿಷ್ಠ ಪಕ್ಷ ಕೆಮ್ಮು, ಜ್ವರದಂತಹ ಸಾಮಾನ್ಯ ಕಾಯಿಲೆಗಳಿಗೂ ಔಷಧಿ ಲಭ್ಯವಿಲ್ಲದಿರುವುದು ದುರದೃಷ್ಟಕರ ಎಂದು ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ #Dr. Dhananjaya Sarji ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ತಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ #Minister Dinesh Gundu Rao ಅವರಿಗೆ ರಾಜ್ಯದ ಆರೋಗ್ಯ ಕ್ಷೇತ್ರದ ದುಸ್ಥಿತಿಯ ಬಗ್ಗೆ ಹತ್ತು ಹಲವು ಅಂಕಿ-ಅಂಶಗಳೊಂದಿಗೆ ಪ್ರಶ್ನೆಗಳನ್ನು ಕೇಳಿದ ಅವರು, ಬಡವರ ಆರೋಗ್ಯ ಕಾಪಾಡುವುದು ಸರ್ಕಾರದ ಮೂಲ ಕರ್ತವ್ಯ ಎಂಬುದನ್ನು ಮರೆತಂತಿದೆ ಎಂದು ಕಿಡಿಕಾರಿದರು.
2014ರಲ್ಲಿ ಕರ್ನಾಟಕ ಸರ್ಕಾರ ತಲಾ ವ್ಯಕ್ತಿಗೆ ವರ್ಷಕ್ಕೆ 1,300 ರೂ. ಖರ್ಚು ಮಾಡುತ್ತಿದ್ದರೆ, ಪ್ರಸ್ತುತ ಆ ಮೊತ್ತ 3,359 ರೂ.ಗೆ ಏರಿಕೆಯಾಗಿದೆ. ಇಷ್ಟು ಹಣ ಖರ್ಚು ಮಾಡುತ್ತಿದ್ದರೂ ಸಾಮಾನ್ಯ ಜನರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ರಾಜ್ಯದ 3,000 ಸರ್ಕಾರಿ ಆಸ್ಪತ್ರೆಗಳಲ್ಲಿ 49 ಸಾವಿರ ಬೆಡ್ಗಳಿವೆ. ಆದರೆ ಕೇವಲ 5,800 ಖಾಸಗಿ ಆಸ್ಪತ್ರೆಗಳಲ್ಲಿ 60,000 ಬೆಡ್ಗಳಿವೆ. ಗಂಭೀರವಾದ ನಾಯಿ ಕಡಿತಕ್ಕೆ ನೀಡುವ ರೇಬಿಸ್ ಲಸಿಕೆ ಕೂಡ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಬಡ ಮತ್ತು ಮಧ್ಯಮ ವರ್ಗದವರು ಸರ್ಕಾರಿ ಆಸ್ಪತ್ರೆಗಳನ್ನೇ ನಂಬಿಕೊಂಡಿದ್ದು, ಮೂಲಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ.
2025-26ರ ವರದಿಯಂತೆ ಒಟ್ಟು 15 ಕೋಟಿ OPD ಸೇವೆಗಳು ದಾಖಲಾಗಿವೆ. ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಔಷಧಿ ಖರೀದಿ ಪ್ರಮಾಣ ಕುಸಿದಿದೆ. 2024-25 ಕ್ಕೆ ಒಂದು ತಾಲೂಕಿನಲ್ಲಿ ಜಿ.ಎಂ.ಎಸ್ ಸಪ್ಲೆ 1 ಕೋಟಿ ಇದ್ದರೆ ಲೋಕಲ್ ಪರ್ಚೆಸ್ 2 ಕೋಟಿ ಇತ್ತು. 2025-26 ಕ್ಕೆ ಒಂದು ತಾಲೂಕಿಗೆ ಜಿ.ಎಂ.ಎಸ್ ಸಪ್ಲೆ 50 ಲಕ್ಷ ಇದ್ದರೆ, ಲೋಕಲ್ ಪರ್ಚೆಸ್ 1 ಕೋಟಿಗೆ ಬಂದಿದೆ. ಇದರ ಪ್ರಕಾರ ಪರ್ಚೆಸ್ ರೇಟ್ 50% ಕಡಿಮೆ ಆಗಿದೆ, ಇದರಿಂದಾಗಿ ಬಡವರು ಖಾಸಗಿ ಮೆಡಿಕಲ್ ಶಾಪ್ಗಳಿಗೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ. 880 ಕೋಟಿ ರೂ. ಅನುದಾನ ಮಂಜೂರಾಗಿದ್ದರೂ, ಉಗ್ರಾಣಗಳಲ್ಲಿ ಔಷಧಿಗಳಿಲ್ಲ. ಸಾಮಾನ್ಯ ಪ್ರಕ್ರಿಯೆಯಂತೆ 4 ತಿಂಗಳೊಳಗೆ ಔಷಧಿ ಸರಬರಾಜು ಆಗಬೇಕಿತ್ತು, ಆದರೆ 7 ತಿಂಗಳಾದರೂ ಸರಬರಾಜು ಆಗದಿರುವುದು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಆ ಕಡೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳು ಇಲ್ಲ, ಈ ಕಡೆ ಅತ್ಯಂತ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ನೀಡುತಿದ್ದ ಪ್ರಧಾನ ಮಂತ್ರಿ ಜನೌಷದ ಕೇಂದ್ರವನ್ನು ಮುಚ್ಚಿದ್ದೀರಿ, ಇದು ರಾಜ್ಯದ ಜನತೆಗೆ ಮಾಡುತ್ತಿರುವ ಅನ್ಯಾಯ ಅಲ್ಲವೇ ಎಂದು ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡುರಾವ್ ಅವರಿಗೆ ಪ್ರಶ್ನೆ ಕೇಳುತ್ತಾ, ಕೇಂದ್ರದ ಮೂಲಕ ನಡೆಯುವ ಔಷಧಿ ಖರೀದಿ ಸಮರ್ಪಕವಾಗಿ ಆಗಬೇಕು ಮತ್ತು ಸ್ಥಳೀಯ ಖರೀದಿ ಕಡಿಮೆಯಾಗಬೇಕು, ರಾಜ್ಯದ ಸರ್ಕಾರಿ ನೌಕರರಿಗೆ ಸಿ.ಜಿ.ಹೆಚ್.ಎಸ್ ದರಗಳನ್ನು ತಕ್ಷಣ ಪರಿಷ್ಕರಣೆ ಮಾಡಬೇಕು, ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಸಂಪೂರ್ಣ ಔಷಧಿ ಲಭ್ಯವಿರುವಂತೆ ನೋಡಿಕೊಳ್ಳಬೇಕು ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಯಿಸಿದ ಆರೋಗ್ಯ ಸಚಿವರು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ಮೂಲಕ ಔಷಧಿಗಳನ್ನು ಖರೀದಿ ಮಾಡಲಾಗುತ್ತದೆ ಹಿಂದೆ ಇದನ್ನು ಡ್ರಗ್ ಸೊಸೈಟಿ ಎಂದು ಮಾಡಲಾಗಿತ್ತು ಸೆಂಟ್ರಲ್ ಪರ್ಚೆಸ್ ನಲ್ಲಿ ನಡೆಯುವ ಅವ್ಯವಹಾರವನ್ನು ತಡೆಯಲು ಈಗ ಅದನ್ನು ಕಾರ್ಪೋರೇಷನ್ ಆಗಿ ಮಾಡಿದ್ದೇವೆ, ಇದರಿಂದಾಗಿ ಔಷಧಿ ಪೂರೈಕೆ ವಿಳಂಬವಾಗುತ್ತಿದೆ. ಸರ್ಕಾರಿ ಔಷಧಿ ಅಕ್ರಮವಾಗಿ ಎಲ್ಲಿಯೂ ಮಾರಾಟವಾಗದೆ ಕಾರ್ಪೊರೇಷನ್ ಇಂದ ನೇರವಾಗಿ ಆಸ್ಪತ್ರೆಗೆ ಬರುವಂತೆ ಕ್ರಮ ತೆಗೆದುಕೊಂಡಿದ್ದೇವೆ, ಸದ್ಯದಲ್ಲಿ ಎಲ್ಲವೂ ಸುಧಾರಣೆ ಆಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















