ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದೇವ ಸೃಷ್ಟಿಯ ವೈವಿಧ್ಯಮಯ ಜೀವ ಸಂಕುಲವನ್ನು ಹುಲು ಮನುಜನೊಬ್ಬನೇ ತಿಂದು ತೇಗಿದ್ದಾನೆ. ಕಣ್ಣಿಗೆ ಕಾಣುವ ಅತಿ ಚಿಕ್ಕ ಜಂತುವಿನಿಂದ ಹಿಡಿದು ಕಡಲ ದೈತ್ಯ ತಿಮಿಂಗಿಲದ ಪರ್ಯಂತ ಯಾವ ಜೀವಿಯನ್ನು ಮನುಷ್ಯ ಬಿಡಲಿಲ್ಲ. ಬಿಡುತ್ತಿಲ್ಲ. ಬ್ರಹ್ಮಾಂಡ ತನ್ನದು, ತಾನೇ ಬ್ರಹ್ಮಾಂಡದ ದೊರೆ, ವಾರಸುದಾರ ಎಂಬಂತೆ ಮನಸ್ಸು ಬಂದಂತೆ ವರ್ತಿಸುತ್ತಿದ್ದಾನೆ. ಇಲ್ಲಿರುವ ಸಕಲ ಜೀವ ಸಂಕುಲಗಳೂ ಪ್ರಕೃತಿಯ ಪೂರಕ ಎಂದು ಮಾನವ ಒಪ್ಪಿಕೊಂಡಂತೆ ಕಂಡು ಬರುವುದಿಲ್ಲ. ಈಗಾಗಲೇ ಮಾನವನಿಂದಾಗಿ ಹಲವು ಜೀವಿಗಳು ತಮ್ಮ ಅಸ್ತಿತ್ವವನ್ನು ಕಳಕೊಂಡು ಲುಪ್ತವಾಗಿವೆ. ಕೆಲವು ವಿನಾಶದ ಅಂಚಿನಲ್ಲಿವೆ. ಇದಕ್ಕೆಲ್ಲ ಸಿಗುವ ಕಾರಣ ಒಂದೇ ಮಾನವ ಮತ್ತವನ ನಾಲಗೆ.
ನಮ್ಮ ದೇಶದಲ್ಲಿ ಆರ್ಯರ ವಲಸೆಯ ಬಳಿಕ ಯಜ್ಞ ಯಾಗಾದಿಗಳ ಹೆಸರಲ್ಲಿ ಕುದುರೆ, ಕೋಣ, ಕುರಿ, ಕೋಳಿ ಮುಂತಾದ ಆಯ್ದ ಪ್ರಾಣಿ, ಪಕ್ಷಿಗಳನ್ನು ಬಲಿಗೊಟ್ಟು ಭಕ್ಷಿಸಲಾಗುತ್ತಿತ್ತು. ಇದಕ್ಕೆ ಧಾರ್ಮಿಕ ಗ್ರಂಥಗಳಲ್ಲಿ ಸಾಕಷ್ಟು ಉದಾಹರಣೆಗಳಿವೆ. ಮಹಾವೀರ, ಬುದ್ಧರ ಕಾಲದಲ್ಲಿ ಅಹಿಂಸೆಯ ಪ್ರಚಾರ ವ್ಯಾಪಕವಾಗಿ ನಡೆದು ಪ್ರಾಣಿ ಹಿಂಸೆ ಗಣನೀಯವಾಗಿ ಕ್ಷೀಣಗೊಂಡದ್ದು ಇತಿಹಾಸದಿಂದ ತಿಳಿದು ಬರುತ್ತದೆ. ಜೈನ ಧರ್ಮ ಇಂದಿಗೂ ಅಹಿಂಸೆಯ ಪರವಾಗಿ ಗಟ್ಟಿಯಾಗಿ ನಿಂತಿರುವುದನ್ನು ನಾವು ಕಾಣಬಹುದು.
ದಾಳಿಕೋರ ಮುಸಲ್ಮಾನರಿಂದ ಗೋಹತ್ಯೆಗಳು ಆರಂಭವಾದರೆ; ಪಾಶ್ಚಿಮಾತ್ಯರ ಆಗಮನದ ಅನಂತರದಲ್ಲಿ ಸಾರ್ವತ್ರಿಕವಾಯಿತು. ವಿಪರ್ಯಾಸವೆಂದರೆ; ಬೌದ್ಧ ಧರ್ಮವನ್ನು ಒಪ್ಪಿಕೊಂಡ ಚೀನಾದಂತಹ ದೇಶಗಳಲ್ಲಿ ವ್ಯಾಪಕವಾಗಿ ಪ್ರಾಣಿ ಹಿಂಸೆ ನಡೆಯುತ್ತಿವೆ. ಮಾಂಸ ಭಕ್ಷಣೆಯ ಸಲುವಾಗಿ ಸಾಕುಪ್ರಾಣಿ, ಸರೀಸೃಪ, ಜಲಚರ, ವನಚರ ಹಾಗೂ ಕಣ್ಣಿಗೆ ಕಾಣುವ ಯಾವುದೇ ಜೀವಿಗಳನ್ನು ಅವರು ಬಿಡದೇ ಭಕ್ಷಿಸುತ್ತಾರೆ. ಚೀನಾದಲ್ಲಿ ಜಗತ್ತಿನ ಲಭ್ಯ ಜೀವಿಗಳ ಮಾಂಸ ಮಾರಾಟದ ಮಳಿಗೆಗಳು ಅಗಣಿತವಾಗಿವೆ. ಅಂತಹುಗಳಲ್ಲಿ ‘ವುಹಾನ್’ ಮಾರುಕಟ್ಟೆಯೂ ಒಂದು. ಪ್ರಸ್ತುತ ಜಗತ್ತಿನ ತಲ್ಲಣಕ್ಕೆ ಕಾರಣವಾದ ’ಕೊರೋನ’ ಎಂಬ ಮಾರಕ ಸೂಕ್ಷ್ಮ ಜೀವಿಯ ತವರು ಮನೆ ಈ ವುಹಾನ್ ಮಾರುಕಟ್ಟೆ ಎಂದು ಗುರುತಿಸಲಾಗಿದೆ. ಇಲ್ಲಿಯ ತಜ್ಞ ವೈದ್ಯನೊಬ್ಬ ಮೊದಲ ಬಾರಿ ಕೊರೋನಾದ ಬಗ್ಗೆ ಎಚ್ಚರಿಸಿದಾಗ ಚೀನಾದ ಎಡಪಂಥಿಯ ಸರಕಾರ ಅವನಿಗೆ ಜೈಲು ಶಿಕ್ಷೆ ವಿಧಿಸಿತು. ಸರಕಾರಕ್ಕೆ ನಿಜದ ಅರಿವಾಗುವಷ್ಟರಲ್ಲಿ ಆ ವೈದ್ಯ ಇದೇ ಕಾಯಿಲೆಗೆ ಬಲಿಯಾಗಿ ಸತ್ತಿದ್ದ. ವುಹಾನ್’ನಿಂದ ಆರಂಭಗೊಂಡ ಕೊರೋನದ ಜೈತ್ರಯಾತ್ರೆ ಪ್ರಪಂಚದ ಮೂಲೆಗಳಿಗೆ ತಲುಪಿ ರಣಕಹಳೆ ಮೊಳಗಿಸುತ್ತಿದೆ. ಸಂತ್ರಸ್ತ ದೇಶಗಳ ಯಾದಿಯಲ್ಲಿ ನಮ್ಮ ದೇಶವೂ ಮುಂದಿದೆ.
ಮಾರ್ಚು ತಿಂಗಳ ಮೂರನೇ ವಾರದಿಂದ ಆರಂಭವಾದ ಲಾಕ್ ಡೌನ್ ಎಂಬ ಮನೆವಾಸ ಇಂದಿಗೂ ಜಾರಿಯಲ್ಲಿದೆ. ನಾಲ್ಕು ತಿಂಗಳುಗಳು ಮುಗಿಯುತ್ತಾ ಬಂದರೂ ತೆರವಾಗುವ ಲಕ್ಷಣಗಳು ಕಾಣುತ್ತಿಲ್ಲ. ಮೊದಲಿಗೆ ಹದಿನೈದು ದಿನಗಳ ಲೆಕ್ಕಾಚಾರದಲ್ಲಿ ಆರಂಭವಾದ ಲಾಕ್ ಡೌನ್ ಈಗ ಮಾಸಿಕಗಳಿಗೆ ನಿಗದಿಯಾಗತೊಡಗಿದೆ. ಕೊರೋನಾ ಸಾಂಕ್ರಾಮಿಕವಾಗದಂತೆ ತಡೆಯೊಡ್ಡುವ ನೆಲೆಯಲ್ಲಿ ಸರಕಾರ ಲಾಕ್ ಡೌನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ ಈ ವ್ಯವಸ್ಥೆಯ ವ್ಯತಿರಿಕ್ತವಾದ ಪರಿಣಾಮಗಳನ್ನೂ ನಾವು ಕಾಣುತ್ತಿದ್ದೇವೆ. ಹಳ್ಳಿಗಳಲ್ಲಿ ಅಷ್ಟಾಗಿ ಪ್ರತಿಕೂಲ ಪರಿಸ್ಥಿತಿಯನ್ನು ತಂದೊಡ್ಡದ ಲಾಕ್ ಡೌನ್ ನಗರವಾಸಿಗಳ ಬದುಕನ್ನು ಬಗ್ಗಡಗೊಳಿಸಿರುವುದಂತೂ ಸತ್ಯ. ವ್ಯಾಪಾರ ವ್ಯವಹಾರಗಳನ್ನು ಮುಚ್ಚಲಾಗಿದೆ. ಸುಗಮವಾಗಿ ತಾಯ್ನಾಡಿಗೂ ಹೋಗುವಂತಿಲ್ಲ. ಹಲವು ಕಠಿಣ ನಿಯಮಗಳನ್ನು ಪಾಲಿಸಿ ನಂತರ ಹೋದರೂ ಮನೆಯವರು, ಆಸುಪಾಸಿನವರು ಒಪ್ಪಿಕೊಳ್ಳುತ್ತಿಲ್ಲ. ಹೊಟೇಲು ಕ್ಯಾಂಟೀನ್ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಕನಿಷ್ಠ ವೇತನಕ್ಕೆ ದುಡಿಯುವ ವರ್ಗದ ಜನರ ಬವಣೆ ಸಹ್ಯವಾಗಿಲ್ಲ. ಆರ್ಥಿಕ ದುರ್ಬಲತೆಯಿಂದಾಗಿ ಬದುಕು ಶೋಚನೀಯವಾಗಿದೆ.
ಎಲೆಕ್ಟ್ರಾನಿಕ್ ಮಾಧ್ಯಮಗಳ ಸುದ್ದಿಗಳು ಮರಣ ವಾರ್ತೆಗಳಾಗಿವೆ. ಜನರ ಭಯ ನಿರ್ಮೂಲನೆ ಮಾಡಬೇಕಾದವರು ಭಯ ನಿರ್ಮಾಣ ಮಾಡುತ್ತಿದ್ದಾರೆ. ನಗರವಾಸಿಗಳ ಜೀವನ ಸ್ಥಿತಿ ದಾರುಣವಾಗಿವೆ. ಮಕ್ಕಳ ಶಾಲಾ ಶುಲ್ಕ, ಖಾಸಗಿ ತರಗತಿಗಳ ಶುಲ್ಕ ಭರಿಸಬೇಕಾಗಿದೆ. ಆನ್ ಲೈನ್ ಸೌಲಭ್ಯ ಮತ್ತು ಅದಕ್ಕೆ ತಕ್ಕಂತಿರುವ ಮೊಬೈಲ್ ಪೋನುಗಳ ಸೌಕರ್ಯಗಳು ಬೇಕಾಗಿವೆ. ಮಕ್ಕಳಿಗೆ ಮೊಬೈಲ್ ಕೊಡಬೇಡಿ ಎಂದು ಡಂಗುರ ಸಾರುತ್ತಿದ್ದವರೇ ಇಂದು ದಿನದ 10-12 ಗಂಟೆಗಳ ಕಾಲ ಮೊಬೈಲಿಗೆ ಮುತ್ತಿಡುವಂತೆ ಮಾಡುತ್ತಿದ್ದಾರೆ. ದಿನಬಳಕೆಯ ವಸ್ತುಗಳು ತುಟ್ಟಿಯಾಗಿವೆ. ಕೆಲಸ ಮಾಡುವಂತಿಲ್ಲ. ಕೆಲಸವಿಲ್ಲದೆ ಜೀವನ ನಿರ್ವಹಣೆ ಸಾಧ್ಯವಿಲ್ಲ. ಅನಾಥ ಪ್ರಜ್ಞೆ, ಒಂಟಿತನ, ನಿರುತ್ಸಾಹ, ದುಗುಡ, ಶೀಘ್ರ ಕೋಪ, ಕೌಟುಂಬಿಕ ಅಭದ್ರತೆ, ಮನೆಯವರ ಮೂದಲಿಕೆ, ಮಾನಸಿಕ ಖಿನ್ನತೆ ಮೊದಲಾದ ಕಾರಣಗಳಿಂದ ಹೃದಯಾಘಾತ, ಅಸಹಜ ಸಾವು, ಆತ್ಮಹತ್ಯೆ ಮೊದಲಾದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿವೆ. ಬಡತನ, ಹಸಿವು, ಸ್ವಾಭಿಮಾನದ ಕಾರಣದಿಂದಾಗಿ ನಗರವಾಸಿಗಳ ಬದುಕು ಅಸಹನೀಯವಾಗಿದೆ. ಲಾಕ್ ಡೌನ್ ಎಂಬುದು ರಾಹುಗ್ರಸ್ತ ಗ್ರಹಣವಾಗಿದೆ. ಇನ್ನೂ ಮುಂದುವರಿದರೆ ಬದುಕು ಸಾಗುವುದು ಹೇಗೆ ಎಂಬ ಪ್ರಶ್ನೆ ಕಾಡತೊಡಗಿದೆ. ಆದಷ್ಟೂ ಬೇಗ ಮತ್ತು ವೇಗದಲ್ಲಿ ಸರಕಾರ ಸುಕಲ್ಪಿತ ವ್ಯವಸ್ಥೆಗಳನ್ನು ಜಾರಿಗೆ ತಾರದೇ ಹೋದಲ್ಲಿ ಜನರ ಬದುಕು ಹೇಗೆ ಮತ್ತು ಎತ್ತ ಎಂಬಂಥ ಪ್ರಶ್ನೆಗಳಿಗೆ ಗ್ರಾಸವಾಗುವುದರಲ್ಲಿ ಲವಲೇಶವೂ ಸಂದೇಹವಿಲ್ಲ.
Get In Touch With Us info@kalpa.news Whatsapp: 9481252093
Discussion about this post