ಇಲ್ಲಿ ಆಡಂಬರವಿಲ್ಲ, ಆದರವಿದೆ, ಶ್ರೀಮಂತಿಕೆಯಿಲ್ಲ, ಸಂತಸವಿದೆ, ಭಕ್ತಿಯಹೊನಲಿದೆ, ನಿತ್ಯನೋಟದ ಶಾಂತಿ ಇದೆ, ಬೃಂದಾವನಾಂತರ್ಗತ ನಾದಲೋಲ ವೇಣುಗೋಪಾಲನ ಸನ್ನಿಧಾನದಲ್ಲಿ ಭಕ್ತಿಯ ಅಮೃತ ವರ್ಷಧಾರೆ ಸ್ಫುರಿಸುತ್ತಿದೆ. ಕಾಕೋಳು ಕೃಷ್ಣಾಲಯ ಕೈಬೀಸಿ ಕರೆಯುತ್ತಿದೆ. ದೈನಂದಿನ ಜಂಜಡ, ಮಾನಸಿಕ ತುಮುಲಗಳಿಂದ ಮುಕ್ತಿ ಪಡೆದು ನೆಮ್ಮದಿಯನ್ನು ಅರಸುವ ಇಚ್ಛೆ ನಿಮಗಿದ್ದರೆ ನಗರದ ಸಮೀಪವಿರುವ ಕಾಕೋಳು ನಿಮ್ಮಿಚ್ಛೆಯನ್ನು ಪೂರೈಸುತ್ತದೆ. ಶ್ರೀಪತಿಯದಿವ್ಯ ಮೂರ್ತಿ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ಇಷ್ಟೆಲ್ಲಾ ಮಹತ್ವದಿಂದ ಜಾಗೃತ ಸ್ಥಾನವಾಗಿರುವ ಶ್ರೀಕ್ಷೇತ್ರ ಕಾಕೋಳು ಬೆಂಗಳೂರಿನಿಂದ 30 ಕಿಮೀ ದೂರದಲ್ಲಿದೆ. ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಧಾರ್ಮಿಕ ಸೊಗಡಿನ ಚಾರಿತ್ರಿಕ, ಪೌರಾಣಿಕ ನೆಲೆಯೆಂದು ಜನಪ್ರಿಯವಾಗಿದೆ. ಕಾಲಕ್ಕೆ ತಕ್ಕಂತೆ ಕೊಂಚ ಆಧುನೀಕತೆಯ ಲೇಪವಿದ್ದರೂ ಗ್ರಾಮೀಣ ಸಂಸ್ಕೃತಿಯಿಂದ ಬೇರ್ಪಟ್ಟಿಲ್ಲ. ಒಂದು ಊರಿನ ಇತಿಹಾಸವೆಂದರೆ ಅದು ಜನತೆಯ ಇತಿಹಾಸ, ಅವರು ಬಾಳಿ ಬದುಕಿದ ರೀತಿ, ಅನುಸರಿಸಿದ ಧರ್ಮ, ಸಾಂಸ್ಕೃತಿಕ ಸಾಮಾಜಿಕ ಪ್ರಜ್ಞೆ, ಜೀವನ ಮೌಲ್ಯಗಳನ್ನು ಶ್ರೀಕ್ಷೇತ್ರ ಕಾಕೋಳಿನಲ್ಲಿ ಕಾಣಬಹುದು.
ಕೈಮುಗಿದು ಒಳಗೆ ಬಾ ಇದು ದ್ವಾರಕಾಧಾಮ
ಕಾಕೋಳು ಗ್ರಾಮದ ಮಧ್ಯಭಾಗದಲ್ಲಿರುವ ಆಳೆತ್ತರದ ಅನನ್ಯವಾದ ಬೃಂದಾವನಾಂತರ್ಗತ, ಚತುರ್ಭುಜ ವೇಣುಗೋಪಾಲ ಕೃಷ್ಣನ ಗುಡಿಯೇ ಇಲ್ಲಿನ ಪ್ರಮುಖ ಆಕರ್ಷಣೆ. ಕಾಕೋಳಿನ ಪುರಾಣೇತಿಹಾಸ ಭವ್ಯ. ಕಾಕೋಳು ಸ್ಥಳೀಯ ಚೇಳೂರು ಚಾವಡಿಗೆ ಸೇರಿದ್ದು ವಿಜಯನಗರ ಅರಸರ ಸಾಮಂತನೊಬ್ಬನ ಆಳ್ವಿಕೆಯಲ್ಲಿತ್ತು, ಕಾಕೋಳಿಗೆ ಹಿಂದೆ ಕಾಕೋಡು, ಕಾಕಾಪುರ, ಮುಂತಾದ ಹೆಸರುಗಳಿದ್ದವು ಕಾಕೋಡು ಎಂದರೆ ಸುಖ ಸಮೃದ್ದಿಯಿಂದ ಕೂಡಿದ ಸ್ಥಳವೆಂದರ್ಥ. ರಾಮಾಯಣದ ಕಾಕಾಸುರನು (ಇಂದ್ರನ ಮಗ ಜಯಂತ) ಶಾಪ ವಿಮೋಚನೆಗಾಗಿ ಸ್ನಾನ ಮಾಡಿದ ಕೊಳ ಅದುವೇ ಕಾಕೋಳು ಅಯಿತೆನ್ನುತ್ತದೆ ಸ್ಥಳ ಪುರಾಣ.
ಶ್ರೀಪಾದರಾಜರ ಹಿರಿಮೆ – ವೇಣುಗೋಪಾಲನ ಮಹಿಮೆ
ಮಹಿಮಾನ್ವಿತ ಮಾಧ್ವ ತಪಸ್ವಿ, ವ್ಯಾಸ-ದಾಸ ಸಾಹಿತ್ಯಗಳ ಸವ್ಯಸಾಚಿ, ಸಾಧನದ ಸತ್ಪಥ ತೋರುವ ಭಕ್ತಾನುಕಂಪಿ ಯತಿಪುಂಗವ, ಪರಮ ಭಾಗವತ ಶಿರೋಮಣಿ ಧೃವಾಂಶ ಸಂಭೂತರಾದ ಶ್ರೀಶ್ರೀಪಾದರಾಜರು ಅರ್ಕಾವತಿ ನದಿತೀರದ ಪಶ್ಚಿಮ ದಂಡೆಯಲ್ಲಿನ ಚಿಕ್ಕದಾಪುರದಲ್ಲಿ ಶ್ರೀಮದ್ಭಾಗವತದಲ್ಲಿ ಇಂದ್ರಾದಿ ದೇವತೆಗಳಿಗೆ ತೋರಿದ ಮೂಲರೂಪದಂತೆ ಈ ಮನಮೋಹಕ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿದ್ದರು.
ಕಾಕೋಳು ಈ ಮೊದಲು ಹೆಸರುಘಟ್ಟದ ಮದರ್ ಡೈರಿ (ಕೆಎಂಫ್)ನ ಆವರಣದಲ್ಲಿ ನಿರ್ಮಿತವಾಗಿತ್ತು. 1900 ಸುಮಾರಿನಲ್ಲಿ ನಗರಕ್ಕೆ ನೀರು ಪೂರೈಸಲು ಹೆಸರುಘಟ್ಟ ಕೆರೆಗೆ ಆಣೆಕಟ್ಟು ನಿರ್ಮಿಸಿದ ಸಂದರ್ಭದಲ್ಲಿ ಈ ಊರಿನ ಶ್ಯಾನುಭೋಗರು, ಬ್ರಿಟಿಷರ ಕಾಲದಲಿ ್ಲಕಾಕೋಳು ಹೋಬಳಿಯ ಪ್ರಜಾಪ್ರತಿನಿಧಿ ಸದ್ಯಸರೂ (ಈಗಿನ ಎಂಎಲ್ಎ)ಆಗಿದ್ದ ಷಾಷ್ಟಿಕ ವಂಶದ ಹರಿತಸ ಗೋತ್ರದ ನರಸಣ್ಣ ಮತ್ತು ಶೇಷಗಿರಿರಾಯರಿಗೆ ಸ್ವಪ್ನಲಬ್ಧ ಮೂರ್ತಿಯನ್ನು ಪುನಃ ಪ್ರತಿಷ್ಠಾಪಿಸುವುದರೊಂದಿಗೆ ಇದನ್ನು ಪವಿತ್ರ ಕ್ಷೇತ್ರವನ್ನಾಗಿ ಪರಿವರ್ತಿಸಿದ ಕಥಾನಕವು ಇತಿಹಾಸದ ಪುಟಗಳನ್ನು ಅಲಂಕರಿಸಿತು.
ಧಾರ್ಮಿಕ ಸಮನ್ವಯದ ನೆಲೆವೀಡು
ದೇವನಿರುವಲ್ಲಿ ಇರಲೇಬೇಕು ಪ್ರಶಾಂತತೆ, ಒಂದು ಅನಿರ್ವಚನೀಯ ದೈವೀಕತೆಯು ಪರಿಸರವನ್ನು ಆವರಿಸಿದರೆ ಅದಕ್ಕೊಂದು ಕಳೆ, ಅಂತೆಯೆ ದೇವಾಲಯವನ್ನು ಒಳ ಪ್ರವೇಶಿಸಿದೊಡನೆ ಎದುರು ಕಾಣುವುದೇ ಶೀಘ್ರ ವರಪ್ರದ ಮೋದ ಮಾರುತಿ; ಶ್ರೀ ವ್ಯಾಸರಾಜರಿಂದ ಪ್ರತಿಷ್ಠಾಪಿಸಲ್ಪಟ್ಟ 732 ಹನುಮನ ವಿಗ್ರಹಗಳಲ್ಲಿ ಒಂದಾದ ಕಂಬದ ಆಂಜನೇಯಸ್ವಾಮಿಯ ದರ್ಶನ ನಿಮಗಾಗುತ್ತದೆ.
1993ರಲ್ಲಿ ಮನಮೋಹಕ ಬೃಂದಾವನದ ಮುಂದೆ ಸೋಸಲೆ ವ್ಯಾಸರಾಜ ಮಠಾಧೀಶರಾಗಿದ್ದ ಶ್ರೀ ವಿದ್ಯಾಪಯೋನಿಧಿತೀರ್ಥರಿಂದ ಮೂಲ ರೂಪದ ಪ್ರತಿಕೃತಿಯು ಪ್ರತಿಷ್ಠಾಪನೆಗೊಂಡು ನೆನೆದವರ ಮನದಲ್ಲಿ ನೆಲೆನಿಂತು ಪೀತಾಂಬರ ಹಾಗೂ ಕಿರೀಟಧಾರಿ ಎಡಗಾಲಮೇಲೆ ಬಲಗಾಲನ್ನಿಟ್ಟು ಕೊಳಲನ್ನು ಹಿಡಿದು ನುಡಿಸುತ್ತಿರುವ ಇಕ್ಕೆಲಗಳಲ್ಲಿ ಗೋವುಗಳ ವೇಣುಗಾನದಿಂದ ಭಾವ ಪರವಶವಾಗಿರುವಂತೆ ಪ್ರತಿಮೀಕರಿಸಿರುವ ಮಂದಹಾಸದಿಂದ ಮೂರುಲೋಕಗಳನ್ನೆ ಮೀರಿಸುವ ಚಿನ್ಮಯಿ ಕೃಷ್ಣನ ಅಭಿಮುಖವಾಗಿ ವೇದವ್ಯಾಸರ, ಆಚಾರ್ಯ ಮಧ್ವರ ಹಾಗೂ ಧೃವಾಂಶ ಸಂಭೂತ ಶ್ರೀಪಾದರಾಜರ ಪ್ರತಿಮೆಗಳಿವೆ, ಪ್ರದಕ್ಷಿಣಾಕಾರವಾಗಿ ಬಂದರೆ ಪ್ರಧಾನ ದ್ವಾರದ ಬಳಿ ದಾಸಶ್ರೇಷ್ಟ ಕನಕ-ಪುರಂದರ ಪ್ರತಿಮೆಗಳಿವೆ.
ಗರುಡಗಂಭ, ಬಲಿಪಾದ, ತಂಬಿಹಳ್ಳಿ ಮಾಧವ ತೀರ್ಥ ಸಂಸ್ಥಾನದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರಿಂದ ಲೋಕಾರ್ಪಣೆಗೊಂಡ ಸುಸಜ್ಜಿತ ಪಾಂಚಜನ್ಯ ಸಭಾಂಗಣ, ನಾಗರ ಮಂಟಪ, ಅರ್ಜುನಪೂಜಿತ ದಕ್ಷಿಣೇಶ್ವರನಿಗೆ ನಮಸ್ಕರಿಸಿ ಮುನ್ನಡೆದರೆ, ಮೇಲುಕೋಟೆ ಯತಿರಾಜ ಮಠದ ಶ್ರೀ ರಾಮಾನುಜ ನಾರಾಯಣ ಜೀಯರ್ ಸ್ವಾಮಿಜಿರವರಿಂದ ಉದ್ಘಾಟನೆ ಗೊಂಡ ಸುದರ್ಶನ ಸಭಾಭವನ, ಮುಳಬಾಗಿಲು ಶ್ರೀಪಾದರಾಜಮಠದ ಶ್ರೀವಿಜ್ಞಾನನಿಧಿ ತೀರ್ಥರಿಂದ ಮಂಡಲ ಪೂಜಿತ ಆದಿತ್ಯಾದಿ ನವಗ್ರಹಗಳು ನಮ್ಮನ್ನು ಅನುಗ್ರಹಿಸುತ್ತವೆ.
ಕಾಕೋಳು ತೇರು ವೇಣುಗೋಪಾಲನ ವೈಭವದ ಮೇರು
ಮೂಲವಿಗ್ರಹಗಳ ಪ್ರತಿಷ್ಠಾಪನೆಯ ಸಂಸ್ಮರಣಾರ್ಥವಾಗಿ ಆಚರಿಸುವ ಉತ್ಸವವೇ ಬ್ರಹ್ಮರಥೋತ್ಸವ. ಆ ಸಂದರ್ಭದಲ್ಲಿ ಇಡೀ ಗ್ರಾಮ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ. ಪ್ರತಿವರ್ಷ ಚೈತ್ರಮಾಸದ ಶುದ್ಧತೃತೀಯದಿಂದ ಆರಂಭವಾಗಿ ರಾಮನವಮಿ ಪರ್ಯಂತನಡೆಯುವ ಅಷ್ಟಮಿಪ್ರಿಯನ ಅವಿಸ್ಮರಣೀಯ ಉತ್ಸವದ ಭವ್ಯ ಪರಂಪರೆಗೀಗ 83ನೆಯ ವಸಂತದ ಸಂಭ್ರಮ. ಬ್ರಹ್ಮರಥೋತ್ಸವದ ಪ್ರಮುಖ ಅಂಗವೇ ಗರುಡಬುತ್ತಿ. ಗರುಡದೇವರ ಪ್ರಸಾದವನ್ನು ಸಂತಾನಾಪೇಕ್ಷಿಗಳು ಸೇವಿಸಿ, ತೊಟ್ಟಿಲು ಪೂಜೆಮಾಡಿದರೆ ಸಂತಾನಭಾಗ್ಯ ನಿಶ್ಚಿತ ಎನ್ನುವ ಪರಂಪರಾಗತ ನಂಬಿಕೆಯಿದೆ. ಹಾಗಾಗಿ ಸಂತಾನ ವೇಣುಗೋಪಾಲ ಎಂಬ ಹೆಸರಿನಿಂದ ಜನಪ್ರಿಯನಾಗಿದ್ದಾನೆ.
ಭಕ್ತಿಭಾವದ ಸೆಲೆಯಲ್ಲಿ ಆಧ್ಯಾತ್ಮದ ಹೊನಲು
ಇಂದಿನ ಐಟಿ,ಬಿಟಿ ಉದ್ಯೋಗ ಸಂಸ್ಕೃತಿಯಲ್ಲಿ ಹತಾಶೆ, ಉದ್ವಿಗ್ನತೆ, ಮಾನಸಿಕ ತೊಳಲಾಟಗಳಿಗೂ ಈ ದೇವಸ್ಥಾನಗಳು ಶಾಂತಿಧಾಮಗಳು ಆಗಬೇಕಿರುವುದರಿಂದ ಈ ನಿಟ್ಟಿನಲ್ಲಿ ಕಾಕೋಳು ದೇವಸ್ಥಾನವು ಅಗಾಧ ಕೊಡುಗೆ ನೀಡಿದೆ. ಎಲೆ ಮರೆಕಾಯಂತಿರುವ ಈ ಆಲಯವು ಇತ್ತೀಚೆಗೆ ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದು, ಒಮ್ಮೆ ಈ ತಾಣ ಸಂದರ್ಶಿಸಿದವರು ಮತ್ತೊಮ್ಮೆ ಮಗದ್ಮೊಮ್ಮೆ ಸಂದರ್ಶಿಸಬೇಕೆಂಬ ಹಂಬಲವುಂಟಾಗುತ್ತದೆ, ಒಟ್ಟಾರೆ ಈ ದೇಗುಲ ಸಂಕೀರ್ಣ ಕೃಷ್ಣಭಕ್ತಿಗೆ ಪ್ರೇರಕವೆನಿಸುತ್ತದೆ. ಇದಲ್ಲದೆ ಪಾಳೆಯಗಾರರ ಕಾಲದ ವಾಸ್ತು ಶೈಲಿಯ ಕ್ಷೇತ್ರಪಾಲಕ ವೀರಭದ್ರ ಸ್ವಾಮಿ, ಗ್ರಾಮದೇವತೆ ಬೆಂಕಿ ಮಾರಮ್ಮ ಹಾಗೂ ಕನಕದಾಸರಿಂದಲೇ ಪೂಜಿಸಲ್ಪಟ್ಟ ಭಕ್ತಿ(ಬೀರ)ಲಿಂಗೇಶ್ವರ ಮುಂತಾದ ಆಲಯಗಳ ತಾಣವೇ ಇದಾಗಿದ್ದು ಬಾ ಯಾತ್ರಿಕನೆ ನಿನಗೆ ಸ್ವಾಗತ ಎಂದು ಕೈಬೀಸಿ ಕರೆಯುತ್ತದೆ.
ಟ್ರಸ್ಟ್ನವರ ದೂರದೃಷ್ಟಿಯ ಕಲ್ಪನೆ, ಸತತ ಪರಿಶ್ರಮ, ಸಾಧನೆ, ಭಕ್ತಿ-ಶ್ರದ್ಧೆ ಹಾಗೂ ಸಾಂಘಿಕ ಕೆಲಸಗಳಿಂದ ದಾನಿಗಳ ನೆರವಿನಿಂದ ಹಲವಾರು ಅಭಿವೃದ್ಧಿ ಕಾರ್ಯಗಳು ಸಮರ್ಪಣೆಗೊಂಡು ಧನ್ಯತಾ ಭಾವ ಮೂಡಿದೆ. ದೇಗುಲದ ಕೆಲಸ ನಿಂತ ನೀರಲ್ಲ, ಹರಿಯುವ ನೀರಿನಂತೆ. ಗ್ರಾಮಾಂತರದಲ್ಲಿ ಆಧ್ಯಾತ್ಮಿಕತೆಯನ್ನಾಧರಿಸಿದ ಸಂಘಟನೆ, ಧರ್ಮ ಸಂಸ್ಕೃತಿ ಜಾಗೃತಿಯೇ ಇಲ್ಲಿ ಪರಮಲಕ್ಷ್ಯವಾಗಿದೆ.
ಕಲಾವಿದರಿಗೆ ಕೃಷ್ಣ ಯಾವತ್ತೂ ಸಮ್ಮೋಹಕ, ಕೃಷ್ಣನಿಗೂ ಕಲೆಗೂ ಅವಿನಾಭಾವ ನಂಟು. ವೇಣುಗೋಪಾಲಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ಅಷ್ಟದಶಮಾನೋತ್ಸವದ ಪ್ರಯುಕ್ತ ಆಧ್ಯಾತ್ಮಿಕತೆಯ ತಳಹದಿಯ ಮೇಲೆ ಅಕ್ಷರ, ಆರೋಗ್ಯ ಕ್ಷೇತ್ರಗಳ ಸೇವಾ ಸಂಘಟನೆ ‘‘ಪಾಂಚಜನ್ಯ ಪ್ರತಿಷ್ಠಾನ’’ ಸಹಯೋಗದಿಂದ ರಾಜ್ಯದ ಆಹ್ವಾನಿತ 11 ಜನ ಚಿತ್ರಕಲಾವಿದರು ವಿಭಿನ್ನ ಶೈಲಿಯಲ್ಲಿ ಕೃಷ್ಣನನ್ನು ಚಿತ್ರಿಸಿದ ಕಲಾಕೃತಿಗಳ ‘‘ಶ್ರೀಕೃಷ್ಣ ಕಲಾ ದರ್ಶನ’’ ಸಮೂಹಚಿತ್ರ ಪ್ರದರ್ಶನವನ್ನು ಪಾಂಚಜನ್ಯ ಸಭಾಂಗಣದಲ್ಲಿ ಕಣ್ತುಂಬಿಕೊಳ್ಳಬಹುದು.
ಹರಿದಾಸ ಸಾಹಿತ್ಯದ ನುಡಿಸಿಂಚನಗಳೊಂದಿಗೆ ಮುದ್ರಿಸಿರುವ ವೇಣು ವರ್ಣ ಅಪರಿಮಿತನ ಅವತರಣ- ಎಂಬ ಶೀರ್ಷಿಕೆಯ ಅಪರೂಪದ ಚಿತ್ರ ಸಂಪುಟ ವೀಕ್ಷಿಸುವುದು ಮನಸ್ಸಿಗೆ ಮುದ ನೀಡುತ್ತದೆ.
ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ,ಅನಂತ ವೃತ, ಕಾರ್ತಿಕಮಾಸದಲ್ಲಿ ತುಳಸಿ ವಿವಾಹ, ವನಭೋಜನ, ಧಾತ್ರಿಹವನ, ದೀಪಾರಾಧನೆ, ಹನುಮ ಜಯಂತಿ, ಮಧ್ವನವಮಿ, ಶ್ರೀಪಾದರಾಜರೇ ಮೊದಲಾದ ಗುರುವರೇಣ್ಯರ ಆರಾಧನೆ ಜ್ಞಾನ ಯಜ್ಞದೊಡನೆ ವಿಶಿಷ್ಟವಾಗಿ ಆಚರಿಸಲಾಗುವುದು.
ಕಾಕೋಳು ಕುರಿತು ಹೆಚ್ಚಿನ ಮಾಹಿತಿಗೆ 9739369621 – kakolukrishna.blogspot.com ಸಂಪರ್ಕಿಸಿ.
ಕಾಕೋಳು ತಲುಪುವುದು ಹೇಗೆ?
ಬೆಂಗಳೂರಿಂದ ಬಿಎಂಟಿಸಿ ಬಸ್ ಸೌಕರ್ಯವಿದೆ, ನಗರದ ಕೆ.ಆರ್. ಮಾರುಕಟ್ಟೆಯ ಮಸೀದಿ ಬಳಿಯಿಂದ 285ಇ(ಗುಟ್ಟಹಳ್ಳಿ ಮಾರ್ಗ),251ಎ ಮತ್ತು 266ಸಿ (ಹೆಸರುಘಟ್ಟ ಮಾರ್ಗ), 285ಎಲ್ (ಬ್ಯಾತ) 285ಆರ್(ಚಲ್ಲಹಳ್ಳಿ), 285ಎಂ(ಹನಿಯೂರು), ಶಿವಾಜಿನಗರದಿಂದ 285ಕ್ಯೂ, ವಿ(ಯಲಹಂಕ ಮಾರ್ಗ) ಬಾಪೂಜಿನಗರದಿಂದ 248ಕ್ಯೂ (ಪೀಣ್ಯ, ಜಾಲಹಳ್ಳಿ ಕ್ರಾಸ್ ಮಾರ್ಗ) ಮೆಜೆಸ್ಟಿಕ್ 406 (ನೆಲಮಂಗಲ).
ಸ್ವಂತ ವಾಹನದಲ್ಲಿ ಬಂದರೆ ಹೆಬ್ಬಾಳದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಜಕ್ಕೂರು ಬಳಿ ಎಡಕ್ಕೆ ತಿರುಗಿ ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆಯಲ್ಲಿ ಎಡಕ್ಕೆ ಆರು ಕಿಮೀ ಸಾಗಿದರೆ ಹಾಗು ಹೆಸರುಘಟ್ಟದ ಕಡೆ ಬಂದರೆ ಕೆಎಂಎಫ್ ಬಲಕ್ಕೆ ಪ್ರಯಾಣಿಸಿದರೆ ಕಾಕೋಳು ತಲುಪಬಹುದು.
ಘಾಟಿ ಸುಬ್ರಹ್ಮಣ್ಯ, ಬ್ಯಾತದ ಮಹಾಲಕ್ಷ್ಮೀ, ಚಿಕ್ಕ ಮಧುರೈನ ಶನೈಶ್ಚರ, ಹೆಸರುಘಟ್ಟದ ನೃತ್ಯ ಗ್ರಾಮ, ಬೈರಾಪುರ – ಹೊನ್ನೇನಹಳ್ಳಿ ವ್ಯಾಸರಾಜ ಪ್ರತಿಷ್ಠಿತ ಆಂಜನೇಯ, ಐವರುಕಂಡಪುರದ ಈಶ್ವರ ದೇಗುಲ ಸಮೀಪದ ಪ್ರೇಕ್ಷಣೀಯ ಸ್ಥಳಗಳು. ವಿವರಗಳಿಗೆ ದೂ: 9845075250ಗೆ ಸಂಪರ್ಕಿಸಬಹುದು.
ಲೇಖನ: ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ),
ಯುವ ಸಂಸ್ಕೃತಿ ಚಿಂತಕರು
Discussion about this post