ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜ್ಞಾನಕಾರ್ಯಗಳಿಗೆ ಪ್ರೋತ್ಸಾಹಿಸುವುದು ಮತ್ತು ವಿದ್ವಾಂಸರಿಗೆ ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಮುಳಬಾಗಿಲು ಶ್ರೀಪಾದರಾಜರ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಸುಜಯನಿಧಿ ತೀರ್ಥ ಸ್ವಾಮೀಜಿ ಹೇಳಿದರು.
ರಾಜಧಾನಿಯ ಗಿರಿನಗರದಲ್ಲಿರುವ ಉಡುಪಿ ಶ್ರೀ ಭಂಡಾರ ಕೇರಿ ಮಠದಲ್ಲಿ ಭಾಗವತಶ್ರಮ ಪ್ರತಿಷ್ಠಾನ ಮತ್ತು ಲೋಕ ಸಂಸ್ಕೃತಿ ಕಲಾ ವಿಕಾಸ ಪ್ರತಿಷ್ಠಾನಗಳ ಸಂಯುಕ್ತ ಆಶಯದಲ್ಲಿ ಭಂಡಾರ ಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ 70ನೇ ವರ್ಧಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 70 ಜನ ವಿದ್ವಾಂಸರ ಚೇತೋಹಾರಿ ಉಪನ್ಯಾಸ ಕಾರ್ಯಕ್ರಮದ ಸಮಾರೋಪದಲ್ಲಿ 70 ಜನ ವಿದ್ವಾಂಸರಿಗೆ ಸನ್ಮಾನ ಪ್ರದಾನವಾದ ನಂತರ ಅವರು ಆಶೀರ್ವಚನ ನೀಡಿದರು.
ಶ್ರೀ ವಿದ್ಯೇಶ ತೀರ್ಥರು ವಿದ್ಯಾ ಶಿಖರವೇ ಆಗಿದ್ದಾರೆ. ಜ್ಞಾನಕಾರಕ ಚಟುವಟಿಕೆಗಳಿಗೆ ಅನ್ವರ್ಥವಾಗಿದ್ದಾರೆ. ಅವರು ನಡೆಸುವ ಪ್ರತಿ ಚಟುವಟಿಕೆಗಳೂ ವಿಭಿನ್ನ ಮತ್ತು ವಿಶೇಷವಾಗಿರುತ್ತವೆ. ಸಮುದಾಯದ ಪಂಡಿತರನ್ನು ಪ್ರೋತ್ಸಾಹಿಸಿ, ಸಂಸ್ಕೃತಿ ಪಾಲನೆಗೂ ಮಹತ್ವದ ಕೊಡುಗೆ ಕೊಡುವ ಶ್ರೇಷ್ಠ ಮಟ್ಟದಲ್ಲಿರುತ್ತದೆ. ಇಂಥ ಕಾರ್ಯಗಳನ್ನು ಮಠ- ಪೀಠಗಳು ಮಾಡಲೇಬೇಕು ಎಂಬ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿಭಾಯಿಸಿ ಮಾದರಿ ಆಗಿದ್ದಾರೆ ಎಂದು ಶ್ಲಾಘಿಸಿದರು.
ಸಾನ್ನಿಧ್ಯ ವಹಿಸಿ ಅಮೃತೋಪದೇಶ ನೀಡಿದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ, ವಿದ್ವಾಂಸರ ವಿದ್ವತ್ತು, ಪಂಡಿತರ ಶಾಸ್ತ್ರಜ್ಞಾನವೆಲ್ಲವೂ ಲೋಕಗುರು ಭಗವಾನ್ ಶ್ರೀ ವೇದವ್ಯಾಸರಿಗೆ ಪ್ರಾಮಾಣಿಕವಾಗಿ ಸಮರ್ಪಣೆ ಆದಾಗ ಮಾತ್ರ ಅದು ಮಾನ್ಯವೆನಿಸುತ್ತದೆ. ಈ ನಿಟ್ಟಿನಲ್ಲಿ ಭಾರತೀಯ ಸನಾತನ ಪರಂಪರೆ, ವೇದ-ಶಾಸ್ತ್ರಗಳನ್ನು ಅಧ್ಯಯನ ಮಾಡಿದವರು ಸದಾ ಕ್ರಿಯಾಶೀಲರಾಗಿರಬೇಕು. ಆ ಮೂಲಕ ಸಮಾಜಕ್ಕೆ ಬೆಳಕಾಗಬೇಕು ಎಂದು ಆಶಿಸಿದರು.
3 ದಿನಗಳ ಕಾಲ 70 ಜನರಿಂದ ನಡೆದ ಉಪನ್ಯಾಸಗಳನ್ನು ಗ್ರಂಥರೂಪದಲ್ಲಿ ತರುವ ಉದ್ದೇಶ ಮಠಕ್ಕೆ ಇದೆ. ಇದಕ್ಕೆ ಪ್ರತಿಯೊಬ್ಬರೂ ಅಕ್ಷರ ಸೇವೆ ಸಮರ್ಪಣೆ ಮಾಡಬೇಕು ಎಂದು ಸ್ವಾಮೀಜಿ ಕರೆ ನೀಡಿದರು. 70 ವಿದ್ವಾಂಸರಿಗೆ ಗೌರವ ಸಂಭಾವನೆ ಸಹಿತ ಚಿನ್ನದ ಉಂಗುರ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಸಮೀರ- ರಘುರಾಮರಿಂದ ಶಿಖರೋಪನ್ಯಾಸ
ವಿಷಯ ತಜ್ಞರಾದ ಸಮೀರ ಕಾಗಲ್ಕರ್ ಅವರು ಮಾಧ್ವ ಸಮಾಜದ ಕುಂದು ಕೊರತೆಗಳು, ಪರಿಹಾರ ಉಪಾಯಗಳು- ವಿಷಯದ ಬಗ್ಗೆ, ಪತ್ರಕರ್ತ ಮತ್ತು ಲೇಖಕ ಎ. ಆರ್. ರಘುರಾಮ ಅವರು ‘ಮಾಧ್ಯಮವು ಉದ್ಯಮ ಪ್ರಭಾವದಿಂದ ಸಮಾಜವನ್ನು ಅರಳಿಸುವುದರಲ್ಲಿ ಎಡವಿದೆಯೇ’ – ಎಂಬ ವಿಷಯ ಕುರಿತು ಶಿಖರೋಪನ್ಯಾಸ ನೀಡಿ ವಿದ್ವಜ್ಜನರ ಪ್ರಶಂಸೆಗೆ ಪಾತ್ರರಾದರು. ಡಾ. ಶ್ರೀನಿಧಿ ವಾಸಿಷ್ಠ ಅಭಿನಂದನಾ ಭಾಷಣ ಮಾಡಿದರು. ಪಂಡಿತ ಬದರಿ ಆಚಾರ್ಯ ನಿರೂಪಿಸಿದರು.
ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ 70ನೇ ವರ್ಧಂತಿ ಸಂದರ್ಭದಲ್ಲಿ ಬೆಂಗಳೂರಿನ ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಭಕ್ತರು ವಿವಿಧ ಪರಿಮಳ ಪುಷ್ಪ ವೃಷ್ಟಿ ಮಾಡಿ ಭಕ್ತಿ -ಭಾವ ಸಮರ್ಪಿಸಿದರು. ಶ್ರೀಮದ್ ಭಾಗವತ ಗ್ರಂಥವನ್ನು ಶಿರದಲ್ಲಿ ಧರಿಸಿದ ಶ್ರೀಗಳು ಭಗವಾನ್ ವೇದವ್ಯಾಸರಿಗೆ ಗೌರವಾದರ ಅರ್ಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post