ಭದ್ರಾವತಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದೊಳಗೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಮುಕ್ತ ಪ್ರವೇಶ ಕಲ್ಪಿಸಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ಪುನರ್ಪರಿಶೀಲಿಸುವಂತೆ ಆಗ್ರಹಿಸಿ ನಗರದ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ಭಕ್ತಾದಿಗಳು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಗುರುವಾರ ಮನವಿ ಸಲ್ಲಿಸಿದರು.
ಸುಮಾರು ಎಂಟುನೂರು ವರ್ಷಗಳ ಇತಿಹಾಸವಿರುವ ದೇವಾಲಯದ ಪುರಾತನ ಸಂಸ್ಕೃತಿ, ಆಚಾರ-ವಿಚಾರಗಳಿಗೆ ತದ್ವಿರುದ್ದವಾದ ಹಾಗು ಹಿಂದೂ ಧಾರ್ಮಿಕ ವಿಚಾರಗಳಿಗೆ ಧಕ್ಕೆ ಉಂಟಾಗಿರುವ ಹಿನ್ನಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಪುನರ್ಪರಿಶೀಲಿಸುವಂತೆ ಒತ್ತಾಯಿಸಿದರು.
ಅಯ್ಯಪ್ಪ ಸೇವಾ ಸಮಾಜಂನ ರಾಜ್ಯಾಧ್ಯಕ್ಷ ರೋಜಾ ಷಣ್ಮುಗಂ ನೇತೃತ್ವದಲ್ಲಿ ನೂರಾರು ಭಕ್ತಾದಿಗಳು ನಗರದ ಅಪ್ಪರ್ ಹುತ್ತಾದಿಂದ “ಶಬರಿಮಲೆ ಸಂಪ್ರದಾಯವನ್ನು ಉಳಿಸಿ” ಎಂಬ ಘೋಷದೊಂದಿಗೆ ಬೃಹತ್ ಮೆರವಣಿಗೆ ಮೂಲಕ ಡಾ.ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಡಾ.ರಾಜಕುಮಾರ್ ರಸ್ತೆ, ಮಾಧವಚಾರ್ ವೃತ್ತದ ಮೂಲಕ ಸಾಗಿದ ಭಕ್ತಾದಿಗಳು ಮಿನಿವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ಎಂ.ಆರ್.ನಾಗರಾಜ್ ರವರ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.
ಹಿಂದೂ ಪರ ಸಂಘಟನೆಗಳ ಮುಖಂಡರಾದ ಜಿ.ಆನಂದಕುಮಾರ್, ಹಾ.ರಾಮಪ್ಪ, ಧರ್ಮಪ್ರಸಾದ್, ನರಸಿಂಹಾಚಾರ್, ಟಿ.ವೆಂಕಟೇಶ್, ಶ್ರೀ ಅಯ್ಯಪ್ಪ ಸೇವಾ ಸಮಿತಿ, ಶ್ರೀ ಧರ್ಮಶಾಸ್ತ ಅಯ್ಯಪ್ಪಸ್ವಾಮಿ ದೇವಸ್ಥಾನ, ಕೇರಳ ಸಮಾಜಂ ಸೇರಿದಂತೆ ಮಹಿಳ ಸಂಘಗಳು, ಅಯ್ಯಪ್ಪ ಸ್ವಾಮಿಯ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post