ಭದ್ರಾವತಿ: ತಮ್ಮ ಕಡಿಮೆ ಅವಧಿಯಲ್ಲಿ ಸಂಸದರ ಅನುದಾನದಿಂದ ಬೇಧವಿಲ್ಲದೆ ಎಲ್ಲಾ ಸರಕಾರಿ ಶಾಲಾ-ಕಾಲೇಜುಗಳಿಗೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ನೀಡಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಶುಕ್ರವಾರ ನಗರದ ನ್ಯೂಟೌನ್ ಸರಕಾರಿ ಸರ್.ಎಂ. ವಿಶ್ವೇಶ್ವರಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸಂಸದರ ನಿಧಿಯ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿ ಮಾತನಾಡಿ ಜಿಲ್ಲೆಯಲ್ಲಿ ತೆರವಾಗಿದ್ದ ಮರು ಚುನಾವಣೆಯ ಬಳಿಕ ಚುನಾಯಿತನಾಗಿರುವ ತಾವು ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಅನುದಾನ ಬಳಿಸಿ ಮಧ್ಯಮ ಹಾಗು ಹಿಂದುಳಿದ ವರ್ಗದ ಹೆಚ್ಚಿನ ವಿದ್ಯಾರ್ಥಿಗಳಿರುವ ಸರಕಾರಿ ಶಾಲಾ ಕಾಲೇಜುಗಳ ಅಭಿವೃದ್ದಿಗಾಗಿ ಹೆಚ್ಚಿನ ಪ್ರಾಶಸ್ತ ನೀಡಿ ಉತ್ತೆಜನ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ಅಭಿವೃದ್ದಿಗಳ ಕಾರ್ಯಗಳು ನಡೆಯುತ್ತಿವೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ಬಳಸಿಕೊಂಡು ವೈದ್ಯಕೀಯ, ಆಯುರ್ವೇದ ಕಾಲೇಜು, ತೋಟಗಾರಿಕೆ ಸೇರಿದಂತೆ ವಿದ್ಯಾರ್ಜನೆಗೆ ಸಂಬಂಧಿತ ಅನೇಕ ಯೋಜನೆಗಳ ಜಾರಿಗೆ ತರಲಾಗಿದೆ. ಕೈಗಾರಿಕ ನಗರವಾದ ಭದ್ರಾವತಿ ನಶಿಸಿಹೋಗಬಾರದೆಂಬ ದೂರಾಲೋಚನೆಯಿಂದ ಕೈಗಾರಿಕಾ ಪ್ರದೇಶದಲ್ಲಿ ಶಾಹಿ ಗಾರ್ಮೆಂಟ್ಸ್ ಸ್ಥಾಪಿಸಿ ಸಾವಿರಾರು ಬಡಕುಟುಂಬಗಳಿಗೆ ಬದುಕು ರೂಪಿಸಿಕೊಡಲಾಗಿದೆ ಎಂದರು.
ನಗರಸಭಾ ಹಿರಿಯ ಸದಸ್ಯ ವಿ. ಕದಿರೇಶ್, ತಾಪಂ ಸದಸ್ಯ ಕೆ. ಮಂಜುನಾಥ್, ಬಿಜೆಪಿ ನಗರಘಟಕ ಅಧ್ಯಕ್ಷ ಜಿ. ಆನಂದಕುಮಾರ್, ಗ್ರಾಮಾಂತರ ಘಟಕದ ಅಧ್ಯಕ್ಷ ಮಂಗೋಟೆ ರುದ್ರೇಶ್, ಮುಖಂಡರಾದ ಧರ್ಮಪ್ರಸಾದ್, ಜಿ. ಪ್ರವೀಣ್ ಪಟೇಲ್, ರವಿಚಂದ್ರನ್, ಸುನಿಲ್ ಗಾಯಕ್ವಾಡ್, ಕಾಲೇಜಿನ ಪ್ರಾಂಶುಪಾಲ ಎಂ.ಜಿ. ಉಮಾಶಂಕರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಕಾಲೇಜಿನ ವಿದ್ಯಾಥಿಗಳ ಅನುಕೂಲಕ್ಕಾಗಿ ಸಭಾಂಗಣ ನೀಡುವಂತೆ ಸಂಸದರಿಗೆ ಮನವಿ ಸಲ್ಲಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)

















