ಕಲ್ಪ ಮೀಡಿಯಾ ಹೌಸ್ | ಮೈಸೂರು |
ಈ ಬಾರಿಯ ಚುನಾವಣೆಯಲ್ಲಿ ಟಿಕೇಟ್ ದೊರೆಯದೇ ಇದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸೂಚನೆಯನ್ನು ಪರೋಕ್ಷವಾಗಿ ಕೃಷ್ಣರಾಜ ಕ್ಷೇತ್ರದ ಟಿಕೇಟ್ ಆಕಾಂಕ್ಷಿ, ಶಾಸಕ ಎಸ್.ಎ. ರಾಮದಾಸ್ #SARamadas ನೀಡಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಇದು ನನ್ನ ಕೊನೆಯ ಚುನಾವಣೆ ಎಂದು ಕೇಂದ್ರದ ವರಿಷ್ಠರಿಗೆ ತಿಳಿಸಿದ್ದೇನೆ. ಆದರೆ, ಇದಕ್ಕೂ ಉನ್ನತ ಅವಕಾಶಗಳನ್ನು ನೀಡಲಾಗುತ್ತದೆ ಎಂದು ವರಿಷ್ಠರು ತಿಳಿಸಿದ್ದು, ಅದ್ಯಾವುದೂ ನನಗೆ ಬೇಡ. ಇದೊಂದು ಅವಕಾಶ ನೀಡಿ ಎಂದು ಮನವಿ ಮಾಡಿದ್ದೇನೆ. ಟಿಕೇಟ್ ನೀಡುವ ಸಾಧ್ಯತೆಯಿದೆ ಎಂದರು.
ಪಕ್ಷ ನನಗೆ ತಾಯಿ ಇದ್ದ ಹಾಗೆ. ನನಗೆ ತಾಳ್ಮೆ ಇದೆ. ಮಾಧ್ಯಮ ವರದಿಗಳು ಎಲ್ಲಾ ಸರ್ವೆಗಳು ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಅಂತ ಇದೆ. ಕಾರ್ಯಕರ್ತರ ಮಾತೇ ಅಂತಿಮ ಎಂದು ಭಾವುಕರಾದರು.
ಇದು ನನ್ನ ಕೊನೆಯ ಚುನಾವಣೆಯಾಗಿದ್ದು ಇದರಲ್ಲಿ ಗೆದ್ದು ಬಾಕಿ ಉಳಿದಿರುವ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದೇನೆ. ಈ ಎಲ್ಲಾ ಬೆಳವಣಿಗೆಯ ನಡುವೆಯೂ ಟಿಕೆಟ್ ನೀಡದಿದ್ದರೆ ಪಕ್ಷ ದ ಕಾರ್ಯಕರ್ತರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದನಾಗುತ್ತೇನೆ. ಆದರೆ ನಾನು ಯಾವ ಪಕ್ಷ ಕ್ಕೂ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಬೇರೆ ಪಕ್ಷಗಳಿಂದ ಕರೆ ಬಂದಿದೆ
ಇನ್ನು ಇಲ್ಲಿಗೆ ಬರುವಾಗ ದೊಡ್ಡ ಪಕ್ಷದ ನಾಯಕರು ಕರೆ ಮಾಡಿ ಅವರ ಪಕ್ಷಕ್ಕೆ ಬರುವಂತೆ ಮನವಿ ಮಾಡಿದರು. ಆದರೆ, ಎಂತಹುದ್ದೇ ಪರಿಸ್ಥಿತಿಯಲ್ಲೂ ನಾನು ಪಕ್ಷ ಬಿಡುವುದಿಲ್ಲ ಎಂದು ತಿಳಿಸಿದ್ದೇನೆ. ಕಾರ್ಯಕರ್ತರ ಜೊತೆಯಲ್ಲಿ ಮಾತನಾಡಬೇಕಿದೆ. ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೆ ಚರ್ಚೆ ಮಾಡಬೇಕು. ನಾನು ಮುಂದೆ ಚುನಾವಣೆ ನಿಲ್ಲುವುದಿಲ್ಲ. ಟಿಕೆಟ್ ನೀಡಲಿ ಬಿಡಿ. ಟಿಕೆಟ್ ನೀಡದಿದ್ದರೆ ಕಾರ್ಯಕರ್ತರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದವಾಗುತ್ತೇನೆ ಎಂದಿದ್ದಾರೆ.
ಇನ್ನು, ಟಿಕೇಟ್ ದೊರೆಯದೇ ಇದ್ದರೆ ಪಕ್ಷೇತರರಾಗಿ ಕಣಕ್ಕಿಳಿಯಬೇಕು ಎಂದು ನೆರೆದಿದ್ದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಮದಾಸ್ ಅವರು ನಿಮ್ಮನ್ನು ಕೇಳಿಯೇ ಎಲ್ಲ ನಿರ್ಧಾರ ಕೈಗೊಳ್ಳುತ್ತೇನೆ. ವರಿಷ್ಠರಿಗೆ ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟಿದ್ದೇನೆ. ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ. ಅವರ ಮಾತಿಗೆ ಬೆಲೆ ನೀಡಿ ಸ್ವಲ್ಪ ಕಾಯೋಣ. ಟಿಕೇಟ್ ಘೋಷಣೆಯಾಗದೇ ಇದ್ದರೆ ಆನಂತರ ಎಲ್ಲರೂ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳೋಣ ಎಂದು ಹೇಳುವ ಮೂಲಕ ಪಕ್ಷೇತರರಾಗಿ ಕಣಕ್ಕಿಳಿಯುವ ಸೂಚನೆಯನ್ನು ಪರೋಕ್ಷವಾಗಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post