ಕನ್ನಡದ ಅತ್ಯಂತ ಜನಪ್ರಿಯ ಟಿವಿ ಶೋಗಳಲ್ಲಿ ಅಗ್ಯಗಣ್ಯ ಸ್ಥಾನದಲ್ಲಿರುವ ಮಜಾ ಟಾಕೀಸ್ ಕಾರ್ಯಕ್ರಮವನ್ನು ನೀವು ನೋಡಿರುತ್ತೀರಿ. ಇಂತಹ ವೇದಿಕೆಯೊಂದರಲ್ಲಿ ಕಾಣಿಸಿಕೊಂಡು ಮನೆಮಾತಾದ ಕಲಾವಿದೆಯೇ ನಮ್ಮ ಇಂದಿನ ಲೇಖನದ ಜೀವಾಳ…
ಕಲೆಯನ್ನೇ ಉಸಿರಾಗಿಸಿಕೊಂಡು, ಕಲೆಯನ್ನೇ ದೇವರನ್ನಾಗಿ ಪೂಜಿಸುತ್ತಿರುವ ಅನೇಕ ಕಲಾವಿದರು ನಿರಂತರವಾಗಿ ಕಲಾ ಸರಸ್ವತಿಯ ಸೇವೆ ಮಾಡುತ್ತಲೇ ಬಂದಿದ್ದಾರೆ. ಇಂತಹ ಸಾಲಿಗೆ ಸೇರುವ ನೀಲಾ ಜೇವರ್ಗಿ ಸಹ ಒಬ್ಬರು.
ಅದು ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಒಂದಾದ ಗುಲ್ಬರ್ಗಾ. ಇಲ್ಲಿನ ಜೇವರ್ಗಿ ತಾಲೂಕಿನ ರಾಜಣ್ಣ ಜೇವರ್ಗಿ-ಪ್ರೇಮ ದಂಪತಿಗಳಿಗೆ ಇಬ್ಬರು ಪುತ್ರಿಯರು. ನೀಲಾ ಜೇವರ್ಗಿ ಹಾಗೂ ಸುಜಾತ ಜೇವರ್ಗಿ. ನೀಲಾ ಅವರಿಗೆ ಕಲೆ ಎನ್ನುವುದು ವಂಶಗತವಾಗಿಯೇ ಬಂದಿದೆ. ಇವರ ತಂದೆ ನಾಟಕಕಾರ, ನಿರ್ದೇಶಕ ಹಾಗೂ ಮೂರು ನಾಟಕ ಕಂಪೆನಿಯ ಮಾಲೀಕರು. ಅಲ್ಲದೇ ಇವರ ತಾಯಿ ಸಹ ಕಲಾವಿದೆ ಎಂಬುದು ವಿಶೇಷ.
ಕಲೆ ಇವರಿಗೆ ದೈವದತ್ತವಾಗಿ ಬಂದ ವರ
ಎಲ್ಲ ಮಕ್ಕಳಂತೆ ಶಾಲೆಗೆ ಹೋಗಿ ಕಲಿಯುವ ವಯಸ್ಸಿನಲ್ಲಿ ನೀಲಾಗೆ ಕೆಲವೊಂದು ಅನಿವಾರ್ಯ ಕಾರಣಗಳು ಅಡ್ಡಿಯಾಗುತ್ತವೆ. ಅದು ಸಾಧ್ಯವಾಗದಿದ್ದರೂ ಕಲಿಯಬೇಕೆಂಬ ತುಡಿತ ಇವರಲ್ಲಿ ಮಿಡಿಯುತ್ತಲೇ ಇತ್ತು. ಹೀಗಾಗಿ, ವರ್ಷಗಳೇ ಕಳೆದ ನಂತರ ಛಲಬಿಡದೇ ತಂದೆಯ ಬೆಂಬಿದ್ದು, ಶಾಲೆಗೆ ಸೇರಿಸುವಂತೆ ಕೇಳಿ, 14ನೆಯ ವಯಸ್ಸಿನಲ್ಲಿ ನೇರವಾಗಿ ಏಳನೆಯ ತರಗತಿಗೆ ಸೇರುವಲ್ಲಿ ಯಶಸ್ವಿಯಾದರು.
ಹೇಗೂ ಶಾಲೆಗೆ ಸೇರಿಯಾಯಿತು. ಆದರೆ, ಶಾಲೆಯ ಮೆಟ್ಟಿಲೇ ಹತ್ತದ ಮಗು ನೇರವಾಗಿ ಏಳನೆಯ ತರಗತಿಯ ಪಾಠ-ಪ್ರವಚನಗಳನ್ನು ಅರ್ಥೈಸಿಕೊಳ್ಳುವುದು ಹೇಗೆ!? ಅಆಇಈ ಕೂಡ ತಿಳಿಯದ ನೀಲಾಗೆ ಅದೊಂದು ಸವಾಲಾಗಿತ್ತು. ಆದರೆ, ಓದುವ ಛಲವಿದ್ದ ನೀಲಾ ಏಳನೆಯ ತರಗತಿ ಮುಗಿಸಿದರು. 8ನೆಯ ತರಗತಿ ದಾವಣಗೆರೆಯಲ್ಲಿ ಆರಂಭಿಸಿದ ಇವರಿಗೆ, ಅಲ್ಲಿನ ಶಿಕ್ಷಕರು ಈಕೆಯ ಪರಿಸ್ಥಿತಿ ಅರ್ಥೈಸಿಕೊಂಡು ವಿಶೇಷ ತರಗತಿಗಳನ್ನು ತೆಗೆದುಕೊಂಡು ಪ್ರೀತಿಯಿಂದ ನೋಡಿಕೊಂಡರು. ಅಂದಹಾಗೆ ಇವರು ಹಿಂದೆ ಇದ್ದದ್ದು ಓದಿನಲ್ಲಿ ಮಾತ್ರ ಪಠ್ಯೇತರ ಚಟುವಟಿಕೆಗಳಲ್ಲಿ ಎಲ್ಲರಿಗಿಂತಲೂ ಮುಂದಿದ್ದರು ಎಂಬುದು ವಿಶೇಷ.
ಅಂತೂ ಇಂತೂ ಎಂಟನೆಯ ತರಗತಿಯ ಮುಗಿಯಿತು. ನಂತರ ಇವರ ಪಯಣ ಮೈಸೂರಿನತ್ತ ಹೊರಟಿತು. ಅಲ್ಲಿ 10ನೆಯ ತರಗತಿಗೆ ಸೇರಲು ಹೋದ ನೀಲಾರಿಗೆ ಅಚ್ಚರಿಯೊಂದು ಕಾದಿತ್ತು. ಶಾಲಾ ಪ್ರವೇಶಕ್ಕೂ ಮೊದಲು ಪರೀಕ್ಷೆಯೊಂದನ್ನು ಎದುರಿಸಬೇಕಿತ್ತು. ಆದರೆ, ಇಲ್ಲಿ ನೀಲಾ ಹಿಂದುಳಿದರು. ನಂತರ ಅಪ್ಪನೊಂದಿಗೆ ನಡೆಯುತ್ತಿದ್ದ ಒಂದು ನಾಟಕದಲ್ಲಿ ಪಾಲ್ಗೊಂಡಿದ್ದ ಇವರಿಗೆ ಅಪ್ಪನೊಂದಿಗೆ ಸ್ವರ ಗೂಡಿಸಿ ಎಂದು ಪ್ರೇಕ್ಷಕರೇ ಒತ್ತಡ ಹಾಕುತ್ತಾರೆ. ಈ ವೇಳೆ ನೀಲರವರನ್ನು ಗಮನಿಸಿದ ಸೋಮಶೇಖರ್ ಎಂಬುವರು ಈಕೆಯನ್ನು ಶಾಲೆಗೆ ಸೇರಿಸಿ, ಇವಳಲ್ಲಿರುವ ಕಲಾ ಸರಸ್ವತಿಯನ್ನು ಸಾಯಿಸಬೇಡಿ ಎಂದರಂತೆ.
ಮರುದಿನವೇ ಅವರು ಹೇಳಿದ ಶಾಲೆಯಲ್ಲಿ ಹತ್ತನೇ ತರಗತಿಯ ಪ್ರವೇಶ ಪಡೆದುಕೊಂಡರು. ಆದರೆ, ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರು.
ಛಲ ಬಿಡದೇ ಭರವಸೆಯೊಂದಿಗೆ ಮುನ್ನಡೆದು ಎರಡನೆಯ ಪರೀಕ್ಷೆಯಲ್ಲಿ ಎಲ್ಲರ ನಂಬಿಕೆಯಂತೆ ಉತ್ತೀರ್ಣಗೊಂಡ ದಿನ ಇವರ ಸಂತೋಷಕ್ಕಿಂತಲೂ ತಂದೆಯವರ ಸಂತೋಷಕ್ಕೆ ಪಾರವೇ ಇರಲಿಲ್ಲ.
ತಮ್ಮ ಜನ್ಮತಃ ಕಲೆಯನ್ನು ಹೊತ್ತು ಬಂದಿರುವ ಈಕೆ ನಟರಾಜ್ ಹೊನ್ನವಳ್ಳಿಯವರ ಬಳಿ ರಂಗ ತರಬೇತಿ ಪಡೆದರು. ಒಮ್ಮೆ ಅಭಿಮನ್ಯು ಕಾಳಗ ಪೌರಾಣಿಕ ನಾಟಕದಲ್ಲಿ ಅಭಿಮನ್ಯುವಿನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಗುರುಗಳ ಪ್ರೀತಿಗೆ ಪಾತ್ರರಾಗಿ ಶಹಬ್ಬಾಸ್ ಎನಿಸಿಕೊಂಡಿದ್ದರು. ಮುಂದೆ ಇದನ್ನು ಗುರುತಿಸಿದ ಸಂಜು, ಸುವರ್ಣ, ಮಿಥುನ್ ಎಂಬ ಪ್ರತಿಭೆಗಳು ಇವರನ್ನೆ ಪ್ರೋತ್ಸಾಹಿಸಿ ಬಿ ಮ್ಯೂಸಿಕ್’ಗೆ ಸೇರಿದರು. ಅಲ್ಲಿ ಕಲಿಯುತ್ತ ಬಿಡುವಿನ ವೇಳೆಯಲ್ಲಿ ಕಾಲೇಜು ಮಕ್ಕಳಿಗೆ ನಾಟಕ ನಿರ್ದೇಶಿಸುತ್ತಾ ಗುರುಗಳೂ ಸಹ ಆದರು.
ಈ ನಡುವೆ ಗೆಳೆಯರೊಬ್ಬರು ಮಜಾ ಭಾರತಕ್ಕೆ ಆಡಿಶನ್ ಕೊಡಲು ಸಹಕರಿಸು ಎಂದು ಕೇಳಿದ್ದರು. ಸಹಕರಿಸಲು ಹೋದ ನೀಲಾಗೆ ಮುಂದೆ ದುಡ್ಡ ಅಚ್ಚರಿಯೊಂದು ಕಾದಿತ್ತು. ಅದು ‘ನೀವು ಸೆಲೆಕ್ಟ್ ಆಗಿದ್ದೀರಿ’ ಎಂಬ ಕರೆ ಬಂದುದಾಗಿತ್ತು. ಇಲ್ಲಿ ಉಲ್ಲೇಖಿಸಲೇಬೇಕಾದ ವಿಷಯವೆಂದರೆ ಇವರನ್ನು ಟೆಲಿವಿಷನ್ ಇಂಡಸ್ಟ್ರಿಗೆ ಪರಿಚಯಿಸಿದವರು ದಿಲೀಪ್ ರಾಜ್. ಅಲ್ಲಿಂದ ಇವರ ಕಲೆಗೊಂದು ಹೊಸ ಮೆರುಗು ಹುಟ್ಟಿಕೊಂಡು, ಮಜಾ ಭಾರತ, ಮಜಾ ಟಾಕೀಸ್, ಕಾಮಿಡಿ ಟಾಕೀಸ್ ಶೋಗಳಲ್ಲಿ ಜನಪ್ರಿಯತೆ ಗಳಿಸಿ, ಇಷ್ಟದೇವತೆ, ಪಾಪ ಪಾಂಡು, ಸಿಲ್ಲಿ ಲಲ್ಲಿ ಧಾರವಾಹಿಗಳಲ್ಲಿ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.
ಬೆಳ್ಳಿ ತೆರೆಗೆ ಗುಲ್ಬರ್ಗಾ ಸುಂದರಿ
ರಂಗಭೂಮಿಯಿಂದ ಆರಂಭಗೊಂಡ ನೀಲಾ ಅವರ ಕಲಾ ಪಯಣ ಟಿವಿ ಕಾರ್ಯಕ್ರಮ, ಧಾರಾವಾಹಿಗಳಲ್ಲಿ ಸಾಗಿ ಈಗ ಬೆಳ್ಳಿ ತೆರೆಗೆ ಬಂದು ನಿಂತಿದ್ದು, ಸದ್ಯ, ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.
ಹಲವಾರು ಕಷ್ಟದ ದಿನಗಳನ್ನು ಹಿಮ್ಮೆಟ್ಟಿ ಮುನ್ನಡೆಯುತ್ತಿರುವ ಇವರಿಗೆ ಬಹಳಷ್ಟು ಜನ ಪ್ರೋತ್ಸಾಹಿಸುತ್ತಿದ್ದರೂ, ಇವಳಿಂದ ಏನು ಸಾಧ್ಯ ಎಂದು ಕಾಲೆಳೆದವರೂ ಸಹ ಇದ್ದಾರೆ. ಆದರೆ, ಮೌನದಿ ಮುನ್ನಡೆದ ನೀಲಾಗೆ ಒಂದಷ್ಟು ಜನ ಒಳ್ಳೆಯ ರೀತಿಯಲ್ಲಿ ಸಹಕರಿಸಿ ಜೊತೆಯಾಗಿದ್ದಾರೆ.
ಇವರಲ್ಲಿ ಮಮತಾ ಅವರನ್ನು ನೆನಪಿಸಿಕೊಳ್ಳುವ ನೀಲಾ, ಇದರೊಂದಿಗೆ ಚಲನಚಿತ್ರಕ್ಕೆ ಅವಕಾಶ ನೀಡಿ ಗುರುಗಳ ಸ್ಥಾನಕ್ಕೆ ನಿಂತವರಲ್ಲಿ ದಿಲೀಪ್ ರಾಜ್, ಉತ್ತಮ್, ಸೃಜನ್ ಲೋಕೇಶ್, ತೇಜಸ್ವಿ, ವೆಂಕಟ್, ನವೀನ್ ಮಂಡ್ಯ ಸಂದೀಪ್ ಆಚಾರ್ಯ ಅವರುಗಳ ಸಹಕಾರ ನೆನೆಯುವುದನ್ನು ಮರೆಯುವುದಿಲ್ಲ.
ಕಲಾ ಸರಸ್ವತಿಯ ಸೇವಕಿ ಈ ಕಲಾವಿದೆಯ ಮುಂದಿನ ಜೀವನ ಸುಖಮಯವಾಗಿರಲಿ, ಬಯಸಿದ್ದಕ್ಕಿಂತಲೂ ಹೆಚ್ಚಿನ ಯಶಸ್ಸು ಇವರದಾಗಿರಲಿ,
ಸಾಧನೆ ಎಂಬ ಪದಕ್ಕೆ ಇವರು ಮಾದರಿಯಾಗಲಿ ಎಂಬುದು ನಮ್ಮ ಹಾರೈಕೆ.
Discussion about this post