ಕಲ್ಪ ಮೀಡಿಯಾ ಹೌಸ್
ವರ್ಷಗಳು ಉಳುರುತ್ತಿದ್ದಂತೆ ಆಚಾರ ವಿಚಾರಗಳು ಕೂಡ ಬದಲಾವಣೆಯಾಗುತ್ತದೆ. ಸಂಸ್ಕಾರಗಳು ಆಚರಣೆಗಳು ಈಗಿನ ದಿನದಲ್ಲಿ ನೆಪ ಮಾತ್ರಕ್ಕೆ ಮಾತ್ರ ಉಳಿಯುತ್ತಿದೆ ಎಂಬುದು ನಗ್ನ ಸತ್ಯ.
ಮಕ್ಕಳು ತಮ್ಮ ಯೌವನದ ಘಟ್ಟ ತಲುಪಿದಾಗ ಮತ್ತು ಮಕ್ಕಳು ಬಾಲ್ಯವಸ್ಥೆ, ಪ್ರೌಢವಸ್ಥೆ ದಿನಗಳಲ್ಲಿ ತಂದೆ ತಾಯಿಯವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡು ಹೋಗುತ್ತಿದ್ದರು. ತಮ್ಮ ಕೆಲಸದ ದಿನಗಳಲ್ಲೂ ಪೋಷಕರ ಆಶೀರ್ವಾದ ಪಡೆದುಕೊಂಡೆ ಮನೆಯಿಂದ ಹೊರಗಡೆ ನಡೆಯುತಿದ್ದುದ್ದನ್ನು ಇಲ್ಲಿ ನೆನೆಯಬೇಕು.
ಭಾರತಕ್ಕೆ ಪಾಶ್ಚಿಮಾತ್ಯ ದೇಶಗಳ ಆಕ್ರಮಣದಿಂದ ಭಾರತದ ಸಂಸ್ಕಾರ ಇಲ್ಲಿನ ಸಂಸ್ಕೃತಿ ದಿನದಿಂದ ದಿನಕ್ಕೆ ಅವನತಿ ಹೊಂದುತ್ತಾ ಬರತೊಡಗಿದೆ. ವಿದೇಶಿಯ ಸಂಸ್ಕೃತಿಗೆ ಭಾರತೀಯರು ಕ್ರಮೇಣ ತುತ್ತಾಗುತ್ತಾ ಬಂದರು. ಸ್ವಾಮಿ ವಿವೇಕಾನಂದರ ಮತ್ತು ಶ್ರೀ ರಾಮಕೃಷ್ಣ ಜಗತ್ ಗುರುಗಳ ಸಿದ್ದಾಂತಗಳು ಕೇವಲ ಪುಸ್ತಕದಲ್ಲೇ ಉಳಿದವು. ಭಾರತೀಯ ಸಂಸ್ಕೃತಿಯಲ್ಲಿ ತಂದೆ ತಾಯಿರನ್ನು ಸಾಕ್ಷಾತ್ ಶಿವ ಪಾರ್ವತಿಗೆ ಹೋಲಿಸುತ್ತಾರೆ. ವೇದಗಳಲ್ಲಿಯೂ ಕೂಡ ತಂದೆ ತಾಯಿಯರಿಗೆ ಪವಿತ್ರ ಪೂಜನೀಯ ಸ್ಥಾನವಿದೆ.
ಪುರಾಣಗಳ ಕಾಲದಿಂದಲೂ ನಿತ್ಯ ತಂದೆ ತಾಯಿಯರ ಆಶೀರ್ವಾದ ಪಡೆದರೆ ಕೋಟಿ ದೇವರ ಆಶೀರ್ವಾದ ಜೊತೆಯಲ್ಲಿ ಇರುತ್ತಿತ್ತು ಎಂಬುದು ಈಗ ಇತಿಹಾಸ.
ಜೀವನ ಶೈಲಿ ಬದಲಾದಂತೆ ಆಚಾರ ವಿಚಾರದಲ್ಲೂ ಕೂಡ ಬದಲಾವಣೆ ಹೊಂದುತ್ತಿರುವುದು ಕಾಣುತ್ತೇವೆ. ಹೆತ್ತು ಹೊತ್ತ ತಂದೆತಾಯಿರನ್ನು ಈಗಿನ ದಿನಗಳಲ್ಲಿ ಕಡೆಗಣಿಸುತ್ತಿದ್ದೇವೆ. ಅವರ ಯಾವುದೇ ಒಳ್ಳೆಯ ಸಲಹೆಗಳು ಈಗಿನ ಯುವ ತರುಣರು ತರುಣಿಯರು ಕೇಳುತ್ತಿಲ್ಲ ಎಂಬುದೇ ಅತ್ಯಂತ ದುಃಖದ ಸಂಗತಿ. ಜನ್ಮ ನೀಡಿದ ತಂದೆ ತಾಯಿರು ಜೊತೆಯಲ್ಲಿ ಇದ್ದರೆ ಮುಜುಗರ ಎಂದು ಭಾವಿಸಿ ವೃದ್ದಾಶ್ರಮ ಸೇರಿಸುತ್ತಿರುವ ಈಗಿನ ಮಕ್ಕಳಿಗೆ ಆ ಹಿರಿಯ ಜೀವಗಳ ನೋವು ಕೇಳಿಸುತ್ತಿಲ್ಲ. ಅವರ ಜೀವನದ ಅನುಭವವನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಸಹ ಇಲ್ಲದೇ, ಕೇವಲ ಅವರ ಆಸ್ತಿ ಸಂಪಾದನೆ ಅಷ್ಟೇ ಮುಖ್ಯವಾಗಿ ಹೋಯಿತೇ ಈ ಯುಗದಲ್ಲಿ ಅನ್ನುವಂತಾಗಿದೆ. ತಾನು ಕೂಡ ನಾಳೆ ವೃದ್ಧನಾಗಿ ಸಾಯುತ್ತೀನಿ ಎಂಬುದನ್ನು ಮರೆಯುತ್ತಿದೆಯೇ ಇಂದಿನ ಯುವ ಜನಾಂಗ ಎನಿಸುತ್ತಿದೆ. ಹಿಂದಿನ ಕಾಲದಲ್ಲಿ ಪೋಷಕರಿಗೆ ಎಷ್ಟು ಕಾಳಜಿ ವಹಿಸಿ ನೋಡಿಕೊಳ್ಳುತ್ತಿದ್ದರೋ ಈ ಕಾಲದಲ್ಲಿ ಅಷ್ಟೇ ಕೆಟ್ಟ ರೀತಿಯಲ್ಲಿ ಆ ಹಿರಿಯ ಹೃದಯಗಳಿಗೆ ನೋವು ಕೊಟ್ಟು ಹೆಸರಿಗಷ್ಟೇ ತಂದೆ ತಾಯಿ ಅನ್ನುವಂತಾಗಿದೆ.
ಮನಸ್ಸಿನಲ್ಲಿ ತಂದೆ ತಾಯಿ ಎಂಬ ಭಾವನೆಗಳು ಇಲ್ಲದೆಯೇ ಈಗಿನ ಯುವ ತರುಣ ತರುಣಿಯರು ಮರ್ಯಾದೆಗೆ ಧಕ್ಕೆ ತರುವಂತಹ ಕೆಲಸಗಳು ಮಾಡುತ್ತಿದ್ದಾರೆ ಎಂಬುದು ಮುಖ್ಯವಾಗಿ ಕಾಣಿಸುತ್ತದೆ. ಪೋಷಕರು ತನ್ನ ಎಲ್ಲಾ ಸರ್ವಸ್ವವನ್ನು ಮಕ್ಕಳಿಗೋಸ್ಕರ ಧಾರೆ ಎರೆಯುತ್ತಿರುವವರಿಗೆ ಕೇವಲ ಒಂದೇ ದಿನ ಆಚರಣೆ ಸಾಕೆ? ಆ ಒಂದು ದಿನದ ಪ್ರೀತಿ ಕಾಳಜಿ ಕೇವಲ ತೋರ್ಪಡಿಕೆಗೆ ಮೀಸಲಾಯಿತೇ ಎಂಬುದೇ ದುಃಖಕರ ಸಂಗತಿಯಾಗಿದೆ.
ಇನ್ನಾದರೂ ನಮ್ಮ ಯುವ ತರುಣ ತರುಣಿಯರು ಬದಲಾಗಿ ಭಾರತೀಯ ಸಂಸ್ಕಾರ, ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾಗಿ ನಿಲ್ಲಬೇಕಾಗಿದೆ.
ಎಲ್ಲ ಪೋಷಕರಿಗೆ ಶುಭವಾಗಲಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post