ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಲಿವ್-ಇನ್ ರಿಲೇಷನ್ಶಿಪ್ಗೆ ಅಡ್ಡಿಯಾಗಿದ್ದರೆಂಬ ಕಾರಣಕ್ಕೆ ಪ್ರಿಯಕರನೊಂದಿಗೆ ಸೇರಿ ತಂದೆ, ತಾಯಿ ಹಾಗೂ ತಂಗಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದ ಟೆಕ್ಕಿ ಯುವತಿಯನ್ನು ವೈಟ್ಫೀಲ್ಡ್ ವಿಭಾಗದ ಪೊಲೀಸರು ಪುದುಚೇರಿ ರೈಲ್ವೇ ನಿಲ್ದಾಣದ ಬಳಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶ್ವೇತಾ (25) ಎಂದು ಗುರುತಿಸಲಾಗಿದೆ. ಆಕೆಯ ಪ್ರಿಯಕರ ಹಾಗೂ ಪ್ರಕರಣದ ಮತ್ತೊಬ್ಬ ಆರೋಪಿ ಕೆನತ್ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಸೀಗೇಹಳ್ಳಿಯ ಡಾಮಿನಿಕ್ ಲೇಔಟ್ನ ‘ಸಾಯಿ ಗ್ರೀನ್ ಹೋಮ್ಸ್’ ಅಪಾರ್ಟ್ಮೆಂಟ್ನಲ್ಲಿ ಸೋಮವಾರ ರಾತ್ರಿ ಈ ಭೀಕರ ಘಟನೆ ನಡೆದಿದೆ. ಮೃತರನ್ನು ಸೋಮಸುಂದರ್ (52), ಅವರ ಪತ್ನಿ ಮುತ್ತುಲಕ್ಷ್ಮಿ (48) ಮತ್ತು ಕಿರಿಯ ಪುತ್ರಿ ಸುಪ್ರಿಯಾ (19) ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಶ್ವೇತಾ ಮತ್ತು ಕೆನತ್ ನ್ಯೂ ಹಾರಿಜನ್ ಕಾಲೇಜಿನಲ್ಲಿ ಒಟ್ಟಿಗೆ ಬಿ.ಟೆಕ್ ಪೂರ್ಣಗೊಳಿಸಿ, ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ಗಳಾಗಿ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದರು. ಕಳೆದ ಎರಡು ತಿಂಗಳಿಂದ ಅವರು ಲಿವ್-ಇನ್ ಸಂಬಂಧದಲ್ಲಿ ಇದ್ದರು.
Also read: ನಾರಾಯಣ ಹೆಲ್ತ್ ಸಂಸ್ಥೆಯಿಂದ ವಿಶೇಷ ಮಕ್ಕಳಿಗಾಗಿ ಸುಲಭ ಶೌಚಾಲಯ ಉದ್ಘಾಟನೆ
ಈ ವಿಷಯ ಇತ್ತೀಚೆಗೆ ಪೋಷಕರಿಗೆ ತಿಳಿದ ಬಳಿಕ, ಅವರು ಮಗಳನ್ನು ಬುದ್ಧಿವಾದ ಹೇಳಲು ಸೋಮವಾರ ಸಂಜೆ ಅಪಾರ್ಟ್ಮೆಂಟ್ಗೆ ಬಂದಿದ್ದರು. ಈ ವೇಳೆ ಉಂಟಾದ ತೀವ್ರ ಜಗಳದಲ್ಲಿ ಶ್ವೇತಾ ಮತ್ತು ಕೆನತ್ ಸೇರಿ ಮುತ್ತುಲಕ್ಷ್ಮಿ ಹಾಗೂ ಸುಪ್ರಿಯಾಳನ್ನು ಸ್ಥಳದಲ್ಲೇ ಹತ್ಯೆಗೈದಿದ್ದಾರೆ. ತೀವ್ರವಾಗಿ ಗಾಯಗೊಂಡ ತಂದೆ ಸೋಮಸುಂದರ್ ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಮನೆಯನ್ನು ಶೋಧಿಸಿದ ಪೊಲೀಸರಿಗೆ ಶ್ವೇತಾ ಬರೆಯುತ್ತಿದ್ದ ವೈಯಕ್ತಿಕ ಡೈರಿ ಸಿಕ್ಕಿದ್ದು, ಅದರಲ್ಲಿ “ನಾನು ದುಃಖದಲ್ಲಿದ್ದೇನೆ, ಒಬ್ಬಂಟಿಯಾಗಿದ್ದೇನೆ, ಡಿಪ್ರೆಷನ್ನಲ್ಲಿದ್ದೇನೆ, ನಾನೇ ಶ್ರೇಷ್ಠ” ಎಂಬ ಹೇಳಿಕೆಗಳು ಪತ್ತೆಯಾಗಿವೆ.
ಬಂಧನದ ಬಳಿಕ ಪ್ರಾಥಮಿಕ ವಿಚಾರಣೆಯಲ್ಲಿ ಶ್ವೇತಾ, “ನನ್ನ ಪೋಷಕರು ನನ್ನ ಜೀವನವನ್ನು ನಿಯಂತ್ರಿಸುತ್ತಿದ್ದರು. ನನಗೆ ಸ್ವಾತಂತ್ರ್ಯ ಇರಲಿಲ್ಲ. ಆ ಕೋಪದಲ್ಲೇ ಈ ಕೃತ್ಯ ಎಸಗಿದೆ” ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಇಬ್ಬರೂ ಪರಾರಿಯಾಗಿ ಮಧ್ಯದಲ್ಲಿ ಪ್ರತ್ಯೇಕವಾಗಿದ್ದು, ಶ್ವೇತಾ ಈಗ ಪೊಲೀಸ್ ಕಸ್ಟಡಿಯಲ್ಲಿ ಇದ್ದಾಳೆ. ತಲೆಮರೆಸಿಕೊಂಡಿರುವ ಕೆನತ್ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















