ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರದ ನ್ಯೂಟೌನ್ ಜಯಶ್ರೀ ವೃತ್ತದಲ್ಲಿರುವ ಲೇಡಿಸ್ ಕ್ಲಬ್ ಇದೀಗ ಕೆಲವೇ ದಿನಗಳಲ್ಲಿ ನೀರೂರು ಪೊಲೀಸ್ ಠಾಣೆಯಾಗಿ ಪರಿವರ್ತನೆಯಾಗಿದ್ದು, ಇಲ್ಲಿನ ನಿವಾಸಿಗಳನ್ನು ಬೆರಗುಗೊಳಿಸಿದೆ.
ಲೇಡಿಸ್ ಕ್ಲಬ್ ಸುಮಾರು 5-6 ದಶಕಗಳಿಂದ ಈ ಭಾಗದಲ್ಲಿ ಮನೆ ಮಾತಯಾಗಿದ್ದು, ಏಕಾಏಕಿ ನೀರೂರು ಪೊಲೀಸ್ ಠಾಣೆಯಾಗಿ ರೂಪುಗೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಕಳೆದ 2-3 ದಿನಗಳಿಂದ ನಿವಾಸಿಗಳ ಕುತೂಹಲಕ್ಕೆ ಕಾರಣವಾಗಿದೆ. ಹೌದು ಹಳೇಯದಾದ ಲೇಡಿಸ್ ಕ್ಲಬ್ ಕಟ್ಟಡದಲ್ಲಿ ಲಾಫಿಂಗ್ ಬುದ್ಧ ಚಲನಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈ ಚಿತ್ರಕ್ಕೆ ಪೊಲೀಸ್ ಠಾಣೆಯಾಗಿ ಬಳಸಿಕೊಳ್ಳಲಾಗಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಕಲಾವಿದರು, ತಂತ್ರಜ್ಞರ ತಂಡ ಆಗಮಿಸಿ ಬೀಡು ಬಿಟ್ಟಿದೆ.
ನಟ, ನಿರ್ದೇಶಕ ರಿಷಬ್ಶೆಟ್ಟಿರವರ Rishab Shetty ನಿರ್ಮಾಣದಲ್ಲಿ ತಾಲೂಕಿನ ಸುತ್ತಮುತ್ತ ಚಲನಚಿತ್ರವೊಂದರ ಚಿತ್ರೀಕರಣ ನಡೆಯುತ್ತಿದ್ದು, ಮಾ.11ರಂದು ನಗರದ ಲೋಯರ್ ಹುತ್ತಾ ಶ್ರೀಚಂಡಿಕಾ ದುರ್ಗಾ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಿತು. ನಂತರ ಲೇಡಿಸ್ ಕ್ಲಬ್ನಲ್ಲಿ ನಿರ್ಮಿಸಲಾಗಿರುವ ನೀರೂರು ಪೊಲೀಸ್ ಠಾಣೆ ಶೆಡ್ನಲ್ಲಿ ಚಿತ್ರೀಕರಣ ಆರಂಭಗೊಂಡಿದೆ.
ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮಾ.೨೩ರವರೆಗೆ ನಡೆಯಲಿದೆ. 2ನೇ ಹಂತದ ಚಿತ್ರೀಕರಣ ಏಪ್ರಿಲ್ನಲ್ಲಿ ನಡೆಯಲಿದೆ. ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಭದ್ರಾವತಿ ಸುತ್ತಮುತ್ತ ನಡೆಯಲಿದ್ದು, ಆರಂಭಿಕ ಹಂತದ ಚಿತ್ರೀಕರಣ ಇದೀಗ ಆರಂಭಗೊಂಡಿದೆ. ಈ ಹಿಂದೆ ಕನ್ನಡದ ಹಲವು ಪ್ರಸಿದ್ದ ಚಲನಚಿತ್ರಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದು, ಈ ಚಿತ್ರದ ನಿರ್ವಹಣೆ ಹಾಗು ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.
– ಅಪರಂಜಿ ಶಿವರಾಜ್, ರಂಗ ಕಲಾವಿದ, ಕಿರುತೆರೆ ನಟ.
ಚಿತ್ರದ ನಾಯಕ ನಟನಾಗಿ ಪ್ರಮೋದ್ ಶೆಟ್ಟಿ ಹಾಗು ನಾಯಕಿಯಾಗಿ ತೇಜೂ ಬೆಳವಾಡಿ ನಟಿಸುತ್ತಿದ್ದು, ಕಥೆ ಮತ್ತು ನಿರ್ದೇಶನ ಭರತ್ರಾಜ್ ಹಾಗು ಛಾಯಾಗ್ರಾಹಣ ಚಂದ್ರಶೇಖರ್ ಮತ್ತು ಚಿತ್ರದ ನಿರ್ವಹಣೆ ಹಾಗು ವ್ಯವಸ್ಥಾಪಕರಾಗಿ ನಗರದ ರಂಗಕಲಾವಿದ, ಕಿರುತೆರೆ ನಟ ಅಪರಂಜಿ ಶಿವರಾಜ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಪರಂಜಿ ಶಿವರಾಜ್ರವರು ಇದುವರೆಗೂ 21 ಚಲನಚಿತ್ರಗಳಲ್ಲಿ ಕಾರ್ಯನಿರ್ವಹಿಸಿದ್ದು, ಈ ಪೈಕಿ ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post