ಕಲ್ಪ ಮೀಡಿಯಾ ಹೌಸ್ | ಮೈಸೂರು |
ಪ್ರತಿಭಾವಂತ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಇದರಿಂದ ನಾರೀ ಶಕ್ತಿ ಪ್ರಜ್ವಲಿಸಲಿದೆ ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ Rathnaprabha ಹೇಳಿದರು.
ರಾಷ್ಟ್ರ ಭಾರತಿ ಚಾರಿಟಬಲ್ ಟ್ರಸ್ಟ್, ‘ಮಹಿಳಾ ಸಮನ್ವಯ’ ಮೈಸೂರು ವಿಭಾಗದ ಸಹಯೋಗದಲ್ಲಿ ನಗರದ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಆಯೋಜಿಸಿದ್ದ ‘ನಾರೀ ಶಕ್ತಿ ಸಂಗಮ’ ಮಹಿಳಾ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಯಾವುದೇ ರಾಗ, ದ್ವೇಷ ಹಾಗೂ ಅಸೂಯೆಯೇ ಮಹಿಳಾ ಅಭಿವೃದ್ಧಿಗೆ ತೊಡಕಾಗಿದೆ. ಅವಕಾಶ ಸಿಕ್ಕಲ್ಲಿ ಒಬ್ಬ ಮಹಿಳೆಯು ಇನ್ನೊಬ್ಬ ಮಹಿಳೆಯ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು. ಇದರಿಂದಾಗಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ಮಹಿಳೆಯರು ಯಾವಾಗಲೂ ಮನೆ ನಿರ್ವಹಣೆ ಕಡೆಗೆ ಗಮನ ಕೊಡುತ್ತಾರೆ. ಎಷ್ಟು ಬೇಗ ಮನೆಗೆ ಹೋಗುತ್ತೇವೋ ಎಂದು ಚಿಂತನೆಯಲ್ಲೇ ಮುಳುಗಿರುತ್ತಾರೆ. ಇದು ಮಹಿಳಾ ಪ್ರಗತಿಗೆ ಅಡ್ಡಿಯಾಗಿದೆ. ವರ್ಷದಲ್ಲಿ ಒಂದು ದಿನವಾದರೂ ಮಹಿಳೆಯರು ಮನೆ ಚಿಂತೆಯನ್ನು ಬಿಟ್ಟು ತಮಗಾಗಿ, ತಮ್ಮ ಅಭಿವೃದ್ಧಿಗಾಗಿ ಆಲೋಚನೆ ನಡೆಸಬೇಕು. ಅದರಿಂದ ಸಾಕಷ್ಟು ಉಪಯೋಗವಾಗುತ್ತದೆ ಎಂದು ಹೇಳಿದರು.
ಸಮಾನ ಆದ್ಯತೆ ನೀಡಿ
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀದತ್ತ ವಿಜಯಾನಂದ ಸ್ವಾಮೀಜಿ ಮಾತನಾಡಿ, ’ಮಹಿಳಾ ಸಮಾನತೆ’ ಮಾತಲ್ಲಿ ಹೇಳಿದರೆ ಸಾಲದು. ಎಲ್ಲ ಕ್ಷೇತ್ರಗಳಲ್ಲಿ ಸ್ತ್ರೀಯರಿಗೂ ಸಮಾನ ಆದ್ಯತೆ ದೊರೆತಾಗ ಲಿಂಗ ಸಮಾನತೆ ಸಾಧ್ಯವಾಗಲಿದೆ ಎಂದರು.
ಮಹಿಳೆಯರಿಗೆ ರಾಮಾಯಣದ ಸೀತೆ, ಮಹಾಭಾರತದ ಸುಭದ್ರೆ, ದ್ರೌಪದಿ, ರುಕ್ಮಿಣಿ, ಸತ್ಯಭಾಮೆ ಸ್ಫೂರ್ತಿಯಾಗಬೇಕು. ಮಹಿಳೆಯರು ಉತ್ತಮ ಗ್ರಂಥವನ್ನು ಓದುವುದರಿಂದ ಪುಣ್ಯವೂ ಬರುತ್ತದೆ. ಬದುಕಿಗೆ ಬೇಕಾದ ಚಮತ್ಕಾರವೂ ದೊರೆಯುತ್ತದೆ. ಮಹಿಳೆಯರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಕೆಟ್ಟದೃಷ್ಟಿಯಿಂದ ರಕ್ಷಿಸಬೇಕು. ಒಳ್ಳೆಯದನ್ನು ಸದಾ ಬೋಧನೆ ಮಾಡಬೇಕು ಎಂದು ಸ್ವಾಮೀಜಿ ಹೇಳಿದರು.
ಹೆಣ್ಣು ಮಕ್ಕಳಿಗೆ ಗೌರವ ಕೊಡುವ ನಮ್ಮ ಸಮಾಜದಲ್ಲಿರುವ ಪುರುಷರೇ ಪ್ರಧಾನ ಎಂಬ ಅಹಂಕಾರವನ್ನು ಹೋಗಲಾಡಿಸಬೇಕು. ಸ್ತ್ರೀಯರು ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಾಗಿದ್ದಾಗ ಮಾತ್ರ ಸ್ವಾಸ್ಥೃ ಸಮಾಜ ನಿರ್ಮಾಣವಾಗುತ್ತದೆ. ಕುಟುಂಬಕ್ಕೆ, ಸಮಾಜಕ್ಕೆ ನೆರೆಮನೆಯವರಿಗೆ ಕೊಡುವಷ್ಟು ಸಮಯವನ್ನು ಹೆಣ್ಣುಮಕ್ಕಳು ತಮಗೆ ತಾವು ಕೊಡುವುದಿಲ್ಲ ಎಂದರು.
Also read: ರಕ್ತದಾನ ಮಾಡುವ ಮೂಲಕ ಜನ್ಮದಿನ ಆಚರಿಸಿಕೊಂಡ ಶಾಸಕ ಡಿ.ಎಸ್. ಅರುಣ್
ಸಾಮಾಜಿಕ ಕಾರ್ಯಕರ್ತೆ ಎಚ್.ಜಿ.ಶೋಭಾ ಮಾತನಾಡಿ, ಪುರಾತನ ಕಾಲದಿಂದಲೂ ಮಹಿಳೆ ಒಂದು ಮಹಾನ್ ಶಕ್ತಿಯಾಗಿದ್ದಾಳೆ. ವೇದ-ಪುರಾಣಗಳಲ್ಲಿ ರಾಮಾಯಾಣ, ಮಹಾಭಾರತಗಳಲ್ಲಿ ಮಹಿಳೆಯ ಆದರ್ಶ ಮತ್ತು ಮೌಲ್ಯ ದೊಡ್ಡದಾಗಿಯೇ ಇದೆ. ಆದರೆ, ಇಂದು ಅದನ್ನು ಮರೆಮಾಚಲಾಗುತ್ತಿದೆ. ಮಹಿಳೆಗಿರುವ ಅದ್ಭುತ ಶಕ್ತಿ ಮತ್ತು ಸಾಮರ್ಥ್ಯಗಳನ್ನು ನೆನಪಿಸುವ ಕೆಲಸವನ್ನು ಇಂದು ಮತ್ತೆ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಸಾಹಿತಿ ಮೀರಾ ಫಡ್ಕೆ ಅವರು ‘ಭಾರತೀಯ ಚಿಂತನೆಯಲ್ಲಿ ಮಹಿಳೆ’ ಕುರಿತು ಮಾತನಾಡಿದರು. ಸಂಘಟನೆಯ ವಿಭಾಗೀಯ ಸಂಯೋಜಕಿ ಮಮತಾ ಕಿಣಿ, ಸ್ವಾಗತ ಸಮಿತಿ ಅಧ್ಯಕ್ಷೆ ವಸುಂಧರಾ ದೊರೆಸ್ವಾಮಿ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post