ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿರ್ಣಾ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪ್ರವಾಸಿ ಮಂದಿರ (ವಿವಿಐಪಿ), ಕಾಲೇಜು ಕಟ್ಟಡ, ಪ್ರೌಢ ಶಾಲೆ, ವಸತಿ ನಿಲಯ ಕಟ್ಟಡಗಳನ್ನು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಉದ್ಘಾಟಿಸಿದರು.
ನಿರ್ಣಾ ಗ್ರಾಮಕ್ಕೆ ಭೇಟಿ ನೀಡಿ ಅಂದಾಜು31.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಸರ್ಕಾರಿ ಪ್ರೌಢ ಶಾಲೆ (ಬಾಲಕರ)ಯ ಎರಡು ಕೋಣೆಗಳು, ಅಂದಾಜು ೨೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಬಾಲಕರ ವಸತಿ ನಿಲಯದ ಎರಡು ಹೆಚ್ಚುವರಿ ಕೋಣೆಗಳು, ಅಂದಾಜು 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಪ್ರವಾಸಿ ಮಂದಿರ (ವಿವಿಐಪಿ), ಅಂದಾಜು 65 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಸರ್ಕಾರಿ ಪದವಿ ಪೂರ್ವ ಕಾಲೇಜು (ಕಲಾ ಮತ್ತು ವಾಣಿಜ್ಯ) ಕಟ್ಟಡಗಳ ಉದ್ಘಾಟನೆಯನ್ನು ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ನಿರ್ಣಾ ಗ್ರಾಮದಲ್ಲಿ ಪ್ರವಾಸಿ ಮಂದಿರ ನಿರ್ಮಾಣವಾಗಿರುವುದರಿಂದ ಈ ಭಾಗಕ್ಕೆ ಅನುಕೂಲವಾಗಲಿದೆ. ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಪ್ರವಾಸಿ ಮಂದಿರ, ಸಮುದಾಯ ಭವನಗಳು ಸೇರಿದಂತೆ ಅನೇಕ ಕಟ್ಟಡ ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ. ಪ್ರವಾಸಿ ಮಂದಿರ ನಿರ್ಮಾಣದಿಂದ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಅನೇಕ ಸಭೆ, ಸಮಾರಂಭಗಳಿಗೆ ಪ್ರವಾಸಿ ಮಂದಿರಗಳು ವೇದಿಕೆಯಾಗಲಿವೆ ಎಂದರು.
ಗ್ರಾಮದ ಪ್ರೌಢ ಶಾಲೆಯ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಹೆಚ್ಚುವರಿ ಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿನ ವಸತಿ ನಿಲಯದಲ್ಲೂ ಹೆಚ್ಚುವರಿ ಕೋಣೆಗಳನ್ನು ನಿರ್ಮಿಸಲಾಗಿದೆ. ನೂತನ ಕಾಲೇಜು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನಹರಿಸುವ ಮೂಲಕ ವಿದ್ಯಾವಂತರಾಗಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಪಿಡಬ್ಲೂಡಿ ಎಇಇ ಶಶಿಧರ್ ಪಾಟೀಲ್, ಜೆಇ ಶೆಟ್ಕರ್, ಪಿಆರ್ಇ ಎಇಇ ವಾಮನ್ ರಾವ್ ಜಾಧವ್, ಜೆಇ ಧನರಾಜ್ ಪಾಟೀಲ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಶಿವರಾಜ್ ಹುಲಿ, ಜೆಡಿಎಸ್ ಬೀದರ್ ದಕ್ಷಿಣ ಅಧ್ಯಕ್ಷ ಸಂಜುರೆಡ್ಡಿ ನಿರ್ಣಾ, ಪ್ರಥಮ ದರ್ಜೆ ಗುತ್ತಿಗೆದಾರ ಸಂಜಯಕುಮಾರ್ ಯದ್ಲಪೂರೆ, ಶಿವರಾಜ ಬಶೆಟ್ಟಿ, ಮನು ನಾಯ್ಕ್, ಭದ್ರಪ್ಪ ನಾಗನ್ಕೇರಾ, ಅಶೋಕ್ ಕಾಗೆ, ಶೇಖರ್, ತುರಪ್ಪ, ಮಲ್ಲಪ್ಪ ಮನ್ನಾಎಖೇಳ್ಳಿ, ಜಾಕಿ ಮರಕುಂದಾ, ಮೋಹನರೆಡ್ಡಿ ಮಂಗಲಗಿ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post