ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಧರ್ಮದ ಹೆಸರಿನಲ್ಲಿ ನಗರದಲ್ಲಿ ಗಲಭೆ ಸೃಷ್ಠಿಸಲು ಬಿಜೆಪಿ ಸಂಚು ರೂಪಿಸುತ್ತಿದ್ದು, ಒಂದು ವೇಳೆ ನಗರದಲ್ಲಿ ಗಲಭೆ ನಡೆದರೆ ಅದಕ್ಕೆ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ವಾಗ್ದಾಳಿ ನಡೆಸಿದರು.
ಪ್ರೊ ಕಬಡ್ಡಿ ಪಂದ್ಯಾವಳಿ ಫೈನಲ್ಸ್ ವೇಳೆ ನಡೆದ ಅಹಿತಕರ ಘಟನೆ ಹಾಗೂ ಆನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ದ ತಾಲೂಕು ಕಚೇರಿ ಮುಂಭಾಗ ನಡೆಸಲಾದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಭದ್ರಾವತಿಯಲ್ಲಿ ಇದುವರೆಗೂ ನೆಲೆಕಾಣದ ಬಿಜೆಪಿ ಈಗ ವಿನಾಕಾರಣ ಧರ್ಮದ ಹೆಸರಿನಲ್ಲಿ ಕೋಮುಗಲಭೆ ಸೃಷ್ಟಿಸಿ ಕ್ಷೇತ್ರದಲ್ಲಿ ಆಶಾಂತಿ ವಾತಾವರಣ ರೂಪುಗೊಳ್ಳಲು ಪ್ರಯತ್ನಿಸುತ್ತಿದೆ. ಒಂದು ವೇಳೆ ಅಹಿತಕರ ಘಟನೆಗಳು ನಡೆದು ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದ್ದಲ್ಲಿ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ. ನಾನು ನನ್ನ ರಾಜಕೀಯ ಜೀವನದಲ್ಲಿ ಎಲ್ಲರೂ ಒಂದೇ, ಎಲ್ಲ ಧರ್ಮ ಒಂದೇ, ಎಲ್ಲ ಜಾತಿ ಒಂದೇ ಎಂದು ನಂಬಿಕೊಂಡು ಹಿಂದುವಾಗಿ ನಂಬಿಕೊಂಡು ಬಂದವನು. ಇದೇ ಕಾರಣಕ್ಕೆ ಕ್ಷೇತ್ರದ ಮತದಾರರು ನನ್ನನ್ನು ಬೆಂಬಲಿಸಿಕೊಂಡು ಬಂದಿದ್ದಾರೆ ಎಂದರು.
ಕ್ಷೇತ್ರದಲ್ಲಿ ನೆಲೆ ಕಾಣದ ಬಿಜೆಪಿ ಹತಾಷೆಯಿಂದ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಧರ್ಮದ ಹೆಸರಿನಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದೆ. ಒಂದು ವೇಳೆ ನಗರದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾದರೆ ಅದಕ್ಕೆ ಬಿಜೆಪಿ ಸರ್ಕಾರವೆ ನೇರವಾಗಿ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.
ಮೊನ್ನೆ ನಡೆದ ಕಬ್ಬಡ್ಡಿ ಪಂದ್ಯದ ಅಂತಿಮದಲ್ಲಿ ಬಿಜೆಪಿ ಮತ್ತು ಬಜರಂಗದಳದ ಕಾರ್ಯಕರ್ತರು ಬೇಕು ಅಂತಲೇ ನನ್ನ ಏಳಿಗೆಯನ್ನು ಸಹಿಸದೆ ಇಂತಹ ಕೃತ್ಯ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಕ್ರೀಡಾ ಮನೋಭಾವವನ್ನು ಬಿಟ್ಟು ಬಹುಮಾನ ವಿತರಣೆ ಆದ ನಂತರ ಪಂದ್ಯ ನಡೆದ ಸ್ಥಳದ ಮ್ಯಾಚ್ ಮೇಲೆ ಪಟಾಕಿ ಹೊಡೆಯಲು ಮುಂದಾದಾಗ ನಮ್ಮ ಕಾರ್ಯಕರ್ತರು ತಡೆದರು. ನಂತರ ಜೈಶ್ರೀರಾಮ್ ಎಂದು ಘೋಷಣೆ ಕೂಗಿದಾಗ ನಾನು ಇದು ಕ್ರೀಡಾ ಸ್ಥಳ ಇಲ್ಲಿ, ಯಾವುದೇ ಧರ್ಮದ ಘೋಷಣೆ ಬೇಡ ಎಂದು ಹೇಳಿದೆ. ಆದರೆ ಇದನ್ನು ಕೇಳಿದೆ ಮತ್ತೆ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ತಳ್ಳಾಟ ನೂಕಾಟ ನಡೆಯಿತು. ಆದರೆ ಇದನ್ನೇ ಮನೆಹಾಳ ಬಿಜೆಪಿಯವರು ಅಧಿಕಾರ ದುರುಪಯೋಗಪಡಿಸಿಕೊಂಡು ಆಸ್ಪತ್ರೆಯಲ್ಲಿ ಮಲಗಿ ನನ್ನ ಮೇಲೆ ನನ್ನ ನನ್ನ ಸೋದರನ ಮೇಲೆ ಮಕ್ಕಳ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅದು 307 ಕೇಸ್ ಹಾಗೂ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ. ನನ್ನ ಮೇಲೆ ಕಂಪ್ಲೇಂಟ್ ಕೊಟ್ಟವನು ನಾನು ಇಲ್ಲಿವರೆಗೂ ನೋಡಿಲ್ಲ. ಇದು ಸುಳ್ಳು ಕೇಸು, ಬಿಜೆಪಿ ಪಕ್ಷದವರು ಅಧಿಕಾರ ದುರುಪಯೋಗಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ನಾವು ಕೊಟ್ಟ ಕಂಪ್ಲೇಂಟು ದಾಖಲಿಸಲಿಲ್ಲ. ನಂತರ ಐಜಿ ಅವರಲ್ಲಿ ಮಾತನಾಡಿದಾಗ ಪ್ರಕರಣ ದಾಖಲಿಸಿದ್ದಾರೆ ಎಂದರು.
ಕಳೆದ ರಾತ್ರಿ ಪೊಲೀಸರು ಮನೆಗೆ ನುಗ್ಗಿದ 5 ಜನ ಕರೆದುಕೊಂಡು ಹೋಗಿದ್ದಾರೆ. ಆದರೆ ಬಿಜೆಪಿ ಪಕ್ಷದ ಅವರ ಮೇಲೆ ಪ್ರಕರಣ ದಾಖಲಾಗಿದ್ದರೂ ಅವರನ್ನು ಬಂಧಿಸಿಲ್ಲ. ಅವರು ಇಲ್ಲಿ ಬಂದು ಭಾಷಣ ಮಾಡಿದ್ದಾರೆ. ಇದು ಪೊಲೀಸರ ತಾರತಮ್ಯವೇ ಎಂದು ಪ್ರಶ್ನಿಸಿದ ಅವರು, ಪೊಲೀಸರೇ ನೀವು ನಿಷ್ಠೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಆತ್ಮಸಾಕ್ಷಿ ಮಾರಿಕೊಳ್ಳಬೇಡಿ. ಅವರನ್ನು ಬಂಧಿಸಬೇಕು ಅವರನ್ನು ಬಂಧಿಸುವವರೆಗೂ ನಾವು ಈ ಸ್ಥಳದಿಂದ ಹೋಗುವುದಿಲ್ಲ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಸ್ಥಳಕ್ಕೆ ಐಜಿ ಮತ್ತು ಎಸ್ಪಿ ಅವರು ಬಂದು ಭರವಸೆ ನೀಡಲಿ ಎಂದರು.
ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಶಿವಮೊಗ್ಗ ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಎಚ್.ಸಿ. ಯೋಗೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರ್, ಅತ್ತಿಗುಂದ ಚಂದ್ರಶೇಖರಪ್ಪ, ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ರಾಮಚಂದ್ರ, ನಗರಸಭೆ ಮಾಜಿ ಅಧ್ಯಕ್ಷರಾದ ವೈ. ರೇಣುಕಮ್ಮ, ಬಿ.ಕೆ. ಮೋಹನ್, ಬಿ.ಟಿ. ನಾಗರಾಜ್, ಮುಖಂಡರಾದ ಎಸ್.ಪಿ. ದಿನೇಶ್, ಸಿ.ಎಂ ಖಾದರ್, ಅಮಿರ್ ಜಾನ್, ದಿಲ್ದಾರ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post