‘ನವರಾತ್ರಿ’ ಎನ್ನುವ ಪದದಲ್ಲಿ ‘ನವ’ ಮತ್ತು ‘ರಾತ್ರಿ’ ಎನ್ನುವ ಎರಡು ಶಬ್ದಗಳು ಕಾಣಸಿಗುತ್ತವೆ. ‘ನವ’ ಎನ್ನುವ ಶಬ್ದಕ್ಕೆ ಅನೇಕ ಅರ್ಥಗಳಿವೆಯಾದರೂ ‘ಹೊಸತು’ ಮತ್ತು ಸಂಖ್ಯಾವಾಚಕವಾದ ‘ಒಂಬತ್ತು’ ಎನ್ನುವ ಎರಡು ಅರ್ಥಗಳು ಪ್ರಮುಖವಾಗಿವೆ. ಒಂಭತ್ತು ಎನ್ನುವ ಸಂಖ್ಯಾ ವಾಚಕವನ್ನು ಪರಿಗಣಿಸಿದರೆ ಒಂಬತ್ತು ಎನ್ನುವ ಅಂಕೆಯು ಅಂಕೆಗಳಲ್ಲೇ ಗರಿಷ್ಠವಾದುದಾಗಿದ್ದು ಅದರಿಂದ ಯಾವ ಸಂಖ್ಯೆಯನ್ನು ಗುಣಿಸಿದರೂ ಬರುವ ಗುಣಲಬ್ಧದ ಅಂಕೆಗಳನ್ನು ಸೇರಿಸಿದರೆ ಒಂಬತ್ತೇ ಆಗುತ್ತದೆ. ಈ ವಿಶಿಷ್ಟತೆ ಬೇರಾವ ಅಂಕೆಯಲ್ಲೂ ಇಲ್ಲ.
ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳು. ನವ ಎಂದರೆ ‘ಹೊಸತು’ ಎಂದೂ ಅರ್ಥ. ಒಂಭತ್ತು ರಾತ್ರಿಗಳಲ್ಲಿ ನಮ್ಮ ಬದುಕನ್ನು ಹೊಸತಾಗಿ ರೂಪಿಸಿಕೊಳ್ಳುವ ಹಬ್ಬವೇ ಈ ನವರಾತ್ರಿ(ತ್ರ) ಎನ್ನಬಹುದು. ಶಕ್ತಿಯ ಅನಂತರೂಪಗಳ ಆರಾಧನೆಯೇ ನವರಾತ್ರಿಯ ವಿಶೇಷತೆ. ಇದು ನಮ್ಮ ನಾಡಹಬ್ಬವೂ ಹೌದು. ‘ಶಕ್ತಿ’ ಎಂದರೆ ಪ್ರಕೃತಿ. ಇದು ಹೊರಗಿನ ಪ್ರಕೃತಿಯೂ ಹೌದು; ನಮ್ಮ ಒಳಗಿನ ಪ್ರಕೃತಿಯೂ ಹೌದು. ಹೊರಗಿನ ಆಸುರೀಶಕ್ತಿಗಳನ್ನು ಸಂಹರಿಸಿ ಜಗನ್ಮಾತೆಯು ಶಿಷ್ಟರಕ್ಷಣೆ ಮಾಡಿದುದರ ಪರ್ವವೇ ನವರಾತ್ರಿ. ಇದು ನಮ್ಮ ಒಳಗಿನ ದುಷ್ಟಗುಣಗಳ ದನಮಕ್ಕೆ ಸಂಕೇತವೂ ಹೌದು. ನಮ್ಮ ಬದುಕಿನ ಸಾರ್ಥಕ್ಯಕ್ಕೆ ಅಡ್ಡಿಯಾಗಿರುವ ಒಳಗಿನ- ಹೊರಗಿನ ಆತಂಕ-ದುಷ್ಟತನಗಳನ್ನು ಹೋಗಲಾಡಿಸಿಕೊಂಡು, ಹೊಸದಾದ ಸೊಬಗನ್ನು ತುಂಬಿಸಿಕೊಳ್ಳುವ ಕಲಾಪಗಳೇ ದಿಟವಾದ ನವರಾತ್ರಿಯ ಆರಚಣೆ.
ಒಂಭತ್ತರ ಮಹತ್ವ
ನವ ಎಂಬುದಕ್ಕೆ ಎರಡು ಅರ್ಥವಿದೆ. ಒಂದು ಹೊಸತು ಹಾಗೂ ಇನ್ನೊಂದು ಒಂಭತ್ತು. 9ರ ಸಂಖ್ಯೆಯಲ್ಲಿ ಒಂದು ವಿಶೇಷವಿದೆ. ಒಂಭತ್ತರ ಗುಣಾಕಾರದಲ್ಲಿ ಗುಣಲಬ್ಧವನ್ನು ಪರಸ್ಪರ ಕೂಡಿಸಿದರೆ ಒಂಬತ್ತೇ ಬರುವುದು. ಉದಾ: 9×1=9, 9×2=18, 1+8=9; 9×3=27; 2+7=9 ಹೀಗೆ ನಮಗೆ ಕೊನೆಗೆ ಸಿಗುವುದು 9 ಆಗಿದೆ. ಈ ಸಂಖ್ಯೆ ಪರಿಪೂರ್ಣತೆಯನ್ನು ಸೂಚಿಸುತ್ತದೆ. ಅಂದರೆ, ದೇವಿಯು ಎಷ್ಟೇ ಅವತಾರ ತಾಳಿದರೂ ಕೊನೆಯಲ್ಲಿ ಆದಿಶಕ್ತಿಯಾಗಿಯೇ ಉಳಿಯುವಳು ಎಂಬುದನ್ನು ಇದು ಸೂಚಿಸುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಖ್ಯಾಶಾಸ್ತ್ರದಲ್ಲಿ 9ರ ಅಧಿಪತಿ ಕುಜ ಗ್ರಹ. ಈ ಗ್ರಹವನ್ನು ಪಾಪಗ್ರಹ ಮತ್ತು ಶಕ್ತಿಗ್ರಹ ಎಂದು ಹೇಳಲಾಗಿದೆ. ಮನುಷ್ಯನ ಸಾಹಸ, ಧೈರ್ಯ ಮತ್ತು ಶಕ್ತಿಯನ್ನು ಈ ಗ್ರಹದ ಮೂಲಕವೇ ತಿಳಿಯಬಹುದು. ಆಂಗ್ಲ ಜ್ಯೋತಿಷ್ಯದ ಪ್ರಕಾರ ಇದನ್ನು ‘ಯುದ್ಧದ ದೇವತೆ’ ಎನ್ನುವರು.
ಸಂಖ್ಯೆ 3ರ ಮಹತ್ವ
ನವರಾತ್ರಿಯಲ್ಲಿ ದೇವಿಯನ್ನು ಮೂರು ಪ್ರಕಾರವಾಗಿ ಆಚರಿಸುತ್ತಾರೆ. ಅವು ಯಾವುವು ಎಂದರೆ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾ ಸರಸ್ವತಿ. ನವರಾತ್ರಿಯಲ್ಲಿ ಮೊದಲ ಮೂರು ದಿನಗಳು ಮಹಾ ಕಾಳಿಯನ್ನು ಆರಾಧಿಸಿದರೆ, ದ್ವಿತೀಯ ಮೂರು ದಿನಗಳಲ್ಲಿ ಮಹಾಲಕ್ಷ್ಮಿಯನ್ನು ನಂತರ 3 ದಿನಗಳಲ್ಲಿ ಮಹಾ ಸರಸ್ವತಿಯನ್ನು ಆರಾಧಿಸುವುದು ರೂಢಿಯಲ್ಲಿದೆ. ಮಹಾಕಾಳಿಯನ್ನು ಋಗ್ವೇದ ಸ್ವರೂಪಗಳಾಗಿ, ಮಹಾಲಕ್ಷ್ಮಿಯನ್ನು ಯರ್ಜುವೇದ ಸ್ವರೂಪಗಳಾಗಿ ಮತ್ತು ಮಹಾಸರಸ್ವತಿಯನ್ನು ಸಾಮವೇದ ಸ್ವರೂಪಳಾಗಿ ಪೂಜಿಸುವ ಸಂಪ್ರದಾಯವಿದೆ. ಸಂಪತ್ತಿಗೆ ಮಹಾಲಕ್ಷ್ಮಿ, ತೇಜಸ್ಸು ಮತ್ತು ಶಕ್ತಿಗೆ ಮಹಾಕಾಳಿ ಮತ್ತು ಜ್ಞಾನವನ್ನೂ ನೀಡುವವಳು ಮಹಾ ಸರಸ್ವತಿ.
3 ತತ್ವಗಳು
ಈ ಜಗತ್ತು ನಿಂತಿರುವುದೇ ಸೃಷ್ಟಿ, ಸ್ಥಿತಿ ಮತ್ತು ಲಯ ಎಂಬ ಮೂರು ತತ್ವಗಳ ಮೇಲೇಯೇ ಈ ಕ್ರಮವನ್ನೂ ಬ್ರಹ್ಮ ಮತ್ತು ಶಿವರು ಪಾಲಿಸುತ್ತಾರೆ. ಆದರೆ, ಈ ಮೂರು ಶಕ್ತಿಗಳ ಹಿಂದೆ ಇರುವುದೇ ಮಹಾತಾಯಿ ಜಗದಂಬೆ, ಈಕೆಯನ್ನು ಸಾವಿರಾರು ವರ್ಷಗಳಿಂದ ಆರಾಧಿಸಿಕೊಂಡು ಬರಲಾಗುತ್ತಿದೆ. ವರ್ಣಮಾಲೆಯಲ್ಲಿ ದೇವಿ (3 ಮಾತ್ರೆಯ ಸ್ವರೂಪದೇವಿ): ದೇವಿಯು ಸ್ವಾಹಾ, ಸ್ವಧಾ ಮತ್ತು ವಷಟ್ ಎಂಬ ಮಂತ್ರಗಳ ಸ್ವರೂಪಳು. ಅ, ಉ, ಮ ಎಂಬ ಮೂರು ಮಾತ್ರೆಗಳ ಸ್ವರೂಪಳೂ ಅವಳೇ. ವರ್ಣಮಾಲೆಯಲ್ಲಿರುವ ಶಕ್ತಿಯೂ ಅವಳದೇ. ಇವಳೇ ಮಹಾವಿದ್ಯೆಯೂ ಮತ್ತು ಮಹಾ ಮೋಹಳೂ ಆಗಿದ್ದಾಳೆ.
ನವ ಭಕ್ತಿ-ಶಕ್ತಿ
‘ನವ’ ಶಬ್ದ ನವೀನತೆಯ ಅಥವಾ ಹೊಸತರ ದ್ಯೋತಕವೂ ಆಗಿದೆ. ಮೊದಲನೆಯದಾಗಿ ಕಾಲದ ನವೀನತೆ ಅರ್ಥಾತ್ ಶರದ್ ಋತುವಿನ ಆಗಮನ. ಹೊಸ ಫಸಲು ಬರುವ ಕಾಲ. ಆಶ್ವಯುಜ ಮಾಸದಿಂದ ಚಳಿಗಾಲ ಪ್ರಾರಂಭವಾಗುತ್ತದೆ. ‘ಜೀವೇಮ ಶರದಂ ಶತಮ್’ ಎಂಬ ವೇದೋಕ್ತಿಯು ಶರದ್ಋತುವಿನಲ್ಲಿ ಯಾರು ಬದುಕಿರುತ್ತಾರೋ ಅಂಥವರು ವರ್ಷವಿಡೀ ಜೀವಿಸುತ್ತಾರೆ ಎನ್ನುವುದನ್ನು ಸೂಚಿಸುತ್ತದೆ. (ನೂರು ವರ್ಷಗಳ ಕಾಲ ಬಾಳೋಣ ಎನ್ನುವ ಅರ್ಥವೂ ಇದೆ.) ಒಂಭತ್ತು ದಿನ ಉಪವಾಸ ಮಾಡಿ ವ್ಯಕ್ತಿಯು ತನ್ನ ಶಾರೀರಿಕ ಸ್ವಭಾವವನ್ನು ಪ್ರಕೃತಿಯ ಸ್ವಭಾವಕ್ಕೆ ಅನುಕೂಲವಾಗಿ ಪರಿವರ್ತಿಸಿಕೊಳ್ಳುತ್ತಾನೆ. ಕಾರಣ ಸ್ವಸ್ಥ ಹಾಗೂ ಆರೋಗ್ಯಕರ ಜೀವನ ನಡೆಸುವ ರಹಸ್ಯವೆಂದರೆ ಪ್ರಕೃತಿಯ ವಿರುದ್ಧ ಹೋಗತೊಡಗಿದರೆ ಅದರಿಂದ ಒಳಿತಾಗುವುದಿಲ್ಲ. ನವರಾತ್ರಿಯ ಉಪವಾಸ ವಿಧಿಯನ್ನು ಗಮನಿಸಿದರೆ ಇದು ದೇಹದೊಳಗಿನ ಅಶುಚಿತ್ವವನ್ನು ಶುದ್ಧಗೊಳಿಸುವ ಅತಿ ಉತ್ತಮ ಸಾಧನವೆನ್ನುವುದು ತಿಳಿಯುತ್ತದೆ. ವ್ಯಕ್ತಿಯ ಅಂತರ್ಶರೀರ ಮತ್ತು ಬಾಹ್ಯ ಶರೀರಗಳೆರಡೂ ಶುಚಿಯಾಗಿರಬೇಕೆಂದು ಶಾಸ್ತ್ರ ಹೇಳುತ್ತದೆ. ಪಂಚ ಮಹಾಭೂತಗಳಾದ ನೆಲ, ಜಲ, ಅನಿಲ, ಆಕಾಶ ಮತ್ತು ಅಗ್ನಿ ಮತ್ತು ಚತುಷ್ಟಯಗಳಾದ ಮನಸ್ಸು, ಬುದ್ಧಿ, ಚಿತ್ರ ಮತ್ತು ಅಹಂಕಾರ ಈ ನವತತ್ತ್ವಗಳನ್ನು ಅತ್ಯಂತ ಶುದ್ಧವಾಗಿಸುವ ಪ್ರಕ್ರಿಯೆಯಿಂದಾಗಿ ನವರಾತ್ರಿಯು ಸರ್ವರಿಗೂ ನವೀನತೆಯ ಸಂದೇಶ ಹೊತ್ತು ತರುತ್ತದೆ. ನಾವು ಮಾಡುವ ಕರ್ಮಗಳಿಗೆ ಗಮನ ಹರಿಸಿ ಎನ್ನುವ ಸಂದೇಶ ಅದು ನೀಡುತ್ತದೆ. ನಾವು ನಮ್ಮ ಕ್ರಿಯಾ ರೂಪಗಳಲ್ಲಿ ನಾವಿನ್ಯತೆಯನ್ನು ಮರೆಸಲಿ ಎನ್ನುವುದು ಅದರ ಆಶಯ.
ನವದುರ್ಗೆಯರು
ನವದುರ್ಗೆಯ ಮೊದಲ ದಿನದಿಂದ ಒಂಬತ್ತು ದಿವಸಗಳವರೆಗೂ ಪ್ರತಿದಿನ ದೇವಿಯ ನವ ಅವತಾರಗಳನ್ನು ಒಂದೊಂದು ದಿವಸ ಪೂಜಿಸಿ, ಭಕ್ತರು ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ. ಮೊದಲನೆ ದಿನದಿಂದ ಆರಂಭಿಸಿ, ಶೈಲಪುತ್ರಿ, ಬ್ರಹ್ಮಚಾರಿಣೀ, ಚಂದ್ರ ಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ ಹಾಗೂ ಒಂಬತ್ತನೆಯ ದಿವಸ ಸಿಧ್ಧಿಧಾತ್ರಿ ಎಂಬುದಾಗಿ ವಿವಿಧ ರೂಪ ಮತ್ತು ನಾಮಗಳಿಂದ, ಲೋಕಮಾತೆಯಾದ ಶ್ರೀ ದುರ್ಗಾದೇವಿಯನ್ನು ಆರಾಧಿಸಿ, ಪ್ರತಿನಿತ್ಯ ಒಂದೊಂದು ಬಗೆಯ ನೈವೇದ್ಯವನ್ನು ಅರ್ಪಿಸಿ, ಭಕ್ತಿ-ಭಾವಗಳಿಂದ ಪೂಜೆಗೈದು ಕೃತಾರ್ಥರಾಗುತ್ತಾರೆ. ಆವರಣಗಳ ಪೂಜೆಗಳನ್ನು ಗಮನಿಸಿದರೆ ಒಂಭತ್ತು ವಿಧದ ಆವರಣ ಪೂಜೆ ನೋಡಸಿಗುತ್ತದೆ. ಇದನ್ನು ಅವತರಾಣಾರ್ಚನೆ ಎಂದು ಕರೆಯಲಾಗಿದೆ.
Discussion about this post