ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ಕೋವಿಡ್19 ಬಾಧಿತರಿಗೆ ಚಿಕಿತ್ಸೆ ನೀಡುವಲ್ಲಿ ತೊಡಕಾಗಿರುವ ಐಸಿಯು, ಆಕ್ಸಿಜನ್ ಕೊರತೆಯನ್ನು ಸರಿಪಡಿಸಿ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಪತ್ರ ಬರೆದಿರುವ ಅವರು, ಶಿವಮೊಗ್ಗದಲ್ಲಿ ಕೋವಿಡ್19 ಬಾಧಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು ಸಾಮಾನ್ಯ ಖಾಯಿಲೆ ಹೊಂದಿದ ರೋಗಿಗಳೂ ಕೂಡ ಚಿಕಿತ್ಸೆ ದೊರೆಯದೆ ಸಾವಿನ ಮನೆ ಸೇರುವಂತಾಗಿರುವುದು ವಿಷಾಧಕರವಾಗಿದ್ದು ಕೂಡಲೇ ತುರ್ತು ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಕೋವಿಡ್19ಗೆ ಸೋಂಕಿತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇವರುಗಳಿಗೆ ಆಸ್ಪತ್ರೆಗಳಲ್ಲಿ (ಸರ್ಕಾರಿ ಮತ್ತು ಖಾಸಗಿ) ಹಾಸಿಗೆಗಳ ಮತ್ತು ಐಸಿಯು ಗಳಲ್ಲಿನ ಹಾಸಿಗೆಗಳ ಕೊರತೆಯಿಂದ ರೋಗಿಗಳಲ್ಲಿನ ಸಾವಿನ ಸಂಖ್ಯೆ ನಾಗಲೋಟಕ್ಕೆ ಏರುತ್ತಲೇ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೋವಿಡ್19 ಅಲ್ಲದೇ ರೋಗಿಗಳಿಗೆ ಎಲ್ಲಾ ಆಸ್ಪತ್ರೆಯವರು(ಸರ್ಕಾರಿ-ಖಾಸಗಿ) ಕೋವಿಡ್ ಟೆಸ್ಟಿನ ನೆಪ ಹೇಳಿ ಚಿಕಿತ್ಸೆಯನ್ನು ಸರಿಯಾದ ಸಮಯಕ್ಕೆ ಕೊಡುತ್ತಿಲ್ಲ. ಟೆಸ್ಟ್ ರಿಪೋರ್ಟ್ ಬರುವ ವೇಳೆಗೆ ಸಾಮಾನ್ಯ ರೋಗಿಗಳು ಕೂಡ ಗಂಭೀರ ಸ್ಥಿತಿಗೆ ಬಂದು ಸಾವಿಗೀಡಾಗುತ್ತಿದ್ದಾರೆ. ಇದನ್ನು ನಾವು ದಿನನಿತ್ಯ ಕೇಳುತ್ತಿದ್ದೇವೆ ಮತ್ತು ನೋಡುತ್ತಿದ್ದೇವೆ. ಇದನ್ನು ತಾವುಗಳು ಬಹುಮುಖ್ಯವಾಗಿ ಪರಿಗಣಿಸಿ ಎಲ್ಲಾ ತರಹದ ರೋಗಿಗಳಿಗೂ ಆಸ್ಪತ್ರೆಗೆ ಬಂದ ತಕ್ಷಣ ಸೂಕ್ತ ಚಿಕಿತ್ಸೆ ಕೊಡಿಸಿ ಅವರುಗಳನ್ನು ಪ್ರಾಣಾಪಾಯದಿಂದ ಕಾಪಾಡಬೇಕೆಂದು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗಳು ಮತ್ತು ಅವರ ತಂಡದ ಕಾರ್ಯ ವೈಖರಿ ಉತ್ತಮವಾಗಿದ್ದರೂ, ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಶಿವಮೊಗ್ಗದ ಆರೋಗ್ಯ ಇಲಾಖೆ ಮುತುವರ್ಜಿ ವಹಿಸಿ, ಆಸ್ಪತ್ರೆಗಳ ಸಂಖ್ಯೆ ಮತ್ತು ಐಸಿಯುಗಳು ಮತ್ತು ಆಮ್ಲಜನಕದ ಕೊರತೆಯನ್ನು ಸರಿಪಡಿಸಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಅಧಿಕವಾಗುತ್ತದೆ. ಈಗಾಗಲೇ ನಗರದಲ್ಲಿ ಜನರು ಭಯಬೀತರಾಗಿದ್ದಾರೆ. ಮುಂದಿನ ದಿನಗಳಲ್ಲಿ ನಿಮ್ಮ ಕಾರ್ಯಕ್ಷಮತೆ ಹೆಚ್ಚಾಗಿ ಜನರು ತಮ್ಮ ಮೇಲೆ ಇಟ್ಟಿರುವ ನಂಬಿಕೆ ಹುಸಿಯಾಗದಂತೆ ಕಾರ್ಯನಿರ್ವಹಿಸಬೇಕೆಂದು ಆಗ್ರಸಿದ್ದಾರೆ.
ಕೋವಿಡ್19ಗೆ ಚಿಕಿತ್ಸೆ ನೀಡುತ್ತಿರುವ ತಜ್ಞ ವೈದ್ಯರುಗಳ ಪ್ರಕಾರ ಬರುವ ದಿನಗಳಲ್ಲಿ ಆಕ್ಸಿಜನ್ ಪೂರೈಕೆಯಲ್ಲೂ ವ್ಯತ್ಯಾಸವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸೂಕ್ತ ವೈದ್ಯಕೀಯ ಚಿಕಿತ್ಸೆ, ಅಗತ್ಯ ಸಂದರ್ಭದಲ್ಲಿ ದೊರೆಯದಿರುವುದರಿಂದಲೇ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು ಈ ಕುರಿತು ಹೆಚ್ಚಿನ ಆದ್ಯತೆ ವಹಿಸುವ ಅಗತ್ಯ ಇದೆ ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ ಎಂದಿದ್ದಾರೆ.
ಇನ್ನು, ಕೋವಿಡ್19 ಟೆಸ್ಟಿಂಗ್ ವ್ಯಾಪಕಗೊಳಿಸುವುದರಿಂದ ಮಾತ್ರವೇ ಇದಕ್ಕೆಲ್ಲ ಪರಿಹಾರ ಸಾಧ್ಯವಿದ್ದು ಕೂಡಲೇ ಶಿವಮೊಗ್ಗದಲ್ಲಿ ಕೋವಿಡ್ ಟೆಸ್ಟ್ ಸಂಖ್ಯೆಯನ್ನು ತೀವ್ರಗತಿಯಲ್ಲಿ ಹೆಚ್ಚಿಸುವ ಅಗತ್ಯವಿದೆ ಎಂದಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post