ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನನ್ನ ಫ್ರೆಂಡ್ ಮನೆಗೆ ಹೋದಾಗಲೆಲ್ಲ, ಅವರ ಪಕ್ಕದ ಮನೇಲಿ ವಾಸವಾಗಿರೋ ಅಜ್ಜಿ ಒಬ್ರು ಬಂದು ಮಾತಾಡಿಸ್ತಾ ಇರ್ತಾರೆ. ಮೊದ ಮೊದಲೆಲ್ಲ ನನಗೆ ಅವರ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ. ಇತ್ತೀಚೆಗೆ ತಿಂಗಳುಗಳ ನಂತರ ಹೋದಾಗ ನನ್ನ ಮಗ ಅವ್ರ ಹತ್ರ ತೊದಲು ತೊದಲಾಗಿ ತುಂಬಾ ಹೊತ್ತು ಮಾತಾಡ್ತಾ ಇದ್ದ. ಅವ್ರಿಗೂ ಅವನ ಜೊತೆ ಮಾತಾಡ್ತಾ ಇದ್ದಿದ್ದೇ ತುಂಬಾ ಖುಷಿ ಕೊಟ್ಟಿತ್ತು ಅನ್ನೊದು ಅವರ ಮುಖಭಾವದಲ್ಲೇ ಅರ್ಥ ಆಗ್ತಾ ಇತ್ತು. ಇವನು ಅವರ ಎದುರು ಮೆಟ್ಟಿಲ ಮೇಲೆ ಕೂತು ತಟ್ಟೇಲಿದ್ದ ಚಕ್ಕುಲಿ ತಿಂತಾ ಇದ್ರೆ, ಕಾಂಪೌಂಡ್ ಆಚೆ ಗೋಡೆ ಮೇಲೆ ಕೈ ಊರಿ ನಿಂತಿದ್ದ ಅಜ್ಜಿ ಅವನ ಮಾತನ್ನ ಆಲಿಸ್ತಾ, ತಾವೂ ಉತ್ತರಿಸುತ್ತಾ ಮಧ್ಯ ಮಧ್ಯ ಬೊಚ್ಚು ಬಾಯಿ ಅಗಲಿಸಿ ನಗ್ತಾ ಇರೋದನ್ನ ನೋಡಿ, ನನ್ನ ಫ್ರೆಂಡ್ ಅಜ್ಜಿ ಬಗ್ಗೆ ಹೇಳಿದ ಕೆಲ ವಿಚಾರಗಳನ್ನು ಕೇಳಿದ್ ಮೇಲೆ ಹಿರಿಯರ ವಿಚಾರದಲ್ಲಿ ಮನುಷ್ಯರ ಸ್ವಾರ್ಥ ಅಮಾನವೀಯತೆಯನ್ನು ನೆನೆದು ಕಣ್ಣು ತುಂಬಿ ಬಂದಿತ್ತು.
ಅವರು ಸಿರಿವಂತ ಪತಿಯ ಕೈ ಹಿಡಿದರೂ ಬದುಕಿನಲ್ಲಿ ಕಷ್ಟ ತಪ್ಪಲಿಲ್ಲ. ಗಂಡನ ಎರಡನೆಯ ಮದುವೆಯಿಂದಾಗಿ ಇವರಿಗೆ ಸಿಗಬೇಕಾಗಿದ್ದ ಸ್ಥಾನಮಾನ, ಆಸ್ತಿಯೂ ದಕ್ಕಲಿಲ್ಲ, ಗಂಡನ ಪ್ರೀತಿಯೂ ಮರೀಚಿಕೆಯಾಯಿತು. ಮಕ್ಕಳು ತಮ್ಮ ವಿಧ್ಯಾಭ್ಯಾಸ ಮುಗಿಸಿ ಮದುವೆಯಾದ ಮೇಲೆ, ಸೊಸೆಯಂದಿರ ಆಳ್ವಿಕೆಯಲ್ಲಿ ಮತ್ತೂ ಮೂಲೆಗುಂಪಾಗಿ ಬಿಟ್ಟರು ಇವರು. ಒಬ್ಬ ಮಗನ ಮನೆಯಲ್ಲಿ ಪುಣ್ಯಾತ್ಮಗಿತ್ತಿ ಸೊಸೆ ಅಡುಗೆ ಮನೆಗೆ ಹೋಗಬಾರದೆನ್ನುವ ಷರತ್ತನ್ನು ವಿಧಿಸೋದ್ರ ಜೊತೆಗೆ ಪರೋಕ್ಷವಾಗಿ ಅತ್ತೆಯ ಸ್ವಾತಂತ್ರ್ಯವನ್ನೇ ಕಿತ್ತುಕೊಂಡರೆ, ಮತ್ತೊಬ್ಬ ಸೊಸೆ ಯಾವಾಗಲೂ ತನ್ನ ಮನೆಯಲ್ಲೇ ಇರುವ ಅತ್ತೆಯ ವಿರುದ್ಧ ಬೇರೆ ಬೇರೆ ರೀತಿಯಲ್ಲಿ ಅಸಹಕಾರ ಚಳುವಳಿ ನಡೆಸುವುದಂತೆ. ಪಾಪ ಈ ಮಗನ ಮನೇಲಿ ಸ್ವಲ್ಪವಾದ್ರೂ ಸ್ವಾತಂತ್ರ್ಯ ಇದೆ ಅಂತ ಇಲ್ಲೇ ನೆಲೆಸಿರುವ ಅತ್ತೆಗೆ ತನ್ನ ಮೊಮ್ಮಗಳ ಜೊತೆ, ಹೆತ್ತ ಮಗನ ಜೊತೆ ಮಾತಾಡೋ ಅವಕಾಶ ಕೂಡ ಇಲ್ಲ. ಆ ಮೊಮ್ಮಗಳು ಮಾತ್ರ ಅಮ್ಮನ ಕಣ್ಣು ತಪ್ಪಿಸಿ ಅಜ್ಜಿಯನ್ನ ಮುದ್ದುಗರೆಯೋದು, ತಿನ್ನೋದಕ್ಕೆ ಏನಾದರೂ ತಂದು ಕೊಡೋದು, ಪ್ರೀತಿಸೋದು ಮಾಡಿದರೆ, ಕುಮಾರ ಕಂಠೀರವ ನಂತೂ ಹೆಂಡತಿಗೆ ಹೆದರಿ ಹೆತ್ತ ತಾಯಿಯ ಬಳಿ ಮಾತಾಡದೆ ಎಷ್ಟೋ ವರುಷಗಳೇ ಆಯ್ತಂತೆ.
ಅವನದ್ದು ಒಂದು ಅಸಹಾಯಕ ಜನ್ಮ ಅಂತ ಹೇಳೋದ ಅಥವಾ ಹೇಡಿತನ ಅಂತ ಹೇಳೋದ ಗೊತ್ತಿಲ್ಲ. ಆದರೆ ತಾನು ಹೆತ್ತ ಮಗನ ಬಳಿಯೇ ಮಾತಾಡಲು ಆಗದ, ಕುಟುಂಬದ ಜೊತೆಗಿದ್ದು ಒಂಟಿಯಾದ ಅಜ್ಜಿಯ ಮನಸ್ಥಿತಿ ಹೇಗಿದೆಯೋ ಗೊತ್ತಿಲ್ಲ. ದೇವರು ಅಂಥವರಿಗೆ ತುಂಬಾ ಗಟ್ಟಿ ಮನಸ್ಸು ಕೊಡ್ತಾನಂತೆ ಇಲ್ಲದೆ ಹೋದರೆ ಇಂತಹ ನೋವು ಒಂಟಿತನ ಸಹಿಸಿಕೊಂಡು ಲವಲವಿಕೆಯಿಂದ ನಗ್ತಾ ಬದುಕೋದು ತುಂಬಾ ಕಷ್ಟ. ಇನ್ನು ಈ ಅಜ್ಜಿ ತನ್ನ ಅಕ್ಕ ಪಕ್ಕದ ಮನೆಯವರಿಗೆಲ್ಲ ಪ್ರಿಯವಾದ ಅಜ್ಜಿ, ಎಲ್ಲರನ್ನು ಹೊರಗೆ ನಿಂತು ಕರೆದು ಮಾತಾಡಿಸ್ತಾರೆ, ನಗ್ತಾ ನಗ್ತಾ ಉತ್ಸಾಹದಿಂದಾನೆ ಮಾತಾಡ್ತಾರೆ. ಕರೆದು ಎಲ್ಲರ ಬಳಿ ಕಷ್ಟ ಹೇಳೋ ಜಾಯಮಾನದವರು ಅಲ್ಲ. ಇನ್ನು ಯಾರೂ ಮಾತಾಡೋಕೆ ಸಿಕ್ಕಿಲ್ಲ ಅಂದ್ರೆ ಸರಿ, ಟಿವಿ ಯಾದ್ರು ನೋಡೋಣ ಅಂದ್ರೆ ಪಾಪ ಟಿವಿ ಹಾಕೋಕೆ ಗೊತ್ತಿಲ್ಲ ಅಂತೆ ಅವ್ರಿಗೆ, ಅದಕ್ಕಾಗಿ ಅಕ್ಕ ಪಕ್ಕದ ಮನೆಯವರನ್ನು ಕರೆದು ಸೊಸೆ ಮನೇಲಿ ಇಲ್ಲದ ಹೊತ್ತಲ್ಲಿ ಟಿವಿ ಹಾಕಿ ಕೊಡೋಕೆ ಹೇಳ್ತಾರೆ. ಒಮ್ಮೆ ಈ ನನ್ನ ಜಾಣೆ ಫ್ರೆಂಡ್ ಏನ್ ಮಾಡಿದ್ದಾಳೆ ಅಂದ್ರೆ ರಿಮೋಟ್ ಅಲ್ಲಿ ಒಂದು ಫೇವರಿಟ್ ಚಾನೆಲ್’ನ ಅವ್ರಿಗೆ ಸೆಟ್ ಮಾಡಿಕೊಟ್ಟು ಅವ್ರೇ ಟಿವಿ ಹಾಕಿ ನೋಡೋ ಹಾಗೆ ಮಾಡಿಕೊಟ್ಟು ಬಂದಿದ್ದಾಳೆ. ಕೆಲವು ತಿಂಗಳು ಸೊಸೆಗೆ ಗೊತ್ತಿಲ್ಲದಷ್ಟು ದಿನಗಳ ಕಾಲ ಇದು ನಡೀತಂತೆ, ಆಮೇಲೆ ಈ ವಿಷಯ ಆ ಸೊಸೆ ರಾಣಿಗೆ ಗೊತ್ತಾದ ಮೇಲೆ ಟಿವಿಗೆ ರಿಚಾರ್ಜ್ ಮಾಡೋದನ್ನೇ ನಿಲ್ಲಿಸಿಬಿಟ್ಟಳಂತೆ ಆ ಮಹಾತಾಯಿ.
ಇದು ಅವರೊಬ್ಬರ ಕಥೆ ಅಲ್ಲ ನಮ್ಮ ನಿಮ್ಮ ಸುತ್ತ ಮುತ್ತ ಇರೋ ಅದೆಷ್ಟೋ ಅತ್ತೆ, ಮಾವ, ಅಜ್ಜ, ಅಜ್ಜಿ, ಅಮ್ಮ, ಅಪ್ಪ, ಗಂಡ, ಹೆಂಡತಿ ಯಾರ ಕಥೆ ಬೇಕಾದ್ರೂ ಆಗಿರಬಹುದು. ಇಂತದ್ದೆಲ್ಲಾ ನೋಡಿದಾಗ ಈ ಮಹಿಳಾ ದಿನಾಚರಣೆ, ಹಿರಿಯ ನಾಗರಿಕರ ದಿನಾಚರಣೆ ಅಥವಾ ಕೆಲವು ಅರ್ಥವಿಲ್ಲದ ದಿನಾಚರಣೆಗಳು ನಿಜವಾಗಿ ಬೇಕಾಗಿರೋದು ಯಾರಿಗೆ ಅನ್ನೋ ಪ್ರಶ್ನೆ ಮನದಲ್ಲಿ ಮೂಡುತ್ತೆ.
ಮಂಗಳೂರಿನ ಹಿರಿಯ ನಾಗರಿಕರ ಸಮಿತಿಯ ಮೇಲ್ವಿಚಾರಕರೊಬ್ಬರು ನಮ್ಮ ಸ್ಟುಡಿಯೋದಲ್ಲಿ ಇಂಟರ್’ವ್ಯೂನಲ್ಲಿ ಹಂಚಿಕೊಂಡ ಇನ್ನೊಂದು ಘಟನೆ ಕೇಳಿ, ಒಂದು ಮನೆಯಲ್ಲಿ ಅತ್ತೆ ಮಾವ ಇಬ್ಬರಿಗೂ ಸ್ನಾನಕ್ಕೆ ಬಿಸಿ ನೀರು ಕೊಡದೆ ಇರುವ ಸೂಪರ್ ಸೊಸೆ, ಒಮ್ಮೆ ಸೊಸೆ ಮನೆಯಲ್ಲಿ ಇಲ್ಲದೆ ಇದ್ದಾಗ ಸ್ಟವ್ ಅಲ್ಲಿ ನೀರು ಕಾಯಿಸಿ ಇಟ್ಟಿದ್ದಕ್ಕೆ ಅದನ್ನು ಮನೆಗೆ ಬಂದು ನೋಡಿದ ಸೊಸೆ, ಅದೇ ಬಿಸಿ ಬಿಸಿ ನೀರನ್ನು ಅತ್ತೆಯ ಕೈ ಮೇಲೆ ಸುರಿದು, ಇನ್ಯಾವತ್ತಾದ್ರು ನೀರು ಕಾಯಿಸ್ತೀರಾ ಅಂತ ಹೇಳಿ ಹಿಂಸೆ ಕೊಟ್ಟಿದ್ದಂತೆ. ಅವರ ಎರಡೂ ಕೈ ತುಂಬಾ ಬೊಬ್ಬೆ, ಅಕ್ಕ ಪಕ್ಕದವರ ಮೂಲಕ ಹಿರಿಯ ನಾಗರಿಕರ ರಕ್ಷಣಾ ಸಮಿತಿಯವರಿಗೆ ತಿಳಿದು ಅವರೇ ಡಾಕ್ಟರ್ ಹತ್ರ ಕರೆದುಕೊಂಡು ಹೋಗಿ ಟ್ರೀಟ್ಮೆಂಟ್ ಕೊಡಿಸಿದ ಘಟನೆ ಬಗ್ಗೆ ಕೇಳುವಾಗ ಕೂಡ ತುಂಬಾ ಬೇಜಾರಾಗಿತ್ತು. ಆ ವೃದ್ಧ ಜೀವ ಆ ನೋವನ್ನು ಹೇಗೆ ಸಹಿಸ್ಕೊಂಡಿರಬಹುದು ಅದನ್ನು ಊಹಿಸಲೂ ಸಾಧ್ಯವಿಲ್ಲ.
ಇನ್ನು ಶಾಲೆಯಿಂದ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯಿನಿ ಒಬ್ಬರು ತಮ್ಮ ಮೊಮ್ಮಗಳ ಹತ್ತಿರ ಮಾತಾಡೋದಕ್ಕೂ ಆಗದ ಪರಿಸ್ಥಿತಿಯಲ್ಲಿ ಒಂದೇ ಮನೆಯಲ್ಲಿ ಒಂಟಿ ಜೀವನ ನಡೆಸ್ತಾ ಇರೋದು, ಅಜ್ಜಿ ಹತ್ತಿರ ಹೋಗ್ಬಾರ್ದು, ಮಾತಾಡಬಾರ್ದು ಅಂತ ಆ ಮಕ್ಕಳನ್ನು ಅವರಿಂದ ದೂರ ಇಟ್ಟಿದ್ದಾರಂತೆ ಅವರ ತಾಯಿ. ತನ್ನ ವೃತ್ತಿ ಜೀವನದ ಉದ್ದಕ್ಕೂ ಅದೆಷ್ಟೋ ಜನರ ಭವಿಷ್ಯ ರೂಪಿಸಿದ ಆ ಶಿಕ್ಷಕಿಗೆ, ಅವರ ಜೊತೆ ಸೇರಿ ಮಕ್ಕಳು ಕೆಟ್ಟು ಹೋಗ್ತಾರೇ, ಶಿಸ್ತು ಕಲಿಯಲ್ಲ, ಅಸಹ್ಯ ಅನ್ನೋ ಕಾರಣಕ್ಕೆ ನಿರ್ಬಂಧ ಅಂತೆ.
ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ಸರಕಾರ ಎಷ್ಟೇ ಪ್ರಯತ್ನ ಮಾಡಿದರೂ ಕೂಡ ನಿಜವಾಗಲೂ ಬದಲಾಗಬೇಕಿರೋದು ಜನರೇ ವಿನಃ ಬೇರೇನೂ ಅಲ್ಲ.
ಇದನ್ನೆಲ್ಲಾ ಬರೆಯೋದಕ್ಕೆ ಕಾರಣ ನಾವು ನೀವು ಎಲ್ಲವನ್ನು ಬದಲಾವಣೆ ಮಾಡೋಕಾಗುತ್ತೆ ಅಂತಲ್ಲ. ಆದರೆ ನಮ್ಮ ನಿಮ್ಮ ಸುತ್ತ ಮುತ್ತ ಇರೋ ಇಂತಹ ಅಸಹಾಯಕ ಹಿರಿಯ ಜೀವಗಳಿಗೆ ಸಾಧ್ಯವಾದರೆ ನಮ್ಮಿಂದಾದ ಸಾಥ್ ಕೊಡೋಣ ಅನ್ನೋದಕ್ಕಷ್ಟೇ. ಅವರಿಗೆ ಬೇಕಾದ ವಸ್ತುಗಳನ್ನು ತಂದುಕೊಡೋದು, ಅವರ ಜೊತೆ ಹರಟೋದು, ಕುಟುಂಬದ ಎಲ್ಲರೂ ಒಟ್ಟಿಗೆ ಇರುವಾಗ ಅವರನ್ನು ಕೂಡ ಕರೆದು ಒಟ್ಟಿಗೆ ಕೂರಿಸ್ಕೊಳ್ಳೋದು ಅಥವಾ ಅವರಿದ್ದಲ್ಲಿಗೆ ಹೋಗಿ ಮಾತಾಡೋದು, ಮನೆಯ ಪ್ರತಿ ಬದಲಾವಣೆ ಸದಸ್ಯರ ವಿಚಾರಗಳನ್ನು ಅವರಿಗೂ ತಿಳಿಸೋದು, ನಮ್ಮ ಮಕ್ಕಳನ್ನು ಅವರ ಜೊತೆ ಜಾಸ್ತಿ ಬೆರೆಯಲು ಬಿಡೋದು ಇದೆಲ್ಲ ನಮ್ಮ ಅಮ್ಮ ಅಪ್ಪ ಮಾಡ್ತಾ ಇದ್ದದ್ದು ಈಗ ನಾವು ನೀವು ಮಾಡಬೇಕಾಗಿರೋದು. ಹಾಗೆ ಹಿರಿಯ ಜೀವಗಳ ಸೇವೆಯನ್ನು ತುಂಬಾ ಪ್ರೀತಿಯಿಂದ ನಿಷ್ಠೆಯಿಂದ ಬೇಸರಿಸಿಕೊಳ್ಳದೆ ಮಾಡೋರು ಅವರನ್ನು ಪ್ರೀತಿಯಿಂದ ನೋಡ್ಕೊಂಡು ಅವರ ಬೇಕು ಬೇಡಗಳನ್ನು ವಿಚಾರಿಸ್ಕೊಳ್ಳೋರು ನಮ್ಮ ನಿಮ್ಮ ನಡುವೆ ಬಹಳಷ್ಟು ಜನ ಇದ್ದಾರೆ. ಅವರಲ್ಲಿ ನೀವು ಕೂಡ ಒಬ್ಬರಾಗಿರಬಹುದು. ನಿಮ್ಮ ಒಳ್ಳೆತನ ಒಂದಿಷ್ಟು ಜನರಿಗೆ ಕೂಡ ಮಾದರಿಯಾಗಲಿ ಅನ್ನುವ ಆಶಯ ಕೂಡ ಇದೆ.
ಹಿರಿಯ ಜೀವಗಳ ನೋವು ನನ್ನನ್ನ ತುಂಬಾ ಕಾಡೋದಕ್ಕೆ ಕಾರಣ, ಆಗೆಲ್ಲ ನೆನಪಾಗೋ ನನ್ನಜ್ಜಿ ಅಮ್ಮನಿಗಿಂತ ಒಂದು ಪಟ್ಟು ಜಾಸ್ತಿ ಪ್ರೀತಿ ಅಕ್ಕರೆಯಿಂದ ನೋಡಿಕೊಳ್ತಾ ಇದ್ದ, ನನ್ನ ಅಜ್ಜಿ. ಅವರಿಗೀಗ ಎಂಭತ್ತರ ಹರೆಯ ಅವರನ್ನ ನಾನು ಚಿಕ್ಕ ವಯಸ್ಸಿನಿಂದ ಅಮ್ಮ ಅಂತಾನೆ ಕರೆಯೋದು, ಕೆಲವೊಮ್ಮೆ ನನ್ನಮ್ಮ ಅಂತ ಕರೆದ್ರೆ ತುಂಬಾ ಪ್ರೀತಿ ಉಕ್ಕುವಾಗ ಬಂಗಾರಿ, ಮುದ್ದು ಗೊಂಬೆ, ಅಂತೆಲ್ಲ ತಮಾಷೆಯಾಗಿ ಕರೆಯೋದು ಇದೆ. ಅವ್ಳು ನಂಗೆ ನನ್ನ ಬಾಲ್ಯದಲ್ಲೂ ರೋಲ್ ಮಾಡೆಲ್ ಇವತ್ತು ಕೂಡ ರೋಲ್ ಮಾಡೆಲ್, ಊರಿಗೆ ಹೋದಾಗ ಅವಳ ಜೊತೆ ಸೀರಿಯಲ್ ನೋಡ್ತೇನೆ, ಮಾತಾಡ್ತೇನೆ ನನ್ನ ಪ್ರತೀ ಇವೆಂಟ್ ಹಾಗೆ ನನಗೆ ಆಗೋ ಒಳ್ಳೆ ಅನುಭವಗಳನ್ನು, ಅವಳ ಜೊತೆ ಹಂಚ್ಕೋತೇನೆ, ದಿನ ತಪ್ಪಿದ್ರೆ ಎರಡು ದಿನಕ್ಕೊಮ್ಮೆ ಊರಲ್ಲಿದ್ದಾಗ ಕರೆ ಮಾಡಿ ಮಾತಾಡ್ತೇನೆ. ಅವಳಿಗೂ ಬೇಕಿರೋದು ಅಷ್ಟೇ. ಪ್ರತೀ ಶನಿವಾರ ಹತ್ತಿರ ಬರುವಾಗ ಊರಿಗ್ ಬತ್ತೆ ಅಲ್ದಾ ಮಗ ಅಂತಾ ಕೇಳ್ತಾಳೆ. ಅವಳಿಗೋಸ್ಕರ, ಸಮಯ ಮಾಡ್ಕೊಂಡು ಹೋಗಿ ಬರ್ತೇನೆ. ಅವಳಿಗೆ ಯಕ್ಷಗಾನ ಅಂದ್ರೆ ಇಷ್ಟ. ಮೊಬೈಲ್’ನಲ್ಲಿ ಅದನ್ನು ಹಾಕಿ ಕೊಡ್ತೇನೆ. ಆಗೆಲ್ಲ ಅವಳ ತನ್ಮಯತೆ ನೋಡೋದೇ ಒಂದು ಖುಷಿ.
ಒಮ್ಮೊಮ್ಮೆ ನಾವು ನಮ್ಮ ಮನೆಯ ಹಿರಿಯ ಜೀವಗಳಿಗೆ ನಮ್ಮ ಕೆಲಸದ ಒತ್ತಡ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ, ಅವರಿಗೆ ಅಗತ್ಯವಾದದ್ದೆಲ್ಲ ಕೊಟ್ಟು ಸಮಯ ಕೊಡೋದನ್ನೇ ಮರೆತು ಬಿಟ್ಟಿರ್ತೇವೆ.
ಕೆಲವರು ಸ್ವಲ್ಪ ವಯಸ್ಸಾದ್ರೆ ಸಾಕು ನಿಂಗೇನು ಗೊತ್ತಾಗಲ್ಲ ಸುಮ್ನೆ ಇರು ಅಂತಾ ಹೇಳೋದು ಹಾಗೆ ಅವರೇನೇನೋ ಮಾತಾಡ್ತಾರೆ ಅನ್ನೋ ಕಾರಣಕ್ಕೆ ಬೇರೆಯವರ ಜೊತೆ ಮಾತಾಡೋದಕ್ಕೂ ಬಿಡಲ್ಲ. ಆದರೆ ಅದು ಕೂಡ ಅವರನ್ನು ಬೇಸರಕ್ಕೆ ಗುರಿ ಮಾಡೋ ವಿಚಾರ, ಅವರನ್ನು ಮುಕ್ತವಾಗಿ ಬಿಡೋದು ಕೂಡ ಒಂದೊಳ್ಳೆ ಗುಣ, ತುಂಬಾ ಭಯ ಇದ್ರೆ ಮೊದಲೇ ಅವರ ಮಾತುಗಳ ಬಗ್ಗೆ ತುಂಬಾ ಗಂಭೀರವಾಗಿ ತೆಗೆದುಕೊಳ್ಳದಂತೆ ಒಮ್ಮೆ ಅಕ್ಕಪಕ್ಕದವರಿಗೆ ಹೇಳುವ ಕೆಲಸ ಕೂಡ ಮಾಡಬಹುದು. ಆದ್ರೆ ಮಾತೇ ಆಡದಂತೆ ಮಾಡೋದು ಕೂಡ ಮಾನಸಿಕ ಹಿಂಸೆನೇ ಆಗ್ಬಿಡುತ್ತೆ.
ನಮ್ಮ ಜೊತೆ ಮಾತಿಗಾಗಿ ಹಂಬಲಿಸ್ತಾ ಇರೋ ಅವರಿಗೆ ನಾವು ಕೊಡುವ ಐಷಾರಾಮಿ ವಸ್ತುಗಳು ಆ ಪ್ರೀತಿ ಅಕ್ಕರೆಯ ಮಾತಿನ ಮುಂದೆ ಗೌಣವಾಗಿರುತ್ತೆ. ದಿನಾ ಒಟ್ಟಿಗೆ ಇರೋರು ಸ್ವಲ್ಪ ಹೊತ್ತು ಆ ಹಿರಿಯ ಜೀವಗಳ ಜೊತೆ ಕೂತು ಮಾತಾಡಿದ್ರೆ, ಅವರ ಕಷ್ಟ, ನೋವು, ಮನದಾಳದ ಮಾತುಗಳನ್ನು ಗಮನವಿಟ್ಟು ಕೇಳಿದರೆ, ಅವರಿಗದು ದೊಡ್ಡ ಉಡುಗೊರೆ ಕೊಟ್ಟ ಹಾಗೆ. ಇನ್ನು ಮನೆಯಿಂದ ದೂರ ಇರೋರು ಟೀ ಬ್ರೇಕ್ ಕಾಫಿ ಬ್ರೇಕ್, ಬಸ್ ಅಥವಾ ಆಟೋದಲ್ಲಿ ಪ್ರಯಾಣ ಮಾಡೋ ಟೈಂ ಅಲ್ಲಿ ಆದರೂ ಸರಿ ಒಂದು ಕರೆ ಮಾಡಿ ಎರಡು ನಿಮಿಷ ಮಾತಾಡಿದ್ರೆ ಸಾಕು ಅವರಿಗೆ ಸ್ವರ್ಗ ಸಿಕ್ಕ ಹಾಗೆ…
ಬದಲಾವಣೆ ನಮ್ಮಿಂದಲೇ ಆರಂಭವಾಗಲಿ ಅಲ್ಲವೇ?
Get in Touch With Us info@kalpa.news Whatsapp: 9481252093
Discussion about this post