ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಎಮರ್ಜೆನ್ಸಿ ವಾರ್ಡ್ಗೆ ತೀವ್ರ ಎದೆ ನೋವು ಎಂದು ಕರೆತರಲ್ಪಟ್ಟ ವ್ಯಕ್ತಿಗೆ, ಹೃದಯಾಘಾತವಾಗಿದೆ ಎಂದು ವೈದ್ಯರು ನಿರ್ಧರಿಸಿದರು. ಆ ವ್ಯಕ್ತಿ ಅವನ ಜೊತೆಯವರದ್ದೆಲ್ಲಾ ಒಂದೆ ಪ್ರಶ್ನೆ! ಮೊನ್ನೆ, ಮೊನ್ನೆ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಅವರಿಗೆ ಕಂಪ್ಲೀಟ್ – ಫುಲ್ ಬಾಡಿ ಚೆಕ್ ಅಪ್ ಆಗಿದೆ, ಎಲ್ಲ ನಾರ್ಮಲ್ ಇತ್ತು. ಈಗ ಹೃದಯಾಘಾತ ಎಲ್ಲಿಂದ? ನಂಬುವುದೆಂತು? ಈ ಪರಿಸ್ಥಿತಿಯಲ್ಲಿ ವೈದ್ಯರು ಏನು ಮಾಡಬೇಕು? ಅಂತು ಇಂತು ಎಲ್ಲ ವೈದ್ಯಕೀಯ ದಾಖಲೆಗಳ ಮಹಜರು ನಡೆದು, ಇನ್ನೊಂದೆರಡು ಹಿರಿಯ ವೈದ್ಯರ ಉಪಸ್ಥಿತಿಯಲ್ಲಿ- ಅಂತು ಆ ವ್ಯಕ್ತಿಯ ಹೃದಯಾಘಾತಕ್ಕೆ ಚಿಕಿತ್ಸೆ ನಡೆದು, ಎಲ್ಲ ಸುಸೂತ್ರವಾಯಿತೆನ್ನಿ.
ಇಂದು ಈ ತರಹದ ಸಂಗತಿಗಳು ವಾಸ್ತವ. ಎದೆ ನೋವು ಬಂದವರಿಗೆಲ್ಲ ಹೃದಯವಿರುವುದು ನಿಜವಾದರೂ, ಹೃದಯಾಘಾತ ಖಂಡಿತ ಆಗಬೇಕೆಂದಿಲ್ಲ. ಮೊನ್ನೆ ನಾರ್ಮಲ್ ಇದ್ದ ಹೃದಯ ಇಂದು ಆಘಾತಕ್ಕೆ ಒಳಗಾಗಬಹುದು. ಅದರೆ ಇಂದಿನ ಸಂದರ್ಭದಲ್ಲಿ ಅದನ್ನು ಒಪ್ಪಿಕೊಳ್ಳಲು ಆಗದ ಸ್ಥಿತಿ ಯಾಕೆ?
ಮೊನ್ನೆ ನಡೆದ ಕಂಪ್ಲೀಟ್ ಚೆಕ್ ಅಪ್’ನಿಂದಲೇ ಅಥವಾ ವೈದ್ಯರ ಮೇಲೆ ಕಡಿಮೆಯಾಗುತ್ತಿರುವ ವಿಶ್ವಾಸದಿಂದಲೇ ಯಾವುದೇ ತೀವ್ರ ಕಾಯಿಲೆಯನ್ನು ಯಾರು ಬಯಸುವುದಿಲ್ಲ, ಮೊದಲ ಬಾರಿಗೆ ಒಪ್ಪಿಕೊಳ್ಳುವ ಮನಃಸ್ಥಿತಿ ಸಹ ಅಪೇಕ್ಷಣೀಯವಲ್ಲ. ನಿರಾಕರಣೆ ಅಲ್ಲಿನ ಸಹಜ ಮನಃಸ್ಥಿತಿ. ಈ ನಿರಾಕರಣೆಗೆ ಒಗ್ಗರಣೆ ಬೀಳುತ್ತಿರುವುದು, ಈ ಕಂಪ್ಲೀಟ್- ಚೆಕ್’ಅಪ್’ಗಳಿಂದ. ಹಾಗಾದಲ್ಲಿ ಮೊನ್ನೆಗೂ, ಇಂದಿಗೂ ತಿರುವು ಮುರುವಾಗುವ ಪರಿಸ್ಥಿತಿಯಲ್ಲಿ ಈ ಚೆಕ್’ಅಪ್’ಗಳ ಅವಶ್ಯಕತೆ ಏನು? ವೈದ್ಯಕೀಯವಾಗಿ ಅವುಗಳ ಸ್ಥಾನವೇನು?
2013ರ ಕೊನೆಯಲ್ಲಿ ಅಮೆರಿಕಾದಲ್ಲಿ ನಡೆದ ಬೆಳವಣಿಗೆಯೊಂದನ್ನು ನಾವು ಇಲ್ಲಿ ನೋಡಬೇಕು. 17 ವೈದ್ಯರ ಸಂಘಟನೆಗಳು ಒಟ್ಟಾಗಿ, 90 ವೈದ್ಯಕೀಯ ಪರೀಕ್ಷೆಗಳನ್ನು ಅನಗತ್ಯ, ಅತಿಯಾದ ಬಳಕೆ (Unnecessary, over use) ಎಂದು ಪಟ್ಟಿ ಮಾಡಿವೆ. ಇಂದು ಈ ಅಭಿಯಾನ (www.choosingwisely.org) ಬೆಳೆಯುತ್ತಿದ್ದು ಮತ್ತಷ್ಟು ವೈದ್ಯ ಸಂಘಟನೆಗಳು ಸೇರುತ್ತಿವೆ. ರೋಗ ಲಕ್ಷಣವೇ ಇಲ್ಲದ, ರೋಗಕ್ಕೆ ತುತ್ತಾಗಬಹುದಾದ ಯಾವುದೆ ರಿಸ್ಕ್ ಅಂಶಗಳಿಲ್ಲದ, ಆರೋಗ್ಯವಂತರ ಮೇಲೆ ಈ ಎಲ್ಲ ಪರೀಕ್ಷೆಗಳನ್ನು ನಡೆಸುವುದನ್ನು ಸೂಕ್ತ ಪರಿಶೀಲನೆಗೊಳಪಡಿಸಲು ನಿರ್ಧರಿಸಿವೆ. ಬಂದವರಿಗೆಲ್ಲ ಒಂದಿಷ್ಟು ಟೆಸ್ಟ್, ಒಂದು ಫೈಲ್, ಕಾಯಿಲೆ ಹೆಸರಿಡುವುದು, ಅದಕ್ಕೊಂದಿಷ್ಟು ಮಾತ್ರೆ, ಚಿಕಿತ್ಸೆ ಕ್ರಮಗಳು. ಬರದವರನ್ನೂ ಬರುವಂತೆ ಮಾಡುವ ಇಂದಿನ ವೈದ್ಯಕೀಯ ನಡೆಗಳ ಬಗ್ಗೆ ಇದು ಅಂಕುಶ ತರಬಹುದೆ? ಇಂದು ನಡೆಯುತ್ತಿರುವ ರೋಗ ಬಿತ್ತನೆ ಕಾಯಕಕ್ಕೆ ಸೂಕ್ತ ಚಿಕಿತ್ಸೆ ಸಿಗಬಹುದೆ? ಯಾವುದೇ ಪರೀಕ್ಷೆಗೂ, ಚಿಕಿತ್ಸಾ ಕ್ರಮಕ್ಕೂ ಸೂಕ್ತ ಮಾರ್ಗದರ್ಶಿ ಸೂತ್ರಗಳ ಅಳವಡಿಕೆಬೇಕು. ಈ ದಿಸೆಯಲ್ಲಿ ಜಾಗೃತಿ ಬೇಕು.
ಆರೋಗ್ಯವನ್ನು ಕೊಳ್ಳಲು ಇಂದು ಎಲ್ಲರು ಓಡುತ್ತಿದ್ದಾರೆ. ವರ್ಷಕ್ಕೊಮ್ಮೆ ಬೇಕಿರಲಿ, ಇಲ್ಲದಿರಲಿ ಚೆಕ್’ಅಪ್’ಗಳು ನಡೆಯುತ್ತಿವೆ. ಆಯಾ ವೃತ್ತಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು, ಅವರ ಸಂಘಗಳು ಚೆಕ್’ಅಪ್ ಆಯೋಜಿಸುತ್ತಿವೆ. ಆಸ್ಪತ್ರೆಗಳೊಂದಿಗೆ ಟೈ ಅಪ್ ಆಗಿವೆ. ಅವುಗಳಿಗೆ ಪಬ್ಲಿಸಿಟಿ ಕೂಡ ಬಹಳ. ವಿವಿಧ ಸ್ಕೀಂಗಳಿವೆ, ಕಾರ್ಡುಗಳಿವೆ, ಇನ್ಸುರೆನ್ಸ್’ಗಳಿವೆ. ಅವರನ್ನು ಬರಮಾಡಿಕೊಂಡು, ಕಾಯುತ್ತಿರುವ ವ್ಯವಸ್ಥೆ ಇದೆ. ಒಂದು ಉದ್ಯಮದ ಎಲ್ಲ ಉದ್ಯೋಗಿಗಳಿಗೆ ಈ ಚೆಕ್’ಅಪ್’ಗಳಿಂದ ಆಗುವ ವೆಚ್ಚವೇನು? ಅವರ ಉದ್ಯಮಕ್ಕೆ ಸಂಬಂಧಿಸಿದ ಯಾವುದೇ ರೋಗಕ್ಕೆ ಟೆಸ್ಟ್ ನಡೆಯುತ್ತಿದೆಯೇ? ಅಥವಾ ಪೂರ್ವ ನಿರ್ಧರಿತ ಪರೀಕ್ಷೆಗಳು ಮಾತ್ರ ನಡೆದು, ಕೆಲವು ರೋಗಗಳ ಸರ್ಟಿಫಿಕೇಟ್ ಸಿಗುತ್ತಿದೆಯೇ? ಉದಾಹರಣೆಗೆ ಉದ್ಯೋಗಿ ಮಧುಮೇಹಿಯಾಗಿದ್ದಲ್ಲಿ, ಅದಕ್ಕೆ ಬೇಕಾದ ಪರೀಕ್ಷೆಗಳು ಅಲ್ಲಿರುವುದಿಲ್ಲವಲ್ಲ! ಹೆಚ್ಚಿನ ಸಂದರ್ಭಗಳಲ್ಲಿ ಟೆಸ್ಟ್ ಆದ ನಂತರ ವ್ಯಕ್ತಿ/ ರೋಗಿ, ವೈದ್ಯರನ್ನು ನೋಡುವುದು, ಮೊದಲು ಭೇಟಿ, ನಂತರ ಟೆಸ್ಟ್ ಅಲ್ಲ. ಆ ಫಲಿತಾಂಶಗಳಲ್ಲಿ ಸಿಗುವುದು, ಅವರವರ ಸ್ಪೆಷಾಲಿಟಿ ಹುಡುಕಾಟ- ಲಾಭ ಮಾತ್ರ.
ವೈದ್ಯಕೀಯ ತಂತ್ರಜ್ಞಾನ ಬೆಳೆಯುವುದು, ರೋಗಗಳ ಬಗೆಗಿನ ಹೊಸ ತಿಳುವಳಿಕೆಗಳು, ಚಿಕಿತ್ಸಾಕ್ರಮಗಳು ಖಂಡಿತ ಸ್ವಾಗತಾರ್ಹ, ಅವುಗಳ ಬಳಕೆ, ಯಾರಿಗೆ, ಎಷ್ಟು, ಯಾವಾಗ ಎಂದು, ಪರಿಶೀಲನೆ ಅವಶ್ಯಕ. ಈ ದಿಸೆಯಲ್ಲಿ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿಕೊಂಡು, ರೋಗಿಗೆ ಅಗತ್ಯ ಚಿಕಿತ್ಸೆಯ ಲಭ್ಯತೆಯ ಬಗ್ಗೆ ವಿಶ್ವಾಸ ಮೂಡಿಸುವ ಜವಾಬ್ದಾರಿ ಇಂದಿನ ಅಗತ್ಯ.
ವ್ಯಕ್ತಿ ತನಗಿರುವ ಆರೋಗ್ಯ ಸಮಸ್ಯೆಗಳು, ಕೌಟುಂಬಿಕ ಹಿನ್ನೆಲೆ ಇತ್ಯಾದಿ ವೈದ್ಯಕೀಯ ಮಾನದಂಡಗಳ ಮೇಲೆ ಪರೀಕ್ಷೆಗೊಳಪಡಬೇಕು. ಅವುಗಳ ಸಾಧಕ, ಬಾಧಕಗಳ ಅರಿವು ಹೊಂದಬೇಕು. ವೈದ್ಯರೊಡನೆ ಚರ್ಚಿಸಿ ಸೂಕ್ತ ಪರೀಕ್ಷೆಗಳನ್ನು ಮಾತ್ರ ನಡೆಸಬೇಕು, ನಂತರ ಸೂಕ್ತ ಚಿಕಿತ್ಸೆಯ ಪ್ರಶ್ನೆ. ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೇ, ಸೂಕ್ತ ವೈದ್ಯಕೀಯ ಸಲಹೆಯಿಲ್ಲದೆ ಆರೋಗ್ಯವಂತನ ಮೇಲೆ ನಡೆಯುವ ಎಲ್ಲ ರೀತಿಯ screening ಪ್ರೋಗ್ರಾಂಗಳು, ಮೆಡಿಕಲ್ ಹುಡುಕಾಟಗಳು ಆಧಾರ ರಹಿತ.
ಸಲಹಾ ವೈದ್ಯರು
ಶ್ರೀಲಕ್ಷ್ಮೀ ನರ್ಸಿಂಗ್ ಹೋಂ
ಶಿವಮೊಗ್ಗ
Get in Touch With Us info@kalpa.news Whatsapp: 9481252093
Discussion about this post