ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಎ.ಆರ್. ರಘುರಾಮ |
ಉದ್ಯಾನನಗರಿಯ ಸಾತ್ವಿಕ ದಂಪತಿಗಳಾದ ವಾರುಣಿ ಮತ್ತು ಯದುನಂದನ ಅವರ ಪುತ್ರಿ ಪಿ.ವೈ. ಶ್ರೀಲಕ್ಷ್ಮೀ ಅವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ನ. 27ರಂದು ಬೆಂಗಳೂರಿನ ಬಸವನಗುಡಿಯ ಗಾಯನ ಸಮಾಜದಲ್ಲಿ ಆಯೋಜನೆಗೊಂಡಿದೆ.
ಸಂಜೆ 6ಕ್ಕೆ ಸಂಪನ್ನಗೊಳ್ಳಲಿರುವ ಈ ಕಾರ್ಯಕ್ರಮ ನಾಡಿಗೆ ಒಬ್ಬ `ಉದಯೋನ್ಮುಖ ಕಲಾವಿದೆ’ ಯನ್ನು ಸಮರ್ಥವಾಗಿ ಪರಿಚಯಿಸಲಿದೆ. ಸಂಸ್ಕೃತಿ, ಸಂಸ್ಕೃತ ಮತ್ತು ಸಂಪ್ರದಾಯಗಳ ವಾಹಕವಾಗಿರುವ ವಂಶವೊಂದರ ಪ್ರತಿಭೆಯನ್ನು ಕಲಾ ಲೋಕಕ್ಕೆ ಅಧಿಕೃತವಾಗಿ ಸಮರ್ಪಣೆ ಮಾಡಲಿದೆ. ಈ ಮೂಲಕ ಕರುನಾಡಿನ ಮಹೋನ್ನತ ಕಲೆಯ ಪ್ರಾಕಾರವಾದ ಭರತನಾಟ್ಯ ಕ್ಷೇತ್ರಕ್ಕೆ ಹೊಸ ಮುತ್ತನೊಂದನ್ನು ಅಲಂಕರಿಸಲಿದೆ. ತಾಂತ್ರಿಕ ಶಿಕ್ಷಣ ಅಧ್ಯಯನ ಮಾಡುವ ಪೀಳಿಗೆ ರಂಗದ ಬಗ್ಗೆ ಶ್ರದ್ಧೆ ಇಟ್ಟುಕೊಂಡು ಕಲಾಸೇವೆಯನ್ನು ಜೀವನಪೂರ್ಣ ಮಾಡುವ ಸಂಕಲ್ಪಕ್ಕೆ ಈ ಕಾರ್ಯಕ್ರಮ ಮೈಲಿಗಲ್ಲಾಗಲಿದೆ. ಸಾವಿರಾರು ದಿಗ್ಗಜರು ಹಾಡಿ ನಲಿದ ಗಾಯನ ಸಮಾಜವೆಂಬ ಪವಿತ್ರ ವೇದಿಕೆ ಭಾನುವಾರ ಸಂಜೆ `ನೃತ್ಯ ನಂದನ’ವಾಗಲಿದೆ.
ಹೌದು. ಹೊರ ನೋಟಕ್ಕೆ ಇದು ಒಂದು ರಂಗ ಪ್ರವೇಶವಾದರೂ ಭವ್ಯ ಭಾರತದ ಕಲಾಲೋಕಕ್ಕೆ ಈ ವಿದ್ಯಾರ್ಥಿನಿ ಬಹುದೊಡ್ಡ ಕಾಣಿಕೆಗಳನ್ನು ನೀಡಿ, ನೂರಾರು ಕಲಾವಿದರಿಗೆ ಮುಂದೊಂದು ದಿನ ಸ್ಫೂರ್ತಿಯಾಗಲಿ, ಸಾವಿರಾರು ಮಕ್ಕಳ ಪುಟ್ಟ ಹೆಜ್ಜೆಗಳಿಂದ ಗೆಜ್ಜೆ ನಾದ ಹೊಮ್ಮಿಸಲಿ ಎಂಬ ಮಹತ್ತರ ಆಶಯ ಹೊಂದಿದೆ ಎಂದರೆ ಅತಿಶಯೋಕ್ತಿ ಏನಲ್ಲ.
ಹಿರಿಯರ ಉಪಸ್ಥಿತಿ
ಹಿರಿಯ ನೃತ್ಯ ಕಲಾವಿದ ಮತ್ತು ವಿದ್ವಾಂಸರಾದ ಡಾ. ಎಂ.ಆರ್. ಕೃಷ್ಣಮೂರ್ತಿ, ಹಿರಿಯ ಕಲಾಪೋಷಕರಾದ ಅನನ್ಯ ರಾಘವೇಂದ್ರ, ಕರ್ನಾಟಕ ಶಾಸ್ತ್ರೀಯ ಸಂಗೀತದ ವಿದ್ವಾಂಸರು ಮತ್ತು ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ ಪ್ರಾಚಾರ್ಯ ಜೆ.ಎಸ್. ಶ್ರೀಕಂಠ ಭಟ್, ಪೂರ್ಣಪ್ರಮತಿ ಶಾಲೆಯ ಪ್ರಾಚಾರ್ಯೆ ಎಂ.ಜಿ. ಶಶಿರೇಖಾ ಅವರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಇದು ಬೆಳೆಯುವ ಸಿರಿ
ಬೆಳೆಯುವ ಸಿರಿಯನ್ನು ಮೊಳಕೆಯಲ್ಲೇ ಗುರುತಿಸಬೇಕು. ಅದಕ್ಕೆ ಸೂಕ್ತವಾಗಿ ಬೆಂಬಲಿಸಿ ಪ್ರೋತ್ಸಾಹಿಸಬೇಕು. ಆಗ ಪ್ರತಿಭೆ ಬೆಳಗುತ್ತದೆ. ಪ್ರೌಢ ಮತ್ತು ಯವ್ವನದ ಹಂತಕ್ಕೆ ಬಂದಾಗ ಕಲಾವಂತಿಕೆ ಬೆಳಗುತ್ತದೆ. ಮುಂದೆ ಇಂತಹಾ ಮಕ್ಕಳೇ ನಾಡಿನ ಸಂಸ್ಕೃತಿ ಮತ್ತು ಕಲೆಗಳ ರಾಯಭಾರಿಗಳಾಗುತ್ತಾರೆ. ಈ ಮಾತು ನಿಜಕ್ಕೂ ಅನ್ವರ್ಥವಾಗುವುದು ಪ್ರತಿಭಾವಂತ ಕಲಾವಿದೆ ಪಿ.ವೈ. ಶ್ರೀಲಕ್ಷ್ಮೀ ಅವರಿಗೆ.
ಹೌದು. ಸಂಪ್ರದಾಯಸ್ಥ ಮಾಧ್ವ ಕುಟುಂಬದಲ್ಲಿ, ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುವ, ಪೂಜಿಸುವ ಮನೆತನದಲ್ಲಿ ಜನಿಸಿದ ಶ್ರೀಲಕ್ಷ್ಮೀಗೆ ಬಾಲ್ಯದಿಂದಲೇ ಸಂಗೀತ ನೃತ್ಯದಲ್ಲಿ ವಿಶೇಷ ಆಸಕ್ತಿ ಇತ್ತು. ಇದಕ್ಕೆ ಪಾಲಕರ ಶ್ರದ್ಧಾ ಭಕ್ತಿಗಳೂ ಕಾರಣವಾಗಿವೆ. ಮನೆಯೆ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬಂತೆ ಶ್ರೀಲಕ್ಷ್ಮೀ ಅವರ ತಾಯಿಯೇ ಮೊದಲ ಗುರು. ಈಕೆಯ ತಾಯಿ ವಾರುಣಿ ಸಂಗೀತ ಕಲಾವಿದೆಯಾಗಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿ ಸಾಧಿಸಿದ್ದಾರೆ. ಇದು ಶ್ರೀಲಕ್ಷ್ಮೀಗೆ ವರದಾನವಾಯಿತು.
ಮೂರು ವರ್ಷದ ಹಂತದಲ್ಲೇ ಕನ್ನಡದ ಜನಪ್ರಿಯ ಚಿತ್ರಗೀತೆಗಳಿಗೆ ಈಕೆ ಸ್ವಯಂ ಪ್ರೇರಿತವಾಗಿ ನೃತ್ಯ ಮಾಡುತ್ತಿದ್ದದ್ದು ಗಮನಾರ್ಹ ಅಂಶ. ಪೂರ್ಣಪ್ರಮತಿ ಶಾಲೆಯಲ್ಲಿ ಕಲಿಕೆ ಆರಂಭವಾದಾಗ ನೃತ್ಯಗುರುವಾಗಿ ವಿದುಷಿ ರಂಜನಿ ಜಯಸಿಂಹ ದೊರೆತದ್ದು ಈಕೆಯ ಸುಕೃತವೇ ಸರಿ. ಶಾಲಾ ಶಿಕ್ಷಣದೊಂದಿಗೆ ನೃತ್ಯ ಶಿಕ್ಷಣವೂ ಈಕೆಯ ಅಭಿವ್ಯಕ್ತಿಗೆ ಭೂಷಣವಾಯಿತು.
ನೃತ್ಯ ರಂಜನೆಗೆ ಗುರುವಾದ ರಂಜನಿ
ಗುರು, ವಿದುಷಿ ರಂಜನಿ ಜಯಸಿಂಹ ಅವರ ಕಲಾವಾರಿಧಿ ಇನ್ಸ್ಟಿಟ್ಯೂಟ್ ಆಫ್ ಫೈನ್ ಆರ್ಟ್ಸ್’ನಲ್ಲಿ ಸಾಂಪ್ರದಾಯಿಕ ಭರತನಾಟ್ಯ ಕಲಿಕೆಗೆ ಪಾಲಕರು ಅವಕಾಶ ಕಲ್ಪಿಸಿದರು. ಇದನ್ನು ಸಮರ್ಥವಾಗಿ ಬಳಸಿಕೊಂಡ ಶ್ರೀಲಕ್ಷ್ಮೀ, ನೃತ್ಯದ ಪಟುಗಳನ್ನು ಶಾಸ್ತ್ರಬದ್ಧವಾಗಿ ಕಲಿತದ್ದು ಗಮನೀಯ ಸಂಗತಿ. ಗುರು ರಂಜನಿ ಅವರ ಸಮರ್ಥ ಮಾರ್ಗದರ್ಶನದಲ್ಲಿ ಸೂಕ್ತ ಪಾಠಾಂತರವೂ ಆಯಿತು. ಇದರ ಫಲವಾಗಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಶ್ರೀಲಕ್ಷ್ಮೀ ಶೇ. 95 ಅಂಕದೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ಹಿರಿಮೆಯೇ ಸರಿ. ಸದ್ಯ ಸೀನಿಯರ್ ಪರೀಕ್ಷೆಗೆ ಈಕೆ ಅಣಿಯಾಗುತ್ತಿದ್ದು, ಇದರ ನಡುವೆಯೇ `ರಂಗಪ್ರವೇಶ’ ವೂ ಜೀವನದ ದಾಖಲಾರ್ಹ ಘಟ್ಟವಾಗುತ್ತಿರುವುದು ವಿಶೇಷದಲ್ಲಿ ವಿಶೇಷವಾಗಿದೆ. ಯುವ ಕಲಾವಿದೆಯ ಅದಮ್ಯ ಆಸಕ್ತಿ ಮತ್ತು ಗುರುವಿನ ಅನಂತ ಅನುಗ್ರಹವೂ ಇಲ್ಲಿ ಸಾಕಷ್ಟು ಪ್ರಧಾನವಾಗಿದೆ ಎಂಬುದು ಮೆಚ್ಚತಕ್ಕ ಸಂಗತಿ.
ವಿವಿಧ ವೇದಿಕೆಗಳಲ್ಲಿ ಪ್ರದರ್ಶನ
ಕಲಾವಿದೆ ಶ್ರೀಲಕ್ಷ್ಮೀ `ಕಲಾವಾರಿಧಿ’ ತಂಡದಲ್ಲಿ ಉದಯೋನ್ಮುಖ ತಾರೆಯಾಗಿ ಗುರುತಿಸಿಕೊಂಡಿದ್ದಾರೆ. ಇದಕ್ಕೆ ಪ್ರತಿ ಹಂತದಲ್ಲೂ ಅವರು ಗುರು ರಂಜನಿ ಅವರ ಮಾರ್ಗದರ್ಶನ ಸ್ಮರಿಸಿಕೊಳ್ಳುತ್ತಾರೆ. ಈ ದಿಸೆಯಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಲ್ಲೂ ತಮ್ಮ ಕಲಾ ಪ್ರೌಢಿಮೆ ಬಿಂಬಿಸಿ ನೂರಾರು ಜನ ಕಲಾ ರಸಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ತಿರುಮಲ ತಿರುಪತಿಯ ನಾದ ನೀರಾಜನ, ಚಿದಂಬರಂನ ನೃತ್ಯಾಂಜಲಿ ಹಬ್ಬ, ಗುರುವಾಯೂರು ಉತ್ಸವ ಸೇರಿದಂತೆ ಉಡುಪಿ, ಪಂಢರಾಪುರದಲ್ಲಿ ಈಕೆ ನೃತ್ಯ ಪ್ರದರ್ಶನ ನಡೆದಿವೆ.
ದೂರದರ್ಶನದ ದಕ್ಷಿಣ ವಲಯ ಮಹಾ ನಿರ್ದೇಶಕರಾಗಿದ್ದ ಸಂದರ್ಭ ಮಹೇಶ ಜೋಷಿ ಆಯೋಜಿಸಿದ್ದ `ತತ್ವ ರಸಾಯನ’ದಲ್ಲೂ ಶ್ರೀಲಕ್ಷ್ಮೀಯ ನೃತ್ಯ ವೈಭವದ ಸಿರಿ ಪಡಮೂಡಿದೆ.
ಭೂಷಣವಾದ ಬಹುಮಾನ
ಭರತನಾಟ್ಯವನ್ನು ತನ್ನ ಉಸಿರನ್ನಾಗಿಸಿಕೊಂಡ ಶ್ರೀಲಕ್ಷ್ಮೀಗೆ ಹಲವು ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನ ದೊರೆತಿವೆ. ಮಲೇಷ್ಯಾದಲ್ಲಿ ಹಮ್ಮಿಕೊಂಡಿದ್ದ `ಅಲ್ಕೋ’ ಸ್ಪರ್ಧೆಯ ಸೋಲೋ ವಿಭಾಗದಲ್ಲಿ ದ್ವಿತೀಯ, ಡ್ಯುಯಟ್ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಈಕೆಯ ನೃತ್ಯಾಭಿವ್ಯಕ್ತಿಗೆ ಹಿಡಿದ ಕನ್ನಡಿಯಾಗಿದೆ. ಸದ್ಯ ಬೆಂಗಳೂರಿನ ಕೆಎಸ್ಐಟಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಬಿಇ ಪದವಿ ಪ್ರಥಮ ವರ್ಷದ ಅಧ್ಯಯನಕ್ಕೆ ಪ್ರವೇಶ ಮಾಡುತ್ತಿರುವ ಶ್ರೀಲಕ್ಷ್ಮೀ ಅವರ ಭರತನಾಟ್ಯ ರಂಗ ಪ್ರವೇಶ ಕಲಾಕ್ಷೇತ್ರದ ಮಹಾದ್ವಾರವಾಗಲಿ. ಈ ಮೂಲಕ ನಾಡಿಗೆ ಒಬ್ಬ ಉತ್ತಮ ಕಲಾನಿಧಿ ದೊರೆಯುವಂತಾಗಲಿ ಎಂಬುದೇ ಕ್ರಿಯಾಶೀಲ ಮನಸ್ಸುಗಳ ಶುಭ ಹಾರೈಕೆ.
ಶ್ರೀ ಲಕ್ಷ್ಮೀ ಅವರ ಕಲಾ ಜೀವನ ಉಜ್ವಲವಾಗಲಿ ಎಂದು ಕಲ್ಪ ಮೀಡಿಯಾ ಹೌಸ್ ಸಹ ಶುಭ ಕೋರುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post