ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸಮಾಜದ ಮುಖ್ಯವಾಹಿನಿಯಲ್ಲಿ ಅಂಗವಿಕಲರಿಗೆ ಉದ್ಯೋಗಾವಕಾಶ ದೊರೆತು ಆ ಮೂಲಕ ಅವರು ಘನತೆಯ ಬದುಕು ಸಾಗಿಸುವಂತಾಗಬೇಕು ಎಂಬ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ವಿಂಧ್ಯಾ ಇ-ಇನ್ಫೋಮೀಡಿಯಾ ಸಂಸ್ಥೆ ಈಗ ಮೈಸೂರಿನಲ್ಲಿಯೂ ಕಾರ್ಯಾರಂಭ ಮಾಡಿದೆ.
ಮೈಸೂರಿನ ಕುವೆಂಪು ನಗರದ ಸಾಮ್ರಾಟ್ ಕಟ್ಟಡದಲ್ಲಿ ವಿಂಧ್ಯಾ ಸಂಸ್ಥೆಯ ಕಚೇರಿಯನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಅಶೋಕ್ ಗಿರಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಪವಿತ್ರಾ ವೈ.ಎಸ್. ಉದ್ಘಾಟಿಸಿದರು. ಈ ಸಂದರ್ಭ ಪವಿತ್ರಾ ಅವರು ಮಾತನಾಡಿ, ಮುಂಬರುವ ದಿನಗಳಲ್ಲಿ ಅಂಗವಿಕಲರಿಗಾಗಿ ಮತ್ತಷ್ಟು ಉದ್ಯೋಗ ಕೇಂದ್ರಗಳನ್ನು ಆರಂಭಿಸಲಾಗುವುದು. ಈ ಮೂಲಕ ಸಾವಿರಾರು ವಿಕಲ ಚೇತನರನ್ನು ಸ್ವಾವಲಂಬಿ ಮಾಡಲಾಗುವುದು ಎಂದರು.
ಅಂಗವಿಕಲರಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದು, ವೃತ್ತಿಪರ ತರಬೇತಿ, ಸೂಕ್ತ ಮಾರ್ಗದರ್ಶನದ ಮೂಲಕ ಕೌಶಲಗಳನ್ನು ಹೆಚ್ಚಿಸಿ, ಕೆಲಸಕ್ಕೆ ಅಣಿಗೊಳಿಸಿರುವುದು ಸಂಸ್ಥೆಯ ಮುಖ್ಯ ಧ್ಯೇಯ ಎಂದರು.
ಕೆಲಸದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಹಂತ-ಹಂತವಾಗಿ ಅಂಗವಿಕಲರ ಆತ್ಮವಿಶ್ವಾಸ ಹೆಚ್ಚಿಸಿ, ಅವರ ವೃತ್ತಿಪರತೆ, ದಕ್ಷತೆಯ ಆಧಾರದ ಮೇಲೆ ಮುಂಬಡ್ತಿಯನ್ನೂ ನೀಡಲಾಗುತ್ತದೆ ಎಂದು ಪವಿತ್ರಾ ವಿವರಿಸಿದರು. ಮಹಿಳಾ ಸಬಲೀಕರಣದ ನಿಟ್ಟಿನಲ್ಲಿಯೂ ಸಂಸ್ಥೆ ಗಟ್ಟಿಹೆಜ್ಜೆಗಳನ್ನು ಇಟ್ಟಿದೆ. ಈ ಸೇವಾ ಚಟುವಟಿಕೆಗಳಿಗೆ ಸಮಾಜದ ಬೆಂಬಲ ಇನ್ನಷ್ಟು ಬೇಕಿದೆ ಎಂದರು.
2 ಸಾವಿರ ಜನರಿಗೆ ಉದ್ಯೋಗ:
ಯುವ ಉದ್ಯಮಿಗಳಾದ ಪವಿತ್ರಾ ವೈ.ಎಸ್ ಮತ್ತು ಅಶೋಕ್ ಗಿರಿ ದಂಪತಿ 2006ರಲ್ಲಿ ಬೆಂಗಳೂರಿನಲ್ಲಿ ಆರಂಭಿಸಿದ ವಿಂಧ್ಯಾ ಸಂಸ್ಥೆ ಮುಖ್ಯವಾಗಿ, ಕಾಲ್ ಸೆಂಟರ್ಗಳ ನಿರ್ವಹಣೆ, ಡೇಟಾ ಎಂಟ್ರಿ, ಡೇಟಾ ಮ್ಯಾನೇಜ್ಮೆಂಟ್ ಕಾರ್ಯಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನಿರ್ವಹಿಸುತ್ತಿದೆ. ಆರಂಭದಲ್ಲಿ ಐದು ಸಿಬ್ಬಂದಿಯಿಂದ ಆರಂಭಗೊಂಡ ಸಂಸ್ಥೆ ಪ್ರಸಕ್ತ ಎರಡು ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ಹೊಂದಿದೆ. ತಮಿಳುನಾಡಿನ ಕೃಷ್ಣಗಿರಿ, ತೆಲಂಗಾಣದ ಹೈದರಾಬಾದ್, ಮಹಾರಾಷ್ಟ್ರದ ನಾಗಪುರದಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಎಲ್ಲ ರೀತಿಯ ಅಂಗವೈಕಲ್ಯ ಹೊಂದಿದವರು ಇಲ್ಲಿ ಕಾರ್ಯನಿರ್ವಹಿಸುತ್ತ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ ಮತ್ತು ಇತರರಿಗೂ ಮಾದರಿಯಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post