ಕಲ್ಪ ಮೀಡಿಯಾ ಹೌಸ್ | ಬೀದರ್ |
ಜನವರಿ 5ರಿಂದ 8ನೇ ತಾರೀಖಿನವರೆಗೆ ಬೀದರ್ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದಿಂದ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸೇರಿದಂತೆ ಜೆಡಿಎಸ್ ಪಕ್ಷದ ಹಿರಿಯ ನಾಯಕರು ಪಾಲ್ಗೊಳ್ಳುತ್ತಿದ್ದಾರೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ ೫ ರಿಂದ 8ನೇ ತಾರೀಖಿನವರೆಗೆ ಕುಮಾರಸ್ವಾಮಿರವರು ಬೀದರ್ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಪಂಚರತ್ನ ರಥಯಾತ್ರೆ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಜ.5ರಂದು ಬೀದರ್ ಉತ್ತರ, 6ರಂದು ಬೀದರ್ ದಕ್ಷಿಣ, 7ರಂದು ಹುಮಾನಾಬಾದ್, 8ರಂದು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಬೃಹತ್ ಮಟ್ಟದಲ್ಲಿ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ನಡೆಯುತ್ತದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಆ ದಿನದ ಸಂಜೆ ಸಮಯದಲ್ಲಿ ದೊಡ್ಡಮಟ್ಟದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ರಾತ್ರಿ ಕ್ಷೇತ್ರದ ಒಂದು ಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ದಿನವಿಡೀ ಪೂರ್ವ ನಿಗದಿ ಪಡಿಸಲಾಗುವ ಹಳ್ಳಿಗಳ ಮಾರ್ಗವಾಗಿ ಪಂಚರತ್ನ ರಥಯಾತ್ರೆ ಸಾಗುತ್ತದೆ.
ಎಲ್ಲಾ ಕಡೆಗಳಲ್ಲಿ ದೊಡ್ಡಮಟ್ಟದ ವಿವಿಧ ರೀತಿಯ ಹಾರಗಳೊಂದಿಗೆ ಸನ್ಮಾನಿಸಲು ಅಭಿಮಾನಿಗಳು, ಕಾರ್ಯಕರ್ತರು ಈಗಾಗಲೇ ತಯಾರಿ ನಡೆಸಿದ್ದಾರೆ. ಕಾರ್ಯಕ್ರಮ ಯಶಸ್ವಿಗಾಗಿ ಈಗಾಗಲೇ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗಿದೆ. ಎಲ್ಲಾ ಕಡೆಗಳಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿವೆ ಎಂದು ತಿಳಿಸಿದರು.
ಕಾಂಗ್ರೆಸ್, ಬಿಜೆಪಿಯವ್ರು ರಾಜ್ಯದ ಜನತೆಗೆ ಯಾವುದೇ ಸ್ಪಷ್ಟ ಸಂದೇಶ ನೀಡಿಲ್ಲ:
ಕಾಂಗ್ರೆಸ್ ನವರು ಭಾರತ್ ಜೋಡೊ ಕಾರ್ಯಕ್ರಮ ಮಾಡಿದ್ದಾರೆ. ಆದರೇ ತಾವು ಅಧಿಕಾರಕ್ಕೆ ಬಂದರೇ ಏನು ಮಾಡುತ್ತೇವೆ ಎಂಬ ಸ್ಪಷ್ಟ ಸಂದೇಶ ರಾಜ್ಯದ ಜನತೆಗೆ ಅವರು ನೀಡಿಲ್ಲ. ಬಿಜೆಪಿಯವ್ರು ಆಡಳಿತದಲ್ಲಿದ್ದಾರೆ. ಜನಸಂಕಲ್ಪ ಯಾತ್ರೆ ಮಾಡಿದ್ದಾರೆ. ಆದರೇ ಅವರು ಕೂಡ ಯಾವುದೇ ಸ್ಪಷ್ಟ ಸಂದೇಶ ನೀಡಿಲ್ಲ. ಎರಡು ಪಕ್ಷದವರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿಕೊಂಡಿದ್ದಾರೆ.
ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ನೆಲೆ ಉಳಿಸಿಕೊಂಡು ಬಂದಿದೆ:
ನಮ್ಮ ಜಾತ್ಯಾತೀತ ಜನತಾದಳ ಪಕ್ಷ ಒಂದು ಪ್ರಾದೇಶಿಕ ಪಕ್ಷವಾಗಿ ಅಧಿಕಾರದಲ್ಲಿ ಇದ್ದಾಗಲೆಲ್ಲಾ ಜನಪರ ಕೆಲಸಗಳನ್ನು ಮಾಡುತ್ತಾ ನೆಲೆ ಉಳಿಸಿಕೊಂಡು ಬಂದಿದೆ. ದೇವೇಗೌಡರು ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ರಾಜ್ಯಕ್ಕೆ ನೀರಾವರಿ ಯೋಜನೆಗಳನ್ನು ನೀಡಿದ್ದಾರೆ. ಅದರಂತೆಯೇ ಕುಮಾರಸ್ವಾಮಿರವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಅನೇಕ ಜನಪ್ರಿಯ, ಜನಪರ ಕಾರ್ಯಕ್ರಮಗಳನ್ನು ತಂದಿದ್ದಾರೆ.
2023ರ ಚುನಾವಣೆಗೆ ಸಿದ್ದತೆ ನಡೆಸುತ್ತಿದ್ದೇವೆ:
ನಾವು 2023ರ ಚುನಾವಣೆಗೆ ಸಿದ್ದತೆ ನಡೆಸುತ್ತಿದ್ದೇವೆ. ನಾವು ಜನರಿಗೆ ಯಾವ ರೀತಿಯಲ್ಲಿ ಉತ್ತಮ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗುತ್ತದೆ. ಯಾವ ರೀತಿಯಲ್ಲಿ ಜನರ ಮಧ್ಯದಲ್ಲಿ ಹೋಗಲು ಸಾಧ್ಯವಾಗುತ್ತದೆ ಆ ರೀತಿಯಲ್ಲಿ ಜನಪರವಾಗಿ, ಜನರ ಮುಂದೆ ಹೋಗುತ್ತಿದ್ದೇವೆ. ನವೆಂಬರ್ 18ರಿಂದ ಪಂಚರತ್ನ ರಥಯಾತ್ರೆ ಆರಂಭವಾಗಿದೆ. ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಜ.5ರಿಂದ ಬೀದರ್ ನಿಂದಲೇ ಆರಂಭವಾಗಲಿದೆ.
ಪಂಚರತ್ನದ ಗುರಿಗಳು:
ನಮ್ಮ ಜೆಡಿಎಸ್ ಪಕ್ಷದಿಂದ ಪಂಚರತ್ನ ರಥಯಾತ್ರೆ ಎಂಬ ಕಾರ್ಯಕ್ರಮದ ಮೂಲಕ ನಾಡಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ನಾಡಿನ ಜನತೆಗೆ ಅತ್ಯುತ್ತಮ ಆರೋಗ್ಯ ಸೇವೆ, ನಾಡಿನ ರೈತರಿಗೆ ಅತ್ಯುತ್ತಮ ಯೋಜನೆಗಳು, ಯುವ ಜನರಿಗೆ ಉದ್ಯೋಗ ಅವಕಾಶಗಳು, ಬಡಜನರಿಗೆ ವಸತಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪಣತೊಟ್ಟಿದ್ದೇವೆ. ನಮ್ಮನ್ನು ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ತಂದರೆ ಎಲ್ಲಾ ಯೋಜನೆಗಳನ್ನು ಜಾರಿಗೆ ತರುತ್ತೇವೆ. ಹಾಗಾಗಿ 2023ರ ಚುನಾವಣೆಯಲ್ಲಿ ನಮಗೆ ಅಧಿಕಾರ ನೀಡುವಂತೆ ರಾಜ್ಯದ ಜನತೆಗೆ ಮನವಿ ಮಾಡುತ್ತಿದ್ದೇವೆ.
ಪಂಚರತ್ನ ರಥಯಾತ್ರೆ ಮಾರ್ಗಗಳಿವು:
ಜನವರಿ 5ರಂದು ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಬೀದರ್ ನಗರದ ಗಣೇಶ ಮೈದಾನದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ, ಜನವಾಡದಲ್ಲಿ ಗ್ರಾಮ ವಾಸ್ತವ್ಯ. 6ರಂದು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಮ್ಲಾಪುರ್ ದಿಂದ ರಥಯಾತ್ರೆ ಆರಂಭವಾಗಿ ಮನ್ನಳಿ, ಬೇಮಳಖೇಡ, ಚಾಂಗಲೇರಾ ಮೂಲಕ ಮನ್ನಾಎಖೇಳ್ಳಿಗೆ ತಲುಪಿ ಅಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ. ನಿರ್ಣಾ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಯಲಿದೆ.
7ರಂದು ಹುಮಾನಾಬಾದ್ ಕ್ಷೇತ್ರದಲ್ಲಿ ರಥಯಾತ್ರೆ ಸಾಗುತ್ತದೆ. ಹುಮಾನಾಬಾದ್ ನ ತೇರು ಮೈದಾನದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯುತ್ತದೆ. 8ರಂದು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ರಥಯಾತ್ರೆ ಸಾಗಲಿದ್ದು, ಬಸವಕಲ್ಯಾಣದ ಅಕ್ಕಮಹಾದೇವಿ ಮೈದಾನದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ, ಮೋಕಂಡಿ ಗ್ರಾಮದಲ್ಲಿ ವಾಸ್ತವ್ಯ ಕಾರ್ಯಕ್ರಮ ನಡೆಯಲಿದೆ. ಬಳಿಕ ಕಲಬುರಗಿ ಜಿಲ್ಲೆಗೆ ರಥಯಾತ್ರೆ ಸಾಗಲಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾಧ್ಯಮಗೋಷ್ಠಿಯ ಮೂಲಕ ರಥಯಾತ್ರೆಯ ಮಾಹಿತಿ ಹಂಚಿಕೊಂಡರು.
ಮನೆಮನೆಗೆ ಪಂಚರತ್ನ ಮುಂದಿನ ದಿನಗಳಲ್ಲಿ ನಡೆಯಲಿದೆ:
ಪಂಚರತ್ನ ರಥಯಾತ್ರೆ ಕಾರ್ಯಕ್ರಮದ ನಂತರ ಮುಂದಿನ ದಿನಗಳಲ್ಲಿ ಮನೆಮನೆಗೆ ಪಂಚರತ್ನ ಎಂಬ ಕಾರ್ಯಕ್ರಮ ನಡೆಲಿದೆ. ಕುಮಾರಸ್ವಾಮಿರವರ ನಾಲ್ಕು ದಿನದ ಬೀದರ್ ಜಿಲ್ಲೆಯ ಪ್ರವಾಸವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲೆಯ ಜನತೆಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.
ಕಾರಂಜಾ ರೈತರ ಪರವಾಗಿ ನಾವಿದ್ದೇವೆ:
ಕಾರಂಜಾ ಸಂತ್ರಸ್ತ ರೈತರ ಪರವಾಗಿ ನಾವಿದ್ದೇವೆ. ನಾನು ಅವರ ಪರವಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದೇನೆ. ನಮ್ಮೊಂದಿಗೆ ಅವರು ನಿರಂತರವಾಗಿ ಸಂಪರ್ಕದಲ್ಲಿ ಇದ್ದಾರೆ. ಟೈಮ್ ಮಾಡಿಕೊಂಡು ಕುಮಾರಣ್ಣರವರನ್ನು ಕಾರಂಜಾ ಸಂತ್ರಸ್ತರ ಹೋರಾಟದ ಸ್ಥಳಕ್ಕೆ ಕರೆದುಕೊಂಡು ಹೋಗಿ ಮನವಿ ಸ್ವೀಕರಿಸುತ್ತೇವೆ. ಈ ಸರ್ಕಾರ ಕಾರಂಜಾ ಸಂತ್ರಸ್ತ ಪರವಾಗಿಲ್ಲ. ಮುಂದಿನ ದಿನಗಳಲ್ಲಿ ನಾವು ಅಧಿಕಾರಕ್ಕೆ ಬಂದಾಗ ಕಾರಂಜಾ ಸಂತ್ರಸ್ತ ರೈತರ ಬೇಡಿಕೆಗಳನ್ನು ಈಡೇರಿಸುತ್ತೇವೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲಪೂರ್, ಪಕ್ಷದ ಪ್ರಮುಖರಾದ ಅಶೋಕ್ ಕುಮಾರ್ ಕರಂಜೆ, ಮಾರುತಿ ಬೌದ್ಧೆ, ಸಜ್ಜದ್ ಸಾಹೇಬ್, ಅಸದುದ್ದಿನ್ ಸಾಹೇಬ್, ರಾಜಶೇಖರ ಜವಳೆ, ಅಶೋಕ್ ಕೊಡಗೆ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post