ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿಪತ್ತು ಸನ್ನದ್ದತೆಯ ಕುರಿತಾಗಿ ಇಲ್ಲಿನ ಒಡ್ಡರಹಳ್ಳಿ ರೈಲ್ವೆ ಯಾರ್ಡ್’ನಲ್ಲಿ ಜಂಟಿ ಅಣುಕು ಅಭ್ಯಾಸ ನಡೆಸಲಾಯಿತು.
ಇಡೀ ದಿನ ನಡೆದ ಅಣುಕು ಅಭ್ಯಾಸದಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್’ಡಿಆರ್’ಎಫ್)ಯ 10 ನೇ ಬೆಟಾಲಿಯನ್ ಮತ್ತು ಇತರ ಸಂಸ್ಥೆಗಳು ಭಾಗವಹಿಸಿದ್ದವು. ಇಂತಹ ಅಣಕು ಅಭ್ಯಾಸಗಳು ವಿಪತ್ತಿನ ಸಂದರ್ಭದಲ್ಲಿ ವಿವಿಧ ಇಲಾಖೆಗಳ ನಡುವೆ ಸನ್ನದ್ಧತೆ ಮತ್ತು ಸಮನ್ವಯತೆಯನ್ನು ಹೆಚ್ಚಿಸಲು ನೆರವಾಗಲಿದೆ.
ಹೇಗಿತ್ತು ಅಣುಕು ಅಭ್ಯಾಸ?
ಈ ಅಣಕು ಪ್ರದರ್ಶನದ ಭಾಗವಾಗಿ, ಒಡ್ಡರಹಳ್ಳಿಯಲ್ಲಿ ಒಂದು ಬೋಗಿ ಹಳಿ ತಪ್ಪಿದ ಹಾಗೆ, ಮತ್ತೊಂದು ಬೋಗಿ ಮಗುಚಿ ಬಿದ್ದ ಹಾಗೆ ಒಂದು ಅಪಘಾತ ಸನ್ನಿವೇಶವನ್ನು ಸೃಷ್ಟಿಸಲಾಗಿತ್ತು. ತುರ್ತು ಸೈರನ್ ಮೊಳಗಿಸಿದ ನಂತರ ನಿಯಂತ್ರಣ ಕಚೇರಿಯ ಮೂಲಕ ಅಪಘಾತದ ಸಂದೇಶವನ್ನು ರವಾನಿಸಲಾಯಿತು. ವಿವಿಧ ರಕ್ಷಣಾ ತಂಡಗಳು ತ್ವರಿತವಾಗಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಗಳನ್ನು ಮಾಡಿ ತೋರಿಸಿದರು.ಯಾವೆಲ್ಲಾ ಪಡೆಗಳ ಸಹಯೋಗ?
10 ನೇ ಬೆಟಾಲಿಯನ್ ಉಪ ಕಮಾಂಡೆಂಟ್ ದಿಲ್ಬಾಗ್ ಸಿಂಗ್ ನೇತೃತ್ವದ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯು 27 ರಕ್ಷಣಾ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿತು.
ರಾಜ್ಯ ವಿಪತ್ತು ಸ್ಪಂದನಾ ಪಡೆ, ಗೃಹರಕ್ಷಕ ದಳ, ನಾಗರಿಕ ರಕ್ಷಣಾ ಪಡೆ, ಅಗ್ನಿಶಾಮಕ ಸೇವೆಗಳು, ಸರ್ಕಾರಿ ಆಸ್ಪತ್ರೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ರೈಲ್ವೆಯ ವೈದ್ಯಕೀಯ, ಕ್ಯಾರೇಜ್ ಮತ್ತು ವ್ಯಾಗನ್, ಸಿಗ್ನಲ್, ವಿದ್ಯುತ್, ರೈಲ್ವೆ ರಕ್ಷಣಾ ದಳ, ಪರಿಚಾಲನಾ ಮತ್ತು ವಾಣಿಜ್ಯ ಇಲಾಖೆಗಳ ಸಿಬ್ಬಂದಿಗಳು ಇದರಲ್ಲಿ ಭಾಗವಹಿಸಿದ್ದರು.
ಹೇಗಿತ್ತು ಅಣುಕು ಅಭ್ಯಾಸ?
ರಕ್ಷಣಾ ತಂಡಗಳು ವಿಶೇಷ ಉಪಕರಣಗಳನ್ನು ಬಳಸಿ ಒಳಗೆ ಸಿಲುಕಿರುವ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ನಿಟ್ಟಿನಲ್ಲಿ ಬೋಗಿಗಳ ಛಾವಣಿ, ವೆಸ್ಟಿಬುಲ್’ಗಳು ಮತ್ತು ಕಿಟಕಿಗಳನ್ನು ಕತ್ತರಿಸಿದವು. ವೈದ್ಯಕೀಯ ತಂಡವು ಗಾಯಗಳ ತೀವ್ರತೆಯ ಆಧಾರದ ಮೇಲೆ ಪ್ರಥಮ ಚಿಕಿತ್ಸೆ ನೀಡುವ ಮತ್ತು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ವರ್ಗಾಯಿಸುವ ಕಾರ್ಯವಿಧಾನಗಳನ್ನು ಪ್ರದರ್ಶಿಸಿದರು.ಈ ಅಣಕು ಅಭ್ಯಾಸವು ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಎಂ. ರಾಮಕೃಷ್ಣರವರ ಮಾರ್ಗದರ್ಶನದಲ್ಲಿ ನಡೆಯಿತು.
ಅಣಕು ಅಭ್ಯಾಸ ಪ್ರದರ್ಶನ ಮುಗಿದ ನಂತರ ಮಾತನಾಡಿದ ರಾಮಕೃಷ್ಣ ಅವರು, ರಕ್ಷಣಾ ಕಾರ್ಯಾಚರಣೆಯ ಅಭ್ಯಾಸವನ್ನು ಸಮನ್ವಯತೆಯಿಂದ ಪೂರ್ಣಗೊಳಿಸಿದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಉತ್ತಮ ವಿಪತ್ತು ನಿರ್ವಹಣೆಗಾಗಿ ಪ್ರತಿ ಜಿಲ್ಲೆಯಲ್ಲಿ ಆಪದ ಮಿತ್ರ ಸ್ವಯಂಸೇವಕರ ಅಗತ್ಯದ ಕುರಿತು ಅವರು ತಿಳಿಸಿ, ಜಿಲ್ಲಾಡಳಿತವು ಹೆಚ್ಚು ಹೆಚ್ಚು ‘ಆಪದ ಮಿತ್ರ’ ಸ್ವಯಂಸೇವಕರನ್ನು ಹೊಂದಿರಬೇಕು ಎಂದರು.
ಡೀಸೆಲ್ ಮತ್ತು ವಿಪತ್ತು ನಿರ್ವಹಣೆಯ ಮುಖ್ಯ ಮೆಕ್ಯಾನಿಕಲ್ ಇಂಜಿನಿಯರ್ ಪಿ. ಬಾಲಸುಂದರ್, ಬೆಂಗಳೂರು ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಪರಿಚಾಲನೆ) ಪರೀಕ್ಷಿತ್ ಮೋಹನ್ಪುರಿಯಾ, ಬೆಂಗಳೂರು ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ವೆಂಕಟರಾಮಯ್ಯ, ಸೇರಿದಂತೆ ಹಲವಾರು ಹಿರಿಯ ರೈಲ್ವೆ ಅಧಿಕಾರಿಗಳು ಈ ಅಣಕು ಅಭ್ಯಾಸ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಗೃಹರಕ್ಷಕ ದಳದ ಉಪ ಕಮಾಂಡೆಂಟ್ ಮಹಾದೇವ ಮೂರ್ತಿ, ಅಗ್ನಿಶಾಮಕ ಸೇವೆಗಳ ಕಮಾಂಡಿಂಗ್ ಅಧಿಕಾರಿ ಎಚ್.ಜಿ. ಗೌತಮ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರತಿನಿಧಿ ಸ್ಮಿತಾ ಪ್ರಿಯದರ್ಶಿನಿ ಮತ್ತು ಎಸ್’ಡಿಆರ್’ಎಫ್ ಇನ್ಸ್ಪೆಕ್ಟರ್ ಅನುಕುಮಾರ್ ಸೇರಿದಂತೆ ರಾಜ್ಯ ಸಂಸ್ಥೆಗಳ ವಿವಿಧ ಅಧಿಕಾರಿಗಳು ಸಹ ಈ ಅಭ್ಯಾಸ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ಸುದರ್ಶನ್ ಭಟ್ ಅವರು ಈ ಅಣಕು ಅಭ್ಯಾಸವನ್ನು ಯಶಸ್ವಿಗೊಳಿಸಲು ಸಕ್ರಿಯವಾಗಿ ಭಾಗವಹಿಸಿದ ಎಲ್ಲ ಇಲಾಖೆಗಳಿಗೆ ವಂದನೆ ಸಲ್ಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post