ಭದ್ರಾವತಿ: ಭದ್ರಾವತಿಯ ಪ್ರತಿಭೆಗಳು ಲೋಕೋತ್ತರ ವಾಗಿ ಮಿಂಚಿವೆ. ಇಂತಹ ಅನೇಕ ಜನೋಪಯೋಗಿ ಕಾರ್ಯಕ್ರಮಗಳಿಗೆ ಸ್ಥಳೀಯ ಜನತೆ ತಮ್ಮ ತುಂಬು ಸಹಕಾರ ನೀಡಬೇಕು ಎಂದು ಸಂಸ್ಕೃತಿ ಸೌರಭ ಸಂಸ್ಥೆಯ ಅಧ್ಯಕ್ಷ ಡಾ.ಎನ್. ಸುಧೀಂದ್ರ ಅಭಿಪ್ರಾಯಪಟ್ಟರು.
ವಿವಿಧ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿಪ್ರ ಸಮುದಾಯದ ವಿದ್ಯಾರ್ಥಿಗಳಿಗೆ ತರೀಕೆರೆ ರಸ್ತೆಯ ನಯನ ಸಭಾಂಗಣದಲ್ಲಿ ಸಂಸ್ಕೃತಿ ಸೌರಭ ಸಂಸ್ಥೆಯ ವತಿಯಿಂದ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರದಲ್ಲಿ ಅವರು ಮಾತನಾಡಿದರು.

ಸಂಸ್ಕೃತಿ ಸೌರಭ ಸಂಸ್ಥೆ ಪ್ರಾರಂಭದಿಂದಲೂ ಸಿಈಟಿ ಅಂತಹ ವಿದ್ಯಾರ್ಥಿಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಭದ್ರಾವತಿಯ ಹಿರಿಯ ಸಮಾಜಸೇವಕ ಡಾ.ಕೃಷ್ಣ ಎಸ್. ಭಟ್ ಮಾತನಾಡಿ, ಅಸಾಮಾನ್ಯ ಸನ್ನಿವೇಶಗಳನ್ನ ಸದೃಢವಾಗಿ ಎದುರಿಸಬಲ್ಲ ಸವಾಲುಗಳನ್ನು ಎದುರಿಸುವ ನಿರ್ಧಾರ ನೈಪುಣ್ಯತೆ ಇಂದಿನ ಮಕ್ಕಳಲ್ಲಿ ನಮ್ಮ ಪೋಷಕರು ಬೆಳೆಸಬೇಕಿದೆ ಎಂದರು.
ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿ ನ ಕಂಪ್ಯೂಟರ್ ಸೈನ್ಸ್ ವಿಭಾಗದ ಡಾ.ವಿದ್ಯಾಶಂಕರ್ ಮತ್ತೊಬ್ಬ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ವಿವಿಧ ಪರೀಕ್ಷೆಗಳಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪೋಷಕರ ಪರವಾಗಿ ಭದ್ರಾವತಿ ಆಕಾಶವಾಣಿಯ ಕಾರ್ಯಕ್ರಮ ಅಧಿಕಾರಿ ಡಾ.ಎ.ಎಸ್.ಶಂಕರನಾರಾಯಣ ಸೌರಭ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಸಂಸ್ಕೃತಿ ಸೌರಭ ಅಧ್ಯಕ್ಷ ಡಾ.ಎನ್ .ಸುಧೀಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿ.ಎಲ್. ಸೀತಾರಾಂ ನಿರೂಪಿಸಿ, ರಾಮಚಂದ್ರ ಸ್ವಾಗತಿಸಿದರು. ಡಾ.ವೀಣಾಭಟ್ ವಂದಿಸಿದರು.

















