ಈ ಎಲ್ಲ ಅವಾಂತರಗಳಿಂದ ನೊಂದ ಆ ಮಹಿಳೆ ನೇರವಾಗಿ ಪೊಲೀಸ್ ಆಯುಕ್ತರ ಮೊರೆ ಹೋದರು. ಅವರು ತನಿಖೆಗೆ ಆದೇಶಿಸಿದರು. ಗಾಯದ ಮೇಲೆ ಬರೆ ಎನ್ನುವಂತೆ ಪೊಲೀಸ್ ಅಧಿಕಾರಿಯೊಬ್ಬರು ತನಿಖೆಯ ನೆಪದಲ್ಲಿ ಮಧ್ಯರಾತ್ರಿಯವರೆಗೆ ಆ ಮೆನಯಲ್ಲಿ ಕುಳಿತು ಅಸಭ್ಯವಾಗಿ ವರ್ತಿಸತೊಡಗಿದರು. ಆಕೆ ಮತ್ತೆ ಕಮಿಷನರ್ ಮೊರೆ ಹೋದಾಗ, ಆ ಮನೆಯತ್ತ ಯಾವ ಪೊಲೀಸ್ ಅಧಿಕಾರಿಯೂ ಸುಳಿಯಕೂಡದೆಂಬ ಆದೇಶವಾಯಿತು. ಅದಾದ ಎರಡೇ ದಿನದಲ್ಲಿ ಮುಸುಕುಧಾರಿಗಳ ತಂಡ ಆ ಮನೆಗೆ ನುಗ್ಗಿ ದರೋಡೆ ಮಾಡಿದರು. ಹುಡುಗಿಯರಿಬ್ಬರು ಮಂಚದ ಕೆಳಗೆ ತಲೆಮರೆಸಿಕೊಂಡು ಅಪಾಯದಿಂದ ಪಾರಾದರು. ಈ ಸುದ್ದಿ ಪತ್ರಿಕೆಗಳ ಮುಖಪುಟದಲ್ಲೇ ಪ್ರಕಟವಾಗಿ ಪೊಲೀಸ್ ಇಲಾಖೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಈ ಘಟನೆಯ ಬಳಿಕವೇ ಕಮಿಷನರ್ ಜೆ.ಸಿ. ನಗರ ಠಾಣೆಯ ಪೊಲೀಸ್ ಅಧಿಕಾರಿಗಳನ್ನು ಕರೆಸಿ ಛೀಮಾರಿ ಹಾಕಿದ್ದು ಮತ್ತು ನನಗೆ ತನಿಖೆಯ ಜವಾಬ್ದಾರಿ ವಹಿಸಿದ್ದು. ನಾನು ಆದಾಗಲೇ ಹಲವಾರು ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿ ಮೆಚ್ಚುಗೆ ಗಳಿಸಿದ್ದೆ.
ರಾತ್ರಿ ಮನೆಯಲ್ಲಿ ಊಟ ಮುಗಿಸಿ 11 ಗಂಟೆ ಸುಮಾರಿಗೆ ಠಾಣೆಗೆ ಬಂದು ನಗ್ನಚಿತ್ರಗಳನ್ನು ಸೂಕ್ಷ್ಮವಾಗಿ ಅವಲೋಕಿಸತೊಡಗಿದೆ. ಆತ ಬಿಳಿ ಬೆಡ್ಶೀಟ್ ಮೇಲೆ ಕಾಲು ಚಾಚಿ ಮಲಗಿದ್ದ. ತಲೆಯ ಹಿಂಭಾಗದ ಮಂಚದ ಭಾಗವನ್ನು ಫೋಟೋದಲ್ಲಿ ಕಟ್ ಮಾಡಲಾಗಿತ್ತು. `ದುಷ್ಕರ್ಮಿ ವಿಕೃತಕಾಮಿ ಮಾತ್ರವಲ್ಲ, ಮಹಾ ಕ್ರಿಮಿನಲ್ ಇದ್ದಾನೆ. ಸುಳಿವು ಸಿಗಬಾರದೆಂದೇ ಆ ಭಾಗ ಕತ್ತರಿಸಿದ್ದಾನೆ’ ಎಂದು ಲೆಕ್ಕ ಹಾಕಿದೆ. ಭೂತಗನ್ನಡಿಯಿಂದ ಫೋಟೋ ಮೇಲೆ ಮತ್ತೊಮ್ಮೆ ಕಣ್ಣು ಹಾಯಿಸಿದೆ. ಸೂರ್ಯಕಾಂತಿ ಹೂವಿನ ಕೆತ್ತನೆಯ ತುಣುಕು ಗೋಚರಿಸಿತು. ಬೆಡ್ಶೀಟ್ ಮೇಲೆ ಭೂತಗನ್ನಡಿ ಇಟ್ಟು ನೋಡಿದಾಗ, ದ್ರಾಕ್ಷಿ ಗೊಂಚಲಿನ ಸೂಕ್ಷ್ಮ ಎಂಬ್ರಾಯಿಡರಿ ಕಣ್ಣಿಗೆ ಬಿತ್ತು. ಬರಿಗಣ್ಣಿಗೆ ಅದು ಕಾಣುತ್ತಿರಲಿಲ್ಲ. ಇವೆರಡು ಅಂಶ ಈ ಪ್ರಕರಣದಲ್ಲಿ ಪ್ರಮುಖ ಸುಳಿವಾದವು. ತಕ್ಷಣ ನಾನು ಅಜಯ್ನನ್ನು ಠಾಣೆಗೆ ಕರೆಸಿದೆ. ಕೋಣೆಯ ಬಾಗಿಲು ಹಾಕಿ ಒಬ್ಬನೇ ಕೂತು ಆತನ ಜತೆ ಆತ್ಮೀಯತೆಯಿಂದ ಮಾತನಾಡಿಸಿದೆ.
ಯಥಾಪ್ರಕಾರ ಆತ ಆ ಫೋಟೋ ತೆಗೆದಿದ್ದು ಯಾರೋ ಗೊತ್ತಿಲ್ಲ ಎಂದ. ನಾನು ಸೂರ್ಯಕಾಂತಿ ಕೆತ್ತನೆಯ ಮಂಚ ಮತ್ತು ದ್ರಾಕ್ಷಿ ಗೊಂಚಲಿನ ಬೆಡ್ಶೀಟ್ನ ಪ್ರಸ್ತಾಪ ಮಾಡುತ್ತಲೇ ಅಳಲು ಶುರು ಮಾಡಿದ. ಆ ನಗ್ನಚಿತ್ರಗಳ ಹಿಂದಿನ ಕತೆಯನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದ.
ಸುರಸುಂದರನಾಗಿದ್ದ ಅಜಯ್ ಮೇಲೆ, ಆತ ಕೆಲಸ ಮಾಡುತ್ತಿದ್ದ ರೆಸ್ಟೊರೆಂಟ್ ಮಾಲೀಕನ ಹೆಂಡತಿಯ ತಮ್ಮ ಶೈಲೇಂದ್ರನಿಗೆ ಮೋಹ ಉಂಟಾಗಿತ್ತು. ಆತ ಸ್ವಿಜರ್ಲೆಂಡ್ನಲ್ಲಿ ಫೈನಾನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ. ಸಲಿಂಗಕಾಮಿಯಾಗಿದ್ದ ಆತ ಅಜಯ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಈ ನಡುವೆ ಅಜಯ್ ಮದುವೆಯಾಗಲು ಹೊರಟಿದ್ದು ಕಂಡು ಆತ ಕಂಗಾಲಾಗಿದ್ದ. ಮದುವೆಯಾಗದಂತೆ ಒತ್ತಡ ಹೇರಿದರೂ ಅಜಯ್ ಮಣಿದಿರಲಿಲ್ಲ. ಹಾಗಾಗಿ ಮದುವೆ ತಪ್ಪಿಸಲು ಸಂಚು ರೂಪಿಸಿದ. ಕೊನೆಯದಾಗಿ ಒಂದು ದಿನ ರೂಮಿಗೆ ಬಂದು ಹೋಗಬೇಕೆಂದೂ, ಇನ್ನೆಂದೂ ಆತನ ತಂಟೆಗೆ ಬರುವುದಿಲ್ಲವೆಂದು ಆಣೆ ಮಾಡಿದ. ಆತನ ಮಾತು ನಂಬಿ ಹೋದ ಅಜಯ್ಗೆ ಬಿಯರ್ನಲ್ಲಿ ನಿದ್ದೆ ಮಾತ್ರೆ ಬೆರೆಸಿ ಕುಡಿಸಿದ. ಪ್ರಜ್ಞೆತಪ್ಪಿ ಬಿದ್ದ ಅಜಯ್ನನ್ನು ಬೆತ್ತಲೆಗೊಳಿಸಿ ನಾನಾ ಭಂಗಿಯ ಫೋಟೋ ತೆಗೆದು ಪೇಸ್ಟ್ ಮಾಡಿ ಅಜಯ್ನ ಮರ್ಯಾದೆ ಹರಾಜು ಹಾಕಿದ.
ನಾನು ಶೈಲೇಂದ್ರನ ಮನೆ ಮೇಲೆ ದಾಳಿ ಮಾಡಿದೆ. ಆ ಮನೆ ಅದ್ಧೂರಿಯಾಗಿತ್ತು. ಬೆಡ್ರೂಮ್ನಲ್ಲಿ ಸೂರ್ಯಕಾಂತಿ ಕೆತ್ತನೆಯ ಮಂಚ ಇರುವುದು ಖಾತರಿಯಾಯಿತು. ದ್ರಾಕ್ಷಿ ಗೊಂಚಲಿನ ಬೆಡ್ಶೀಟ್ ಕೂಡ ಪತ್ತೆಯಾಯಿತು. ವಿಡಿಯೊ ಕ್ಯಾಸೆಟ್ಗಳ ಮೇಲೆಲ್ಲ ರಾಮಾಯಣ, ಮಹಾಭಾರತ ಎಂದು ಬರೆಯಲಾಗಿತ್ತು. ಪ್ಲೇಯರ್ನಲ್ಲಿ ಹಾಕಿ ನೋಡಿದಾಗ ಅವು ಬ್ಲೂಫಿಲಂಗಳಾಗಿದ್ದವು! ನನ್ನ ವಿಚಾರಣೆ ಚುರುಕಾದಾಗ ಕೈಕಾಲು ಹಿಡಿದುಕೊಳ್ಳಲು ಬಂದ. ಕೇಳಿದಷ್ಟು ಹಣ ಕೊಡುತ್ತೇನೆ ಬಿಡಿ ಎಂದ ಒಪ್ಪದಿದ್ದಾಗ ಓಡಿ ಹೋಗಲು ನೋಡಿದ. ನಾನು ಕೋಳ ಬಿಗಿದೆ. ಮಹಿಳೆಯ ಮನೆ ದರೋಡೆ ಮಾಡಿಸಿದ್ದು ಆತನೇ ಎನ್ನುವುದು ಖಚಿತವಾಯಿತು. ಪೊಲೀಸ್ ಕಮಿಷನರ್ ಇತರ ಅಧಿಕಾರಿಗಳ ಜತೆ ಖುಷಿಯಿಂದ ಆ ಮನೆಗೆ ಬಂದರು. 24 ಗಂಟೆಯೊಳಗೆ ಪ್ರಕರಣ ಭೇದಿಸಿದ್ದಕ್ಕೆ ಬಹುಮಾನ ಘೋಷಿಸಿದರು. ಶೈಲೇಂದ್ರ ಸೆಂಟ್ರಲ್ ಜೈಲ್ ಸೇರಿದ. ಪ್ರೀತಿಸಿದ ಹುಡುಗಿ ಜತೆ ಅಜಯ್ನ ಮದುವೆ ನಡೆಯಿತು.
ಶೈಲೇಂದ್ರನ ಮನೆಯಲ್ಲಿ ಆರು ವಿಶಿಷ್ಟ ಗ್ರಾಸ್ಗಳಿದ್ದವು. (ಗಾಜಿನ ಲೋಟಗಳು) ಆ ಗ್ಲಾಸ್ನ ಮೇಲೆ ಮೈತುಂಬ ಉಡುಪು ಧರಿಸಿದ ಯುವತಿಯ ಚಿತ್ರ ಇತ್ತು. ಗ್ಲಾಸ್ನೊಳಗೆ ನೀರು ತುಂಬಿಸತ್ತಲೇ ಆ ಚಿತ್ರ ಉಡುಪು ಮರೆಯಾಗಿ ನಗ್ನವಾಗುತ್ತ ಹೋಗುತ್ತಿತ್ತು! `ವಾವ್ ಎಂಥ ಚಮತ್ಕಾರ’ ಎನ್ನುತ್ತ ಹಿರಿಯ ಅಧಿಕಾರಿಯೊಬ್ಬರು ಆ ಗ್ಲಾಸ್ಗಳನ್ನು `ಜೋಪಾನವಾಗಿ’ ತಮ್ಮ ಮನೆಗೆ ತೆಗೆದುಕೊಂಡು ಹೋದರು!
Discussion about this post