ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹಿಂದೂ ಸಂಸ್ಕತಿಯಲ್ಲಿ ಪ್ರತಿದಿನವೂ ಹಬ್ಬ, ಪ್ರತಿಯೊಂದು ಕ್ಷಣವೂ ಪರ್ವಕಾಲವೇ. ನಿತ್ಯೋತ್ಸವವೇ ಹಿಂದೂ ಸಂಸ್ಕತಿಯ ವಿಶೇಷ. ಈ ನಿತ್ಯೋತ್ಸವ ಜೊತೆಗೆ ಕೆಲವು ವಿಶೇಷ ಮಹೋತ್ಸವಗಳೂ ಸೇರಿಕೊಂಡು ಇನ್ನೂ ಹೆಚ್ಚು ಮರೆಗು, ಘನತೆ, ಪರ್ವಕಾಲದ ಸಾಲಿನಲ್ಲಿ ಮಹಾಶಿವರಾತ್ರಿಗೆ ಅಗ್ರಸ್ಥಾನ. ಅಂದು ರಾತ್ರಿಯೆಲ್ಲಾ ಲಿಂಗರೂಪಿಯಾದ ಪರಮೇಶ್ವರನನ್ನು ಸ್ಮರಿಸುತ್ತಾ ಆರಾಧಿಸುವ ಪರಮಪುಣ್ಯ ಸಮಯ. ಗಂಗಾಭಿಷೇಕ, ಬಿಲ್ವ ಭಸ್ಮಗಳಿಂದ ಅರ್ಚಿಸುತ್ತಾ, ಪಂಚಾಕ್ಷರಿ ಮಂತ್ರ ಜಪಿಸುತ್ತಾ ಪರಶಿವನನ್ನು ಸಂತೋಷಗೊಳಿಸಿ ಅವನ ಅನುಗ್ರಹ ಪಡೆಯುವ ಸುವರ್ಣ ಸಂಧಿಕಾಲವೇ ಮಾಘಕಷ್ಣ ಚತುದರ್ಶಿಯ ಮಹಾಶಿವರಾತ್ರಿ.
ಪರಮೇಶ್ವರನ ಉಪಾಸನೆಗೆ ಕಷ್ಣಪಕ್ಷದ ಚತುರ್ದಶಿ ಪ್ರಶಸ್ತ ತಿಥಿ. ಅಮಾವಾಸ್ಯೆಯ ಹಿಂದಿನ ದಿನ. ಈ ದಿನವು ಕತ್ತಲೆಯ ಪರಮಾವಧಿಯಾಗಿದ್ದು ಎರಡು ಮಾಸಗಳ, ಎರಡು ಪಕ್ಷಗಳ, ಎರಡು ತಿಥಿಗಳ, ಎರಡು ದಿನಗಳ ಸಂಧಿಕಾಲ. ಅಂದು ಸಚ್ಚಿದಾನಂದ ಮಂಗಳ ಸ್ವರೂಪಿಯಾದ ಸ್ವಾತ್ಮಾರಾಮನಾದ, ಪರಶಿವನನ್ನು ಪೂಜಿಸುವುದರಿಂದ ಶುಭರಾತ್ರಿ ಮಂಗಳ ಪವಿತ್ರ ರಾತ್ರಿಯಾಗುತ್ತದೆ!
ಲಿಂಗಾವತಾರದ ಶಿವರಾತ್ರಿ
ಶಿವನ ಕುರಿತು ಹಿಂದು ಸಮಾಜದಲ್ಲಿ ‘ಶಿವರಾತ್ರಿ’ ವ್ರತಾಚರಣೆ ಮಹತ್ವದ ಪರ್ವ. ಶಿವರಾತ್ರಿಗೂ ಈ ಶಿವನಿಗೂ ಏನು ಸಂಬಂಧ? ರಾಮ ಹುಟ್ಟಿದ ದಿನ, ಕೃಷ್ಣಾಷ್ಟಮಿ, ಹಾಗೆಯೇ ಶಿವ ಹುಟ್ಟಿದ ದಿನ ಈ ಚತುರ್ದಶಿಯೇ? ಅಲ್ಲ. ರಾಮ-ಕೃಷ್ಣರಂತೆ ಶಿವನೊಂದು ಅವತಾರವಲ್ಲ. ದೇವತೆಗಳ ಮೂಲರೂಪಕ್ಕೆ ಹುಟ್ಟು ಹಬ್ಬವನ್ನು ಆಚರಿಸುವುದು ರೂಢಿಯಲ್ಲಿಲ್ಲ. (ಗಣಪತಿ ಮತ್ತು ಷಣ್ಮುಖರನ್ನು ಬಿಟ್ಟು) ಹಾಗಾದರೆ ಏನು ಈ ಶಿವರಾತ್ರಿಯೆಂದರೆ?
ಲಿಂಗವಾದುದು ಹೇಗೆ? ಇದರ ಬಗ್ಗೆ ಪುರಾಣಗಳು ಒಂದು ಸ್ವಾರಸ್ಯವಾದ ಕಥೆಯನ್ನು ಹೇಳುತ್ತವೆ.
ಹಿಮಾಲಯದಲ್ಲಿ ಶಿವ ತಪಸ್ಸಿಗೆ ಕೂತ. ಅವನ ತಪೋಭಂಗ ಮಾಡಲು ಕಾಮದೇವ ಹೂ ಬಾಣಗಳನ್ನು ಹೊತ್ತುತಂದ. ಕಾಮ ದೇವನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಶಿವ ಸಪ್ತರ್ಷಿಗಳ ಆಶ್ರಮದ ಬಳಿ ಸುತ್ತಾಡಿದನಂತೆ. ತಮ್ಮ ಆಶ್ರಮಕ್ಕೆ ಆಯಾಚಿತನಾಗಿ ಬಂದ ಶಿವನನ್ನು ಕಂಡ ಸಪ್ತರ್ಷಿಗಳು ತಲೆಬಾಗಿ ಸ್ವಾಗತಿಸಿದರು. ಋಷಿಪತ್ನಿಯರು ಶಿವನನ್ನು ಕಾಣಲೆಂದು ಒಳಮನೆಯಿಂದ ಹೆಬ್ಬಾಗಿಲಿಗೆ ಬಂದರು. ಇಲ್ಲಿಂದ ಕಥೆಗೆ ಹೊಸ ತಿರುವು ಬಂತು.
ಶಿವನನ್ನು ಬೆನ್ನಟ್ಟಿ ಬಂದ ಕಾಮದೇವನೂ ಪ್ರಾಯಃ ಸಪ್ತರ್ಷಿಗಳ ಆಶ್ರಮಕ್ಕೆ ಬಂದಿರಬೇಕು. ಆದರೆ ಇಲ್ಲಿ ಅವನ ಬಾಣ ಗುರಿತಪ್ಪಿತೋ, ಇಲ್ಲ ಬೇಕೆಂದೇ ಕಿಡಿಗೇಡಿತನ ಮಾಡಿದನೋ ಗೊತ್ತಿಲ್ಲ. ಅಂತೂ ಹೂಬಾಣ ಶಿವನನ್ನು ಕಂಗೆಡಿಸುವ ಬದಲು ಋಷಿ ಪತ್ನಿಯರನ್ನು ಕಂಗೆಡಿಸಿತು. ಕಾಮನೆಯನ್ನು ಗೆದ್ದು, ದಾಡಿ ಬಿಟ್ಟು ತಪಸ್ಸಿಗೆ ಕೂತು, ವೇದಾಭ್ಯಾಸ ಜಡರಾದ ಋಷಿಗಳ ಕೈಹಿಡಿದು ಸಂಸಾರ ನಡೆಸುತ್ತಿದ್ದ ಈ ಹೆಣ್ಮಕ್ಕಳು ವಿಶ್ವ ಮೋಹಕನಾದ ಹರನ ಹರೆಯದ ರೂಪವನ್ನು ಕಂಡು ದಂಗಾದರು. ಸುಪ್ತವಾದ ಬಯಕೆ ಪುಟಿದೆದ್ದು ಕಣ್ಣರಳಿ ನಿಂತರೂ, ಮೋಡಿಗೆ ಮರುಳಾದವರಂತೆ ಶಿವನ ಜೊತೆಗೆ ನಡೆಯತೊಡಗಿದರು. ಇದಕ್ಕೆ ಅಪವಾದವಾಗಿ ನಿಂತವರು ವಸಿಷ್ಠನ ಹೆಂಡತಿ ಅರುಂಧತಿ ಮತ್ತು ಅತ್ರಿಯ ಹೆಂಡತಿ ಅನುಸೂಯೆ ಮಾತ್ರ.
ಮರೀಚಿ, ಆಂಗೀರಸ, ಪುಲಸ್ತ್ಯ ಪುಲಹ, ಕೃತು-ಇವರ ಪತ್ನಿಯರು ಮತ್ತು ಇತರ ಋಷಿಕೆಯರು ಮಾತ್ರ ತಮ್ಮ ಬಯಕೆಯನ್ನು ನಿಯಂತ್ರಿಸಲಾರದಾದರು. ಕಾಮದೇವ ಅಲ್ಲಿ ಸೋತವ ಇಲ್ಲಿ ಗೆದ್ದ.
ಪರಿಸ್ಥಿತಿಯ ಬೆಳವಣಿಗೆಯನ್ನು ಕಂಡು ಋಷಿಗಳು ಕೋಪಗೊಂಡರು. ಕೃಷ್ಣನ ಬೆನ್ನು ಹತ್ತಿದ ಗೋಪಿಯರಂತೆ ಶಿವನ ಬೆನ್ನು ಹತ್ತಿದ ತಮ್ಮ ಆಶ್ರಮದ ಹೆಂಗೆಳೆಯರನ್ನು ಕಂಡು ಮರುಕಗೊಂಡರು. ಪರಿಣಾಮವಾಗಿ ಅವರು ಶಿವನಿಗೆ ಹೀಗೆ ಶಾಪ ಕೊಟ್ಟರಂತೆ -‘ಅಮಾಯಕರಾದ ಹೆಣ್ಮಕ್ಕಳ ಎದೆಯಲ್ಲಿ ಬೆದೆಯ ಬೀಜವನ್ನು ಬಿತ್ತಿದ ಶಿವನಿಗೆ ಇನ್ನು ಮುಂದೆ ‘ಲಿಂಗ’ದ ರೂಪದಲ್ಲಿಯೇ ಪೂಜೆ ಸಲ್ಲಲಿ’.
ಋಷಿಗಳ ಶಾಪಕ್ಕೆ ಎಡೆಯಾದ ಶಿವ ಮಾಘ ಕಷ್ಣ ಚತುರ್ದಶಿಯಂದು ಲಿಂಗ ರೂಪದಿಂದ ಭೂಮಿಯಲ್ಲಿ ಪ್ರಾದುರ್ಭವಿಸಿದನಂತೆ. ಹೀಗೆ ಶಿವನ ಲಿಂಗಾವತಾರದ ದಿನವೇ ‘ಶಿವರಾತ್ರಿ’ ಆಯಿತಂತೆ!
ಕೊನೆಗೂ ಕಾಮದೇವ ಗೆದ್ದ. ಅಂದಿನಿಂದ ಶಿವನಿಗೆ ಮೂರ್ತಿ ಪೂಜೆ ಇಲ್ಲವಾಯಿತು. ಬದಲಾಗಿ ಲಿಂಗಪೂಜೆ ಪ್ರಾರಂಭವಾಯಿತು. ಶಿವಭಕ್ತರೆಲ್ಲರೂ ಶಿವನ ಬದಲು ಶಿವಲಿಂಗವನ್ನು ಪೂಜಿಸತೊಡಗಿದರು ಎಂಬುದು ಒಂದು ಪ್ರತೀತಿ.(?)
ಚರಾಚರ ಜಗತ್ತಿನ ಉತ್ಪತ್ತಿಗೆ ಕಾರಣೀಭೂತವಾದ ಆದಿಪುರುಷನ ಸ್ವರೂಪ ಬೋಧಕವೇ ಈ ಲಿಂಗಾಕಾರದ ಸಂಕೇತ. ಲಿಂಗದ ಪಾಣಿಪೀಠವು ಪ್ರಕೃತಿ ಸ್ವರೂಪಿಣಿಯಾದ ಪಾರ್ವತಿಯ ಪ್ರತೀಕವಾದರೆ, ಲಿಂಗಾಕಾರವು ಚಿನ್ಮಯ ರೂಪಿಯಾದ ಪರಬ್ರಹ್ಮ ಪುರುಷಸ್ವರೂಪ. ಪೀಠವು ಅಂಬಾಮಯ ಹಾಗೂ ಶಿವಲಿಂಗ ಚಿನ್ಮಯ ಪುರುಷಮಯವಾಗಿದೆ.
‘ಲಿಂಗ’ ಪದಕ್ಕೆ ‘ಅಕೃತಿರ್ಜಾತಿಲಿಂಗಾಖ್ಯಾ’ ಎಂಬ ಆಧಾರದಿಂದ ಪರಶಿವನ ಪರಿಚಾರ್ಯಕವೆಂದು ಅರ್ಥಮಾಡಿದ್ದಾರೆ. ಶಿವ ಪುರಾಣದಲ್ಲಿ ಶಿವಲಿಂಗವನ್ನು ಜ್ಯೋತಿ ಸ್ತಂಭರೂಪವಾದ ‘ಓಂ’ ಕಾರವೆಂದು ಬಣ್ಣಿಸಲಾಗಿದೆ. ಸೂಕ್ಷ್ಮ ಲಿಂಗವು ಪ್ರಣವ ಸ್ವರೂಪಿ ಹಾಗೂ ನಿಷ್ಕಲ. ಸ್ಥೂಲ ಲಿಂಗವು ಸಂಪೂರ್ಣ ಬ್ರಹ್ಮಾಂಡ, ಚರಾ ಚರಾತ್ಮಕವಾದ ಸಂಪೂರ್ಣ ಜಗತ್ತು. ಬ್ರಹ್ಮಾಂಡರೂಪ ಶಿವಲಿಂಗಾಧಿಷ್ಠವಾದುದರಿಂದ ಶಿವಲಿಂಗವೊಂದನ್ನು ಪೂಜಿಸಿದರೆ ಸೂರ್ಯ, ಚಂದ್ರ, ಮೊದಲಾದ ಸಮಸ್ತ ದೇವತೆಗಳ ಪೂಜೆ ಸಂದಂತಾಗುವುದು. ಶ್ರೀಮನ್ನಾರಾಯಣನ ಅವ್ಯಕ್ತವು ಸಾಲಿಗ್ರಾಮವಾದಂತೆ ಶಿವನ ಅವ್ಯಕ್ತರೂಪವು ಲಿಂಗವಾಗಿದೆ.
ದಕ್ಷಿಣಾಮೂರ್ತಿ
ಪರಮೇಶ್ವರನ ಲೀಲಾ ವಿಭೂತಿಗಳಲ್ಲಿ ದಕ್ಷಿಣಾಮೂರ್ತಿಯೂ ಒಂದು. ವೀಣಾ, ಸಾಂಬ, ಯೋಗ, ಸಂಹಾರ, ಶಕ್ತಿ, ಜ್ಞಾನ, ಅನುಷ್ಠಾನ, ವ್ಯಾಖ್ಯಾನ, ವಿದ್ಯಾ, ವಟಮೂಲ ಎಂಬ ಹತ್ತು ವಿಧ ಶಿವಮೂರ್ತಿಗಳಲ್ಲಿ ಕೊನೆಯದೇ ಇದು. ದಕ್ಷಿಣಾ ಎಂದರೆ ಬುದ್ಧಿ. ಆ ಬುದ್ಧಿಯ (ಜ್ಞಾನದ) ಕಡೆಗೆ ಅಭಿಮುಖನಾಗಿರುವುದರಿಂದ ಈ ಹೆಸರು. ಮೂರ್ತಿ ದಕ್ಷಿಣಾಭಿಮುಖವಾಗಿ ಇರುವುದರಿಂದ ಈ ಹೆಸರು ಎಂದು ಕೆಲವರ ಅಭಿಪ್ರಾಯ.
ಗುರುವೇ ಸರ್ವಲೋಕಾನಾಂ ಭಿಷಜೆ ಭವರೋಗಿಣಾಂ
ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ ॥
ಸರ್ವಲೋಕಗಳಿಗೆ ಗುರುವು ಭವರೋಗಿಗಳಿಗೆ ವೈದ್ಯನೂ, ಸರ್ವವಿದ್ಯೆಗಳಿಗೆ ನಿಧಿಯೂ ಆದ ದಕ್ಷಿಣಾಮೂರ್ತಿಗೆ ನಮಸ್ಕಾರ. ಎಂದು ಈ ದೇವತೆಯನ್ನು ಪ್ರಾರ್ಥಿಸುವುದು ರೂಢಿಯಲ್ಲಿದೆ. ದಕ್ಷಿಣಾಮೂರ್ತಿ ವಿದ್ಯೆಗೆ ಅಧಿಷ್ಠಾತೃ ದೇವತೆ ಎಂದು ಉಪನಿಷತ್ತು ಮತ್ತು ಸ್ತೋತ್ರಗಳಿಂದ ತಿಳಿದು ಬರುತ್ತದೆ.
ವ್ಯಾವಹಾರಿಕ ರೂಪದ ಉಪದೇಶ ಮಿಥ್ಯೆಯಾದ ಕಾರಣ ಜ್ಞಾನ (ಬ್ರಹ್ಮ) ಮೂರ್ತಿಯಾದ ಈ ದೇವತೆ ಮುಖದಿಂದ ಯಾವ ಉಪದೇಶವನ್ನೂ ಮಾಡುವುದಿಲ್ಲ. ಆದ ಕಾರಣ ಈ ಮೂರ್ತಿಯ ಗುರುರೂಪವಾದ ಉಪದೇಶ ಮೊನವಷ್ಟೇ. ಶಿಷ್ಟರು ಈ ಮುದ್ರೆಯಿಂದಲೇ ಸಂಶಯಮುಕ್ತರಾಗಿ ಜ್ಞಾನಿಗಳಾಗುತ್ತಾರೆ. ಇತರ ದೇವತೆಗಳಿಗೆ ಪುರಾಣಪ್ರಸಿದ್ಧಿ ಇರುವಂತೆ ಈ ದೇವತೆಯ ವಿಚಾರ ಪುರಾಣಗಳಲ್ಲಿ ಅಧಿಕವಾಗಿ ಕಂಡು ಬರುವುದಿಲ್ಲ.
ಮಂತ್ರಶಾಸ್ತ್ರಕ್ಕೆ ಸಂಬಂಧಪಟ್ಟ ಉಪಾಸನಾದಿ ವಿಭಾಗಗಳಲ್ಲಿ ಈ ದೇವತೆಯ ವಿಚಾರವಿದೆ. ಜ್ಞಾನವನ್ನು ಬಯಸುವವರು ಈ ದೇವತೆಯನ್ನು ಉಪಾಸನೆ ಮಾಡುತ್ತಾರೆ. ಅನೇಕ ಮರಗಳ ನೆರಳುಗಳಿಂದ ಬಿಸಿಲಿಲ್ಲದೆ ತಂಪಾದ ಗಿರಿತೊರೆಗಳಿಂದ ಕೂಡಿರುವ ಲತಾಪುಷ್ಪ ಸಮದ್ಧವಾದ ದುಂಬಿಗಳ ಝೇಂಕಾರ, ನವಿಲುಗಳ ನರ್ತನ, ಕೋಗಿಲೆಗಳ ಇಂಪಾದ ಧ್ವನಿ, ಹಾವು-ಮುಂಗುಸಿ, ಹಸು-ಹುಲಿ ಮೊದಲಾದ ವೈರ ಪ್ರಾಣಿಗಳೂ ತಮ್ಮ ವೈರವನ್ನು ಮರೆತು ವಿಹರಿಸುತ್ತಿರುವ, ಶುಕನೇ ಮೊದಲಾದ ಮುನಿಗಳು ಮತ್ತು ಇಂದ್ರಾದಿ ದೇವತೆಗಳಿಂದ ಸೇವಿತರಾದ ಸಿದ್ಧಿ ಕಿನ್ನರರ ವಾಸಸ್ಥಳವಾದ ಮೇರು ಪರ್ವತ ಪ್ರದೇಶದಲ್ಲಿ ಗರುಡ ಶಿಲೆಯ ಎಲೆಗಳು, ಪದ್ಮರಾಗದ ಹಣ್ಣುಗಳು, ನವರತ್ನದ ಬಿಳಿಲುಗಳು ಹಾಗೂ ಸುಗುಂಧವನ್ನು ಬೀರುವ ಹೂಗಳಿಂದ ಕೂಡಿದ ಎತ್ತರವಾದ ಒಂದು ಆಲದ ಮರವಿದೆ. ಆ ಮರದ ಕೆಳಗೆ ರತ್ನ ಸಿಂಹಾಸನದ ಮೇಲೆ ಶರತ್ಕಾಲದ ಚಂದ್ರಕಾಂತಿಯನ್ನು ಬೀರುವ ಮುಖದಿಂದ ಕೂಡಿದ ದಕ್ಷಿಣಾಮೂರ್ತಿ ಮಂಡಿಸಿದ್ದಾನೆ. ಮುನಿಗಳ ಗುಂಪು ಈತನನ್ನು ಯಾವಾಗಲೂ ಸ್ತುತಿಸುತ್ತಿದ್ದಾರೆ. ಈ ಸ್ವರೂಪದಿಂದ ಜಗತ್ತಿಗೆ ಮೊದಲಿಗನಾದ ದಕ್ಷಿಣಾಮೂರ್ತಿಯನ್ನು ಸ್ಮರಿಸಬೇಕು ಎಂದು ಶಾರದತಿಲಕದಲ್ಲಿ ಹೇಳಿದೆ.
ಕರ್ಪೂರದಂತೆ ಶುಭ್ರನೂ, ತರ್ಕಮುದ್ರೆಯನ್ನು ಧರಿಸಿ ಬ್ರಹ್ಮತತ್ವವನ್ನು ತಿಳಿಸುವವನೂ, ಯೋಗಾಸನದಲ್ಲಿ ಮಂಡಿತನೂ ಆದ ದಕ್ಷಿಣಾಮೂರ್ತಿಯನ್ನು ಧ್ಯಾನಿಸಬೇಕೆಂದು ಶ್ರೀಮಾನಸೋಲ್ಲಾಸ ಗ್ರಂಥ ಹೇಳುತ್ತದೆ. ಬ್ರಹ್ಮತತ್ವವ್ನು ಬಯಸುವ ವೃದ್ಧರಾದ ಋಷಿಗಳ ಗುಂಪಿನಿಂದ ಆವೃತನಾದ ಜ್ಞಾನಮುದ್ರೆಯನ್ನು ಧರಿಸಿ ಆನಂದಮೂರ್ತಿಯೂ ಮೌನರೂಪ ವ್ಯಾಖ್ಯಾನದಿಂದ ಬ್ರಹ್ಮತತ್ವವನ್ನು ಪ್ರಕಟಿಸುತ್ತಿರುವ ತರುಣನೂ ಆದ ದಕ್ಷಿಣಾಮೂರ್ತಿಯನ್ನು ಸ್ಮರಿಸಬೇಕೆಂದು ಶ್ರೀತತ್ವಸುಧೆ ತಿಳಿಸುತ್ತದೆ.
ವೀಣೆ, ಮುತ್ತಿನ ಜಪಮಾಲೆ ಪುಸ್ತಕ ಜ್ಞಾನಮುದ್ರೆ ಅಥವಾ ಅಗ್ನಿನಾಗಗಳನ್ನು ಚತುರ್ಭುಜಗಳಲ್ಲಿ ಧರಿಸಿ ಬೆಳ್ಳಿಯಂತೆ ಶುಭವರ್ಣದಿಂದ ಕೂಡಿದ ಭಸ್ಮಲೇಪಿತ ಶರೀರವುಳ್ಳವನೂ ಯೋಗಾಸನಾರೂಢನೂ ಆಗಿರುವಂತೆ ಈ ದೇವತೆಯ ಸ್ವರೂಪ ದಕ್ಷಿಣಾಮೂರ್ತಿ ಉಪನಿಷತ್ತಿನಲ್ಲಿ ವರ್ಣಿತವಾಗಿದೆ.
ಜ್ಞಾನಾದಿದೈವವಾದುದರಿಂದ ಮೇಧಾ ದಕ್ಷಿಣಾಮೂರ್ತಿ ಎಂಬ ಹೆಸರು ಮಂತ್ರೋದ್ಧಾರದಲ್ಲಿ ಕಂಡು ಬರುತ್ತದೆ.
ಪ್ರಳಯ ಕಾಲದಲ್ಲಿ ಎಲ್ಲವನ್ನೂ ತನ್ನಲ್ಲಿ ಸಂಹರಿಸಿಕೊಂಡು ಸ್ವಾತ್ಮನಂದ ಸುಖದಲ್ಲಿ ವಿಹರಿಸುವ ಈಶ್ವರನ ಸ್ವರೂಪವೇ ದಕ್ಷಿಣಾಮೂರ್ತಿ. ಈ ದಕ್ಷಿಣ ಮುಖನಾದ ಶಿವ ಪ್ರತ್ಯಕ್ಷನಾದರೆ ತತ್ತ್ವಜ್ಞಾನ ಸಿದ್ದಿಸುತ್ತದೆ.
ಮೃತ್ಯುಂಜಯ
ಶಿವನಿಗೆ ಮೃತ್ಯುಂಜಯನೆಂಬ ಅನ್ವರ್ಥನಾಮವೊಂದಿದೆ. ಅಪಮೃತ್ಯುವನ್ನು ದೂರ ಮಾಡುವವನೇ ಮೃತ್ಯುಂಜಯನು. ಮೃತ್ಯುವೆಂದರೆ ಸಾವು, ಮರಣ, ಪ್ರಾಣ ಹೋಗುವುದು ಎಂದೇ ಅರ್ಥವಲ್ಲ. ರೋಗರುಜಿನಾದಿಗಳು, ಆಧ್ಯಾತ್ಮಿಕ, ಆದಿದೈವಿಕ, ಆದಿಭೌತಿಕವಾದ ತಾಪತ್ರಯಗಳೆಲ್ಲವೂ ಮೃತ್ಯುವೆನಿಸುತ್ತದೆ. ಅಶಾಂತಿಗೆ ಕಾರಣವಾದುದೆಲ್ಲ ಮೃತ್ಯುವೇ. ಇಂಥ ಮೃತ್ಯುವನ್ನು ಗೆದ್ದ ನಿತ್ಯಾನಂದ, ಸಹಜಾನಂದ ಸ್ವರೂಪನಿಷ್ಠವಾದ ಏಕೈಕ ದೇವತೆ ಶಂಕರ.
ಸರ್ವಮಾನವರು, ಸದಾಕಾಲ ಸುಲಭವಾಗಿ ಜಪಿಸಬಹುದಾದ ಸರಳ ಮಂತ್ರ ಶಿವಪಂಚಾಕ್ಷರಿ ಮಂತ್ರ. ಕಾಶಿಯಲ್ಲಿರುವ ವಿಶ್ವನಾಥನು ಶ್ರೀರಾಮ ತ್ರಯೋದಾಶಕ್ಷರಿ ಮಂತ್ರವನ್ನು, ರಾಮೇಶ್ವರದಲ್ಲಿರುವ ಶ್ರೀರಾಮಚಂದ್ರನು ಶಿವಪಂಚಾಕ್ಷರಿ ಮಂತ್ರವನ್ನು ಭಕ್ತರಿಗೆ ಉಪದೇಶಿಸುತ್ತಾರೆ ಎಂಬ ನಂಬಿಕೆಯುಂಟು.
ಶಿವಪಂಚಾಕ್ಷರಿ ಜಪನಿಷ್ಠರಿಗೆ ಆಕಾಶಾದಿ ಪಂಚಭೂತಗಳಿಂದ ಯಾವ ತೊಂದರೆಯೂ ಆಗುವುದಿಲ್ಲ. ಪಂಚಾಂಗಗಳು ಇಂಥವನಿಗೆ ಮಂಗಳಕರವಾಗುತ್ತದೆ. ಪಂಚಕರ್ಮೇಂದ್ರಿಯ, ಜ್ಞಾನೇಂದ್ರಿಯಗಳು ಶುದ್ಧವಾಗುತ್ತದೆ. ಪಂಚಕೋಶಗಳನ್ನು ದಾಟಿ ಬ್ರಹ್ಮಜ್ಞಾನಿಯಾಗಿ ಶಿವಸಾಯುಜ್ಯವನ್ನು ಹೊಂದಬಹುದು.
ಎಲ್ಲರೂ ಅತೀತ
ತನ್ನ ಕೈಗಳಲ್ಲಿ ಎದೆ, ತಲೆಗಳಲ್ಲಿ ನಾಗರಹಾವುಗಳನ್ನು ಆಭರಣವಾಗಿ ಧರಿಸಿದ್ದು, ವಿಷದಿಂದ ಪರಶಿವನಿಗೆ ಮರಣ ಭಯ ಇರುವುದಿಲ್ಲ. ತನ್ನ ತಲೆಯ ಮೇಲೆ ಚಂದ್ರನನ್ನು ಧರಿಸಿ ಅಮೃತಬಿಂದುಗಳು ಸುರಿಯುತ್ತಿದ್ದರೂ ವಿಶೇಷವಾದ ಅನುರಾಗವೇನೂ ಇಲ್ಲ.
ಸ್ಮಶಾನದಲ್ಲಿ ವಾಸಿಸುತ್ತ, ಬೂದಿ ಬಳಿದುಕೊಂಡಿದ್ದರೂ ಯಾವ ದುಃಖವಾಗಲಿ ಬೇಜಾರಾಗಲಿ ಇಲ್ಲ. ಪಾರ್ವತಿಯನ್ನು ತೊಡೆಯ ಮೇಲೆ ಕೂಡಿಸಿಕೊಂಡು ಅರ್ಧನಾರೀಶ್ವರನಾಗಿದ್ದರೂ ಯಾವ ಸುಖಾತಿಶಯವೂ ಉಂಟಾಗುತ್ತಿಲ್ಲ.
ಹೆಣದ ತಲೆಬುರುಡೆಗಳ ಮಾಲೆಯನ್ನಾಗಿ ಧರಿಸಿದ್ದರೂ ಮೈಲಿಗೆ ಎನ್ನುವುದಿಲ್ಲ. ತನ್ನ ಜೆಯಲ್ಲಿ ದಿವ್ಯ ಗಂಗೆಯನ್ನು ಧರಿಸಿದ್ದರೂ ಶುದ್ಧಿ ಎಂಬುದಿಲ್ಲ. ಹೀಗೆ ದ್ವಂದ್ವಾತೀತನಾತ ಪರಶಿವನು ಸದಾ ಸ್ವಸ್ಥನು ಶಿವನೂ ಸ್ಮಾತ್ಮಾರಾಮನೂ ನಿರ್ವಿಕಾರಿಯೂ ಶಾಂತನೂ ಆಗಿರುತ್ತಾನೆ! ನಿರಾಡಂಬರನಾದ ಶಿವಲಿಂಗಕ್ಕೆ ಅಭಿಷೇಕ ಮಾಡಿದರೆ ಸಾಕು ಭಕ್ತರಿಗೆ ಒಲಿದು ಬೇಡಿದ ವರಗಳನ್ನು ನೀಡುವ ಕರುಣಾಮಯಿ ಈತ.
ಬಾಹ್ಯ ವಿಷಯಗಳಿಂದ ತನ್ನ ಕಣ್ಣುಗಳನ್ನು ಒಳಗೆಡೆಗೆ ಸೇರಿಸಿಕೊಂಡು ಆತ್ಮನಲ್ಲಿಯೇ ನೆಲೆಗೊಳಿಸಿದ ಧೀರ ನಮ್ಮ ಶಿವ; ಸದಾ ಓಂಕಾರನಾದವನ್ನೇ ಶ್ರವಣ ಮಾಡುವ ಅಂತಮುರ್ಖಿಯೇ ಶಿವ; ಅನಾತ್ಮ ವಸ್ತುಗಳ ಗಂಧದಿಂದ ದೂರವಿರುವನು; ರುಚಿಯನ್ನು ಜಯಿಸಿದ ಧೀಮಂತ, ಸ್ಪರ್ಶ ಸುಖದಿಂದ ದೂರವಿರುವ ತಪೋಮೂರ್ತಿ; ಮೌನಿಯಾಗಿ ನಾಲಿಗೆಯನ್ನು ಗೆದ್ದವನು; ಚಾಪಲ್ಯರಹಿತನಾಗಿ ಶಾಂತನಾಗಿದ್ದವನು; ಎಲ್ಲೂ ಚಲಿಸದ ಕೂಟಸ್ಥನಾಗಿದ್ದ ತಪಸ್ವಿಯಿವನು, ವಿವೇಕ ವೈರಾಗ್ಯಗಳಿಂದ ಕಾಮಲೀಲೆಯನ್ನು ಗೆದ್ದವನು; ಬುದ್ಧಿ ಸ್ಥಿಮಿತವುಳ್ಳವನು, ಚಿತ್ತ ವೃತ್ತಿಗಳನ್ನು ನಾಶ ಮಾಡಿಕೊಂಡಿರುವವನು; ಅಹಂಕಾರ ಭಸ್ಮ ಮಾಡಿದ ಶಿವನನ್ನು, ಹದಿನಾಲ್ಕ ಇಂದ್ರಿಯಗಳನ್ನು ಜಯಿಸಿರುವ ಪ್ರಭುವನ್ನು ಹದಿನಾಲ್ಕು ಲೋಕದ ಜನರು ಅಂದು ಪೂಜಿಸುವುದು ಯುಕ್ತ.
ಆತ್ಮಜ್ಞಾನದ ಉಪದೇಶ
ಶಿವ ನಟರಾಜನಾಗಿ; ತ್ರಿಪುರಾಂತನಾಗಿ, ಕಿರಾತಕನಾಗಿ ಪ್ರಸಿದ್ಧನಾಗಿರುವಂತೆ ದಕ್ಷಿಣಾಮೂರ್ತಿಯಾಗಿಯೂ ಸುಪ್ರಸಿದ್ಧನಾಗಿರುತ್ತಾನೆ. ಆಧ್ಯಾತ್ಮ ಜ್ಞಾನಪಿಪಾಸುಗಳು ಶಿವನ್ನು ದಕ್ಷಿಣಾಮೂರ್ತಿ ರೂಪದಿಂದ ಆರಾಧನೆ ಮಾಡಿದರೆ ಶಿವನು ಆತ್ಮಜ್ಞಾನವನ್ನೇ ಕರುಣಿಸುತ್ತಾನೆ. ಸಾಮಾನ್ಯವಾಗಿ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿಕೊಂಡು ಜಪಾದಿ ಅನುಷ್ಠಾನ ಮಾಡುವುದು ಅಭ್ಯುದಯ ಫಲಗಳನ್ನು ಕೊಡುವ ಕರ್ಮೋಪಾಸನೆಗಳು. ಆದರೆ ಶಿವನು ದಕ್ಷಿಣಾಭಿಮುಖವಾಗಿ ಉಪದೇಶ ಮಾಡುತ್ತಿರುವುದು ಮೋಕ್ಷಸಾಧನವಾದ ಆತ್ಮಜ್ಞಾನವನಲ್ಲವೇ? ಸನಕ, ಸನಂದನ, ಸನತ್ಕುಮಾರ, ಸಂನ್ಯಾಸಿಗಳಿಗೆ ಶಿವನು ಬಾಲದಕ್ಷಿಣಮೂರ್ತಿಯಾಗಿ ತೋರಿಕೊಂಡು ಮೌನದಿಂದ ಆತ್ಮಜ್ಞಾನವನ್ನು ಉಪದೇಶಿಸಿದನು.
ಜ್ಞಾನೋದಯದ ಶಿವರಾತ್ರಿ
ಜ್ಞಾನಸ್ವರೂಪಿಯಾದ ಶಿವನೇ ತಾನೆಂದು ಅರ್ಥಮಾಡಿಕೊಂಡು ವಿದ್ಯೆಯು ನಾಶವಾಗಿ ಜ್ಞಾನೋದಯವಾಗುವುದೇ ಶಿವರಾತ್ರಿ. ಪಂಚಕೋಶಗಳಿಗೂ ಸಾಕ್ಷಿಯಾದ ಆತ್ಮನೇ ತಾನೆಂದು ಮತ್ತೆ ಮತ್ತೆ ಅನುಸಂಧಾನ ಮಾಡುವುದೇ ಶಿವಾಭಿಷೇಕವು, ಇಂದ್ರಿಯ ಮನೋಬುದ್ಧಿಗಳನ್ನು ಅನಾತ್ಮ ವಿಷಯ ಚಿಂತನೆಯಿಂದ ಬಿಡಿಸಿ ಆತ್ಮನಲ್ಲಿಯೇ ನೆಲೆಗೊಳ್ಳುವುದು ಉಪವಾಸವು.
ಅವಿದ್ಯೆಯನ್ನು ದೂರ ಮಾಡಿಕೊಂಡು ಶಿವನೇ ತಾನೆಂದು ದೃಢವಾಗಿ ಧೈರ್ಯವಾಗಿ ತಿಳಿಯುವುದೇ ಜಾಗರಣೆ. ಶಿವನು ತ್ಯಾಗ, ವೈರಾಗ್ಯ, ಶಾಂತಿ, ಸಹಿಷ್ಣುತೆ, ಸಮಭಾವ, ತಪಸ್ಸು ಸಹಜಾನಂದ, ಸರಳತೆಗೆ ಆದರ್ಶವಾದ ದೇವನು. ಭವಾನಿಯ ಪಾಣಿಯನ್ನು ಹಿಡಿದ್ದರಿಂದ ಭವನು ಅತ್ಯಂತ ಎತ್ತರಕ್ಕೆ ಬೆಳೆದುಬಿಟ್ಟನು. ಇವರಿಬ್ಬರೂ ಜೊತೆಯಲ್ಲಿ ಸೇರಿಕೊಂಡೇ ಜಗತ್ತಿಗೆ ತಾಯಿ-ತಂದೆಯರಾಗಿರುತ್ತಾರೆ.
ಪರಮೇಶ್ವರ ಎಂದ ಕೂಡಲೇ ಅವನ ಜೊತೆಯಲ್ಲೆ ವೈದಿಕ ವಿದ್ವಾಂಸರುಗಳಿಗೆ ನೆನಪಾಗುವ ಮತ್ತೊಂದು ಶಬ್ದ ಮಹಾನ್ಯಾಸ. ನ್ಯಾಸ ಎಂದರೆ ಇಡುವುದು ಎಂದರ್ಥ. ಶಿವನ ಆರಾಧಕರು ತನ್ನ ಅಂಗಾಂಗಗಳಲ್ಲಿ ಹರಿಹರ, ಬ್ರಹ್ಮ, ಇಂದ್ರ, ಅಗ್ನಿ ಮುಂತಾದ ದೇವತೆಗಳನ್ನು ಆಹ್ವಾನಿಸಿಕೊಳ್ಳುವುದು ಮಹಾನ್ಯಾಸವು. ಹೀಗೆ ರುದ್ರನ ಆರಾಧಕ ತಾನು ಸ್ವತಃ ರುದ್ರ ಸ್ವರೂಪನೇ ಆಗಿ ನಂತರ ರುದ್ರನನ್ನು ಆರಾಧಿಸಬೇಕು. ಸ್ವತಃ ರುದ್ರನಾಗದವನು ರುದ್ರನನ್ನು ಆರಾಧಿಸಲಾರನು. ಇಂತಹ ಮಹಾನ್ಯಾಸ ಪೂರ್ವಕವಾಗಿ ಅಭಿಷೇಕ ಮಾಡಿದರೆ ಶಿವನು ಸುಪ್ರೀತನಾಗುತ್ತಾನೆ.
Get in Touch With Us info@kalpa.news Whatsapp: 9481252093
Discussion about this post