ಕಲ್ಪ ಮೀಡಿಯಾ ಹೌಸ್ | ಮೈಸೂರು |
ನೈಋತ್ಯ ರೈಲ್ವೆಯ ಮೈಸೂರು ಘಟಕದಲ್ಲಿ South Western Railway Mysore Division ರೈಲ್ವೆ ಸಿಗ್ನಲ್ ಕೇಬಲ್ ಕಳವು ಮಾಡಿದ್ದ ಚಿತ್ರದುರ್ಗದ ಇಬ್ಬರನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ ಕಳ್ಳತನ ಮಾಡಲಾಗಿದ್ದ ರೈಲ್ವೆ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರನ್ನು ಚಿತ್ರದುರ್ಗ ಜಿಲ್ಲೆಯ ನಿವಾಸಿಗಳಾದ ರಘು (23) ಮತ್ತು ತಿಪ್ಪಣ್ಣ (55) ಎಂದು ಗುರುತಿಸಲಾಗಿದೆ.
ಪೂರ್ವ ಮಾಹಿತಿ ಆಧಾರದ ಮೇಲೆ, 2026ರ ಮೇ 5ರಂದು ಆರ್’ಪಿಎಫ್ ಸಿಬ್ಬಂದಿ ಅಶೋಕಪುರಂ ಮತ್ತು ಕಡಕೊಳ ರೈಲು ನಿಲ್ದಾಣಗಳ ಮಧ್ಯೆ ನಿಗಾವಹಣೆ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಇಬ್ಬರನ್ನು ತಡೆದು ವಿಚಾರಣೆಗೆ ಒಳಪಡಿಸಲಾಗಿತ್ತು.
2026ರ ಮೇ 6ರಂದು ನಡೆದ ವಿಚಾರಣೆಯಲ್ಲಿ, ಆರೋಪಿಗಳು ಸುಮಾರು ಒಂದು ತಿಂಗಳ ಹಿಂದೆ 19 ಕೋಟಿ ರೈಲ್ವೆ ಸಿಗ್ನಲ್ ಕೇಬಲ್ ಸುಮಾರು 15 ಮೀಟರ್ ಕಳವು ಮಾಡಿರುವುದಾಗಿ ಒಪ್ಪಿಕೊಂಡರು. ಘಟನೆಯ ಸಂದರ್ಭದಲ್ಲಿ ಅವರು ರಾಜ್ಯ ನೀರಿನ ಪೈಪ್ ಲೈನ್ ಕಾಮಗಾರಿಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಗುಂಡಿ ಅಗೆಯುವ ವೇಳೆ ಹೊರಬಿದ್ದ ರೈಲ್ವೆ ಕೇಬಲ್’ಗಳನ್ನು ಗಮನಿಸಿದ್ದರು.
ಅವರು ಮುಂಜಾನೆ ಸಮಯದಲ್ಲಿ ಕೇಬಲ್ ಕಳವು ಮಾಡಿ, ಮೈಸೂರು ನಗರದ ಶ್ರೀನಗರ ಲೇಔಟ್ ಪ್ರದೇಶಕ್ಕೆ ಸಾಗಿಸಿ, ತಾಮ್ರವನ್ನು ಪಡೆಯಲು ಅದನ್ನು ಸುಟ್ಟು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳ ಸ್ವಯಂ ಹೇಳಿಕೆ ಆಧಾರದ ಮೇಲೆ, ಅವರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಸುಟ್ಟ ಕೇಬಲ್ ಅವಶೇಷಗಳು ಮತ್ತು ಪ್ಲಾಸ್ಟಿಕ್ ಚೀಲದಲ್ಲಿ ಮರೆಮಾಡಿದ್ದ ಸುಮಾರು 5 ಕಿಲೋಗ್ರಾಂ ತಾಮ್ರ ತಂತಿಯನ್ನು ವಶಪಡಿಸಿಕೊಂಡು ಜಪ್ತಿ ಮಾಡಲಾಗಿದೆ.
ಆರೋಪಿಗಳು ಪ್ರಕರಣಕ್ಕೆ ಸಂಬಂಧಪಟ್ಟಿರುವುದು ದೃಢಪಟ್ಟಿದ್ದು, ಸಂಬಂಧಿತ ಕಾನೂನಿನಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಕರಣವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















