ನವದೆಹಲಿ/ಇಟಾನಗರ: ಅರುಣಾಚಲ ಪ್ರದೇಶದಲ್ಲಿ ಜೂನ್ 3ರಂದು ಅಪಘಾತಕ್ಕೀಡಾಗಿದ್ದ ಭಾರತೀಯ ವಾಯುಸೇನೆಗೆ ಸೇರಿದ ಎಎನ್-32 ವಿಮಾನದಲ್ಲಿದ್ದವರಲ್ಲಿ 13 ಯೋಧರು ವೀರಸ್ವರ್ಗ ಸೇರಿದ್ದು, ಇವರುಗಳ ಪಾರ್ಥಿವ ಶರೀರವನ್ನು ಇಂದು ಅಸ್ಸಾಂಗೆ ತರಲಾಗುತ್ತಿದೆ.
ಈ ಕುರಿತಂತೆ ಐಎಎಫ್ ಅಧಿಕೃತ ಟ್ವೀಟ್ ಮಾಡಿದ್ದು, ವೀರಯೋಧರ ಪಾರ್ಥಿವ ಶರೀರಗಳನ್ನು ಅಸ್ಸಾಂನ ಜೋರ್ಹಟ್ ವಾಯುನೆಲೆಗೆ ತರಲಾಗುತ್ತಿದೆ ಎಂದಿದೆ.
ಇನ್ನು, ವಿಮಾನ ಅಪಘಾತ ಸಂಭವಿಸಿದ ಪ್ರದೇಶದಿಂದ ವಿಮಾನದ ಬ್ಲಾಕ್ ಬಾಕ್ಸ್ ಹಾಗೂ ಕಾಕ್’ಪಿಟ್ ವಾಯ್ಸ್ ರೆಕಾರ್ಡ್ರ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇದರ ಮೂಲಕ ವಿಮಾನ ಅಪಘಾತಕ್ಕೆ ಕಾರಣಗಳನ್ನು ತಿಳಿದುಕೊಳ್ಳಲಾಗುತ್ತದೆ.
ಇದೇ ವೇಳೆ, ಐಎಎಫ್’ಗೆ ಸೇರಿದ ಈ ವಿಮಾನ ಅಪಘಾತದ ಕುರಿತಾಗಿ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.
ವಿಂಗ್ ಕಮಾಂಡರ್ ಜಿಎಂ ಚಾರ್ಲ್ಸ್, ಸ್ವ್ಕಾರ್ಡನ್ ಲೀಡರ್ ಎಚ್. ವಿನೋದ್, ಫ್ಲೈಟ್ ಲೆಫ್ಟಿನೆಂಟ್ ಎಂಕೆ ಮಾರ್ಗ್, ಎಸ್. ಮೊಹಂತಿ, ಆಶಿಶ್ ತನ್ವಾರ್, ಆರ್. ಥಪಾ, ವಾರಂಟ್ ಆಫೀಸರ್ ಕೆಕೆ ಮಿಶ್ರಾ, ಸಾರ್ಜೆಂಟ್ ಅನೂಪ್ ಕುಮಾರ್, ಕರ್ನಲ್ ಶಹ್ರೀನ್, ಲೀಡಿಂಗ್ ಏರ್’ಕ್ರಾಫ್ಟ್’ಮನ್ ಎಸ್.ಕೆ. ಸಿಂಗ್, ಪಂಕಜ್, ಎನ್’ಸಿ(ಇ) ಪುಥಲ್ ಹಾಗೂ ರಾಜೇಶ್ ಕುಮಾರ್’ ಅವರುಗಳೇ ಘಟನೆಯಲ್ಲಿ ವೀರಸ್ವರ್ಗ ಸೇರಿದ ತಾಯಿ ಭಾರತಿಯ ಪುತ್ರರು.

















