ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಮೈತ್ರೇಯಿ ಆದಿತ್ಯಪ್ರಸಾದ್ |
ಶರಣರ ಸಾವನ್ನು ಮರಣದಲ್ಲಿ ಕಾಣು ಎಂಬ ಮಾತು ಮತ್ತೆ ನೆನಪಾದದ್ದು ನಂದನ್ ಅವರ ಅಂತಿಮ ದರ್ಶನ ಮಾಡಿದಾಗ… ಏಕೆಂದರೆ ಅವರ ಆ ಮುಖ ಸಾವನ್ನೇ ಸಂತೋಷದಿಂದ ಒಪ್ಪಿಕೊಂಡಂತಿತ್ತು. ಅದೃಷ್ಟವೋ ದುರದೃಷ್ಟವೋ ಅಂದೇ ಬೆಳಗ್ಗೆ ಕುಂಸಿಯ ರಾಷ್ಟೀಯ ಪ್ರೌಢಶಾಲೆಯಲ್ಲಿ ಬೆಳಗ್ಗೆ ಸನ್ಮಾನ ಕೂಡ ಅವರಿಗೆ ಆಗಿತ್ತು. ಅಂದಿನ ದಿನ ರಾತ್ರಿಯೇ ಅವರು ಇಹಲೋಕ ತ್ಯಜಿಸಿದ್ದರು. ಅವರ ಕುರಿತಾಗಿ ಹೇಳುವುದಾದರೆ ಜೊತೆಗಿದ್ದವರು ಹಾಗೇ ಎದ್ದು ಹೋದಂತೆ ಅನ್ನಿಸಿದಂತೂ ಸತ್ಯ. ಆದರೂ ಆಪ್ತರ ಅಗಲಿಕೆಯ ಯಾತನೆ ಸಹಿಸಲಾಧ್ಯ. ಅವರೆಂದರೆ… ನನಗೆ ಈ ಶ್ಲೋಕ ನೆನಪಾಗುತ್ತದೆ.
ಪರೋಪಕಾರಾಯ ಫಲಂತಿ ವೃಕ್ಷಃ
ಪರೋಪಕಾರಾಯ ವಹಂತಿ ನದ್ಯಃ l
ಪರೋಪಕಾರಾಯ ದುಹಂತಿ ಗಾವಃ
ಪರೋಪಕಾರಾರ್ಥಂ ಇದಂ ಶರೀರಮ್ ll ಎಂಬ
ಸುಭಾಷಿತವು ಪರೋಪಕಾರಿಗಳ ಕುರಿತಾಗಿ ಹೇಳುವಾಗ ಮರಗಳು ಸಿಹಿಯಾದ ಹಣ್ಣುಗಳನ್ನು ಕೊಡುತ್ತವೆ ಆದರೆ ತಾನೇ ಅದನ್ನು ತಿನ್ನುವುದಿಲ್ಲ, ನದಿಗಳು ಹರಿಯುತ್ತವೆ ನೀರನ್ನು ತಾನೇ ಸೇವಿಸುವುದಿಲ್ಲ, ಹಸು ಅಮೃತದಂತಹ ಹಾಲನ್ನು ಕೊಡುತ್ತದೆ ಆದರೆ ಅದನ್ನು ಪೂರ್ಣ ತಾನೇ ಸೇವಿಸುವುದಿಲ್ಲ. ಹೀಗೆ ಪರೋಪಕಾರಿಗಳು ತಮ್ಮ ಬಳಿ ಇರುವುದು ತಮಗಾಗಿ ಮಾತ್ರ ಅಲ್ಲ ಇತರರಿಗಾಗಿ ಹೆಚ್ಚು ಎನ್ನುವಂತಹ ಸ್ವಭಾವಾದವರು ಶಿವಮೊಗ್ಗ ನಂದನ್ #ShivamoggaNandan ಅವರು. ಅವರಿಂದಾಗಿ ಈ ಊರಿಗೂ ಹೆಸರು ಬಂದಿತ್ತು.
Also Read>> ಫೆ.11-16 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ರೈಲು ಕುರಿತಾಗಿ ಲೇಟೆಸ್ಟ್ ಅಪ್ಡೇಟ್
ನಾನು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಸಂಪರ್ಕಕ್ಕೆ ಬಂದದ್ದು 2004ರಲ್ಲಿ. ಆಗಿನಿಂದಲೂ ಸಂಸ್ಕೃತೋತ್ಸವದ ಭಾಷಣ ಸ್ಪರ್ಧೆಗೆ ಛಾಯಾಗ್ರಾಹಕರಾಗಿ #Photographer ಆಗಮಿಸುತ್ತಿದ್ದುದು ಶಿವಮೊಗ್ಗ ನಂದನ್ ಅವರು. ಅವರನ್ನು ಮೊದಲು ನೋಡಿದಾಗ ಎಷ್ಟೊಂದು ಸರಳ ವ್ಯಕ್ತಿ ಎಂದು ಆಶ್ಚರ್ಯವೆನಿಸುತ್ತಿತ್ತು. ಏಕೆಂದರೆ ಶಿವಮೊಗ್ಗ ನಂದನ್ ಎಂದರೆ ಆ ವೇಳೆಗಾಗಲೇ ಫೋಟೋಗ್ರಫಿಯಲ್ಲಿ ತನ್ನ ಛಾಪು ಮೂಡಿಸಿದ ವ್ಯಕ್ತಿಯಾಗಿದ್ದರು. ಒಳ್ಳೆಯ ಹೆಸರು ಮಾಡಿದ್ದರು ಒಂದಿನಿತೂ ಗರ್ವವಿರದ ವ್ಯಕ್ತಿಯಾಗಿದ್ದರು.
ನನ್ನ ರೂಮ್ ಮೇಟ್ ಸವಿತಾ ಎಂಬುವವಳು ಕಾನೂನು ಪದವಿ ಓದುತ್ತಿದ್ದಳು. ಅವಳ ಗೆಳತಿಯ ಫೋಟೋಗಳನ್ನು ಅದ್ಭುತವಾಗಿ ತೆಗೆದಿದ್ದನ್ನು ನಾನು ಮೊದಲೇ ನೋಡಿದ್ದೆ, ಆಗಲೇ ಅವರ ಕುರಿತಾಗಿ ಸ್ವಲ್ಪ ತಿಳಿದಿದ್ದೆ. ಆದರೆ ಮೊದಲು ನೋಡಿದ್ದು ಮಾತ್ರ ಸಂಸ್ಕೃತೋತ್ಸವದ ಭಾಷಣ ಸ್ಪರ್ಧೆಯಲ್ಲಿಯೇ. ಹೀಗೆ ಆರಂಭವಾದ ಪರಿಚಯ ಮತ್ತೂ ಪರಿಚಿತರಾದದ್ದು ನನ್ನ ಮನೆಯವರಿಂದ. ಏಕೆಂದರೆ ಅವರದ್ದೂ ಫೋಟೋಗ್ರಫಿ ಫೀಲ್ಡೇ ಆಗಿದ್ದರಿಂದ ಈರ್ವರೂ ಸ್ನೇಹಿತರಾಗಿದ್ದರು. ಅಲ್ಲದೇ ಇಬ್ಬರದೂ ಪತ್ರಿಕೋದ್ಯಮವೇ #Journalism ಆಗಿದ್ದರಿಂದ ಅವರು ಮತ್ತಷ್ಟು ಹೆಚ್ಚು ಆಪ್ತರಾಗಿದ್ದರು.
ಆ ಕಾರಣಕ್ಕಾಗಿಯೇ ನನ್ನ ಮಗನ ಮೊದಲ ಕೃಷ್ಣವೇಶದ ಫೋಟೋ ತೆಗೆದು ಕೊಟ್ಟಿದ್ದರು. ಅದಂತೂ ಎಲ್ಲವೂ ಅದ್ಭುತವಾದ ಫೋಟೋಗಳಾಗಿದ್ದವು. ಅದರಲ್ಲಿ ಒಂದು ಫೋಟೋ ಕನ್ನಡಪ್ರಭ ವಿಶೇಷಾಂಕದಲ್ಲಿಯೂ ಪ್ರಕಟಗೊಂಡಿತ್ತು. ತುಂಬಾ ಸ್ಮರಣೀಯವಾದ ಫೋಟೋಗಳಿಗೆ ಅಂದು ಸಾಕ್ಷಿಯಾಗಿತ್ತು. ಅವತ್ತು ತೆಗೆದ ಎಲ್ಲಾ ಫೋಟೋಗಳು ವಿಭಿನ್ನವಾಗಿತ್ತು. ಸ್ನೇಹಿತರಾಗಿದ್ದರಿಂದ ಮನೆಯವರ ಆಫೀಸ್ ಆದ ಹೊಸದಿಗಂತದಲ್ಲಿ ಹೋಗಿ ಒಂದಷ್ಟು ಅದ್ಭುತ ಎನಿಸುವ ಫೋಟೋಗಳನ್ನೂ ತೆಗೆದಿದ್ದರು.
ಆಗಾಗ ಎಲ್ಲೋ ಸಿಗುತ್ತಿದ್ದರು, ಖುಷಿಯಿಂದ ಮಾತಾಡಿಕೊಂಡು ಹೋಗುತ್ತಾ ಇದ್ದರು. ನನಗೇನೋ ಒಂಥರಾ ಹೆಮ್ಮೆ. ಎಲ್ಲರಿಗೂ ಚಿರಪರಿಚಿತರಾದ ನಂದನ್ ಅವರಿಗೇ ನಾವು ಪರಿಚಿತರು ಎಂದು. ಒಮ್ಮೆಯಂತೂ ಮಗನಿನ್ನು ಸಣ್ಣವನಿದ್ದಾಗ ವನ್ಯಜೀವಿ ಸಪ್ತಾಹ ಸಕ್ರೆಬೈಲಿನಲ್ಲಿ ನಡೆದಿತ್ತು. ಆ ಸಮಾರೋಪದ ಕಾರ್ಯಕ್ರಮಕ್ಕೆ ಮಗ ಮತ್ತು ಮನೆಯವರು ಹೋಗಿದ್ದರು. ಅಲ್ಲಿ ಮಗನೇ ಅವರ ಫೋಟೋ ತೆಗೆದು ಅವರಿಗೆ ತೋರಿಸ್ತಾ ಇರೋ ಫೋಟೋ ಅಂತೂ ಸೂರ್ಯಂಗೆ ಟಾರ್ಚಾ ಅನ್ನೋ ರೀತಿಯಲ್ಲಿ ಇತ್ತು.2020ರ ವೇಳೆಗೆ ಕರೋನಾ ಎಂಬ ಹೆಮ್ಮಾರಿ ಜಗತ್ತಿಗೆ ಕಾಲಿಟ್ಟಾಗ ನಮ್ಮ ಕುಟುಂಬಕ್ಕೆ ಮತ್ತಷ್ಟು ಹತ್ತಿರವಾದರು. ಆಗ ಅವರ ಕುರಿತು ಅನೇಕ ಅಚ್ಚರಿ ಎನಿಸುವ ಸಂಗತಿಗಳು ತಿಳಿಯುತ್ತಾ ಹೋದವು. ಲಾಕ್ಡೌನ್ ಸಂದರ್ಭದಲ್ಲಿ ಅವರು ಅದೆಷ್ಟು ಕುಟುಂಬಗಳಿಗೆ ಸಹಕಾರ ಮಾಡಿದ್ದಾರೋ ಲೆಕ್ಕವಿಲ್ಲ. ಕರೋನ ಪೀಡಿತರ ಮನೆಗಳಿಗೆ ಹೋಗಿ ಅವರಿಗೆ ಅಗತ್ಯವಾದ ಔಷಧಿ, ರೇಷನ್ ಇತ್ಯಾದಿಗಳನ್ನು ಕೊಡುವುದು, ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವುದು, ಯಾವ ಕುಟುಂಬದಲ್ಲಾದರೂ ಸಾವಾದರೆ ಅವರ ಅಂತ್ಯಸಂಸ್ಕಾರಕ್ಕೆ ಹೋಗುವುದು, ಹಣ್ಣು ಹಂಚುವುದು, ಅಗತ್ಯ ಆಹಾರ ಪೂರೈಕೆ, ಪ್ರತಿನಿತ್ಯ ಅವರ ಉಭಯ ಕುಶಲೋಪರಿ ವಿಚಾರಿಸುವುದು. ಇಂತಹ ಲೆಕ್ಕವಿಲ್ಲದಷ್ಟು ಸಹಾಯಗಳನ್ನು ಮಾಡಿದ್ದಾರೆ. ಹಾಗಂತ ಅದನ್ನೆಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಇತರರು ಹೇಳಿದಾಗಲೇ ನಮಗೂ ತಿಳಿಯುತ್ತಿತ್ತು. ಕಷ್ಟ ಎಂದು ಯಾರೇ ಹೇಳಲಿ ಅವರ ಸಹಾಯಕ್ಕೆ ನಿಲ್ಲುವ ಮೊದಲ ವ್ಯಕ್ತಿ ನಂದನ್ ಜಿ ಎಂದರೆ ತಪ್ಪಾಗಲಾರದು. ಇದು ಅವರ ಬಾಲ್ಯದಲ್ಲಿನ ಬಡತನವೋ ಅಥವಾ ಆಗಿನಿಂದಲೂ ಕಂಡ ಜೀವನಪಾಠವಾಗಿರಬಹುದು ಎಂದು ಈಗ ಅನ್ನಿಸುತ್ತಿದೆ.
ಅನೇಕರ ಮನೆಯ ಎಲ್ಲಾ ಇವೆಂಟ್ಗಳ ಫೋಟೋಗಳನ್ನು ತೆಗೆದು ಮನೆಯವರೆಲ್ಲರೂ ಚಿರಪರಿಚಿತರಾಗಿ ಆ ಮನೆಯ ಸದಸ್ಯರಲ್ಲಿ ಒಬ್ಬರಾಗಿ ಬಿಡುತ್ತಿದ್ದರು. ಅವರ ಎಲ್ಲ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಒಡನಾಡಿಯಾಗುತ್ತಿದ್ದರು. ಒಮ್ಮೆ ನಮಗೆ ಕೊರೋನಾ ಸಂದರ್ಭದಲ್ಲಿ ಇಬ್ಬರಿಗೂ ಸಂಬಳವಿಲ್ಲ ಮುಂದೇನು ಮಾಡಬೇಕೆಂಬುದೇ ತಿಳಿಯುತ್ತಿಲ್ಲ ಎಂದು ನಾನು ನೊಂದಾಗ, ನಾವಿರುವಾಗ ನೀವು ಯಾವುದಕ್ಕೂ ಚಿಂತೆ ಮಾಡಬೇಡಿ, ನಾವಿದ್ದೇವೆ ಧೈರ್ಯವಾಗಿರಿ ಎಂದು ಸಾಂತ್ವನದ ಮಾತನ್ನಾಡಿ ಬದುಕಿಗೆ ಧೈರ್ಯ ತುಂಬಿದ್ದರು.
ನಮ್ಮ ಮನೆಯ ಗೃಹಪ್ರವೇಶದ, ನನ್ನ ಪುಸ್ತಕ ಬಿಡುಗಡೆಯ ಎಲ್ಲ ಸುಂದರ ಕ್ಷಣಗಳನ್ನು ಅವರು ಜೀವಂತವಾಗಿರಿಸಿದ್ದಾರೆ.
ಸದ್ಗುಣಗಳ ಗಣಿಯಾದವರು ಇನ್ನಷ್ಟು ನಮ್ಮೊಂದಿಗೆ ಇರಬೇಕಿತ್ತು. ಸಾಧಿಸಿದ್ದು ಇನ್ನೂ ಕಡಿಮೆ, ಅದ್ಭುತವಾದದ್ದು ಸಾಧಿಸುವ ತುಡಿತ ಇಟ್ಟುಕೊಂಡಿದ್ದ ಜೀವ ಅದು. ಯಾರೇ ಆಗಲಿ ತ್ರಾಹಿ ಅಂದವರಿಗೆ ತನ್ನ ನೆರವಿನ ಹಸ್ತ ಚಾಚದೇ ಇರುತ್ತಿರಲಿಲ್ಲ. ಸರಳ, ಸಹೃದಯ,ಪ್ರಾಣಿ ಪ್ರೇಮಿ, ಪರಿಸರ ಪ್ರೇಮಿ, ಸಜ್ಜನ, ಹಠವಾದಿ ಹಾಗೂ ನಿಷ್ಟುರವಾದಿ ( ಆದರದು ವಿಷಯದ ವಾಸ್ತವತೆಗಷ್ಟೆ ಮೀಸಲು) ಇದರ ಹೊರತಾಗಿಯೂ ಸಂಬಂಧಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದ ವ್ಯಕ್ತಿ.
ಕಂಟೆಂಟ್ ಬೇಸ್ ಫೋಟೋಗಳನ್ನೇ ಹೆಚ್ಚು ತೆಗೆಯುತ್ತಿದ್ದರು. ಪರಿಸರ ಪ್ರೇಮಿ, ಮರ ಗಿಡ ಪ್ರಾಣಿ ಪಕ್ಷಿಗಳೆಂದರೆ ಪ್ರಾಣ, ಮಗಳೆಂದರೆ ಪ್ರೀತಿ, ಮಗನೆಂದರೆ ಹೆಮ್ಮೆ. ತನ್ನ ಜೀವನದಲ್ಲಿ ಹೆಚ್ಚು ಗೌರವ ಪ್ರೀತಿ ತೋರಿಸ್ತಾ ಇದ್ದಿದ್ದು ತಾಯಿಗೆ, ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದು ತಾಯಿಯನ್ನೇ.ನೋವು ಎನ್ನುವುದು ಆರೋಗ್ಯವೂ ಸೇರಿದಂತೆ ಎಲ್ಲದರಲ್ಲೂ ತಿಂದದ್ದು ಸ್ವಲ್ಪ ಹೆಚ್ಚೇ ಆದರೂ ಸದಾ ನಗುಮುಖ. ಅವರ ಸ್ವಭಾವ ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ ಎಂಬಂತೆ. ನಂದನ್ ಅವರಿಗೆ ಅನೇಕ ಸನ್ಮಾನ ಪುರಸ್ಕಾರಗಳು ಬಂದರೂ ಎಂದಿಗೂ ಬೀಗದ ವ್ಯಕ್ತಿ. ಅವರಿಗೆ ಅಂತ ಗೌರವಿಸಿದ್ದನ್ನು ಅದೇ ವೇದಿಕೆಯಲ್ಲಿ ಅವರ ಶಿಕ್ಷಕಿಗೆ ಸಮರ್ಪಿಸಿದ ನಿಷ್ಠಾವಂತ ಶಿಷ್ಯ. ಹೀಗೆ ಹೇಳ್ತಾ ಹೋದರೆ ಅದು ಮುಗಿಯದ ಕಥೆ.
ಹೃದಯಾಘಾತದಿಂದ ಅವರಿಲ್ಲ ಎಂದು ಕೇಳಿದಾಗಿನಿಂದ, ಸೂತಕದ ಮನೆಯಾದ ಸುದ್ದಿಮನೆ ಎಂಬ ಮುರಳಿಧರ್ ಅವರ ಸಾಲುಗಳು, ಸಾವಿಗೆ ಸಾವು ಬರಬಾರದೇಕೆ ಎಂಬ ರವಿ ಟೆಲೆಕ್ಸ್ ಅವರ ಮಾತುಗಳು ಮತ್ತಷ್ಟು ಹೃದಯವನ್ನು ಆರ್ದ್ರಗೊಳಿಸಿದೆ. ಅವರ ಕುರಿತಾಗಿ ಇತರರು ಫೇಸ್ಬುಕ್ ವಾಟ್ಸಾಪ್ ಗಳಲ್ಲಿ ಬರೆದಿದ್ದನ್ನು ನೋಡಿದರೆ ಅವರು ಎಷ್ಟು ಜನರ ಹೃದಯಕ್ಕೆ ಹತ್ತಿರವಾಗಿದ್ದರು ಎಂದು ತಿಳಿದು ಬರುತ್ತದೆ. ‘ಮನಸ್ಸಿಗಾಗಿರುವ ಭಾರದಿಂದ ನಾನು ನೋಡಲೂ ಬಂದಿಲ್ಲ… ನನಗೆ ನಗು ಮುಖದ ನಂದನ್ ನೆನಪೇ ಬೇಕೆಂಬ ಹಠ… ಆದರೂ ಛಾಯಾಗ್ರಹಣದಲ್ಲಿ ನಂದನ್ ಗೆ ನಂದನ್ ಅವರೇ ಸಾಟಿ… ಒಳ್ಳೆಯ ಫೋಟೋ ಎಂದಾಕ್ಷಣ ನಂದನ್ ನೆನಪಾಗುತ್ತಿದ್ದರು, ಈಗ ಆ ಪ್ರಶ್ನೆಗೆ ಶೂನ್ಯ ಕಾಡುತ್ತಿದೆ… ಪ್ರಶ್ನೆಯಾಗಿಯೇ ಉಳಿಯುವುದೇನೋ ಅಷ್ಟರ ಮಟ್ಟಿಗೆ ನಂದನ್ ನಮ್ಮನ್ನು ಆವರಿಸಿದ್ದರು… ಎನ್ನುವ ವಾದಿರಾಜ್ ಮಾತುಗಳಂತೆಯೇ ಅನೇಕರಿಗಾಗಿದೆ.ಬಹು ಮುಖ್ಯವಾದ ಹಾಗೂ ಮೆಚ್ಚಲೇ ಬೇಕಾದ ಗುಣ ಎಂದರೆ, ತನ್ನಂತೆಯೇ ಅನೇಕರು ಬೆಳೆಯಲು ಪ್ರೋತ್ಸಾಹಿಸುವ ಸಜ್ಜನಿಕೆಯ ಗುರುವಿನ ಗುಣ ಅವರಲ್ಲಿತ್ತು. ಧರಣಿ ಕೂರೋದ್ರಲ್ಲಿ ಮೊದಲು, ಮರ ಕಡಿತಾರಂದ್ರೆ ಮೊದಲು ತನ್ನನ್ನೇ ತೆಗಿರಿ ಅಂತ ತನ್ನ ಪ್ರಾಣ ಕೊಡಲು ಹೊರಟವ, ಒಮ್ಮೊಮ್ಮೆ ಆರೋಗ್ಯದ ಕಾರಣದಿಂದ ಬಸವಳಿದು ಹೋಗಿದ್ರು ಬತ್ತದ ಉತ್ಸಾಹ ಹೊಂದಿದ ವ್ಯಕ್ತಿ, ತನಗೆ ತಿಳಿದ ಅನೇಕ ಉತ್ತಮ ಸಂಗತಿಗಳನ್ನು ಇತರರಿಗೂ ಹಂಚುವ ಸಹೃದಯಿ.
ಒಟ್ಟಾರೆ ಹೇಳಬೇಕೆಂದರೆ ಬದುಕನ್ನು ಪ್ರೀತಿಸುವಂತೆ ಮಾಡಿದ, ಭಾವನೆಗಳ ಜೊತೆಗೆ ಜೀವಂತ ಚಿತ್ರ ನೋಡಿದಂತಾಗುವ ಫೋಟೋ ಕ್ಲಿಕ್ಕಿಸುವ ಮತ್ತು ಆ ಕ್ಷಣಗಳನ್ನು ಜೀವಂತವಾಗಿರಿಸಿದ ಜಾದುಗಾರ. ಇವೆಲ್ಲವೂ ನನ್ನೊಬ್ಬಳ ಮಾತಲ್ಲ ಅವರ ಕುರಿತಾಗಿ ಯಾರನ್ನೇ ಕೇಳಿದರೂ ಇವುಗಳೇ ಬರುತ್ತವೆ. ನಮ್ಮ ಶ್ರೀಧರ, ಶಿವಣ್ಣ ಎಲ್ಲರೂ ಸಹ ಅವರ ಸಾವಿಗೆ ಮರುಗಿದವರೇ. ಹೀಗೆ ಹೇಳುವಾಗ ಕಣ್ಣಂಚಲಿ ಹನಿಯೊಂದು ಜಾರಿದೆ. ಭಾವನೆಗಳಿಗೆ ಜೀವ ತುಂಬುವ ಜೀವಿಗೆ ಭಾವಪೂರ್ಣ ವಿದಾಯವನ್ನು ಈ ನುಡಿ ನಮನಗಳ ಮೂಲಕ ಸಲ್ಲಿಸುತ್ತಿದ್ದೇನೆ. ಹೋಗಿ ಬನ್ನಿ ನಂದನ್ ಜೀ….ನಿಮ್ಮಂತವರ ಸಂತತಿ ಸಾವಿರವಾಗಲಿ.ನೀವು ಮಾಡಿದ ಒಳ್ಳೆಯ ಕೆಲಸಗಳಿಂದಲೇ ನಿಮಗೆ ಸದ್ಗತಿ ದೊರೆಯಲಿ. ನಿಮ್ಮ ಕುಟುಂಬಕ್ಕೆ ನಿಮ್ಮ ಅಗಲಿಕೆ ನೋವು ಸಹಿಸುವಂತೆ ಭಗವಂತ ಕರುಣಿಸಲಿ. ನೀವು ಬಿಟ್ಟುಹೋದ ಹಾದಿಯಲ್ಲಿ ಉಳಿದವರು ನಡೆಯುವಂತಹ ಪ್ರೇರಣೆ ಸಿಗುವಂತಾಗಲಿ. ನೀವು ಇನ್ನೂ ಮಾಡಬೇಕೆಂದಿದ್ದ ಸಾಧನೆಗಳಿಗೆ, ಕಾರ್ಯಗಳಿಗೆ ನಿಮ್ಮ ಕುಟುಂಬಕ್ಕೆ ಪ್ರೇರಣೆ ದೊರೆತು ಮುನ್ನಡೆಸುವಂತಾಗಲಿ, ಏಕೆಂದರೆ ನಿಮ್ಮ ಮಗನೇ ಹೇಳಿದ್ದಾನೆ “ತೊರೆದು ಹೋದವರ ಹುಡುಕಬಹುದು ನಮ್ಮೊಳಗಿನ ಅಸ್ಮಿತೆಯಾಗುಳಿದಿಹ ದೀಪವನ್ನಲ್ಲ. ಎನ್ನಾಲದ ಮರ ಎನ್ನೊಳಗೆ ಬೇರೂರಿದೆ” ಎಂದು ಇದೇ ಆಶಭಾವನೆ ನಮಗೆ. ನಿಮ್ಮ ಹಾಗೂ ನಿಮ್ಮ ಬದುಕಿನಿಂದ ಪ್ರೇರಣೆ ದೊರೆತು ಇನ್ನಷ್ಟು ಸತ್ಕಾರ್ಯಗಳು ಸಮಾಜದಲ್ಲಿ ಆಗುವಂತಾಗಲಿ. ಎಲ್ಲ ಸಮಾಜಮುಖಿ ಕಾರ್ಯಗಳಲ್ಲಿ ನಿಮ್ಮನ್ನು ಕಾಣುವಂತಾಗಲಿ. ನಿಮ್ಮ ಹೆಸರಿನಲ್ಲಿ ಒಂದು ಪ್ರಶಸ್ತಿ ನೀಡಿ ಪತ್ರಿಕೋದ್ಯಮದಲ್ಲಿ ನಿಮ್ಮ ಹೆಸರು ಚಿರಸ್ಥಾಯಿಯಾಗುವಂತಾಗಲಿ. ಎಲ್ಲರ ಕುಟುಂಬಕ್ಕೂ ನೆರವಿನ ಹಸ್ತ ಚಾಚಿದ ನಿಮ್ಮ ಕುಟುಂಬಕ್ಕೂ ನೆರವು ದೊರಕುವಂತಾಗಲಿ. ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದ ನಿಮ್ಮ ಆತ್ಮೀಯರು ನಿಮ್ಮ ಹೆಸರಿನಲ್ಲಿ ಒಂದು ಗಿಡವನ್ನಾದರೂ ನೆಟ್ಟು ನಿಮ್ಮನ್ನು ಜೀವಂತವಾಗಿರಿಸಿಕೊಳ್ಳಲಿ. ಹೋಗಿ ಬನ್ನಿ ನಂದನ್ ಜೀ ….ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post