ಕಲ್ಪ ಮೀಡಿಯಾ ಹೌಸ್ | ಮೈಸೂರು |
ಧರ್ಮ, ವೇದಾಂತ ಮತ್ತು ಮಾಧ್ವ ತತ್ವ ಕ್ಷೇತ್ರಕ್ಕೆ ಶ್ರೀ ವಿದ್ಯಾಮಾನ್ಯತೀರ್ಥರ ಕೊಡುಗೆ ಅಪಾರ ಎಂದು ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ Vishwaprasannathirtha Shri ಹೇಳಿದರು.
ಉಡುಪಿ ಭಂಡಾರಕೇರಿ ಮಠ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಶ್ರೀವೇದವ್ಯಾಸರ ರಾಷ್ಟ್ರೀಯ ಜಯಂತಿ, ಶ್ರೀವಿದ್ಯಾಮಾನ್ಯತೀರ್ಥರ ಆರಾಧನೋತ್ಸವದಲ್ಲಿ ನಾಡಿನ 5 ಜನ ವಿದ್ವಾಂಸರಿಗೆ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ವಿದ್ಯಾಮಾನ್ಯತೀರ್ಥರ ಜೀವನ ಮತ್ತು ಸಾಧನೆ ಮಹತ್ತರವಾದದ್ದು. ಆಚಾರ್ಯ ಮಧ್ವರ ತತ್ವ ಮತ್ತು ಸಂದೇಶಗಳನ್ನು ಹೊಸ ಪೀಳಿಗೆಗೆ ತಲುಪಿಸುವಲ್ಲಿ ಅವರು ಅಹರ್ನಿಷಿ ಸೇವೆ ಮಾಡಿದ್ದಾರೆ. ಮಾತ್ರವಲ್ಲ, ಅವರು ಪೇಜಾವರ, ಪಲಿಮಾರು ಮತ್ತು ಭಂಡಾರಕೇರಿ ಮಠದ ಯುವ ಯತಿಗಳಿಗೆ ಪಾಠ ಹೇಳಿದ ಗುರುವಾಗಿ ಮಾನ್ಯರಾಗಿದ್ದಾರೆ. ಶ್ರೀ ವಿದ್ಯಾಮಾನ್ಯರು ಹಾಕಿಕೊಟ್ಟ ಮಾರ್ಗದಲ್ಲಿ ಭಂಡಾರಕೇರಿ ಸಂಸ್ಥಾನ ಕಳೆದ 3 ದಶಕಗಳಿಂದ ನೂರಾರು ರೀತಿಯ ಧಾರ್ಮಿಕ, ಸಾಮಾಜಿಕ ಚಟುವಟಿಕೆ ನಡೆಸುತ್ತಿದೆ. ಸಾಧಕರನ್ನು ಗುರುತಿಸಿ, ಗೌರವಿಸುವ ಮೂಲಕ ಮಠಗಳಿಗೆ ಮಾದರಿಯಾಗಬಲ್ಲ ಕಾರ್ಯವನ್ನು ಮಾಡುತ್ತಿರುವುದು ಈ ನಾಡಿನ ಸುಯೋಗ. ಈ ನಿಟ್ಟಿನಲ್ಲಿ ಶ್ರೀ ವಿದ್ಯೇಶತೀರ್ಥರ ತಪೋನಿಷ್ಠೆ, ಕಾರ್ಯಕ್ಷಮತೆ ಶ್ಲಾಘನೀಯ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಶಸ್ತಿ ಪ್ರದಾನ:
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ಪಿ.ಕೇಶವಬಾಯರಿ ಅವರಿಗೆ ಶ್ರೀರಾಜ ವಿದ್ಯಾವಂದ್ಯ ಪ್ರಶಸ್ತಿ, ಉಡುಪಿಯ ಮೂಡುಸಗ್ರಿ ಪರವಿದ್ಯಾ ಪ್ರತಿಷ್ಠಾನದ ಸಗ್ರಿ ರಾಘವೇಂದ್ರ ಉಪಾಧ್ಯಾಯರಿಗೆ ವೇದಪೀಠ ಪ್ರಶಸ್ತಿ, ಬೆಂಗಳೂರಿನ ಯುವ ವಿದ್ವಾಂಸ ಸತ್ಯಪ್ರಮೋದ ಕಟ್ಟಿ ಅವರಿಗೆ ಶ್ರೀಸತ್ಯತೀರ್ಥ ಅನುಗ್ರಹ ಪ್ರಶಸ್ತಿ, ಬೆಂಗಳೂರಿನ ವಿದ್ಯಾಮಾನ್ಯನಗರದ ಎನ್.ಗಣಪತಿಭಟ್ಟರಿಗೆ ಶ್ರೀ ಭಂಡಾರಕೇರಿ ರಾಜಹಂಸ ಪ್ರಶಸ್ತಿ, ಟಿಟಿಡಿ ಬೋರ್ಡ್ ಮಾಜಿ ಸದಸ್ಯ ಡಿ.ಪಿ. ಅನಂತ ಅವರಿಗೆ ಶ್ರೀಶ ರಾಜದರ್ಶನ ಪ್ರಶಸ್ತಿ, ಫಲಕ ಪ್ರದಾನ ಮಾಡಲಾಯಿತು.
Also read: ಹೊಂದಾಣಿಕೆ ಮಾಡಿಕೊಳ್ಳುವ ಧಾರುಣ ಸ್ಥಿತಿಗೆ ನಾವು ತಲುಪಿಲ್ಲ: ವಿಜಯೇಂದ್ರ ಟಾಂಗ್
ಸೋಸಲೆ ವ್ಯಾಸರಾಜ ಮಠದ ಶ್ರೀವಿದ್ಯಾಶ್ರೀಶತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠಾಧೀಶ ಶ್ರೀವಿದ್ಯೇಶತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಡಾ.ಎಚ್.ಸತ್ಯನಾರಾಯಣಾಚಾರ್ಯರು ಭಗವಾನ್ ವೇದವ್ಯಾಸರ ಮಹೋನ್ನತ ಕೊಡುಗೆಗಳ ಬಗ್ಗೆ ಉಪನ್ಯಾಸ ನೀಡಿದರು.
ಕೃತಿ ಬಿಡುಗಡೆ:
ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ವಿರಚಿತ 200ಕ್ಕೂ ಹೆಚ್ಚು ಗೀತೆಗಳ ಸಂಗ್ರಹ ` ವಿದ್ಯೇಶ ವಿಠಲಾಂಕಿತ ಕೃತಿಮಂಜರಿ’ ಇದೇ ಸಂದರ್ಭ ಸೋಸಲೆ ಮತ್ತು ಪೇಜಾವರ ಶ್ರೀಗಳಿಂದ ಲೋಕಾರ್ಪಣೆಗೊಂಡಿತು. ಮಾತೃಭೂಮಿ ಪದ್ಯಮಾಲಾದ ದೃಶ್ಯ-ಶ್ರಾವ್ಯ ಪ್ರದರ್ಶನ ವಿಶೇಷವಾಗಿತ್ತು.
ವೈಭವದ ಶೋಭಾಯಾತ್ರೆ:
ಸಂಜೆ 5ಕ್ಕೆ ಕೃಷ್ಣಮೂರ್ತಿಪುರಂನ ಸೋಸಲೆ ವ್ಯಾಸರಾಜರ ವಿದ್ಯಾಪೀಠದಿಂದ ಶಾರದಾವಿಲಾಸ ಕಾಲೇಜಿನವರೆಗೆ ಶ್ರೀ ವೇದವ್ಯಾಸರ ಭಾವಚಿತ್ರ ಸಹಿತ ವೈಭವಪೂರ್ಣ ಶೋಭಾಯಾತ್ರೆ ನೆರವೇರಿತು. ವಿವಿಧ ಭಜನಾ ಮಂಡಳಿ ಸದಸ್ಯರು ದಾಸರ ಪದಗಳನ್ನು ಹಾಡಿದರು. ವಿದ್ವಾಂಸರು ವೇದಘೋಷ ಮಾಡುವ ಮೂಲಕ ಗಮನ ಸೆಳೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post