ಉಡುಪಿ ಇಂದು ವಿಶ್ವವಿಖ್ಯಾತವಾದದ್ದೇ ಇಲ್ಲಿನ ಶ್ರೀಕೃಷ್ಣ ಮಂದಿರದಿಂದ. ಬಹುಪ್ರಾಚೀನವೂ, ಪುರಾಣ ಪ್ರಸಿದ್ಧವೂ ಆದ ಈ ದೇಗಲುದಲ್ಲಿ ಶ್ರೀಕೃಷ್ಣ ಪರಮಾತ್ಮ ಹಿಂದು ಮುಂದಾಗಿ ನಿಂತಿದ್ದಾನೆ. ಸ್ವರ್ಣಾಭರಣಗಳಿಂದ ಅಲಂಕೃತನಾದ ಕಡೆಗೋಲು ಕೃಷ್ಣನ ಸೊಬಗನ್ನು ಸವಿಯುವುದೇ ಒಂದು ಆನಂದ.
ಭಾರತದ ಏಳು ಪ್ರಮುಖ ಯಾತ್ರಾಸ್ಥಳಗಳ ಪೈಕಿ ಉಡುಪಿಯೂ ಒಂದು. ಪುರಾಣ ಪ್ರಸಿದ್ಧವಾದ ಉಡುಪಿ, ಕನಕದಾಸರಿಂದಾಗಿ ಇತಿಹಾಸ ಪ್ರಸಿದ್ಧಿ ಪಡೆದಿದೆ. ಈ ಪವಿತ್ರ ಪುಣ್ಯಕ್ಷೇತ್ರದಲ್ಲಿ ಜನ್ಮಪಡೆದವಳು ಕಲಾಶಿಲ್ಪಾ ಮಾನವನ ಆಧುನಿಕತೆ ಬದಲಾದಂತೆ ಅವನ ಅಭಿರುಚಿಯು ಬದಲಾಗಿದೆ. ಇದರಿಂದಾಗಿ ನಮ್ಮ ದೇಶದ ಕಲೆ ಸಂಸ್ಕೃತಿಗಳು ಒಂದು ಒಂದಾಗಿ ಇತಿಹಾಸ ಪುಟ ಸೇರುತ್ತಿದೆ. ಇದನ್ನ ಉಳಿಸಿ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಪಡುತ್ತಿರುವ ಶಿಲ್ಪಾಶೆಟ್ಟಿ (ಉಡುಪಿ)ಯ ಕಿರುಪರಿಚಯ ಮಾಡಿಕೊಡುತ್ತೇನೆ.
ಸಾಹಿತ್ಯ ಲೋಕದ ಶಿಲ್ಪವೊಂದು ರಂಗಭೂಮಿ, ಸಾಹಿತ್ಯ , ಸಮಾಜ ಸೇವೆ ಹೀಗೆ ಮೊದಲಾದ ರಂಗದಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡು ಹಂತ ಹಂತವಾಗಿ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕಲಾಶಿಲ್ಪ ಎಂಬ ಹೆಸರಿನಲ್ಲಿ ಪ್ರಖ್ಯಾತವಾಗಿರುವ ಶಿಲ್ಪಾ ತಮ್ಮ ವಿದ್ಯಾಭ್ಯಾಸದ ಜೊತೆಜೊತೆಗೆ ಅಭಿನಯ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರಂಗಭೂಮಿ ಕಲಾ ಕ್ಷೇತ್ರದಲ್ಲಿ ಅಭಿನಯ ನೀಡುತ್ತಿದ್ದಾಳೆ.
ಸರಸ್ವತಿ ಮತ್ತು ಲಕ್ಷ್ಮೀಯರು ಒಟ್ಟಿಗೆ ಇರುವುದಿಲ್ಲ ಎಂಬ ಮಾತಿದೆ. ಇದು ಇವರ ಬದುಕಿನಲ್ಲೂ ಸತ್ಯವಾಯಿತು. ಓದು ಮತ್ತು ಸಾಂಸ್ಕೃತಿಕ ರಂಗದಲ್ಲಿ ಮುಂದಿದ್ದ ಇವರಿಗೆ ಬಡತನ ಎನ್ನುವುದು ಹುಟ್ಟಿನಿಂದಲೇ ಬಂದಿತ್ತು. ಅಲ್ಲದೆ ಮನೆಯ ಕಷ್ಟಗಳ ನಡುವೆಯೇ ತರಬೇತಿ ಮತ್ತು ಅಭ್ಯಾಸ ಮಾಡುತ್ತಿದ್ದವರು. ಇದಲ್ಲದೇ ಜೀವನ ನೀಡಿದ ಬಹುದೊಡ್ಡ ಏಟನ್ನು ಸಹ ಮೆಟ್ಟಿ ನಿಂತು ಆ ಏಟಿಗೆ ಪ್ರತಿ ಸವಾಲು ಹಾಕುವ ರೀತಿಯಲ್ಲಿ ಇಂದು ಸಾಧನೆ ಮಾಡುವತ್ತ ಹೆಜ್ಜೆ ಇಟ್ಟಿದ್ದಾರೆ.
ಪ್ರಸ್ತುತ ಬಿ.ಎಸ್.ಡಬ್ಲ್ಯೂ ಪದವಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನ ಪ್ರತಿಷ್ಠಿತ ರಂಗಭೂಮಿ ಕಲಾ ಕ್ಷೇತ್ರ ರಂಗಾಯಣದಲ್ಲಿ ರಂಗ ತರಬೇತಿ ಪಡೆಯುತ್ತಿದ್ದಾರೆ. ಇದರೊಂದಿಗೆ ಸಾಹಿತ್ಯ ಲೋಕದಲ್ಲಿ ಕೂಡ ಇವರು ಆಸಕ್ತಿ ಹೊಂದಿದ್ದು ಬರವಣಿಗೆಯನ್ನು ಹವ್ಯಾಸವಾಗಿ ಇರಿಸಿಕೊಂಡು ಹಲವಾರು ಕವನಗಳನ್ನು ಕೂಡಾ ರಚಿಸುತ್ತಾರೆ. ಜೊತೆಗೆ ತಾವು ಮಾತ್ರ ಬೆಳೆಯಬೇಕೆಂಬ ಆಸೆ ಹೊಂದಿರದೇ ತನ್ನ ಸುತ್ತಲಿನ ಜನರನ್ನು ಕೂಡಾ ಬೆಳೆಸಬೇಕೆಂಬ ಹಂಬಲ ಹೊಂದಿದ್ದಾರೆ. ಇದಕ್ಕಾಗಿ ಶಿಲ್ಪಾಶೆಟ್ಟಿ ಫೇಸ್ ಬುಕ್ ಪೇಜನ್ನು ತೆರೆದು ಅದರಲ್ಲಿ ಬರಹಗಾರರಿಗೆ ಅವಕಾಶಗಳನ್ನು ಮತ್ತು ತೆರೆಮರೆಯ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತರುವ ನಿಸ್ವಾರ್ಥ ಸೇವೆ ಮಾಡುತಿದ್ದಾರೆ.
ಸಮಾಜಮುಖಿಯಾಗಿರುವ ಇವರು ಅನಾಥ ಮಕ್ಕಳಿಗೆ ತಮ್ಮ ಕೈಯಲ್ಲಾದ ಸಹಾಯ ಮಾಡಿ ಈಗಿನ ಸಮಾಜಕ್ಕೆ ಒಂದು ಪುಟ್ಟ ಉದಾಹರಣೆ ಆಗಿದ್ದಾರೆ. ಅಲ್ಲದೆ ಬಿಯಿಂಗ್ ಸೋಷಿಯಲ್ ಎಂಬ ಸಮಾಜಮುಖಿ ತಂಡವೊಂದರ ಸಕ್ರಿಯ ಸದಸ್ಯರಾಗಿದ್ದು ತಂಡದೊಂದಿಗೆ ಸೇರಿ ಹಲವಾರು ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ನೆರವಾಗಿದ್ದಾರೆ. ತಮ್ಮ ಪದವಿಯನ್ನು ಕೂಡ ಸಮಾಜಕಾರ್ಯ ವಿಭಾಗದಲ್ಲಿ ಮಾಡಿದ್ದು ಆ ದಿಶೆಯಲ್ಲಿ ಸಮಾಜಕ್ಕೆ ಹತ್ತಿರವಾಗಿದ್ದಾರೆ ಎನ್.ಎಸ್.ಎಸ್. ಎಂಬ ಇನ್ನೊಂದು ಸಮಾಜಕ್ಕೆ ಹತ್ತಿರವಾದ ಘಟಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಶಿಬಿರದಲ್ಲಿ ಕೂಡಾ ಪಾಲ್ಗೊಂಡಿದ್ದರು. ಇಷ್ಟು ಮಾತ್ರವಲ್ಲದೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಬೀದಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಇಷ್ಟೊಂದು ಪ್ರತಿಭೆ ಹೊಂದಿದ್ದರೂ ಯಾವುದೇ ರೀತಿಯ ಸನ್ಮಾನ ಅಥವಾ ಹೊಗಳಿಕೆಗೆ ಆಸೆಪಡದೆ ತಮ್ಮ ಪಾಲಿನ ಕೆಲಸವೆಂದು ಭಾವಿಸಿ ಆ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇವರ ಈ ಪ್ರತಿಭೆ ಗಮನಿಸಿದ ಮುಕ್ತ ವಾಹಿನಿ ಅವರ ಸಂದರ್ಶನ ಮಾಡಿತ್ತು. (ಪ್ರತಿಭೆ ಅನಾವರಣ ಎಂಬ ಕಾರ್ಯಕ್ರಮದಲ್ಲಿ).
ಹೆಣ್ಣು ಹುಟ್ಟಿದರೆ ಮೂಗು ಮುರಿಯುವ ಈಗಿನ ಸಮಾಜಕ್ಕೆ ಶಿಲ್ಪಾ ಶೆಟ್ಟಿ ಅವರ ಸಾಧನೆ ಒಂದು ಉದಾಹರಣೆ. ಹೆಣ್ಣು ಕೂಡಾ ಸಾಧನೆ ಮಾಡಬಲ್ಲಳು ಎನ್ನುವುದಕ್ಕೆ ಶಿಲ್ಪಾ ಶೆಟ್ಟಿ ಅವರ ಹೆಸರು ಇನ್ನೊಂದು ಉದಾಹರಣೆ. ಇವರ ರಂಗಾಯಣದ ತರಬೇತಿಯ ಪಯಣ ಯಶಸ್ಸು ಸಾಧಿಸಲಿ ಉತ್ತಮ ರಂಗಭೂಮಿ ಕಲಾವಿದರಾಗಲಿ ಇವರ ಭವಿಷ್ಯದ ಜೀವನ ಉಜ್ವಲವಾಗಿರಲಿ ಇವರು ನಾಡು ಮತ್ತು ದೇಶದ ಹಿರಿಮೆಯನ್ನು ಹೆಚ್ಚಿಸಲಿ ಎಂದು ಸರ್ವಶಕ್ತ ಭಗವಂತನನ್ನು ಪ್ರಾರ್ಥನೆ ಮಾಡುತ್ತೇವೆ.
ಲೇಖನ ಮತ್ತು ಚಿತ್ರಕೃಪೆ: ರೋಹನ್ ಪಿಂಟೋ ಗೇರುಸೊಪ್ಪ
Discussion about this post