ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಮಧ್ಯ ಕರ್ನಾಟಕದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ. ಇಲ್ಲಿನ ಎಸ್.ಎಸ್. ನಾರಾಯಣ ಸೂಪರ್ ಸ್ಪೆಷಾಲಿಟಿ ಸೆಂಟರ್’ನಲ್ಲಿ ಈ ಭಾಗದ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ಸಂಕೀರ್ಣವಾದ ‘ಮಾಡಿಫೈಡ್ ಬೆಂಟಾಲ್ ಪ್ರೊಸೀಜರ್’ #ModifiedBentallProcedure ಎಂಬ ಓಪನ್ ಹಾರ್ಟ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.
ತೀವ್ರ ಎದೆನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ 43 ವರ್ಷದ ವ್ಯಕ್ತಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು. ರೋಗಿಯ ಹೃದಯದ ಪ್ರಮುಖ ರಕ್ತನಾಳವು #AorticRoot ಅಸಹಜವಾಗಿ ಉಬ್ಬಿಕೊಂಡಿದ್ದು, ಅದು ಯಾವುದೇ ಕ್ಷಣದಲ್ಲಿ ಛಿದ್ರಗೊಳ್ಳುವ ಅಪಾಯವಿತ್ತು.
Also Read>> ಭಕ್ತಿಯಿಂದ ಪ್ರಾರ್ಥಿಸುವುದೇ ನಮ್ಮ ಘನ ಉದ್ದೇಶವಾಗಲಿ | ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸಂದೇಶ
ಸವಾಲಿನ ಶಸ್ತ್ರಚಿಕಿತ್ಸೆ
ಕಾರ್ಡಿಯೋ ಥೊರಾಸಿಕ್ ವ್ಯಾಸ್ಕುಲರ್ ಸರ್ಜನ್ ಡಾ. ಗೌತಮ್ ಎ. ಅವರ ನೇತೃತ್ವದ ತಂಡವು ಈ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿತು. ಶಸ್ತ್ರಚಿಕಿತ್ಸೆಯ ವೇಳೆ ರೋಗಿಯ ಹಾನಿಗೊಳಗಾಗಿದ್ದ ಮಹಾಪಧಮನಿಯ ಕವಾಟ #AorticValve ಅದರ ಬುಡ ಮತ್ತು ಊದಿಕೊಂಡಿದ್ದ ಭಾಗವನ್ನು ತೆಗೆದುಹಾಕಿ, ಅದರ ಜಾಗದಲ್ಲಿ ಕೃತಕ ‘ಸಿಂಥೆಟಿಕ್ ಗ್ರಾಫ್ಟ್’ ಅಳವಡಿಸಲಾಯಿತು.
ಈ ಕುರಿತು ಮಾಹಿತಿ ನೀಡಿದ ಡಾ. ಗೌತಮ್ ಅವರು, “ರೋಗಿಯ ಹೃದಯದ ರಕ್ತನಾಳವು ಅತಿಯಾಗಿ ಊದಿಕೊಂಡಿತ್ತು. ಈ ಗೆಡ್ಡೆಯಂತಹ ಊತ #Aneurysm ಎಷ್ಟು ದೊಡ್ಡದಾಗಿತ್ತೆಂದರೆ ಅದು ಹೃದಯದ ಬಲ ಭಾಗದ ಮೇಲಿನ ಕೋಣೆಯನ್ನು #RightAtrium ಮೇಲೆ ಒತ್ತಡವನ್ನು ಉಂಟುಮಾಡುತ್ತಿತ್ತು. ಇದು ಪ್ರಾಣಕ್ಕೇ ಅಪಾಯ ತರುವಂತಹ ಸ್ಥಿತಿಯಾಗಿತ್ತು,” ಎಂದು ವಿವರಿಸಿದರು.
Also Read>> ದೇಶದ ಅಭಿವೃದ್ಧಿಗೆ ವಿದ್ಯಾವಂತ ಯುವಕರ ಪಾತ್ರ ಅತ್ಯವಶ್ಯ : ಡಾ. ಕೆ.ರಾಘವೇಂದ್ರ ಪೈ ಕರೆ
ಚೇತರಿಸಿಕೊಂಡ ರೋಗಿ
ಅತ್ಯಂತ ಜಟಿಲವಾದ ಈ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಹೃದಯದ ಸ್ನಾಯುಗಳಿಗೆ ರಕ್ತ ಪೂರೈಕೆ ಸುಗಮವಾಗಿರುವಂತೆ ನೋಡಿಕೊಳ್ಳಲು ‘ಕೊರೊನರಿ ಬಟನ್’ಗಳನ್ನು ಕೃತಕ ಗ್ರಾಫ್ಟ್ಗೆ ಯಶಸ್ವಿಯಾಗಿ ಮರುಜೋಡಿಸಲಾಯಿತು. ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಅದ್ಭುತವಾಗಿ ಚೇತರಿಸಿಕೊಂಡಿದ್ದಾರೆ. ನಂತರ ನಡೆಸಿದ ತಪಾಸಣೆಗಳಲ್ಲಿ ಹೃದಯದ ಕಾರ್ಯನಿರ್ವಹಣೆ ಮತ್ತು ಹೊಸ ಕವಾಟದ ಚಲನೆ ಉತ್ತಮವಾಗಿರುವುದು ದೃಢಪಟ್ಟಿದೆ. ರೋಗಿಯು ಸಂಪೂರ್ಣವಾಗಿ ಗುಣಮುಖರಾಗಿದ್ದು, ಕೆಲ ದಿನಗಳ ಹಿಂದೆಯೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಈ ಸಾಧನೆಯು ಮಧ್ಯ ಕರ್ನಾಟಕದ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದಿದೆ. ಈ ಹಿಂದೆ ಇಂತಹ ಗಂಭೀರ ಸಮಸ್ಯೆಯಿದ್ದವರು ಬೆಂಗಳೂರು ಅಥವಾ ಹೈದರಾಬಾದ್ನಂತಹ ಮಹಾನಗರಗಳಿಗೆ ಅಲೆಯಬೇಕಿತ್ತು. ತುರ್ತು ಸಂದರ್ಭಗಳಲ್ಲಿ ಅಷ್ಟು ದೂರ ಪ್ರಯಾಣ ಮಾಡುವುದು ಜೀವಕ್ಕೆ ಕುತ್ತು ತರುವ ಸಾಧ್ಯತೆ ಇರುತ್ತಿತ್ತು. ಆದರೆ ಈಗ ದಾವಣಗೆರೆಯಲ್ಲೇ ಇಂತಹ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿರುವುದು ಈ ಭಾಗದ ಜನರಿಗೆ ನೆಮ್ಮದಿ ತಂದಿದೆ.
“ಮಧ್ಯ ಕರ್ನಾಟಕದ ಜನರ ಮನೆಬಾಗಿಲಿಗೇ ವಿಶ್ವದರ್ಜೆಯ ಹೃದಯ ಚಿಕಿತ್ಸೆಯನ್ನು ತಲುಪಿಸುವುದು ನಮ್ಮ ಉದ್ದೇಶ. ಎಷ್ಟೇ ಸಂಕೀರ್ಣವಾದ ಹೃದಯ ಕಾಯಿಲೆಗಳಿದ್ದರೂ ನಮ್ಮಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದು ಎಂಬುದಕ್ಕೆ ಈ ಶಸ್ತ್ರಚಿಕಿತ್ಸೆಯೇ ಸಾಕ್ಷಿ,” ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸುನಿಲ್ ಭಂಡಾರಿಗಲ್ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡಾಕ್ಟರ್ ಮಲ್ಲೇಶ್ ಮಾರುಕಟ್ಟೆ ವಿಭಾಗದ ಶ್ರೀ ಪ್ರಶಾಂತ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















