ಅರಣ್ಯ ಹಾಗೂ ವನ್ಯಜೀವಿಗಳು ಭಾರತದ ಬಹುದೊಡ್ಡ ಸಂಪತ್ತು, ಪ್ರಕೃತಿದತ್ತವಾಗಿ ನಮಗೆ ದೈವಕೊಡುಗೆಯಾಗಿರುವ ಅರಣ್ಯ ನಮಗೆ ನೀಡುತ್ತಿರುವ ಕೊಡುಗೆಗಳು ಅಷ್ಟಿಷ್ಠಲ್ಲ, ಅರಣ್ಯವನ್ನು ಕೇವಲ ಕಾಡು ಎಂದು ಉದ್ಘರಿಸದೆ ಅದನ್ನು ನಾವು ಆಮ್ಲಜನಕದ ಸಾಗರವೆನ್ನಬಹುದು. ಇಂದು ನಮಗೆ ಮಳೆ ಮತ್ತು ಬೆಳೆ ಮುಖ್ಯವಾಗಿ ಆಗಬೇಕಿದ್ದರೆ ಅದಕ್ಕೆ ಮುಖ್ಯಕಾರಣ ಅರಣ್ಯಸಂಪತ್ತು.
ಕಾಡೆಂದರೆ ಅದು ಕೇವಲ ಕಾಡು ಪ್ರಾಣಿಗಳ ವಾಸಸ್ಥಾನ ಮಾತ್ರವಲ್ಲ ಅದೊಂದು ಭೌಗೋಳಿಕ ವೈಭೋಗ ಅದನ್ನು ಅನುಭವಿಸುವುದೇ ಒಂದು ಅದೃಷ್ಟ ಹಾಗೂ ಕಲೆ. ಕಾಡು ನಮಗೆ ಉತ್ತಮ ಗಾಳಿಯನ್ನು ನೀಡುವ ಜೊತೆಗೆ ಭೂಮಿಯ ಮಣ್ಣಿನ ಮೇಲ್ಪದರವನ್ನು ಕಾಯುತ್ತದೆ. ಪ್ರವಾಹಗಳಾಗದಂತೆ ಹಾಗೂ ವಿಪರೀತ ಗಾಳಿ ಬೀಸುವಿಕೆಯನ್ನು ತಡೆಯುತ್ತದೆ. ಒಮ್ಮೆ ಕಾಡು ಸುತ್ತಿದರೆ ಅದರಿಂದ ಸಿಗುವ ಅನುಭವವೇ ಬೇರೆ ಅದು ನಿಮ್ಮನ್ನು ಬೇರೆಯೇ ಪ್ರಪಂಚಕ್ಕೆ ಕರೆದೊಯ್ಯುತ್ತದೆ ನಿಮಗೆ ಸಿಗುವ ಅನುಭವ ವರ್ಣನಾತೀತ! ಅಲ್ಲಿ ನಮ್ಮದು ನೀರವ ಮೌನ, ಪ್ರಾಣಿಗಳ ಮಾತೇ ಆವರಣೀಯ, ಒಂದು ಪ್ರಾಣಿ ಮತ್ತೊಂದು ಪ್ರಾಣಿಗೆ ನೀಡುವ ಮುನ್ಸೂಚನೆ, ಸನ್ಹೆಗಳು ನಮಗೆ ಹೊಸ ಭಾಷೆಯನ್ನೆ ಕಲಿಸುತ್ತದೆ.
ನಮ್ಮ ಪೂರ್ವಜರು ಅರಣ್ಯಗಳಿಗೆ ಒತ್ತು ಕೊಡುತ್ತಿದ್ದರು ಆದರೆ ಇತ್ತೀಚೆಗೆ ಅದರಿಂದ ಮನುಷ್ಯ ವಿಮುಖನಾಗುತ್ತಿದ್ದಾನೆ. ಸಮೀಕ್ಷೆಯೊಂದು ಹೇಳುತ್ತದೆ ಈ ಭೂಮಿಯಲ್ಲಿ ಎಲ್ಲವೂ ಸುಗಮವಾಗಿರಬೇಕಾದರೆ ಶೇ.33ರಷ್ಟು ಅರಣ್ಯವಿರಬೇಕು ಆದರೆ ಇಂದು ನಮ್ಮಲ್ಲಿ ಇರುವುದು ಕೇವಲ ಶೇ.19ರಷ್ಟು! ಅದನ್ನು ಉಳಿಸಿಕೊಳ್ಳುವುದೇ ನಮ್ಮ ದೊಡ್ಡ ಜವಾಬ್ದಾರಿ.
ಅರಣ್ಯದ ವೈವಿಧ್ಯತೆ ಅದರ ಪ್ರಬೇಧಗಳು, ಜೈವಿಕ ವೈವಿಧ್ಯತೆ ಇದೆಲ್ಲವನ್ನು ತಿಳಿದುಕೊಳ್ಳಬೇಕು. ಅದು ನಮ್ಮ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ನಮಗೆ ಅದರ ಮೇಲೆ ವ್ಯಾಮೋಹ ಮತ್ತು ಆಸಕ್ತಿಯನ್ನು ಬೆಳೆಸುತ್ತದೆ. ಇದರ ಅನುಭವಕ್ಕಾಗಿ ನಮ್ಮಲ್ಲಿ ಹಲವರು ಸಫಾರಿಗಾಗಿ ಅರಣ್ಯಗಳಿಗೆ ಪ್ರವಾಸಿಗರಾಗಿ ಹೋಗಬಹುದು. ಕೆಲವರು ವನ್ಯಜೀವಿಗಳ ಬಗ್ಗೆ ಅಧ್ಯಯನಕ್ಕಾಗಿ ಹೋಗುತ್ತೇವೆ. ಅರಣ್ಯಕ್ಕೆ ಹೋದಾಗ ಅದನ್ನು ಅನುಭವಿಸುವುದೇ ದೊಡ್ಡ ಖುಷಿ, ಅದರೊಂದಿಗೆ ಪ್ರಾಣಿ ಪಕ್ಷಿಗಳು ನಮ್ಮ ಕಣ್ಣಿಗೆ ಕಂಡರೆ ಅದೊಂದು ಅದೃಷ್ಟ ಹಾಗೂ ಹೆಚ್ಚುವರಿ ಉಲ್ಲಾಸ. ಕೆಲವೊಮ್ಮೆ ನಾವು ಪ್ರವಾಸಿಗರಾಗಿ ಅಥವಾ ಅಧ್ಯಯನಕಾರರಾಗಿ ಹೋಗದಿದ್ದರು ನಮ್ಮ ಪ್ರವಾಸದ ಭಾಗವಾಗಿ ಅರಣ್ಯ ಪ್ರದೇಶವನ್ನು ಹಾದು ಹೋಗುತ್ತೇವೆ.
ಕರ್ನಾಟಕವು ತನ್ನ ಭೌಗೋಳಿಕ ಪ್ರದೇಶದಲ್ಲಿ ಶೇ.22.61ರಷ್ಟು ಅರಣ್ಯವನ್ನು ಹೊಂದಿದೆ. ಅಂದರೆ ಸರಿ ಸುಮಾರು 43,356.47 ಚದರ ಕಿಮೀ, ಇದು ರಾಷ್ಟ್ರದ ಅರಣ್ಯ ಸಂಪತ್ತಿಗೆ ಶೇ.6.18ರಷ್ಟು ಕೊಡುಗೆ ನೀಡಿದೆ. ಕರ್ನಾಟಕವು ತನ್ನ ಒಡಲಿನಲ್ಲಿ ಹಲವಾರು ಅರಣ್ಯಗಳನ್ನು ಹೊಂದಿದೆ. ಅದರಲ್ಲಿ ಆರು ಹುಲಿ ಸಂರಕ್ಷಿತ ಪ್ರದೇಶ ಹಾಗೂ ಒಂದು ಕರಡಿಗಳಿಗಾಗಿ ಮೀಸಲಿದೆ. ಬಂಡೀಪುರ, ನಾಗರಹೊಳೆ, ಬಿಳಿಗಿರಿ ರಂಗನಾಥ ಬೆಟ್ಟದಕಾಡು, ಭಗವತಿ, ಭದ್ರ, ಬನ್ನೇರುಘಟ್ಟ, ಬ್ರಹ್ಮಗಿರಿ, ದಾರೋಜಿ, ದಾಂಢೇಲಿ, ನುಗು, ಪುಶ್ಪಗಿರಿ, ಶರಾವತಿ ಹಾಗೂ ಕುದುರೆಮುಖ ಪ್ರಮುಖವಾದವು. ಸಾಮಾನ್ಯವಾಗಿ ನಾವೆಲ್ಲವರೂ ಈ ಕಾಡುಗಳನ್ನು ನೋಡಿಯೇ ನೋಡಿರುತ್ತೇವೆ ಅಥವಾ ಈ ಕಾಡಿನ ಮೂಲಕ ಪ್ರಯಾಣವನ್ನು ಮಾಡಿರುತ್ತೇವೆ.
ಈ ಅರಣ್ಯ ಪ್ರದೇಶಗಳಲ್ಲಿ ಸಂಚರಿಸುವಾಗ ಮಾನವನು ತನ್ನ ಅರಿವಿಗೆ ಬರದೆಯೋ ಅಥವಾ ತಿಳಿದಿದ್ದರು ಹಲವಾರು ತಪ್ಪುಗಳನ್ನು ಮಾಡುತ್ತಾ ಮಾನವರಿಗೆ ಕಿಂಚಿತ್ತು ಹಾನಿ ಮಾಡದ ಕಾಡು ಮತ್ತು ಅದರ ಪರಿಸರವನ್ನು ಹಾಳು ಮಾಡಿ, ಅಲ್ಲಿರುವ ಪ್ರಾಣಿಗಳು ಮತ್ತು ಪಕ್ಷಿಗಳ ಜೀವಕ್ಕೆ ಹಾನಿಮಾಡಿ, ಕಾಡಿನ ಪ್ರದೇಶದಿಂದ ಹೊರಬರುತ್ತಾನೆ. ಕಾಡಿನ ದಾರಿಯಲ್ಲಿ ಸಂಚರಿಸುವಾಗ ಕುಡಿದ ನೀರಿನ ಪ್ಲಾಸ್ಟಿಕ್ ಬಾಟೆಲ್, ಚಾಕಲೇಟ್ ಕರ್ವ, ಬಿಸ್ಕೇಟ್ ಕರ್ವ, ತಿಂಡಿ ತಿನಿಸುಗಳ ಕರ್ವ, ಮಕ್ಕಳ ಡೈಪರ್ ಗಳನ್ನು ಎಸೆದು ಬರುತ್ತೇವೆ. ಇನ್ನು ಕೆಲವು ಪುಡಾರಿಗಳು ಮಧ್ಯದ ಬಾಟೆಲ್, ಸಿಗರೇಟ್ ಪ್ಯಾಕ್, ಅಡಿಕೆ ಪೊಟ್ಟಣ ಮುಂತಾದ ತ್ಯಾಜ್ಯಗಳನ್ನು ಅಲ್ಲಿ ಹಾಕಿ ಬರುತ್ತಾರೆ. ಆ ಕಾಡಿನಲ್ಲಿ ನಮ್ಮ ಪ್ರಯಾಣ ಮುಗಿದಿರುತ್ತದೆ. ಆದರೆ ನಾವು ಅಲ್ಲಿ ಎಸೆದ ತ್ಯಾಜ್ಯ ಅಲ್ಲಿಯೇ ಉಳಿದುರುತ್ತದೆ. ಅದನ್ನುತಿಂದ ಕೋತಿ, ಜಿಂಕೆ, ಕಾಡೆಮ್ಮೆ ಅಂತಹ ಅನೇಕ ಪ್ರಾಣಿಗಳು ಸುಂದರವಾದ ಮೇವು ಮೇಯ್ಯುವಾಗ ಈ ದರಿದ್ರ ಪ್ಲಾಸ್ಟಿಕ್ ಸಹ ಅದರ ಹೊಟ್ಟೆ ಸೇರಿ ಅವುಗಳ ಜೀವಕ್ಕೆ ಕುತ್ತು ತಂದಿವೆ.
ಸ್ವಚ್ಚ ಭಾರತದ ಅರಿವಿದ್ದರು ನಮ್ಮ ನಗರ ಪ್ರದೇಶ, ಗ್ರಾಮೀಣ ಭಾಗವನ್ನು ಸ್ವಚ್ಚವಾಗಿಡದವರು ಕಾಡನ್ನೂ ಮಲಿನ ಮಾಡುವುದು ಎಷ್ಟು ಸರಿ?
ಇತ್ತೀಚೆಗೆ ಮೈಸೂರಿನ ವಾಯ್ಸ ಆಫ್ ವೈಲ್ಡ್ ಸಂಸ್ಥೆ ಅರಣ್ಯ ಇಲಾಖೆಯ ಸಹಯೋಗದಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ 22 ಜನ ಸ್ವಯಂ ಸೇವಕರೊಂದಿಗೆ ಆಂಟಿ ಸ್ನೇರ್ ವಾಕ್ ಮತ್ತು ಪ್ಲಾಸ್ಟಿಕ್ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿತ್ತು. ಸುಮಾರು 15 ಕಿಮೀ ಮಾರ್ಗವನ್ನು ಸಂಚರಿಸಿ, ಮಳೆಯಲ್ಲಿ ನಡೆದು, ದಾರಿಯ ಇಕ್ಕೆಲಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಮತ್ತು ಇನ್ನಿತರ ಉತ್ಪನ್ನಗಳು ಸರಿ ಸುಮಾರು 3 ಚೀಲದಷ್ಟು!! ಸಂಗ್ರಹಿಸಿತು. ಅಂದರೆ ಊಹಿಸಿ ಅದೆಷ್ಟು ಈ ಭೂಮಿಯನ್ನು ನಾವು ಮಲಿನಗೊಳಿಸುತ್ತಿದ್ದೇವೆ. ಅದು ಅಭಯಾರಣ್ಯದಲ್ಲಿಯೇ! ಇನ್ನು ಜನವಸತಿ ನಗರ ಪ್ರದೇಶಗಳನ್ನು ಕೇಳುವ ಹಾಗೆಯೇ ಇಲ್ಲ. ಸಾವಿಲ್ಲದ ಮನೆಯ ಸಾಸಿವೆ ತಾ ಎಂಬಂತೆ, ಕಸವಿಲ್ಲದ ಊರು ತೋರಿಸಮ್ಮ ಅನ್ನುವಂತಿದೆ ವ್ಯವಸ್ಥೆ ಮತ್ತು ಮನುಷ್ಯನ ಜಾಣ ನಿರ್ಲಕ್ಷತನ.
ನಾವು ಸಂಚರಿಸುವಾಗ ನಮ್ಮಿಂದ ಉತ್ಪತಿಯಾಗುವ ಕಸವನ್ನು ಸಿಕ್ಕ ಸಿಕ್ಕಲ್ಲಿ ಬಿಸಾಡದೆ ನಮ್ಮಲ್ಲೇ ಶೇಖರಿಸಿಕೊಳ್ಳಬೇಕು. ಕಸದ ಬುಟ್ಟಿ ಸಿಕ್ಕೊಡನೆ ಕಸವನ್ನು ಅಲ್ಲಿ ಹಾಕಬೇಕು. ಇದರ ಕನಿಷ್ಠ ಜ್ಞಾನವೂ ನಮಗೆ ಇಲ್ಲದಿದ್ದರೆ ಹೇಗೆ? ಸರ್ಕಾರವಾಗಲಿ ಆಡಳಿತ ವರ್ಗವಾಗಲಿ ಅದೆಷ್ಟು ಪ್ರಯತ್ನಿಸಲು ಸಾಧ್ಯ? ನಮ್ಮ ಸಹಕಾರವಿಲ್ಲದಿದ್ದರೆ? ನಾವು ಸುಂದರವಾಗಿ ಕಾಣುವುದು ನಮ್ಮ ಸುತ್ತ ಸುಂದರವಾಗಿದ್ದಾಗಷ್ಟೆ!! ನಮ್ಮ ಪರಿಸರವನ್ನು ಹಾಳು ಮಾಡಿ ಅದರ ಮಧ್ಯೆ ಸುಂದರ ಅರಮನೆ ಕಟ್ಟಿ ಮೆರೆದರೇನು ಪ್ರಯೋಜನ? ನಾವು ಹಾಕಿದ ಕಸ ದುರ್ನಾತ ಬೀರುವಾಗ ಮೂಗು ಮುಚ್ಚಿ ಓಡಾಡುವವರು ನಾವೇ ತಾನೆ ಅನ್ನುವ ಅರಿವಾದರು ಬೇಕು?
ಪ್ಲಾಸ್ಟಿಕ್ ಮುಕ್ತವಾಗಿರಲು ನಾವು ಹೇಗೆ ಪ್ರಯತ್ನಿಸಬಹುದು ಎಂದು ಒಮ್ಮೆ ಯೋಚಿಸಿ:
ನಾವು ಪ್ರಯಾಣಿಸುವಾಗ ಮನೆಯಿಂದಲೆ ನೀರು ಕೊಂಡೊಯ್ಯಬಹುದು.
ತಿಂಡಿ ತಿನಿಸುಗಳನ್ನು ಸ್ಟೀಲ್ ಡಬ್ಬಿಗಳಲ್ಲಿ ಅಥವಾ ಪುನಃ ಬಳಸಬಹುದಾಂತ ಪ್ಲಾಸ್ಟಿಕ್ ಡಬ್ಬಗಳಲ್ಲೇ ತೆಗೆದುಕೊಂಡು ಹೋಗಬಹುದು.
ತಿಂದು ಬೀಸಾಡುವ ಚಾಕ್ಲೆಟ್’ನ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕವರ್’ಗಳು ಅತ್ತ ಮರು ಬಳಕೆಗೂ ಬಾರದೆ, ಇತ್ತ ಭೂಮಿಯಲ್ಲೂ ಕೊಳೆಯದೆ ಭೂಮಿಯನ್ನು ಮಲಿನ ಮಾಡುತ್ತಿರುತ್ತವೆ.
ನಾವು ತಿಂದ ನಂತರ ಅದರ ಕವರ್’ಗಳನ್ನು ಎಲ್ಲೆಂದರಲ್ಲಿ ಬೀಸಾಡದೆ ನಮ್ಮ ಬಳಿಯೇ ಶೇಖರಿಸಿಟ್ಟು, ಒಮ್ಮೆಲೆ ಕಸದ ಬುಟ್ಟಿಗೆ ಹಾಕಬಹುದು. ಒಮ್ಮೆ ಉಪಯೋಗಿಸಿ ಬಿಸಾಕುವ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡಬೇಕು.
ಯಾವ ಪದಾರ್ಥಗಳು ಪುನಃ ಉಪಯೋಗಿಸಬಹುದು ಅಥವಾ ಮರುಬಳಕೆ ಮಾಡಬಹುದು ಅಂತಹ ಪದಾರ್ಥಗಳನ್ನು ಬಳಸಬೇಕು. ಅಂದರೆ ರೀಸೈಕಲೆಬಲ್ ಮತ್ತು ರೀಯೂಸಬಲ್ ಐಟಮ್ಗಳನ್ನು ಬಳಸುವುದು. ಇದರಿಂದ ಪರಿಸರದೊಂದಿಗೆ ನಮ್ಮ ಹಣವೂ ಉಳಿಯುತ್ತದೆ. ಇದನ್ನು ಕೇವಲ ಅರಣ್ಯವಲಯದಲ್ಲಿ ಮಾತ್ರವಲ್ಲ ನಮ್ಮ ದೈನಂದಿನ ಬದುಕಲ್ಲೂ ಅಳವಡಿಸಿಕೊಳ್ಳಬಹುದು.
ನಮಗೆ ಬೇಕಾಗುವ ಗಾಳಿ, ಔಷಧಿ, ನೀರು ಎಲ್ಲವನ್ನು ನೀಡುವ ಅರಣ್ಯವನ್ನು ಹೊಲಸು ಮಾಡುವುದು ಅದೆಷ್ಟು ಸರಿ ಎಂದು ಒಮ್ಮೆ ಯೋಚಿಸಿ. ಈಗಿರುವ ಅರಣ್ಯ ಮತ್ತು ಅದರ ಪರಿಕರಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿರುವಾಗ ಅದನ್ನು ಹಾಳು ಮಾಡುವುದು ದುರಾದೃಷ್ಟ.
ಸರ್ಕಾರ ಮತ್ತು ಆಡಳಿತ ಇಲಾಖೆಗಳು ಅರಣ್ಯ, ನದಿ ಮತ್ತು ಸಮುದ್ರದ ಭಾಗಗಳನ್ನು ಪ್ಲಾಸ್ಟಿಕ್ ಮುಕ್ತವಲಯಗಳನ್ನಾಗಿ ಘೋಷಿಸಿ ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕು, ಕೇವಲ ಒಂದು ಫಲಕ ನೇತಾಕಿ ನಾನಲ್ಲ ಗಾಂಧಾರಿ ಎಂದು ಕುಳಿತರೆ ಎಂದಿಗೂ ಈ ಪ್ರದೇಶಗಳು ಪ್ಲಾಸ್ಟಿಕ್ ಮುಕ್ತವಾಗುವುದಿಲ್ಲ. ಪ್ಲಾಸ್ಟಿಕ್ನ ಹಾನಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು.
ನಂತರ ಅದರ ವ್ಯಾಪಾರ ಮತ್ತು ಬಳಕೆಗೆ ದಂಡ ವಿಧಿಸಬೇಕು. ಅರಣ್ಯ ಇಲಾಖೆಯ ಚೆಕ್ ಪೋಸ್ಟ್ಗಳಲ್ಲಿ ಇರುವ ಸಿಬ್ಬಂದಿಗೆ ವಿಶೇಷ ಅನುಮತಿ ನೀಡಿ ಅವರಿಗೆ ಪ್ಲಾಸ್ಟಿಕ್ ಮತ್ತು ಮದ್ಯದ ಬಾಟಲಿಗಳ ಪರಿಶೀಲನೆ ಮತ್ತು ವಶಕ್ಕೆ ಅನುಮತಿ ನೀಡಬೇಕು ಹಾಗೂ ಅದರ ಚಿತ್ರೀಕರಣದ ಸಾಕ್ಷಿ ಮಾಡಲು ಅನುಮತಿ ನೀಡಬೇಕು.
ವಶಪಡಿಸಿದ ವಸ್ತುಗಳನ್ನು ಇಲಾಖೆಗಳು ರೀಸೈಕಲಿಂಗ್ ಯೂನಿಟ್ಗಳಿಗೆ ರವಾನಿಸಬೇಕು. ನೀರಿನ ಬಾಟಲಿಗಳಿಗೆ 20 ರೂ. ಕನಿಷ್ಠ ಹಣವನ್ನು ಸ್ವೀಕರಿಸಿ ಟೋಕನ್ ಅನ್ನು ನೀಡಬೇಕು. ಪ್ರವಾಸಿಗರು ಬಾಟಲಿ ಮತ್ತು ಟೋಕನ್ ಅನ್ನು ಅದೇ ಗೇಟ್’ನಲ್ಲಿ ಅಥವಾ ಮತ್ತೊಂದು ಗೇಟ್’ನಲ್ಲಿ ತೋರಿಸಿ ಆ ಹಣವನ್ನು ವಾಪಸ್ ಪಡೆಯುವ ವ್ಯವಸ್ಥೆ ಜಾರಿಯಾಗಬೇಕು.
ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಅರಣ್ಯ ವಲಯದಲ್ಲಿ ಪ್ಲಾಸ್ಟಿಕ್ ಪದಾರ್ಥಗಳನ್ನು ಎಸೆಯದೆ ಅರಣ್ಯ ಜೀವಿಗಳ ಮುಂದೆ ಉತ್ತಮ ನಾಗರಿಕರು ಅನ್ನಿಸಿಕ್ಕೊಳ್ಳಬೇಕು.
- ನಾವು ಪ್ರಯಾಣಿಸುವಾಗ ಮನೆಯಿಂದಲೆ ನೀರು ಕೊಂಡೊಯ್ಯಬಹುದು.
- ತಿಂಡಿ ತಿನಿಸುಗಳನ್ನು ಸ್ಟೀಲ್ ಡಬ್ಬಿಗಳಲ್ಲಿ ಅಥವಾ ಪುನಃ ಬಳಸಬಹುದಾಂತ ಪ್ಲಾಸ್ಟಿಕ್ ಡಬ್ಬಗಳಲ್ಲೇ ತೆಗೆದುಕೊಂಡು ಹೋಗಬಹುದು.
- ತಿಂದು ಬೀಸಾಡುವ ಚಾಕ್ಲೆಟ್’ನ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕವರ್’ಗಳು ಅತ್ತ ಮರು ಬಳಕೆಗೂ ಬಾರದೆ, ಇತ್ತ ಭೂಮಿಯಲ್ಲೂ ಕೊಳೆಯದೆ ಭೂಮಿಯನ್ನು ಮಲಿನ ಮಾಡುತ್ತಿರುತ್ತವೆ.
- ನಾವು ತಿಂದ ನಂತರ ಅದರ ಕವರ್’ಗಳನ್ನು ಎಲ್ಲೆಂದರಲ್ಲಿ ಬೀಸಾಡದೆ ನಮ್ಮ ಬಳಿಯೇ ಶೇಖರಿಸಿಟ್ಟು, ಒಮ್ಮೆಲೆ ಕಸದ ಬುಟ್ಟಿಗೆ ಹಾಕಬಹುದು. ಒಮ್ಮೆ ಉಪಯೋಗಿಸಿ ಬಿಸಾಕುವ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡಬೇಕು.
- ಯಾವ ಪದಾರ್ಥಗಳು ಪುನಃ ಉಪಯೋಗಿಸಬಹುದು ಅಥವಾ ಮರುಬಳಕೆ ಮಾಡಬಹುದು ಅಂತಹ ಪದಾರ್ಥಗಳನ್ನು ಬಳಸಬೇಕು. ಅಂದರೆ ರೀಸೈಕಲೆಬಲ್ ಮತ್ತು ರೀಯೂಸಬಲ್ ಐಟಮ್ಗಳನ್ನು ಬಳಸುವುದು. ಇದರಿಂದ ಪರಿಸರದೊಂದಿಗೆ ನಮ್ಮ ಹಣವೂ ಉಳಿಯುತ್ತದೆ. ಇದನ್ನು ಕೇವಲ ಅರಣ್ಯವಲಯದಲ್ಲಿ ಮಾತ್ರವಲ್ಲ ನಮ್ಮ ದೈನಂದಿನ ಬದುಕಲ್ಲೂ ಅಳವಡಿಸಿಕೊಳ್ಳಬಹುದು.
ಲೇಖನ: ಪುನೀತ್ ಜಿ. ಕೂಡ್ಲೂರು, ಮೈಸೂರು
Discussion about this post