ಕಲ್ಪ ಮೀಡಿಯಾ ಹೌಸ್
ಮೈಸೂರು: ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಸುಧರ್ಮ ಸಂಪಾದಕ ನಿನ್ನೆ ವಿಧಿವಶರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎ.ವಿ. ಸಂಪತ್ ಕುಮಾರ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಮೈಸೂರಿನಲ್ಲಿರುವ ಮೃತರ ಸ್ವಗೃಹ ಬಳಿ ಅಂತ್ಯಸಂಸ್ಕಾರದ ಪೂರ್ವ ವಿಧಿವಿಧಾನಗಳು ಜರುಗಿತು. ಸಂಪತ್ಕುಮಾರ್ ಅವರು ಪದ್ಮಶ್ರಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಸರ್ಕಾರಿ ಗೌರವ ಸಲ್ಲಿಸಲಾಯಿತು.

ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಪರವಾಗಿ ಮೃತರಿಗೆ ಪುಷ್ಟನಮನ ಸಲ್ಲಿಸಲಾಯಿತು. ಮೂರು ಸುತ್ತು ಕುಶಾಲತೋಪು ಹಾರಿಸಿ, ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಸರ್ಕಾರಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮೃತರ ಕುಟುಂಬಸ್ಥರು, ಶಾಸಕ ಎಸ್. ಎ. ರಾಮದಾಸ್ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

‘ಸುಧರ್ಮ’ ಪತ್ರಿಕೆ ಹಿನ್ನೆಲೆ:
ಸಂಪತ್ ಕುಮಾರ್ ಮತ್ತವರ ಪತ್ನಿ ಸುಧರ್ಮವನ್ನು ನಡೆಸಿಕೊಂಡು ಬರುತ್ತಿರುವುದು ಒಂದು ರೀತಿಯ ಅದ್ಬುತವೇ ಹೌದು. ಸುಮಾರು ನಾಲ್ಕು ಸಾವಿರ ಚಂದಾದಾರರ ಕೊಡುಗೆಯಿಂದಲೇ ಮುಂದುವರಿಯಬೇಕಾದ ಪತ್ರಿಕೆಗೆ ಜಾಹೀರಾತಿನ ವಿಶೇಷ ಬೆಂಬಲವೇನಿಲ್ಲ. ಸುಧರ್ಮ ತನ್ನ ಅಂತರ್ಜಾಲ ಅವತರಣಿಕೆಯಲ್ಲಿ ಸುಮಾರು ಒಂದೂವರೆ ಲಕ್ಷ ಓದುಗರನ್ನು ಹೊಂದಿದೆ ಎನ್ನಲಾಗಿದೆ.
ಸಂಪತ್ ಅವರ ತಂದೆ ಪಂಡಿತ್ ಕೆ.ಎನ್. ವರದರಾಜ ಅಯ್ಯಂಗಾರ್ ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸುವ ಏಕೈಕ ಉದ್ದೇಶದಿಂದ 1970 ರಲ್ಲಿ ಸುಧರ್ಮ ಸಂಸ್ಕೃತ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಅವರ ನಂತರ ಸಂಪತ್ ಈ ಜವಾಬ್ದಾರಿ ವಹಿಸಿದು ಇತ್ತೀಚೆಗೆ ಜಗತ್ತಿನಾದಂತದ ಸಂಸ್ಕೃತ ಅಭಿಮಾನಿಗಳು, ವಿದ್ವಾಂಸರನ್ನು ಒಂದಾಗಿಸಲು ಅವರು ಪತ್ರಿಕೆಯ ಇ-ಪೇಪರ್ ಆವೃತ್ತಿಯನ್ನು 2009ರಲ್ಲಿ ಪ್ರಾರಂಭಿಸಿದ್ದರು.

1970ರಲ್ಲಿ ವರದರಾಜ ಅಯ್ಯಂಗಾರ್ ಅವರು ಪ್ರಾರಂಭಿಸಿದ್ದ ಪತ್ರಿಕೆ ಸುಧರ್ಮ. ಸಂಸ್ಕೃತ ಎಂದರೆ ಕೇವಲ ವಿದ್ವಾಂಸರಿಗೆ ಎಂಬ ಗ್ರಹಿಕೆಯನ್ನು ಬದಲಾಯಿಸುವುದಕ್ಕೆ, ದೈನಂದಿನ ಆಗುಹೋಗುಗಳೂ ಸಂಸ್ಕೃತದಲ್ಲಿ ವರದಿಯಾಗಿ ಅವನ್ನು ಜನ ಓದುವಂತಾಗಲಿ ಎಂಬ ಉದಾತ್ತ ಧ್ಯೇಯದಿಂದ ಪ್ರಾರಂಭಿಸಿದ್ದ ಪತ್ರಿಕೆಯಾಗಿದೆ.
1990ರಲ್ಲಿ ವರದರಾಜ ಅಯ್ಯಂಗಾರ್ ಅವರ ಮರಣಾನಂತರ ಸಂಪತ್ ಕುಮಾರ್ ದಂಪತಿ ಅದನ್ನು ಮುಂದುವರಿಸಿಕೊಂಡು ಬಂದರು. ನಾಲ್ಕು ಪುಟಗಳ ಪತ್ರಿಕೆಯಲ್ಲಿ ದಿನದ ಮುಖ್ಯ ವಿದ್ಯಮಾನ, ಶೈಕ್ಷಣಿಕ ಕೋರ್ಸುಗಳ ಕುರಿತ ಮಾಹಿತಿ, ಕ್ರೀಡೆ ಇತ್ಯಾದಿ ಸಂಗತಿಗಳ ಕುರಿತ ಬರಹಗಳೂ ಪ್ರಕಟವಾಗುತ್ತವೆ. ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲೂ ಸುಧರ್ಮ ಕುರಿತು ಉಲ್ಲೇಖ ಮತ್ತು ಪ್ರಶಂಸೆಗಳು ವ್ಯಕ್ತವಾಗಿತ್ತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















