ಭದ್ರಾವತಿ: 2019ರ ಲೋಕಸಭಾ ಚುನಾವಣೆ ದೇಶದ ಇತಿಹಾಸದಲ್ಲೊಂದು ಮಹತ್ವದ ಮೈಲಿಗಲ್ಲಾಗಿದ್ದು, ಇಡಿಯ ವಿಶ್ವದ ಗಮನವನ್ನು ಸೆಳೆದಿದೆ.
ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬ ಎನ್ನುವ ಜೊತೆಯಲ್ಲಿ ಪ್ರಸಕ್ತ ಪರಿಸ್ಥಿತಿಯಲ್ಲಿ ಲೋಕಸಭಾ ಚುನಾವಣೆ ಎಂದರೆ, ದೇಶದ ಅಭಿವೃದ್ಧಿಯ ಆಯ್ಕೆ ಎಂಬ ರೀತಿಯಲ್ಲಿ ಕಳೆದ ಐದು ವರ್ಷದಲ್ಲಿ ಬದಲಾವಣೆಯಾಗಿದೆ. ಹೀಗಾಗಿಯೇ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಬೇಕು ಎಂಬ ಕಾರಣದಿಂದ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಮತ ಚಲಾವಣೆಗೋಸ್ಕರ ಸ್ವದೇಶಕ್ಕೆ ಆಗಮಿಸಿರುವ ಉದಾಹರಣೆಗಳು ಕಾಣ ಸಿಗುತ್ತಿವೆ. ಇಂತಹ ಸಾಲಿಗೆ ಭದ್ರಾವತಿಯ ದಂಪತಿಗಳೂ ಸಹ ಸೇರಿದ್ದಾರೆ.
ಭದ್ರಾವತಿ ಮೂಲದ ಕಾವ್ಯಶ್ರೀ ಬೆಂಗಳೂರು ನಗರ ಮೂಲದ ಚೇತನ್ ಅವರನ್ನು ವಿವಾಹವಾಗಿ ಕೆಲಸ ನಿಮಿತ್ತ ಜರ್ಮನಿಯಲ್ಲಿ ನೆಲೆಸಿದ್ದಾರೆ. ಕಳೆದ ಐದು ವರ್ಷದಿಂದ ದೇಶ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸಲೇಬೇಕು ಎಂಬ ಕಾರಣದಿಂದ ಈ ದಂಪತಿ ಸ್ವದೇಶಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಚೇತನ್ ಅವರು ಬೆಂಗಳೂರಿನ ಬ್ಯಾಟರಾಯನಪುರ ಮತಗಟ್ಟೆಯಲ್ಲಿ ಎಪ್ರಿಲ್ 18ರಂದು ನಡೆದ ಮತದಾನದಲ್ಲಿ ತಮ್ಮ ಹಕ್ಕು ಚಲಾಯಿಸಿದರೆ, ಕಾವ್ಯಶ್ರೀ ಅವರು ಇಂದು ಭದ್ರಾವತಿಯ ಹೊಸಮನೆಯಲ್ಲಿ ಮತದಾನ ಮಾಡಿದರು.
ದೇಶ ಔನ್ನತ್ಯದೆಡೆಗೆ ಸಾಗುತ್ತಿರುವ ಈ ಸಂದರ್ಭದಲ್ಲಿ ಒಂದೊಂದು ಮತವೂ ಸಹ ಮಹತ್ವವನ್ನು ಪಡೆದುಕೊಳ್ಳುತ್ತದೆ. ಹೀಗಾಗಿ, ತಮ್ಮ ಮತ ವ್ಯರ್ಥವಾಗಬಾರದು ಎಂಬ ಕಾರಣದಿಂದ ಇವರು ತಮ್ಮ ನಗರಗಳಿಗೆ ಆಗಮಿಸಿ ಮತ ಚಲಾಯಿಸಿದ್ದಾರೆ.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಜೊತೆಯಲ್ಲಿ ಮಾತನಾಡಿದ ಕಾವ್ಯಶ್ರೀ, ಮತ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಜನ ಅದನ್ನು ಮರೆತಿದ್ದಾರೆ. ನಮ್ಮ ದೇಶದಲ್ಲಿ ಒಳ್ಳೆ ಕೆಲಸಗಳು ಆಗಿಲ್ಲ ಎಂದು ದೂರುತ್ತಾರೆಯೇ ವಿನಾ ಚುನಾವಣೆಯಲ್ಲಿ ಮತ ಚಲಾಯಿಸಿ ದೇಶಕ್ಕೋಸ್ಕರ ಕೆಲಸ ಮಾಡುವ ನಾಯಕನನ್ನು ಆಯ್ಕೆ ಮಾಡುವುದಿಲ್ಲ. ಕಳೆದ 5 ವರ್ಷಗಳಲ್ಲಿ ಅನೇಕ ಬೆಳವಣಿಗೆಗಳು ಆಗಿದ್ದು, ಅಂತಹ ಬೆಳವಣಿಗೆಗಳು ಇನ್ನೂ ಕೆಲವು ವರ್ಷ ಆದರೆ ನಮ್ಮ ದೇಶ ಅಭಿವೃದ್ಧಿ ದೇಶ ಆಗುತ್ತದೆ ಎನ್ನುತ್ತಾರೆ.
ಇವರ ಪತಿ ಚೇತನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ನಾವೆಲ್ಲರೂ ನಮ್ಮ ಪುಸ್ತಕದಲ್ಲಿ ಓದಿದ್ದೇವೆ. ನಮ್ಮ ಮುಂದಿನ ಪೀಳಿಗೆ ಭಾರತ ಒಂದು ಅಭಿವೃದ್ಧಿ ಹೊಂದಿರುವ ದೇಶ ಎಂದು ಓದಲಿ ಎನ್ನುವುದು ನಮ್ಮ ಆಸೆಯಾಗಿದೆ. ಇದೇ ಉದ್ದೇಶದಿಂದ ನಾವು ಮತ ಚಲಾಯಿಸಲು ಬಂದಿದ್ದೇವೆ ಎನ್ನುತ್ತಾರೆ.
ನಮ್ಮ ದೇಶದ ಅಭಿವೃದ್ಧಿ ಮುಂದೆ ನಾವು ಅಲ್ಲಿಂದ ಬಂದು ಮತ ಚಲಾಯಿಸಿರುವುದು ದೊಡ್ಡ ವಿಚಾರವಲ್ಲ. 5 ವರ್ಷದಿಂದ ಆಗಿರುವ ಬದಲಾವಣೆ ಇನ್ನೂ ಕೆಲವು ವರ್ಷ ಬರಲಿ, ಭ್ರಷ್ಟಾಚಾರ ಹೋಗಲಿ, ದೇಶ ಸಮೃದ್ದಿಯಾಗಿರಲಿ ಎಂದು ಹಾರೈಸಿ, ಮೋದಿ ಅವರ ಮೇಲೆ ನಂಬಿಕೆ ಇಟ್ಟು ನಮ್ಮ ಮತವನ್ನು ನೀಡಿದ್ದೇವೆ ಎನ್ನುತ್ತಾರೆ.
ಮತದಾನಕ್ಕಾಗಿ ಅಷ್ಟು ದೂರದಿಂದ ಆಗಮಿಸಿ, ತಮ್ಮ ಹಕ್ಕು ಚಲಾಯಿಸಿದ ಈ ದಂಪತಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Discussion about this post