ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಕಟ್ಟಡದ ಮುಂಭಾಗದಲ್ಲಿ ಡಾ.ರಾಜ್’ಕುಮಾರ್ ಹಾಗೂ ಡಾ.ಅಂಬರೀಷ್ ಅವರ ಹೆಸರಿನ ಜೊತೆಯಲ್ಲಿ ಹಿರಿಯ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಹೆಸರು ಇಲ್ಲದೇ ಇರುವುದಕ್ಕೆ ವಿಷ್ಣು ಅಳಿಯ, ನಟ ಅನಿರುದ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸ್ವತಃ ವೀಡಿಯೋ ಮೂಲಕ ಮಾತನಾಡಿರುವ ಅವರು, ಈ ಕಟ್ಟಡದಲ್ಲಿ ಇಬ್ಬರು ಧೀಮಂತರ ಹೆಸರುಗಳನ್ನು ನೋಡಿದಾಗ ಸಂತೋಷವಾಯಿತು. ಇಬ್ಬರು ಧೀಮಂತರ ಹೆಸರನ್ನು ಭವನಕ್ಕೆ ಹಾಗೂ ಆಡಿಟೋರಿಯಂಗೆ ಇಟ್ಟಿರುವುದು ಅತ್ಯಂತ ಸೂಕ್ತವಾಗಿದೆ. ಆದರೆ, ಅಲ್ಲಿ ಅಪ್ಪಾವ್ರ ಅಂದರೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಹೆಸರು ಇಲ್ಲದೇ ಇರುವುದು ಬೇಸರ ಮೂಡಿಸಿದೆ ಎಂದಿದ್ದಾರೆ.
ತಾವು ಈ ಬಗ್ಗೆ ಭಾರತಿ ಅಮ್ಮನವರ ಜೊತೆಯಲ್ಲಿ ಮಾತನಾಡಿ, ಈ ವಿಚಾರದ ಬಗ್ಗೆ ಸಂಬಂಧಿಸಿದವರೊಟ್ಟಿಗೆ ಕೇಳಬಹುದೇ ಎಂದಾಗ, ಬೇಡ, ಅಧಿಕಾರಿಗಳಿಗೆ ಇಂದಲ್ಲ ನಾಳೆ ಗಮನಕ್ಕೆ ಬಂದು ಅವರಿಗೇ ಅರ್ಥವಾಗಬಹುದು. ನಾವಾಗಿಯೇ ಕೇಳುವುದು ಬೇಡ ಎಂದರು. ಆದರೆ, ಈಗ ಸುಮಾರು ವರ್ಷಗಳೇ ಕಳೆದಿವೆ. ಈ ವಿಚಾರ ಕಲಾವಿದರಿಗೆ, ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಇತ್ತೀಚೆಗೆ ಅಭಿಮಾನಿಗಳು ಕರೆ ಮಾಡಿ, ನೀವೇಕೆ ಸುಮ್ಮನಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ, ಅನಿವಾರ್ಯವಾಗಿ ನಾವಾಗಿಯೇ ಕೇಳುವ ಸಂದರ್ಭ ಬಂದಿದೆ ಎಂದಿದ್ದಾರೆ.
ನಿಮಗೆ ಪದ್ಮಶ್ರೀ, ಪದ್ಮವಿಭೂಷಣ, ದಾದಾ ಸಾಹೇಬ್ ಪಾಲ್ಕೆ ಸೇರಿದಂತೆ ಹಲವು ಪ್ರಶಸ್ತಿಗಳು ಬರಬೇಕು ಎಂದು ವಿಷ್ಣು ದಾದಾ ನಮ್ಮೊಂದಿಗೆ ಶಾರೀರಿಕವಾಗಿ ಇದ್ದಾಗ ಅವರ ಬಳಿಯೇ ನಾನು ಹಲವು ಬಾರಿ ಕೇಳಿದ್ದೆ. ಆದರೆ, ನಾವು ಏನನ್ನೂ ನಿರೀಕ್ಷೆ ಮಾಡಬಾರದು, ಬಂದಿದ್ದನ್ನು ಸ್ವೀಕರಿಸಬೇಕು ಎಂದಷ್ಟೇ ಅವರು ಹೇಳುತ್ತಿದ್ದರು. ಅವರು ನಿರೀಕ್ಷೆ ಮಾಡದಿದ್ದರೂ ಅವರ ಕುಟುಂಬ ಸದಸ್ಯನಾಗಿ, ಅಭಿಮಾನಿಯಾಗಿ ಅವರಿಗೆ ಸಿಗಬೇಕಾದ ನ್ಯಾಯ ಸಿಗಬೇಕು ಎಂದು ಅನಿಸುತ್ತದೆ ಎಂದು ಮನದಾಳದ ನೋವನ್ನು ವ್ಯಕ್ತಪಡಿಸಿದ್ದಾರೆ.
ಹಿಂದೆ ವಾಣಿಜ್ಯ ಮಂಡಳಿಯಲ್ಲಿ ವಿಷ್ಣುದಾದಾ ಪುತ್ಥಳಿ ನಿರ್ಮಾಣ ವಿಚಾರದಲ್ಲಿ ಆದ ನೋವಿನಿಂದಾಗಿ ಈಗ ಈ ವಿಚಾರವನ್ನು ಈ ವೀಡಿಯೋ ಮೂಲಕ ಮಾತನಾಡುತ್ತಿದ್ದೇನೆ. ಅಪ್ಪಾವ್ರು ಸಂಘದ ಅಧ್ಯಕ್ಷರಾಗಿಲ್ಲದೇ ಇರಬಹುದು. ಆದರೆ ತಾವೇ ಕಂಡಂತೆ ವಿಷ್ಣು ದಾದಾ ಅವರು ಕಲಾವಿದರ ಸಂಘದಿಂದ ಹಾಗೂ ಹಲವು ಸಾಮಾಜಿಕ ಕಾರ್ಯಗಳಿಗೆ ಮುಂದಾಳತ್ವ ವಹಿಸಿದ್ದರು. ಹಲವು ಸಭೆಗಳನ್ನು ಅವರೇ ನೇತೃತ್ವ ವಹಿಸಿ ಮುನ್ನಡೆಸಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ನಮ್ಮ ಮನೆಯಲ್ಲೇ ಬಹಳಷ್ಟು ಬಾರಿ ಸಭೆಗಳು ಆಗಿವೆ ಎಂದು ಅನಿರುದ್ ನೆನಪಿಸಿದ್ದಾರೆ.
ಅವರು ಕಾಣೋದೇ ಇಲ್ವಾ ನಿಮಗೆ? ಅವರು ನೆನಪಿಗೆ ಬರುವುದೇ ಇಲ್ಲವಾ ನಿಮಗೆ? ಅವರ ಹೆಸರಿಟ್ಟರೆ ಯಾರಿಗೆ ಗೌರವ? ಇದನ್ನು ನಾನು ಓರ್ವ ಕುಟುಂಬ ಸದಸ್ಯನಾಗಿ ಕೇಳಿಕೊಳ್ಳಬೇಕಾ? ಇದಕ್ಕಿಂತ ದುರಂತ ಬೇಕಾ? ಎಂದು ಸಾತ್ವಿಕವಾದ ಆಕ್ರೋಶವನ್ನು ಹೊರಹಾಕಿದ್ದಾರೆ.
200ಕ್ಕಿಂತಲೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದ ಹಿರಿಯ ಕಲಾವಿದರ ಹೆಸರು ಅಲ್ಲಿ ಇಲ್ಲ ಎಂದು ಯಾರಿಗೂ ಏನೂ ಅನಿಸುವುದೇ ಇಲ್ಲವಾ? ಅಲ್ಲಿ ಇನ್ನೂ ಹಿರಿಯ ಕಲಾವಿದರ ಹೆಸರು ಇಲ್ಲ ಎನ್ನುವುದೂ ಸಹ ಚರ್ಚೆ ಆಗಬೇಕು. ಆದರೆ, ಅಲ್ಲಿ ಅಪ್ಪಾವ್ರ ಅವರ ಹೆಸರು ಇರಲೇಬೇಕು. ಕರ್ನಾಟಕ ಕಲಾವಿದರ ಸಂಘ ಎಂದರೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಹೆಸರನ್ನು ಮರೆಯಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಇದನ್ನು ನಾನೊಬ್ಬ ಕಲಾವಿದನಾಗಿ, ವಿಷ್ಣುವರ್ಧನ್ ಕುಟುಂಬ ಸದಸ್ಯನಾಗಿ ಈ ಪ್ರಶ್ನೆಯನ್ನು ಕಲಾವಿದರ ಸಂಘದ ಅಧಿಕಾರಿಗಳಿಗೆ ಹಾಗೂ ಕಲಾವಿದರಿಗೆ ಕೇಳುತ್ತಿದ್ದೇನೆ ಎಂದು ಹೇಳುವ ಮೂಲಕ ನೋವಿನ ಅಸಮಾಧಾನವನ್ನು ಹೊರಹಾಕಿದ್ದಾರೆ.
ಇನ್ನು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕಲಾವಿದರ ಸಂಘದ ಕಟ್ಟಡದಲ್ಲಿ ವಿಷ್ಣುವರ್ಧನ್ ಹೆಸರು ಇಲ್ಲದೇ ಇರುವುದಕ್ಕೆ ರಾಜ್ಯದಾದ್ಯಂತ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post