ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಹನ್ನೆರಡನೇ ಶತಮಾನದಲ್ಲೇ ಜಗಜ್ಯೋತಿ ಬಸವಣ್ಣ ಅವರು ಅನುಭವ ಮಂಟಪದ ಮೂಲಕ ಮೊದಲ ಸಂಸತ್ ರಚನೆಗೆ ಶ್ರೀಕಾರ ಹಾಡಿದರು ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ #Pralhad Joshi ಸ್ಮರಿಸಿದರು.
ನವದೆಹಲಿಯಲ್ಲಿ ಇಂದು ಬಸವ ಜಯಂತಿ ಬಸವ ಜಯಂತಿ #Basava Jayanthi ಪ್ರಯುಕ್ತ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ, ಪ್ರಸ್ತುತ ಸಮಾಜಕ್ಕೆ ಬಸವೇಶ್ವರರ ತತ್ವಾದರ್ಶಗಳು ಅತ್ಯಗತ್ಯವಾಗಿವೆ ಎಂದು ಪ್ರತಿಪಾದಿಸಿದರು.
ಬಸವಣ್ಣನವರು 12ನೇ ಶತಮಾನದಲ್ಲಿಯೇ ಜಗತ್ತಿನ ಮೊದಲ ಸಂಸತ್ ಆಗಿ ಅನುಭವ ಮಂಟಪ ನಿರ್ಮಿಸಿ ವಿವಿಧ ಕ್ಷೇತ್ರಗಳಲ್ಲಿ ಅನುಭವ ಹಂಚಿಕೊಳ್ಳಲು ಅನುವು ಮಾಡಿಕೊಟ್ಟ ಕೀರ್ತಿಗೆ ಪಾತ್ರರಾದರು. ಅಂದಿನ ಅನುಭವ ಮಂಟಪದಲ್ಲಿ ಸಮಾಜ ಸುಧಾರಣೆ ಬಗ್ಗೆ ನಡೆಸುತ್ತಿದ್ದ ಚಿಂತನ-ಮಂಥನ, ಚರ್ಚೆ ಅವಿಸ್ಮರಣೀಯ ಎಂದು ಬಣ್ಣಿಸಿದರು.
ಸಮಾಜದಲ್ಲಿನ ಶೋಷಣೆ, ಜಾತೀಯತೆ ತೊಡೆದು ಹಾಕಿ, ಕಾಯಕ ತತ್ವ, ಸ್ತ್ರೀ ಸಮಾನತೆ, ಲಿಂಗಪೂಜೆ ಹೀಗೆ ಸಾಮಾಜಿಕ, ಸಾಂಸ್ಕೃತಿಕ-ಧಾರ್ಮಿಕ ಸೌಹಾರ್ದತೆಗೆ ಒತ್ತು ನೀಡಿ ಲೋಕೋದ್ಧಾರಕ್ಕೆ ಶ್ರಮಿಸಿದ ಮತ್ತು ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದ ನಿಜ ಶರಣ ಕಾಯಕಯೋಗಿ, ಜಗಜ್ಯೋತಿ ಬಸವೇಶ್ವರರು ಎಂದು ಸಚಿವ ಜೋಶಿ ಹೇಳಿದರು.
ದೆಹಲಿಯ ನೂತನ ಸಂಸತ್ ಭವನದ ಭೂಮಿ ಪೂಜೆ ನೆರವೇರಿಸಿದ ಐತಿಹಾಸಿಕ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಗಜ್ಯೋತಿ ಬಸವೇಶ್ವರರ ಅನುಭವ ಮಂಟಪದ ಪ್ರೇರಣೆಯೇ ಸುಂದರ ಸಂಸತ್ ಭವನ ನಿರ್ಮಾಣಕ್ಕೆ ನಾಂದಿಯಾಯಿತೆಂದು ಸ್ಮರಿಸಿದ್ದನ್ನು ಸಚಿವರು ಪ್ರಸ್ತಾಪಿಸಿದರು.
ದಾರ್ಶನಿಕ ಬಸವಣ್ಣನವರು ಸಾಮಾಜಿಕ ಕ್ರಾಂತಿಯ ಹರಿಕಾರರು. ಅವರ ತತ್ವಾದರ್ಶಗಳು ಆಚರಣೆಗಷ್ಟೇ ಸೀಮಿತವಾಗಬಾರದು. ಪ್ರತಿಯೊಬ್ಬರೂ ಅನುಸರಿಸಬೇಕು. ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಮೇಲ್ಪಂಕ್ತಿ ಹಾಕಿದ್ದಲ್ಲದೆ, ಸಮ ಸಮಾಜದ ಪರಿಕಲ್ಪನೆ ಹೊಂದಿದ್ದರು. ಅಂಥವರ ಜೀವನಾದರ್ಶ ನಮಗೆ ಮಾದರಿಯಾಗಿದೆ ಎಂದು ಹೇಳಿದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ಸಮಾಜ ಸುಧಾರಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಆದರೆ, ಇಂದು ನ್ಯಾಯ ಮತ್ತು ಮಾನವೀಯ ಮೌಲ್ಯಗಳೇ ಸಮಾಜದಿಂದ ಮರೆಯಾಗುತ್ತಿವೆ. ಇಂಥ ಸಂದರ್ಭದಲ್ಲಿ ಶರಣರ ಆಶೀರ್ವಚನಗಳ ಸಾರವನ್ನು ಅರ್ಥೈಸಿಕೊಂಡು ಅನುಸರಿಸಬೇಕೆಂದು ಸಚಿವರು ಆಶಿಸಿದರು.
ಈ ಸಂದರ್ಭದಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್, ಕಿರಣ್ ರಿಜಿಜು, ರಾಜ್ಯ ಖಾತೆ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post