ಕಲ್ಪ ಮೀಡಿಯಾ ಹೌಸ್ | ಮೈಸೂರು |
ಜೀವನವನ್ನು ಸುಖಮಯವಾಗಿ ಇರಿಸಿಕೊಳ್ಳುವ ಮೂಲಕ ಸಮಾಜಕ್ಕೆ ವಿಭಿನ್ನವಾದ ಕೊಡುಗೆಗಳನ್ನು ನೀಡುವತ್ತ ವಿದ್ಯಾರ್ಥಿಗಳು ಉನ್ನತವಾದ ಗುರಿ ಇಟ್ಟುಕೊಳ್ಳಬೇಕು ಎಂದು ಮೈಸೂರು ವಿವಿ ಜಿನಿಟಿಕ್ಸ್ ಮತ್ತು ಜಿನೋಮಿಕ್ಸ್ ವಿಭಾಗದ ಪ್ರಾಧ್ಯಾಪಕಿ ಡಾ. ಮಾಲಿನಿ ಹೇಳಿದರು.
ಅವರು ಮೈಸೂರು ವಿಶ್ವವಿದ್ಯಾನಿಲಯದ #MysoreUniversity ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಸಂಯುಕ್ತವಾಗಿ ಕೆ.ಎಸ್. ರಂಗಪ್ಪ ಸಭಾಂಗಣದಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಎರಡನೇ ಹಂತದ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಪ್ರಕೃತಿಯು ಮಾನವನ ದೇಹವನ್ನು ವಿಭಿನ್ನ ಮತ್ತು ವಿಶಿಷ್ಟವಾಗಿ ರಚನೆ ಮಾಡಿದೆ. ಇದಕ್ಕೆ ಸರಿಸಾಟಿಯೇ ಇಲ್ಲ. ಲಕ್ಷೋಪಲಕ್ಷ ಜೀವಿಗಳಲ್ಲಿ ಮನುಷ್ಯ ಅದ್ಭುತವಾದ ಮಿದುಳನ್ನು #Brain ಹೊಂದಿದ್ದಾನೆ. ಅದನ್ನು ಶೇ. 10 ಭಾಗ ಸದುಪಯೋಗ ಮಾಡಿಕೊಂಡೇ ನೂರೆಂಟು ಆವಿಷ್ಕಾರ ಮಾಡಿದ್ದಾನೆ. ಹಾಗಾಗಿ ಜೀವನವನ್ನು ಸಂಸ್ಕಾರ, ಸನ್ನಡತೆಗೆ ಬಳಸಿಕೊಂಡು ಸಾಧನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಜೀವಿತ ಅವಧಿಯಲ್ಲಿ ಆಹಾರದ ಪ್ರಾಮುಖ್ಯತೆ ಬಹಳ ಮುಖ್ಯ. ಆದಷ್ಟೂ ಸಾವಯವ ಆಹಾರ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು. ಮನೆಯಲ್ಲೇ ತಯಾರಿಸಿದ ಶುದ್ಧ, ಸಾತ್ವಿಕ ಆಹಾರ ಬಳಸುವ ಸಂಸ್ಕೃತಿ ನಮ್ಮದಾಗಬೇಕು. ಹೊರಗಿನ ರುಚಿಕರ ತಿಂಡಿಗಳಿಗೆ ಮಾರುಹೋಗಬಾರದು. ಯಾವುದೇ ತರಕಾರಿ ಅಥವಾ ಬೆಳೆಗಳಿಗೆ ಹುಳ ಬಂದಿದೆ ಎಂದರೆ ಅದರಲ್ಲಿ ರಾಸಾಯನಿಕ ಅಂಶ ಇಲ್ಲವೆಂದೇ ಅರ್ಥ. ಈ ಸರಳ ತತ್ವ ಅರ್ಥ ಮಾಡಿಕೊಂಡು ಮಾರುಕಟ್ಟೆಯಲ್ಲಿ ದೊರಕುವ ಅತಿಯಾದ `ಫ್ರೆಷ್’ ಉತ್ಪನ್ನಗಳಿಂದ ಅಂತರ ಕಾಪಾಡಿಕೊಳ್ಳಬೇಕು. ನಮ್ಮ ತಾತ, ಅಜ್ಜಿ ಅಡುಗೆಮನೆಯಲ್ಲಿ ತಯಾರಿಸುವ ಆಹಾರಗಳನ್ನೇ ನಮ್ಮದಾಗಿಸಿಕೊಂಡರೆ ರೋಗಮುಕ್ತರಾಗಿ ಬದುಕಬಹುದು ಎಂದು ಡಾ. ಮಾಲಿನಿ ನುಡಿದರು.


ಮೌಲ್ಯಗಳನ್ನೂ ರೂಢಿಸಿಕೊಳ್ಳಿ
ಜೈವಿಕ ತಂತ್ರಜ್ಞಾನ ಇಂದು ಸಾಕಷ್ಟು ಮುಂದುವರಿದಿದೆ. ಇದರೊಂದಿಗೆ ಮಾನವೀಯ ಮೌಲ್ಯಗಳೂ ನಮ್ಮಲ್ಲಿ ರೂಢಿಗತವಾಗಬೇಕು. ನಾವು ಯಾವುದೇ ರೀತಿಯ ದೌಹಿಕ ಮತ್ತು ಮಾನಸಿಕ ರೋಗಗಳ ಗೂಡಾಗಬಾರದು. ವಿಶ್ವಸಂಸ್ಥೆ ರೂಪಿಸಿದ ಮಾನದಂಡಗಳ ಪ್ರಕಾರ ದೇಹ, ಮನಸ್ಸು, ಸಂಸ್ಕೃತಿ, ಅಧ್ಯಾತ್ಮ ಮತ್ತು ಸಮಾಜಮುಖಿ ಚಟುವಟಿಕೆಗಳು ನಮ್ಮ ವ್ಯಕ್ತಿತ್ವ ರೂಪಿಸುತ್ತವೆ. ಸ್ವಾಸ್ಥ್ಯ ತಂದುಕೊಡುತ್ತವೆ. ಈ ನಿಟ್ಟಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡರೆ ಭವಿಷ್ಯ ಸುಂದರವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಡಾ. ಮಾಲಿನಿ ಸಲಹೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post