ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದಲ್ಲಿ ಗೋ ಹತ್ಯೆ ಸಂಪೂರ್ಣ ನಿಲ್ಲಬೇಕಿದ್ದು, ಗೋವನ್ನು #Cow ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಣೆ ಮಾಡಬೇಕು ಎಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಮಹಾಸ್ವಾಮಿಗಳು #VidhushekharaSwamiji ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಗರದ ಅಲ್ಲಮಪ್ರಭು ಮೈದಾನದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ #KSEshwarappa ಅವರ ಮಹಾಪೋಷಕತ್ವದಲ್ಲಿ ಅಸ್ತಿತ್ವಕ್ಕೆ ಬಂದ ಗೋವರ್ಧನ ಟ್ರಸ್ಟನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡುತ್ತಿದ್ದರು.
ಗೋಹತ್ಯೆ ಸಂಪೂರ್ಣ ನಿಲ್ಲಬೇಕಿದ್ದು, ಅದಕ್ಕೆ ಕಠಿಣ ಕಾನೂನೂ ಬರಬೇಕು. ಅದು ಆಚರಣೆಯಲ್ಲೂ ಬರಬೇಕು. ಅಲ್ಲದೆ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆಯಾಗಬೇಕು ಎಂದು ಆಗ್ರಹಿಸಿದರು.
ನಮ್ಮ ದೇಶದ ಮೇಲೆ ಎಷ್ಟೇ ಅಕ್ರಮಣವಾದರೂ ಸನಾತನ ಧರ್ಮ ಉಳಿದಿದೆ ಎಂದರೆ ಅದು ಶ್ರೀ ಶಂಕರ ಭಗವತ್ಪಾದರ ಶ್ರಮದಿಂದ. ನಮ್ಮ ದೇಶದ ಮೇಲೆ ವಿದೇಶಿಗಳಿಂದ ಆಕ್ರಮಣವಾದಷ್ಟು ಜಗತ್ತಿನಲ್ಲಿ ಬೇರಾವ ದೇಶಗಳ ಮೇಲೂ ನಡೆದಿಲ್ಲ ಎಂದರು.
ಸಮಾಜಕ್ಕೆ ಬೇಕಾದ, ಪ್ರತಿ ಕಾಲಕ್ಕೂ ಬೇಕಾದ ಉಪದೇಶವನ್ನು ಸದ್ರೀ ಶಂಕರಾಚಾರ್ಯರು ಮಾಡಿದ್ದಾರೆ. ಪ್ರಶ್ನೋತ್ತರ ಮಾಲಿಕಾದಲ್ಲಿ ಶ್ರೀ ಶಂಕರಾಚಾರ್ಯರು ಹೇಳಿದ್ದು, ನಮ್ಮ ಜನ್ಮದ ನಂತರ ತಾಯಿಯಂತೆ ಯಾರನ್ಮು ನೋಡಬೇಕು ಎಂಬುದಕ್ಕೆ ಗೋವನ್ನು ನೋಡಬೇಕು ಎಂದಿದ್ದಾರೆ. ಅದ್ದರಿಂದ ನಾವು ಗೋವನ್ನು ಗೋಮಾತಾ ಎಂದು ಕರೆದಿದ್ದೇವೆ. ಮಹಾಪುರುಷರೆಲ್ಲರ ಜೀವನ ದರ್ಶನವನ್ನು ನೋಡಿದರೆ ಅವರೆಲ್ಲ ತಾಯಿಯನ್ನು ಪೂಜ್ಯ ಭಾವನೆಯಿಂದ ನೋಡಿದ್ದಾರೆ ಎಂದು ತಿಳಿಸಿದರು.
ಮಹಾಭಾರತದಲ್ಲಿ ವೇದವ್ಯಾಸರೂ ತಮ್ಮ ತಾಯಿ ಸತ್ಯವತಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಜನ್ಮ ಕೊಟ್ಟ ತಾಯಿಯ ನಂತರದ ಸ್ಥಾನ ಗೋಮಾತಾ ಎಂದ ಅವರು ಗೋವಿನ ಬಗ್ಗೆ ಗೌರವ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.
ಗೋಸಂತತಿಯನ್ನು ಲೌಕಿಕವಾಗಿಯೂ ಗೌರವದಿಂದ ಕಾಣಬೇಕು. ಗೋಸಂತತಿ ಇದ್ದರೆ ಮಾತ್ರ ವ್ಯವಸಾಯ ನಡೆಯುತ್ತದೆ. ಎಷ್ಟೇ ಆಧುನಿಕತೆ ಬೆಳೆದರೂ ಮನುಷ್ಯ ಹೊಟ್ಟೆಗೆ ಆಹಾರ ತಿನ್ನಲೇಬೇಕು. ಅದನ್ನು ಪಡೆಯಲು ಗೋಸಂತತಿ ಬೇಕೇಬೇಕು. ಆಧುನಿಕತೆಯಿಂದ ಗೋವಿನ ಮೇಲೆ ಕ್ರೌರ್ಯ ನಡೆಯುತ್ತಿದೆ. ಗೋಸಂತತಿ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಗೋಹತ್ಯೆ ಮಹಾ ಪಾಪದ ಕಾರ್ಯವಾಗಿದ್ದು, ಇದನ್ನು ಜನ ತಿಳಿದುಕೊಳ್ಳಬೇಕು. ಅಂದಾಗ ಮಾತ್ರ ದೇಶದಲ್ಲಿನ ಎಲ್ಲ ತೊಂದರೆಗಳು ನಾಶವಾಗುತ್ತವೆ. ಇದಕ್ಕೆ ಎಲ್ಲರೂ ಸಂಕಲ್ಪ ಮಾಡಬೇಕು. ಪ್ರಾಣಿಪ್ರಿಯರಿಗೆ ಗೋ ಹತ್ಯೆ ಯಾಕೆ ಕಾಣುತ್ತಿಲ್ಲ ಎಂದು ಪ್ರಶ್ನಿಸಿದರು.
ಗೋಶಾಲೆ ನಡೆಸುವುದು ಸುಲಭವಲ್ಲ. ಅದರ ಪರಿಶ್ರಮ ನನಗೆ ಗೊತ್ತು. ಲಾಭಕ್ಕೋಸ್ಕರ ಗೋಶಾಲೆ ಅಲ್ಲ. ಗೋ ರಕ್ಷಣೆಗಾಗಿ ಮಾತ್ರ ಗೋಶಾಲೆ ಮಾಡಬೇಕು ಎಂದರು.
ಗೋರಕ್ಷಣೆಗೆ ಬೇಕಾದ ಸಂಪತ್ತು ಸಮಾಜದಲ್ಲಿ ಎಲ್ಲರಲ್ಲೂ ಇದೆ. ಒಳ್ಳೆಯ ಕೆಲಸಕ್ಕೆಎಲ್ಲರೂ ಸಹಕಾರ, ಸಹಾಯ ಮಾಡಬೇಕು ಎಂದರು.
ಗೋವರ್ಧನ ಟ್ರಸ್ಟ್ ಮಹಾಪೋಷಕ ಕೆ.ಎಸ್. ಈಶ್ವರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿ, ಗೋವರ್ಧನ ಟ್ರಸ್ಟ್ ಅಧ್ಯಕ್ಷ ಕೆ.ಇ. ಕಾಂತೇಶ್ ಸ್ವಾಗತಿಸಿದರು.
ಎಚ್.ಎಸ್. ನಾಗರಾಜ, ಕೆ.ಸಿ. ನಟರಾಜ ಭಾಗವತ, ಬಿ.ಎ. ರಂಗನಾಥ, ರಾಘವೇಂದ್ರಸ್ವಾಮಿ, ಉಮೇಶ ಆರಾಧ್ಯ, ನಾಗೇಶ್ ಎಂ. ರಮೇಶ್ ಬಾಬು, ಎಸ್.ಕೆ. ಶೇಷಾಚಲ, ಎಚ್.ಎಸ್. ಶಿವಕುಮಾರ್, ಮಹಾಲಿಂಗ ಶಾಸ್ತ್ರೀ, ಸಂದೇಶ್ ಉಪಾಧ್ಯ, ಎನ್.ಉಮಾಪತಿ, ಎಚ್. ಶಿವರಾಜ್, ಈ. ವಿಶ್ವಾಸ್, ರಾಮ್ ಸ್ವರೂಪ್, ಮೋಹನ್ ಜಾಧವ್, ಎಂ.ಜಿ. ಬಾಲು, ಶ್ರೀಕಾಂತ್, ಶುಭಾ ರಾಘವೇಂದ್ರ, ಉಮಾ ಮೂರ್ತಿ, ವಿನಯ್, ಚೇತನ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















