ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸರ್ಕಾರದ ಲಾಕ್’ಡೌನ್ ನಿಯಮ ಉಲ್ಲಂಘಿಸಿ, ಕೂಲಿಕಾರ್ಮಿಕರು ಹಾಗೂ ನಿರಾಶ್ರಿತರಿಗೆ ಊಟ ಮತ್ತು ಊಟದ ಸಾಮಗ್ರಿ ವಿತರಿಸುವ ಸಂಘಸಂಸ್ಥೆಗಳ ವಿರುದ್ದ ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ಕೇಸ್ ದಾಖಲಿಸಲಾಗುವುದು ಎಂದು ಶಿವಮೊಗ್ಗ ಪಾಲಿಕೆ ಆಯುಕ್ತ ಚಿದಾನಂದ ವಟಾರೆಯವರು ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಅವರು ಬುಧವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಪ್ರಕಟಣೆಯ ಸಾರಾಂಶ ಮುಂದಿನಂತಿದೆ. ‘ಕೋವಿಡ್-19 ರೋಗ ಹರಡದಂತೆ ಮುಂಜಾಗ್ರತೆ ಕ್ರಮವಹಿಸಲು ಹಾಗೂ ಸಂಭವಿಸಬಹುದಾದ ಅನಾಹುತ ತಡೆಗಟ್ಟಲು ಸರ್ಕಾರದ ಆದೇಶಾನುಸಾರ ಜಿಲ್ಲೆಯಾದ್ಯಂತ ಲಾಕ್’ಡೌನ್ ಘೋಷಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಾಕಷ್ಟು ಸಂಘಸಂಸ್ಥೆಗಳು, ಸಾರ್ವಜನಿಕರು ಕಾರ್ಮಿಕರು ಹಾಗೂ ನಿರಾಶ್ರಿತ ಜನರುಗಳಿಗೆ ಊಟ ಮತ್ತು ಊಟದ ಸಾಮಗ್ರಿಗಳನ್ನು ವಿತರಿಸುತ್ತಿರುವ ಮಾಹಿತಿ ಗಮನಕ್ಕೆ ಬಂದಿದೆ.
ಯಾವುದೇ ಸಂಘ ಸಂಸ್ಥೆಗಳು, ಸಾರ್ವಜನಿಕರು ಊಟದ ಸಾಮಗ್ರಿಗಳನ್ನು ನೀಡಲು ಇಚ್ಚಿಸಿದಲ್ಲಿ ಮಹಾನಗರ ಪಾಲಿಕೆಯಲ್ಲಿ ತೆರೆಯಲಾಗಿರುವ ಕೇಂದ್ರಕ್ಕೆ ಊಟದ ಸಾಮಾಗ್ರಿ ಕಿಟ್ (ಸಿದ್ದಪಡಿಸಿದ ಆಹಾರದ ಕಿಟ್ ಹೊರತುಪಡಿಸಿ) ನೀಡಿ ಸ್ವೀಕೃತಿ ಪಡೆಯಬೇಕು.
ಒಂದು ವೇಳೆ ಸರ್ಕಾರದ ಲಾಕ್’ಡೌನ್ ನಿಯಮಾವಳಿ ಉಲ್ಲಂಘಿಸಿ, ನಿರಾಶ್ರಿತ ಕೂಲಿ ಕಾರ್ಮಿಕರುಗಳಿಗೆ ಸಿದ್ದಪಡಿಸಿದ ಊಟ/ಊಟದ ಸಾಮಾಗ್ರಿಗಳ ಕಿಟ್ ಅನ್ನು ಪಾಲಿಕೆಯ ಗಮನಕ್ಕೆ ಬರದೆ ಸಾರ್ವಜನಿಕರು ಸಂಘಸಂಸ್ಥೆಗಳು ವಿತರಿಸುವುದು ಕಂಡುಬಂದರೆ ಐಪಿಸಿ ಕಾಯ್ದೆ 269, 270, 271 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಬಿ. ರೇಣುಕೇಶ್
Get in Touch With Us info@kalpa.news Whatsapp: 9481252093
Discussion about this post