ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಶಿವಮೊಗ್ಗ ರಘುರಾಮ |
ಯಾವುದೇ ಸಂಕಲ್ಪಗಳು ಸಂಪೂರ್ಣವಾಗಿ ಸಿದ್ಧಿಗೊಳ್ಳಬೇಕು ಎಂದರೆ ಅದಕ್ಕೆ ಮೊದಲಿಗೆ ತಾಯಿಯ ಸಂಕಲ್ಪ ಮತ್ತು ಕೃಪೆ ಎಂಬುದು ಬಹಳ ಮುಖ್ಯ. ಜಗತ್ತಿನ ಎಲ್ಲಾ ಸಾಧಕರ ಯಶಸ್ಸು ಮತ್ತು ಕೀರ್ತಿಯ ಹಿಂದೆ ಅವರವರ ತಾಯಿಯ ದಿಟ್ಟ ಸಂಕಲ್ಪಗಳು ಪ್ರಧಾನವಾದ ಪಾತ್ರವನ್ನು ವಹಿಸಿವೆ. ನನ್ನ ಮಗು ಏನಾಗಬೇಕು ಎಂಬುದನ್ನು ಕನಸು ಕಟ್ಟಿಕೊಂಡು ಅದನ್ನು ಸಹಕಾರ ಮಾಡಲು ಜೀವನ ಪಯರ್ಂತ ತ್ಯಾಗವನ್ನು ಮಾಡುವ ತಾಯಿ, ತನ್ನ ಮಗು ಸಾಧನೆಯ ಮೆಟ್ಟಿಲು ಏರುತ್ತ ಏರುತ್ತ ಇದ್ದಂತೆ ಪಡುವ ಸಂಭ್ರಮ ಹೇಳತೀರದು.
ಬೆಂಗಳೂರಿನ #Bengaluru ಗೃಹಿಣಿ ಶಿಲ್ಪಾ ಚನ್ನಕೇಶವ ಅವರಿಗೂ ಒಂದು ಕನಸು ಇತ್ತು. ತಾನು ಬಾಲ್ಯದಲ್ಲಿ ಕಲಿಯಲು ಸಾಧ್ಯವಾಗದ ನೃತ್ಯ ಕಲೆಯನ್ನು ಮಗಳು ಕರಗತ ಕಲಿಯಬೇಕು. ಶಾಲಾ ಪಠ್ಯಕ್ರಮವಲ್ಲದೇ ಕಲಾ ರಂಗದಲ್ಲೂ ಏನಾದರೂ ಒಂದಷ್ಟು ಸಾಧನೆ ಮಾಡಬೇಕು ಎಂದು. ಅವರ ಮಹದಾಸೆಗೆ ಪೂರಕವಾಗಿ ಪತಿ ಚೆನ್ನಕೇಶವ ರೆಡ್ಡಿ ಸಹಕಾರ ನೀಡಿದರು. ಈ ದಂಪತಿಯ ಏಕೈಕ ಪುತ್ರಿ.
Also Read>> ಶಿವಮೊಗ್ಗ | ಆಟವಾಡುತ್ತಿದ್ದ ಬಾಲಕಿ ಸೇರಿ ಇಬ್ಬರ ಮೇಲೆ ಬೀದಿ ನಾಯಿ ದಾಳಿ
ಚಾರ್ವಿಶ್ರೀಗೆ ಎಳವೆಯಿಂದಲೇ ಗುರು ಸುಪರ್ಣಾ ವೆಂಕಟೇಶರ ಬಳಿ ಅಭ್ಯಾಸಕ್ಕೆ ಸಮರ್ಪಣೆ ಮಾಡಿದರು. ಇದೀಗ ಮಲ್ಲೇಶ್ವರದ ನಿರ್ಮಲ ರಾಣಿ ಶಾಲೆಯಲ್ಲಿ 10ನೇ ತರಗತಿ ಅಭ್ಯಾಸ ಮಾಡುತ್ತಿರುವ ಚಾರ್ವಿ, ರಂಗಪ್ರವೇಶ #Rangapravesha ಮಾಡುವ ಹಂತಕ್ಕೆ ಬಂದು ನಿಂತಿರುವುದು ಇಡೀ ಕುಟುಂಬದ ಸಂಭ್ರಮಕ್ಕೆ ಕಳಸವಿಟ್ಟಂತಿದೆ.
ಗುರು ಸುಪರ್ಣಾ ವೆಂಕಟೇಶ ಅವರ ಗರಡಿಯಲ್ಲಿ ಪಳಗುತ್ತಿರುವ ಚಾರ್ವಿಶ್ರೀ ಈಗಾಗಲೇ ಭರತನಾಟ್ಯ ಜ್ಯೂನಿಯರ್ ಮತ್ತು ಗಂಧರ್ವ ಮಹಾವಿದ್ಯಾಲಯದ ಭರತನಾಟ್ಯ #Bharanatyam ಮಧ್ಯಮ ಪ್ರಥಮ, ಮಧ್ಯಮ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆ ಹೊಂದಿದ್ದಾಳೆ. ಕಥಕ್ ನೃತ್ಯದಲ್ಲೂ ಆಸಕ್ತಿ ಹೊಂದಿರುವ ಈಕೆ ಶ್ವೇತಾ ವೆಂಕಟೇಶರ ಬಳಿಯಲ್ಲಿ ಜ್ಯೂನಿಯರ್ ಹಂತದ ಅಭ್ಯಾಸ ಮಾಡುತ್ತಿದ್ದಾಳೆ. ಗಂಧರ್ವ ಮಹಾವಿದ್ಯಾಲಯದ ಪ್ರವೇಶಿಕಾ, ಪ್ರಥಮ ಹಂತದ ಪರೀಕ್ಷೆಗಳಲ್ಲೂ ಉತ್ತಮ ಸಾಧನೆ ಮಾಡಿರುವುದು ಗಮನೀಯವಾಗಿದೆ.
ಹತ್ತಾರು ಕಡೆ ಪ್ರದರ್ಶನ
ಶಾಲಾ ಶಿಕ್ಷಣದಲ್ಲೂ #SchoolEducation ಅತ್ಯುನ್ನತ ಸ್ಥಾನವನ್ನೇ ಕಾಪಾಡಿಕೊಂಡಿರುವ ಚಾರ್ವಿಶ್ರೀ, ವಿವಿಧ ಶಾಲಾ-ಕಾಲೇಜುಗಳ ನೃತ್ಯ ಸ್ಪರ್ಧೆಯಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದಾಳೆ. ವಿವಿಧ ದೇವಾಲಯಗಳಲ್ಲಿ ನೃತ್ಯ, ಸಾಯಿ ನೃತ್ಯೋತ್ಸವ, ಸ್ಮರಣಂ, ಸುರ್ವೆ ಫೆಸ್ಟಿವಲ್, ಕಲೆಗಳ ಉತ್ಸವ, ಡ್ಯಾನ್ಸ್ ಬ್ಯಾಲೆ, ರಾಮಾಯಣ, ದಶಾವತಾರ, ಭಾವ ಯಾಮಿ ರಘುರಾಮಂ, ಹೊಸದಿಲ್ಲಿಯಲ್ಲಿ ನಡೆದ ಎನ್ವಿರಾನ್ಮೆಂಟಲ್ಲಿಸ್ಟ್ ಕಾನ್ಫರೆನ್ಸ್ ಸೇರಿದಂತೆ ಹಲವು ವೇದಿಕೆಗಳಲ್ಲಿ ಈಕೆಯ ನರ್ತನ ಕಲಾ ಪ್ರದರ್ಶನವಾಗಿದೆ.
ಗುರು ಸ್ಮರಣೆ
ಸೀನಿಯರ್ ಮತ್ತು ವಿದ್ವತ್ ಪರೀಕ್ಷೆ ತೆಗೆದುಕೊಂಡು, ಅದಕ್ಕಾಗಿ ಸತತ ಅಭ್ಯಾಸ ಮಾಡುತ್ತೇನೆ. ಅಮ್ಮನ ಕನಸುಗಳನ್ನು ಈಡೇರಿಸುತ್ತೇನೆ ಎಂಬ ಸಂಕಲ್ಪವನ್ನು ಈ ಬಾಲೆ ಮಾಡಿದ್ದಾಳೆ. ನರ್ತನವನ್ನು ಪ್ರಧಾನವಾಗಿ ಇರಿಸಿಕೊಳ್ಳುವುದರೊಂದಿಗೆ ಆರ್ಕಿಟೆಕ್ಟ್ ಆಗಬೇಕು ಎಂಬ ಬಹುದೊಡ್ಡ ಕನಸು ಈಕೆಗೆ ಇದೆ. ತನ್ನ ಇಲ್ಲ ಸಾಧನೆಯ ಹಿಂದೆ ಅಮ್ಮನ ಸಂಪೂರ್ಣ ಸಹಕಾರ, ತಂದೆಯ ಬೆಂಬಲ ಮತ್ತು ಗುರುಗಳಾದ ಸುಪರ್ಣಾ ಮತ್ತು ಶ್ವೇತಾ ವೆಂಕಟೇಶ ಅವರ ಕಾರುಣ್ಯಗಳನ್ನು ಈಕೆ ತನ್ನ ಬಾಲ ಭಾಷೆಗಳಲ್ಲೇ ಧನ್ಯತೆಯಿಂದ ಸ್ಮರಿಸಿಕೊಳ್ಳುತ್ತಾಳೆ.
ಮೇ 10ರಂದು ಕಾರ್ಯಕ್ರಮ
ಬೆಂಗಳೂರಿನ ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಇನ್ನೊಂದು ಉದಯೋನ್ಮುಖ ಪ್ರತಿಭೆ ರಂಗಾರೋಹಣಕ್ಕೆ ಈಗ ಅಣಿಯಾಗಿದೆ. ಗುರು, ವಿದುಷಿ ಸುಪರ್ಣಾ ವೆಂಕಟೇಶ ಅವರ ಶಿಷ್ಯೆ ಚಾರ್ವಿ ಶ್ರೀ ರೆಡ್ಡಿ ಮೇ . 10ರಂದು ಭರತನಾಟ್ಯ ರಂಗ ಪ್ರವೇಶ ಮಾಡಲಿದ್ದಾರೆ. ನಗರದ ಮಲ್ಲೇಶ್ವರಂ ವಯ್ಯಲಿ ಕಾವಲ್ನ ಪಾರ್ಕ್ ಬಡಾವಣೆಯಲ್ಲಿರುವ ಶ್ರೀ ಕೃಷ್ಣದೇವರಾಯ #SriKrishnadevaraya ಕಲಾ ಮಂದಿರದಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
Also Read>> ಬಂಗಾಳದ ಬೀದಿ ಬದಿಯ ‘ಝಲ್ ಮುರಿ’ ಮತ್ತು ಮೋದಿಯವರ ಜನಸಾಮಾನ್ಯರೊಂದಿಗಿನ ಬಾಂಧವ್ಯ: ಒಂದು ವಿಶ್ಲೇಷಣೆ
ಆರ್.ಕೆ. ಶಿಲ್ಪಾ ಮತ್ತು ಚನ್ನ ಕೇಶವ ರೆಡ್ಡಿ ಅವರ ಪುತ್ರಿ ಚಾರ್ವಿ, ತನ್ನ 6ನೇ ವರ್ಷದಿಂದಲೇ ಗುರು ಸುಪರ್ಣಾ ಅವರಲ್ಲಿ ನೃತ್ಯ ಕಲಿಕೆ ಆರಂಭಿಸಿದ್ದು, ಸತತ ಒಂದು ದಶಕದ ಅವಧಿಯ ಅಭ್ಯಾಸದ ನಂತರ ತನ್ನ ನೃತ್ಯ ಕೌಶಲವನ್ನು ರಂಗಪ್ರವೇಶದ ಮೂಲಕ ಪಡಮೂಡಿಸುತ್ತಿರುವುದು ಆಶಾದಾಯಕ ನಡೆಯಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಸ್ -ವ್ಯಾಸ ವಿವಿಯ ಪ್ರೊ. ಕರುಣಾ ವಿಜೇಂದ್ರ, ಐಸಿಸಿಆರ್ ಪ್ರಾದೇಶಿಕ ನಿರ್ದೇಶಕ ಪ್ರದೀಪ ಕುಮಾರ್, ಎಚ್.ಎನ್. ಇಂಜಿನಿಯರಿಂಗ್ ಕಾಲೇಜು ಚೇರ್ಮನ್ ವೆಂಕಟ ಶಿವಾರೆಡ್ಡಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ವಿದ್ವಾನ್ ವಿನಯ್ ಶರ್ವ ಸಾಕ್ಷಿ ಆಗಲಿದ್ದಾರೆ.
ನಟುವಾಂಗದಲ್ಲಿ ಗುರು ಸುಪರ್ಣಾ, ಗಾಯನದಲ್ಲಿ ವಿದ್ವಾನ್ ಬಾಲ ಸುಬ್ರಹ್ಮಣ್ಯ ಶರ್ಮಾ, ಕೊಳಲಿನಲ್ಲಿ ವಿದ್ವಾನ್ ರಘು ಸಿಂಹ, ವೀಣೆಯಲ್ಲಿ ವಿದ್ವಾನ್ ಪ್ರಶಾಂತ್ ಇತರರು ಸಹಕಾರ ನೀಡಲಿರುವುದು ವಿಶೇಷವಾಗಿದೆ. ರಂಗ ಕಲಾಸಕ್ತರು ಭಾಗವಹಿಸುವಂತೆ ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಸಾಯಿ ವೆಂಕಟೇಶ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















