ಕಲ್ಪ ಮೀಡಿಯಾ ಹೌಸ್ | ಮೈಸೂರು | ಸಂಗ್ರಹ ರೂಪ: ರಘುರಾಮ |
ಗುರುಗಳ ಪರಮ ಅನುಗ್ರಹ ಇದ್ದರೆ ದೇವರೂ ನಮಗೆ ವಶವಾಗುತ್ತಾನೆ ಎಂದು ಪಂಡಿತ ಬಾದರಾಯಣಾಚಾರ್ಯ ಹೇಳಿದರು.
ಚಾಮರಾಜ ಜೋಡಿರಸ್ತೆ ವೆಂಕಟಾಚಲಧಾಮ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಾಗವತ ಸಪ್ತಾಹ ಮಂಗಳ ಮಹೋತ್ಸವದಲ್ಲಿ ಅವರು ಪ್ರವಚನ ನೀಡಿದರು.
ಬಲಿ ಚಕ್ರವರ್ತಿಗೆ ಗುರುಗಳ ಅನನ್ಯ ಅನುಗ್ರಹವಿತ್ತು. ದಾನದ ಮೂಲಕ ಅವನು ಸಾರ್ಥಕತೆ ಕಂಡ. ಬಲಿಗೆ ಮುಕ್ತಿ ನೀಡಿದ ವಾಮನ ವಿಶ್ವಕ್ಕೆ ಮಾದರಿಯಾಗಿದ್ದಾನೆ. ನಮಗೆ ವಾಮನನಂತಹ ಮಕ್ಕಳು ಜನಿಸಬೇಕು ಎಂದರೆ ಅದಿತಿ- ಕಶ್ಯಪರಂತೆ ಆದರ್ಶ ಜೀವನ ನಡೆಸಬೇಕು. ಪ್ರತಿ ಮನೆಯೂ ಅದಿತಿಯ ಮನೆಯಾಗಬೇಕು. ಕಲೆ, ಸಂಸ್ಕೃತಿ, ಜ್ಞಾನ, ಭಕ್ತಿ ಮತ್ತು ವೈರಾಗ್ಯಗಳು ಮಕ್ಕಳಿಗೆ ಮನೆಯಿಂದಲೇ ದೊರಕಬೇಕು ಎಂದು ಆಚಾರ್ಯರು ಸಲಹೆ ನೀಡಿದರು.
ಇರುವ ಸಂಪತ್ತಿನಲ್ಲಿ ಧರ್ಮಕ್ಕೆ, ಸ್ವಜನರಿಗೆ, ನಮ್ಮ ಭೋಗಕ್ಕೆ, ಹೂಡಿಕೆಗೆ ಮತ್ತು ಸ್ವಕೀರ್ತಿಗೆ ತಲಾ ಶೇ. 20 ಭಾಗವನ್ನು ಖರ್ಚುಮಾಡಬೇಕು ಎಂದು ಶುಕ್ರಾಚಾರ್ಯರು ತಿಳಿಸಿದ್ದಾರೆ. ಬಲಿ ಚಕ್ರವರ್ತಿ ಈ ಮಾತಿಗೆ ಅನ್ವರ್ಥವಾಗಿದ್ದ. ಇದು ಆತನಿಗೆ ಇಹ ಮತ್ತು ಪರದಲ್ಲಿ ಸುಖವನ್ನು ನೀಡಿತು ಎಂದು ಆಚಾರ್ಯರು ವಿವರಿಸಿದರು.
ಪರನಿಂದನೆ ಸಲ್ಲದು
ಪರನಿಂದನೆ ಕೊಲೆಗೆ ಸಮ. ಆತ್ಮಪ್ರಶಂಸೆಯು ಆತ್ಮಹತ್ಯೆಗೆ ಸಮ. ಹಾಗಾಗಿ ಯಾವುದೇ ಮಾತನಾಡುವ ಮುನ್ನ ಎಚ್ಚರಿಕೆ ಅಗತ್ಯ. ಕೋವಿಯಿಂದ ಹಾರಿದ ಗುಂಡು ಹೇಗೆ ಮರಳಿ ಬರಲು ಸಾಧ್ಯವಿಲ್ಲವೋ ಹಾಗೆ ಆಡಿದ ಮಾತು ಹಿಂದಕ್ಕೆ ಬಾರದು. ನಮ್ಮೆದುರಿಗೆ ಇರುವ ವ್ಯಕ್ತಿಗಳು ಯಾರೆಂಬ ಅರಿವು ಇಟ್ಟುಕೊಂಡು ಮಾತನಾಡುವ ಎಚ್ಚರ ನಮಗೆ ಸದಾ ಇರಬೇಕು ಎಂಬುದನ್ನು ಭಾಗತವ ತಿಳಿಸಿಕೊಟ್ಟಿದೆ ಎಂದರು.
ದೇವರು ಸದಾ ನಮ್ಮ ರಕ್ಷಣೆಗೆ ಇದ್ದಾನೆ
ನಾವು ಗುರುಗಳಿಗೆ ಯಾವತ್ತೂ ಗೌರವ ತೋರಬೇಕು. ಚಲ ಪ್ರತಿಮೆಗಳಲ್ಲಿ ಸಾನ್ನಿಧ್ಯ ಹೆಚ್ಚಾಗಿರುತ್ತದೆ. ಚೇತನ ಪ್ರತಿಮೆಗಳಿಗೆ ಮಾನ್ಯ ಮಾಡಬೇಕಾದದ್ದು ನಮ್ಮ ಕರ್ತವ್ಯವಾಗಿದೆ. ಚೇತನ ಪ್ರತಿಮೆಗೆ ಬಹು ದೊಡ್ಡ ಉದಾಹರಣೆ ಎಂದರೆ ಮೈಸೂರಿನಲ್ಲಿ ವೃಂದಾವನಸ್ಥರಾಗಿರುವ ಶ್ರೀ ಸತ್ಯ ಸಂಕಲ್ಪ ತೀರ್ಥ ಶ್ರೀಪಾದಂಗಳವರು. ಇವರು ತಮ್ಮ ಅವಧಿಯಲ್ಲಿ ಕರಜಗಿ ಗ್ರಾಮದಲ್ಲಿ ಮಾಡಿದ ಶ್ರೀ ಮೂಲ ರಾಮದೇವರ ಸೇವೆ ಬಹು ಮಾನ್ಯವಾದದ್ದು. ದೇವರ ಪೂಜೆಯೊಂದಿಗೆ ಹಸಿದ ಹೊಟ್ಟೆಗಳಿಗೆ ಅನ್ನ ನೀಡಬೇಕು ಎಂಬುದು ಅವರ ಪರಮಾದರ್ಶವಾಗಿತ್ತು. ಬರಗಾಲ ಬಂದ ಸಂದರ್ಭದಲ್ಲಿ ಸತತವಾಗಿ 12 ವರ್ಷಗಳ ಕಾಲ ಅವರು ಕರಜಗಿ ಗ್ರಾಮದಲ್ಲಿದ್ದುಕೊಂಡು ಸಾವಿರಾರು ಜನರಿಗೆ ಅನ್ನದಾನ ಮಾಡಿದರು. ದೂರದ ಊರುಗಳಲ್ಲಿದ್ದ ಪಂಡಿತರನ್ನು ಕರೆದು ಗೌರವಿಸಿ, ಮೃಷ್ಟಾನ್ನ ಉಣಬಡಿಸಿಸಿದರು. ಚೇತನದಲ್ಲಿರುವ ಚೈತನ್ಯಗಳಲ್ಲಿ ಅವರು ದೇವರನ್ನು ಕಂಡ ಮಹಾನುಭಾವರು. ಗುರುಗಳಲ್ಲಿ ಅಂತರ್ಯಾಮಿಯಾಗಿರುವ ದೇವರು ಸದಾ ನಮ್ಮ ರಕ್ಷಣೆಗೆ ಇದ್ದಾನೆ ಎಂಬುದಕ್ಕೆ ಇದು ಬಹುದೊಡ್ಡ ಉದಾಹರಣೆ. ಈ ವಿಶೇಷತೆಗಳೇ ಇಂದು ನಮಗೆ ಆದರ್ಶವಾಗಬೇಕು ಎಂದು ಬಾದರಾಯಣಾಚಾರ್ಯರು ವಿವರಿಸಿದರು.
ಗಜೇಂದ್ರ ಮೋಕ್ಷ
ತಾಪಸ ಮನ್ವಂತರದಲ್ಲಿ ಅಗಸ್ತ್ಯ ಮಹರ್ಷಿಗಳಿಗೆ ಅವಜ್ಞೆ ತೋರಿದ ಕಾರಣಕ್ಕಾಗಿ ಇಂದ್ರದ್ಯುಮ್ನ ಮಹಾರಾಜ ಆನೆಯಾಗಿ (ಗಜೇಂದ್ರ) ಜನಿಸಿದ. ಈತ ಸತತವಾಗಿ ಒಂದು ಸಾವಿರ ವರ್ಷಗಳ ಕಾಲ ಮೊಸಳೆಯಿಂದ ಬಿಡಿಸಿಕೊಳ್ಳಲು ಹೋರಾಡಿದ. ಕಡೆಗೆ ದೇವರೇ ಇದಕ್ಕೆ ಪರಿಹಾರ ಎಂಬ ಚಿಂತನೆ ಬಂತು. ತಕ್ಷಣವೇ ನಾರಾಯಣ ಬಂದ. ತನ್ನ ಚಕ್ರದಿಂದ ಮೊಸಳೆಯನ್ನು ಸಂಹರಿಸಿ ಗಜೇಂದ್ರನಿಗೆ ಮೋಕ್ಷ ನೀಡಿದ. ನಮಗೆ ಸದಾ ಏಕೆ ದೇವರ ಚಿಂತನೆ ಬೇಕು ಎಂಬುದನ್ನು ವಿವರಿಸಲು ಮತ್ಯ್ಸ ಪುರಾಣವೂ ಈ ಕಥೆಯನ್ನು ಉಲ್ಲೇಖಿಸಿದೆ ಎಂದು ಆಚಾರ್ಯರು ವಿವರಿಸಿದರು.
ಎಲ್ಲ ದೇಶ ಕಾಲಕ್ಕೂ ಅನ್ವಯ
ನಿರಂತರವಾಗಿ ದೇವರ ಮಹಿಮೆಗಳನ್ನು ಕೊಂಡಾಡುವುದರೊಂದಿಗೆ ಎಲ್ಲ ದೇಶ-ಕಾಲದ ಜನರು ಅನುಸರಿಸಬೇಕಾದ ಜೀವನದ ಕ್ರಮವನ್ನು ಹೇಳುವಲ್ಲಿ ಈ ಕೃತಿ ಅಗ್ರಗಣ್ಯವಾಗಿದೆ ಎಂದರು.
ಜ್ಞಾನ, ಭಕ್ತಿ, ಗುರುಹಿರಿಯರ ಸ್ಥಾನ, ಕರ್ಮಗಳನ್ನು ಕಳೆದುಕೊಂಡು ಜೀವಿಸುವ ವಿಧಾನಗಳೊಂದಿಗೆ ವಿಶ್ವಪ್ರೇಮವನ್ನು ಭಾಗವತದ ಪ್ರತಿಯೊಂದು ವ್ಯಾಕ್ಯವೂ ಧ್ವನಿಸುತ್ತದೆ. ದುಷ್ಟಶಕ್ತಿಗಳ ದಮನಕ್ಕೆ, ಶಿಷ್ಟರ ಮತ್ತು ಪರಮ ಭಕ್ತರ ರಕ್ಷಣೆಗೆ ದೇವರು ಮನ್ವಂತರಗಳಲ್ಲಿ ಅವತರಿಸಿದ ಸಂದರ್ಭಗಳನ್ನು ಸಮಗ್ರವಾಗಿ ಅರಿಯಲು ಭಾಗವತ ಶ್ರವಣ ಮಾಡಬೇಕು ಎಂದು ಅವರು ತಿಳಿಸಿದರು.
ಮಾನವ ಜನ್ಮ ಬಹು ದೊಡ್ಡದು. ಜೀವನದಲ್ಲಿ ಅರ್ಧದಷ್ಟು ಆಯುಷ್ಯವನ್ನು ನಾವು ನಿದ್ರೆಯಲ್ಲಿಯೇ ಕಳೆಯುತ್ತೇವೆ. ಸಾಧನೆಗಾಗಿ ದೊರೆತ ಶರೀರದಿಂದ ಪುಣ್ಯ ಸಂಪಾದನೆ ಮಾಡಿಕೊಂಡು ಮೋಕ್ಷ ಸಂಪಾದಿಸಬೇಕು. ವ್ಯರ್ಥವಾಗಿ ಕಾಲಹರಣ, ಹಿರಿಯರ ನಿಂದನೆ, ಪರ ಪೀಡನೆಗಳನ್ನು ಸರ್ವಥಾ ಮಾಡಬಾರದು ಎಂದವರು ಹೇಳಿದರು.
ಕರ್ತವ್ಯಕ್ಕೂ, ಮೋಹಕ್ಕೂ ಕೂದಲೆಳೆಯ ಅಂತರವಿದೆ. ಆಪತ್ತು ಬಂದಾಗ, ಕುಟುಂಬಕ್ಕೆ ಸೂಕ್ತ ರಕ್ಷಣೆ ಕೋಡಬೇಕು. ಅಗತ್ಯವಿದ್ದಾಗ ಇತರರಿಗೆ ಸಹಾಯ ಮಾಡಬೇಕು. ಆದರೆ ಅದಕ್ಕೇ ಪೂರ್ಣ ಅಂಟಿಕೊಂಡು ಬದುಕಿನ ಮಹದುದ್ದೇಶವನ್ನು ಮರೆಯಬಾರದು ಎಂದ ಅವರು ಜಡಭರತನ ಕಥೆಯನ್ನು ಸೋದಾಹರಣವಾಗಿ ವಿವರಿಸಿದರು.
ತೃಪ್ತಿ ದೂರವಾಗಿದೆ
ಭಾರತೀಯರ ಬಹುದೊಡ್ಡ ಗುಣವೇ ತೃಪ್ತಿ. ಹಾಗಾಗಿ ಶತ ಶತಮಾನಗಳಿಂದ ಈ ನಾಡಿನ ಸಮಸ್ತ ಪ್ರಜೆಗಳು ಸುಖವಾಗಿ ಜೀವಿಸಿದ್ದರು. ಭಕ್ತಿಯ ನೆಲೆಯಲ್ಲಿ ತೃಪ್ತಿ ಕಂಡುಕೊಂಡವನಿಗೆ ಎಂದೂ ಸೋಲಿಲ್ಲ. ಇದಕ್ಕೆ ಬಲಿಚಕ್ರವರ್ತಿಯೇ ದೊಡ್ಡ ಉದಾಹರಣೆ ಎಂದರು. ಇಂದು ದೇವರು, ಧರ್ಮಗಳನ್ನೇ ಮರೆತು ಅತೃಪ್ತಿಯನ್ನೇ ಹೆಚ್ಚಾಗಿ ಅಂಟಿಸಿಕೊಂಡಿರುವ ಕಾರಣ ಬದುಕು ಅತಂತ್ರವಾಗಿದೆ. ಈ ಕಾಲಘಟ್ಟದಲ್ಲಿ ಭಾಗವತ ನೀಡಿದ ಸಂದೇಶಗಳನ್ನು ಪಾಲನೆ ಮಾಡುವುದೇ ಉತ್ತಮ ಮಾರ್ಗ ಎಂದು ಬಾದರಾಯಣಾಚಾರ್ಯ ನುಡಿದರು.
ಕಾರ್ಯಕ್ರಮ ಆಯೋಜಕರಾದ ಅಂಬುಜಾ, ಕೃಷ್ಣಮೂರ್ತಿ, ವಿಜಯಲಕ್ಷ್ಮೀ ಇತರರು ಹಾಜರಿದ್ದರು. ನಂತರ ಪಂಡಿತ ಬಾದರಾಯಣಾಚಾರ್ಯ ದಂಪತಿಗೆ ಗೌರವಾರ್ಪಣೆ ಮಾಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post