ಕಲ್ಪ ಮೀಡಿಯಾ ಹೌಸ್ | ಕಲಬುರ್ಗಿ |
ಗ್ರಾಮೀಣ ಪತ್ರಿಕೆಗಳು ಹಾಗೂ ಪತ್ರಕರ್ತರ ಹಿತ ಕಾಯಲು ಸರ್ಕಾರ ಬದ್ಧವಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯ ಯೋಜನೆಗಳನ್ನು ರೂಪಿಸಲಾಗಿದ್ದು, ಸಧ್ಯದಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಇಲ್ಲಿನ ಪೂಜ್ಯ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಇಂದು ಆಯೋಜನೆಗೊಂಡ 36ನೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೋದ್ಯಮ ಕವಲು ದಾರಿಯಲ್ಲಿದ್ದು, ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಪತ್ರಕರ್ತರು ಹಾಗೂ ಪತ್ರಿಕೆಗಳ ಹಿತ ಕಾಯುವುದು ಸರ್ಕಾರದ ಆದ್ಯ ಕರ್ತವ್ಯ ಎಂದರು.
ಕೇಂದ್ರ ವಿತ್ತ ಸಚಿವರೊಂದಿಗೆ ಮಾತನಾಡಿ, ಮುದ್ರಣ ಕಾಗದದ ಮೇಲಿನ ತೆರಿಗೆ ವಿನಾಯ್ತಿ ಕುರಿತು ಚರ್ಚೆನಡೆಸಲಾಗುವುದು ಎಂದ ಅವರು, ಜೊತೆಗೆ ಶೀಘ್ರವೇ ಜಾಹಿರಾತು ನೀತಿ ಅನುಷ್ಟಾನ, ಪತ್ರಕರ್ತರ ಹಿತಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿನ ಪತ್ರಕರ್ತರ ಸಂಕಷ್ಟ ಪರಿಹಾರಕ್ಕೆ ಸರ್ಕಾರ ಬದ್ಧವಾಗಿದೆ ಎಂದ ಅವರು, ಈಗಾಗಲೇ ಕೆಲವು ಭಾಗಗಳಲ್ಲಿ ಬಸ್ ಪಾಸ್, ಆರೋಗ್ಯ ಕಾರ್ಡುಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಇದನ್ನು ರಾಜ್ಯಕ್ಕೆ ವಿಸ್ತರಿಸಲಾಗುವುದು. ಈ ಬಗ್ಗೆ ಮುಂದಿನ ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಲಾಗುವುದು. ಈ ಕುರಿತು ಕ್ರಿಯಾಯೋಜನೆ ರೂಪಿಸುವಂತೆ ಸ್ಥಳದಲ್ಲಿದ್ದ ಆಯುಕ್ತರಿಗೆ ಸೂಚಿಸಿದರು.
ಸಣ್ಣ ಹಾಗೂ ಪ್ರಾದೇಶಿಕ ಪತ್ರಿಕೆಗಳು ಉಳಿಯಬೇಕು. ಇದು ಜನ ಸಂಸ್ಕೃತಿಯ ಜೀವಾಳ. ಈ ಸಂಸ್ಕೃತಿಯನ್ನು ಉಳಿಸಬೇಕಾದ್ದು ಸಮಷ್ಟಿ ಜವಾಬ್ದಾರಿ. ಈ ಬಗ್ಗೆ ಯಾವುದೇ ರಾಜಿ ಇಲ್ಲ ಎಂದ ಅವರು, ವಿಶೇಷವಾಗಿ ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ನಡೆದುಕೊಂಡ ರೀತಿ ಅವಿಸ್ಮರಣೀಯ. ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದು ಮರೆಯುವಂತಿಲ್ಲ. ಕೋವಿಡ್ ಕಾರಣದಿಂದ ಮೃತರಾದ ಎಲ್ಲ ಪತ್ರಕರ್ತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಘೋಷಿಸಿದರು.
ರಾಜಕಾರಣಿ, ಪತ್ರಕರ್ತರು ಪರಸ್ಪರ ಜೊತೆಗೂಡಿ ಕೆಲಸ ಮಾಡಬೇಕಿದೆ. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರಲಾಗದು. ಸಮಾಜದ ಒಳಿತಿನ ದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡೋಣ. ಒಂದು ಗೂಡುವಿಕೆ, ಸಂಘಟನೆಗಳ ಬಲವರ್ಧನೆಗೆ ರಾಜಕೀಯ ಮಾಡೋಣ. ಆದರೆ, ಸ್ವಾರ್ಥಕ್ಕೆ-ರಾಜಕೀಯಕ್ಕೆ ಸಂಘಟನೆಗಳನ್ನು ಒಳಸಿಕೊಂಡು ವಿಘಟನೆ ಮಾಡುವುದು ಬೇಡ.
ಬಸವರಾಜ ಬೊಮ್ಮಾಯಿ
ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಪತ್ರಿಕೋದ್ಯಮ ಸೇರಿದಂತೆ ಇಡೀ ವ್ಯವಸ್ಥೆಯನ್ನು ಆವರಿಸಿದೆ. ಆದರೆ, ಅಂತಃಕರಣ ಮರೆಯಾಗುತ್ತಿದೆ. ಪತ್ರಕರ್ತರ ಅಂತಃಕರಣದಿಂದ ಕಾರ್ಯೋನ್ಮುಖರಾದಾಗ ಸಮಾಜದಲ್ಲಿ ನಿಜಕ್ಕೂ ಬದಲಾವಣೆ ತರಲು ಸಾಧ್ಯ ಎಂದ ಅವರು, ಪತ್ರಿಕಾ ರಂಗದ ಮೌಲ್ಯಗಳನ್ನು ಉಳಿಸಿ ಬೆಳಸುವುದರ ಜೊತೆಗೆ, ಸಮಾಜಕ್ಕೂ ಮಾದರಿಯಾಗಿ ಬೆಳೆಯಬೇಕಿದೆ. ಪತ್ರಕರ್ತರಲ್ಲಿ ಅತ್ಮವಿಶ್ವಾಸ ಮೂಡಿಸಿ, ಮೌಲ್ಯಗಳ ಪುನರುತ್ಥಾನಕ್ಕೆ ಸರ್ಕಾರ ಬದ್ಧ ಎಂದರು.
ಪೂಜ್ಯ ಡಾ. ಶರಣಬಸಪ್ಪ ಅಪ್ಪರವರ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಛಾಯಚಿತ್ರ ಪ್ರದರ್ಶನವನ್ನು ಸಚಿವ ಮುರುಗೇಶ್ ನಿರಾಣಿ, ವಸ್ತು ಪ್ರದರ್ಶನವನ್ನು ಶಾಸಕ ಡಾ. ಅಜಯ್ ಸಿಂಗ್ ಧರಮ್ ಸಿಂಗ್, ವ್ಯಂಗ್ಯ ಚಿತ್ರ ಪ್ರದರ್ಶನವನ್ನು ಸಂಸದ ಡಾ. ಉಮೇಶ್ ಜಾದವ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹೊರತರಲಾದ ಮೂರು ಪುಸ್ತಕಗಳು, ಹಾಗೂ ಕ್ಯಾಲೆಂಡರ್ನ್ನು ವೇದಿಕೆಯಲ್ಲಿದ್ದ ಗಣ್ಯರು ಅನಾವರಣಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ವಹಿಸಿದ್ದರು.
ವೇದಿಕೆಯಲ್ಲಿ ಶಾಸಕರಾದ ದತ್ತಾತ್ರೇಯ ಸಿ. ಪಾಟೀಲ್ ರೇವೂರ್, ಸುಭಾಷ್ ಗುತ್ತೆದಾರ್, ಬಿ. ಜಿ. ಪಾಟೀಲ್, ಶಶೀಲ್ ಬಿ. ನಮೋಶಿ, ಡಾ. ಅವಿನಾಶ್ ಜಾದವ್, ಬಸವರಾಜ ಮತ್ತಿಮಡು, ತಾರಾ ಅನೂರಾಧ ಇನ್ನಿತರರು ಉಪಸ್ಥಿತರಿದ್ದರು.
ಮಾಲತೇಶ್ ಬಡಿಗೇರ್ ತಂಡದವರಿಂದ ಪ್ರಾರ್ಥನೆ, ನಾಡಗೀತ, ವಿಜಯಕರ್ನಾಟ ಪತ್ರಿಕೆಯ ಸಂಪಾದಕ ಹರಿಪ್ರಕಾಶ್ ಕೋಣೆಮನೆರಿಂದ ಮೊದಲ ಮಾತು, ವಿಜಯವಾಣಿ ಪತ್ರಿಕೆ ಸಂಪಾದಕ ಕೆ.ಎನ್.ಚೆನ್ನೇಗೌಡ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಧಕ ಪತ್ರಕರ್ತರನ್ನು ಸನ್ಮಾನಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post