ಭದ್ರಾವತಿ: ಕಾರ್ಮಿಕರಲ್ಲಿ ಕರ್ತವ್ಯದ ಕಳಕಳಿ ಹಾಗು ಶ್ರದ್ದೆ ಇದ್ದಲ್ಲಿ ಮಾತ್ರ ಉನ್ನತ ಸಾಧನೆ ಸಾಧಿಸಿ ಮೇಲ್ಮಟ್ಟ ಕಾಣುವುದರಲ್ಲಿ ಅನುಮಾನ ಇಲ್ಲ ಎಂದು ಜಿಲ್ಲಾ ರೈಸ್ ಮಿಲ್ ಮಾಲೀಕರ ಸಂಘದ ಅಧ್ಯಕ್ಷ ಹಾಗು ಎಪಿಎಂಸಿ ಸದಸ್ಯ ಡಾ.ಎನ್.ಟಿ.ಸಿ ನಾಗೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಳ್ಳಲಾಗಿದ್ದ 605 ನೇ ವಚನ ಮಂಟಪದ ವಿಶೇಷ ಪ್ರವಚನ, ಕಾಯಕ ದಿನ ಹಾಗು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನೂತನ ಕಾರ್ಯಕಾರಿ ಸಮಿತಿ ಪರಿಚಯ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು.
ಶಿವಮೊಗ್ಗ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕಿ ಡಾ.ಶುಭ ಮರವಂತೆ ಉಪನ್ಯಾಸ ನೀಡಿ ಕಾಯಕ ದಿನವನ್ನು ಜ್ಞಾಪಿಸುವುದು ಹಾಗು ವಚನಗಳ ದಿನವನ್ನು ಕಾಯಕ ದಿನವನ್ನಾಗಿ ಆಚರಿಸಲಾಗುತ್ತಿದೆ. ಕಾಯಕ ಎಂದರೆ ಕೇವಲ ಕೆಲಸವಲ್ಲ, ಕಾಯಕಕ್ಕು ಕೈಲಾಸಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕಾಯಕದಲ್ಲಿ ದೇವರನ್ನು ಕಾಣುವುದಕ್ಕಿಂತ ಕೆಲಸದ ಮೂಲಕ ದೇವರನ್ನು ಕಾಣುವುದು ಸರಿಯಾದ ಸಂಗತಿ. ಶ್ರಮವಹಿಸಿ ಯಾರು ಕಾಯಕ ಮಾಡುತ್ತಾರೋ ಅವರು ಜೀವನದಲ್ಲಿ ಶಾಂತಿ ನೆಮ್ಮದಿಯಿಂದ ಬಾಳುತ್ತಾರೆ ಎಂದರು.
ನಗರಸಭೆ ಆಯುಕ್ತ ವಿ.ಮನೋಹರ್ ಕಾರ್ಯಕ್ರಮ ಉದ್ಘಾಟಿಸಿದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆಚ್.ಎನ್. ಮಹಾರುದ್ರ ಅಧ್ಯಕ್ಷತೆ ವಹಿಸಿದ್ದರು. ನಗರದ ಉದ್ದಿಮೆದಾರ ಬಿ.ಕೆ.ಜಗನ್ನಾಥ್ ಮಾತನಾಡಿದರು. ಬಸನಗೌಡ ಮಾಳಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಎಂ.ವಿರುಪಾಕ್ಷಪ್ಪ ಅಧಿಕಾರ ಸ್ವೀಕಾರ ಮಾಡಿ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು.
ಕದಳಿ ವೇದಿಕೆ ಸದಸ್ಯೆಯರಿಂದ ವಚನ ಪ್ರಾರ್ಥನೆ ನೇರವೇರಿತು. ಎನ್.ಎಸ್.ಮಲ್ಲಿಕಾರ್ಜುನಯ್ಯ ಸ್ವಾಗತಿಸಿ, ಕೆ.ತಿಮ್ಮಪ್ಪ ವಂದಿಸಿದರೆ, ಅರಳಿಹಳ್ಳಿ ಅಣ್ಣಪ್ಪ ಕಾರ್ಯಕ್ರಮ ನಿರೂಪಿಸಿದರು. ಕೆ.ಬಸವರಾಜಪ್ಪ ಅತಿಥಿ ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕಿ ಲಕ್ಷ್ಮೀ ಶ್ರೀಕಾಂತ್ ಮತ್ತು ನಗರಸಭೆಯ ಸ್ವಚ್ಚತಾ ವಿಭಾಗದ ಶಾರದಮ್ಮ ಇವರನ್ನು ಸನ್ಮಾನಿ ಗೌರವಿಸಲಾಯಿತು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post